ಶಬರಿಮಲೆ ದೇವಳಕ್ಕೆ ಮಹಿಳೆಯರ ಪ್ರವೇಶ ನಿಷೇಧಕ್ಕೆ ಕಾರಣ ಗೊತ್ತೆ?
Recommended Video
ಕೆಲವು ವಿಚಾರಗಳ ಬಗ್ಗೆ ಅಭಿಪ್ರಾಯ ಹೇಳುವುದು ಅಥವಾ ನಮ್ಮ ಅನುಭವದ ವಿಚಾರ ಇದು ಎಂದು ತಿಳಿಸುವುದು ಕಷ್ಟ ಆಗಿಬಿಡುತ್ತದೆ. ಅದರಲ್ಲೂ ಯಾವುದಾದರೂ ಒಂದು ನಿರ್ದಿಷ್ಟ ಘಟನೆಯು ಹಸಿಯಾಗಿರುವಾಗ, ಜನರು ಆ ವಿಚಾರದ ಬಗ್ಗೆ ತರ್ಕವನ್ನು ಪಕ್ಕಕ್ಕಿಟ್ಟು, ಭಾವನಾತ್ಮಕವಾಗಿ ಮಾತ್ರ ಚಿಂತಿಸುವಾಗ ಮೌನವಾಗಿರುವುದು ಉತ್ತಮ ಎಂದೆನಿಸುತ್ತದೆ.
ಆದರೆ, ಮಾತನಾಡಲೇ ಬೇಕಾದ ಸಂದರ್ಭದಲ್ಲಿ ಮೌನ ವಹಿಸುವುದು ಕೂಡ ಅಪರಾಧ ಎಂಬುದು ನಮ್ಮ ಪುರಾಣಗಳಲ್ಲಿನ ಉಲ್ಲೇಖ. ಆ ಜವಾಬ್ದಾರಿಯಿಂದ ಈ ಲೇಖನವನ್ನು ನಿಮ್ಮೆದುರು ತರುತ್ತಿದ್ದೇನೆ. ಇದಕ್ಕೆ ನಿಮ್ಮ ಸಮ್ಮತಿಯೂ ಇರಬಹುದು ಅಥವಾ ನಾನೊಬ್ಬ ಗೊಡ್ಡು ಸಂಪ್ರದಾಯವಾದಿ, ಸ್ತ್ರೀದ್ವೇಷಿ ಇನ್ನೂ ಏನೇನೋ ಆಗಿ ಕಾಣಬಹುದು.
ಶಬರಿಮಲೆ ದೇವಸ್ಥಾನದ ವಿವಾದ: ಕಾನೂನು ಹೋರಾಟದ ಟೈಮ್ಲೈನ್
ಇವೆಲ್ಲ ಏನೇ ಇರಲಿ, ಯಾವುದೇ ಪೂರ್ವಗ್ರಹ ಇಲ್ಲದೆ ಒಮ್ಮೆ ಓದಿ ಬಿಡಿ. ಶಬರಿ ಮಲೆ ದೇವಳಕ್ಕೆ ಹತ್ತರಿಂದ ಐವತ್ತು ವರ್ಷದವರೆಗಿನ ಸ್ತ್ರೀಯರ ಪ್ರವೇಶಕ್ಕೆ ಇಷ್ಟು ಕಾಲ ಇದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ತೀರ್ಪು ಶುಕ್ರವಾರ ತೆರವು ಮಾಡಿದೆ. ಇದೊಂದು ಮಹತ್ವದ ವಿಚಾರ. ಹಾಗೂ ಶತಮಾನಗಳ ಹಿಂದಿನಿಂದ ನಡೆದುಬರುತ್ತಿದ್ದ ಪದ್ಧತಿಯನ್ನು ಬದಲಿಸಿಕೊಳ್ಳಬೇಕಾದ ಸನ್ನಿವೇಶ.
ಕಟ್ಟುಪಾಡು ಮಾಡಿದವರು ಯೋಚಿಸಿರಲಿಲ್ಲವೆ?
ಹಾಗಿದ್ದರೆ ಸಮಾನತೆ, ಸ್ತ್ರೀ ದೈವಿ ಸ್ವರೂಪಳು ಇತ್ಯಾದಿ ವಿಚಾರವನ್ನು ಈ ಹಿಂದೆ ಕಟ್ಟುಪಾಡು ಮಾಡಿದವರು ಯೋಚಿಸಿರಲಿಲ್ಲವೆ? ಖಂಡಿತಾ ಆಲೋಚಿಸಿದ್ದರು. ಏಕೆಂದರೆ ಸ್ತ್ರೀ ಎಂದರೆ ಗೋ ಶಕ್ತಿ (ಅಂದರೆ ಸಾತ್ವಿಕ ಗುಣಾಧಿಖ್ಯ). ಅಯ್ಯಪ್ಪನು ಸಂಕರ್ಷಣಾ ಶಕ್ತಿ. ಸಂಕರ್ಷಣಾ ಶಕ್ತಿ ಎಂದರೆ ಬಹಳ ಶಕ್ತಿಶಾಲಿ. ಯುದ್ಧ ಸ್ಥಿತಿ ಎಂದು ಕೂಡ ಸೂಚಿಸುತ್ತದೆ. ಇದು ಸ್ತ್ರೀಯರ ಮೇಲೆ ಅದರಲ್ಲೂ ಋತುಮತಿಯಾದ ನಂತರ ಹಾಗೂ ಮುಟ್ಟು ನಿಲ್ಲುವವರೆಗಿನ ಸ್ತ್ರೀಯರ ಗರ್ಭಕೋಶದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಸಂತತಿಗೆ ಹಾನಿಯೂ ಆಗಬಹುದು. ಇದೇ ಕಾರಣಕ್ಕಾಗಿಯೇ ಬಹಳ ಹಿಂದೆಯೇ ಆ ನಿರ್ದಿಷ್ಟ ವಯಸ್ಸಿನ ಸ್ತ್ರೀಯರಿಗೆ ಪ್ರವೇಶ ನಿಷೇಧಿಸಿದರು.
ವರ್ಗೀಕರಣ ಸಾಧ್ಯವಿಲ್ಲದೆ ಪ್ರವೇಶ ನಿಷೇಧ ಮಾಡಿದರು
ಹಾಗಂತ ಹೆಣ್ಣುಮಕ್ಕಳಿಗೆ ಆ ಸಂಕರ್ಷಣಾ ಶಕ್ತಿಯನ್ನು ತಡೆಯುವ ಧಾರಣಾ ಶಕ್ತಿ ಇರುವುದಿಲ್ಲವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಿಜ, ಹಲವು ಸ್ತ್ರೀಯರಲ್ಲಿ ಅಂಥ ಸಾತ್ವಿಕ ಶಕ್ತಿ ಇರುತ್ತದೆ. ಹಲವರಲ್ಲಿ ಆ ಶಕ್ತಿ ಇರುವುದಿಲ್ಲ. ಅದನ್ನು ಪರೀಕ್ಷೆ ಮಾಡಿ ತಿಳಿದುಕೊಳ್ಳುವುದು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಮಹಿಳೆಯರಿಗೆ ಯಾವುದೇ ತೊಂದರೆ ಆಗಬಾರದು ಎಂದು ಪ್ರವೇಶ ನಿಷೇಧಿಸಿದರು. ಐವತ್ತು ವರ್ಷಗಳ ಹಿಂದೆ ನಮ್ಮ ಮನೆಗೆ ಎಂಬತ್ತೈದು ವರ್ಷದ ವೃದ್ಧೆಯೊಬ್ಬರು ಬರುತ್ತಿದ್ದರು. ಆಕೆ ಪ್ರತೀ ವರ್ಷವೂ ಶಬರಿ ಮಲೆ ಯಾತ್ರೆಗೆ ಹೋಗುವವರು. ನಮ್ಮ ಮನೆಗೆ ಬಂದು ಊಟ ಮಾಡಿ, ಒಂದು ದಿವಸ ನಮ್ಮಲ್ಲೇ ಉಳಿದು ಮುಂದೆ ಕಾಲ್ನಡಿಗೆಯಲ್ಲಿ ಪ್ರಯಾಣ ಮಾಡುತ್ತಿದ್ದರು. ಆಕೆ ಹೇಳುತ್ತಿದ್ದದ್ದು ಏನೆಂದರೆ, ಯಾವ ಸ್ತ್ರೀಯು ಗರ್ಭದಾರಣೆಯನ್ನು ನಿಲ್ಲಿಸಿರುತ್ತಾರೋ, ಮುಟ್ಟಾಗುವುದು ನಿಂತಿರುತ್ತದೋ ಅಂತಹ ಸ್ತ್ರೀಯರು ಹೋಗಬಹುದು ಎಂದು ಹೇಳುತ್ತಿದ್ದರು.
ಶಬರಿಮಲೆ ತೀರ್ಪು LIVE: ಸುಪ್ರೀಂನಿಂದ ಮತ್ತೊಂದು ಐತಿಹಾಸಿಕ ತೀರ್ಪು
ಅಯ್ಯಪ್ಪನಲ್ಲಿ ಇರುವುದು ಸಂಕರ್ಷಣಾ ಶಕ್ತಿ
ಆಕೆಯ ಮಾತನ್ನು ಉದಾಹರಿಸಿ ಹೇಳಬಹುದಾದರೆ ಅಯ್ಯಪ್ಪನ ಸಾನ್ನಿಧ್ಯದ ಸಂಕರ್ಷಣಾ ಶಕ್ತಿಯು ಗರ್ಭದ ಮೇಲೆ ದುಷ್ಪರಿಣಾಮ ಬೀರಬಹುದು ಅಥವಾ ಅದರ ಪ್ರಭಾವದ ಕಾರಣಕ್ಕೆ ಸನ್ನಿಧಿಯಲ್ಲೇ ಮುಟ್ಟಾಗಬಹುದು ಎಂಬ ಚಿಂತನೆಯಲ್ಲಿ ಹೇಳಿದ್ದರಬಹುದು. ಅಂದರೆ ನಮ್ಮ ಧಾರಣಾ ಶಕ್ತಿ ಕಡಿಮೆ ಇದ್ದಾಗ ಅದು ನಮಗೆ ತೊಂದರೆ ನೀಡಬಹುದು ಎಂಬುದೇ ತರ್ಕ. ಉದಾಹರಣೆಗೆ: ನೇಣು ಹಾಕಿಕೊಂಡ ವ್ಯಕ್ತಿಯನ್ನು ಪರೀಕ್ಷಿಸಿದಾಗ ಅವರ ವೀರ್ಯ ಸ್ಖಲನ ಆಗಿರುತ್ತದೆ. ಸ್ಖಲನ ಆಗುವುದು ಕೇವಲ ಕಾಮೋದ್ರೇಕದಿಂದ ಮಾತ್ರವಲ್ಲ ಎಂಬುದನ್ನು ತೋರಿಸುತ್ತದೆ. ಹಾಗೆಯೇ ಮುಟ್ಟಾದವರು ಸ್ನಾನ ಮುಗಿಸಿ ಹತ್ತು ದಿನಗಳ ಒಳಗೆಯೇ ಇಂತಹ ಸಂಕರ್ಷಣಾ ಶಕ್ತಿ ಸ್ಥಾನಗಳಿಗೆ ಹೋಗಿ ಬಂದು, ಮತ್ತೆ ರಜಸ್ವಲೆಯರಾದ ಉದಾಹರಣೆ ಸಾಕಷ್ಟಿದೆ. ವೈದ್ಯರಲ್ಲಿ ಕೇಳಿದರೆ ಇಂತಹ ಘಟನೆಗಳ ಬಗ್ಗೆ ವಿವರ ಲಭಿಸಹುದು. ಮಹಿಳೆಯರು ಈ ಹಿಂದೆ ಶಬರಿಮಲೆ ದೇವಳಕ್ಕೆ ಹೋಗುತ್ತಿದ್ದರು ಎಂದರೆ, ಯಾವ ವಯಸ್ಸಿನ ಮಹಿಳೆ ಎಂದು ತಿಳಿಯಬೇಕಿದೆ. ಅದರ ಅರ್ಥ, ಗರ್ಭಧಾರಣೆ ನಿಂತಿರುವವರು, ಗರ್ಭ ಧಾರಣೆ ಬಯಸದವರು ಇತ್ಯಾದಿ ಸ್ತ್ರೀಯರು ಎಂದರ್ಥ.
ಶಬರಿಮಲೆ ತೀರ್ಪನ್ನು ಮಹಿಳಾ ನ್ಯಾಯಮೂರ್ತಿ ಇಂದು ಅವರೇ ವಿರೋಧಿಸಿದ್ದೇಕೆ?
ಸತ್ಯಾಸತ್ಯತೆಯ ಪರೀಕ್ಷೆ ಆಗಲಿ, ಆ ನಂತರ ಒಪ್ಪಿಕೊಳ್ಳಲಿ
ನ್ಯಾಯಾಲಯಗಳು ಲೋಕದ ವ್ಯವಹಾರಗಳು, ಪರಸ್ಪರ ವಿನಿಮಯವಾಗುವ ದಾಖಲೆಗಳಿಗೆ ಅನುಗುಣವಾಗಿಯೇ ತೀರ್ಮಾನ ನೀಡಬೇಕಾಗುತ್ತದೆ. ಆಧ್ಯಾತ್ಮಿಕ ಭಾವನೆಗಳನ್ನು ಪೂರ್ಣವಾಗಿ ಪರಿಗಣನೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇಂತಹ ಆಧ್ಯಾತ್ಮಿಕ ನೆಲೆಗಟ್ಟಿನ ಆಧಾರವನ್ನು ದೇವಸ್ವ ಮಂಡಳಿ ನೀಡುತ್ತಿದ್ದರೆ ಪರಿಗಣಿಸುತ್ತಿತ್ತೋ ಏನೋ ತಿಳಿಯದು. ನಾವು ನ್ಯಾಯಾಲಯಕ್ಕೆ ಒದಗಿಸುವ ದಾಖಲೆಗಳಲ್ಲಿ ಹಿಂದೆ ಬಿದ್ದಿದ್ದರೂ ಈಗ ನೀಡಿದ ತೀರ್ಮಾನವನ್ನು ಸ್ವಾಗತಿಸಲೇ ಬೇಕು. ಇದು ನಾವು ನ್ಯಾಯಾಲಯಕ್ಕೆ ಕೊಡುವ ಗೌರವವೂ ಆಗುತ್ತದೆ. ನಿಷೇಧ ತೆರವಾದ ಮೇಲೆ ವಿವಿಧ ವಯೋಮಾನದ ಮಹಿಳೆಯರು ಶಬರಿಮಲೆ ದೇವಳಕ್ಕೆ ಪ್ರವೇಶ ಮಾಡುತ್ತಾರೆ. ಆ ದೇವರ ಶಕ್ತಿಯಿಂದ ಗರ್ಭಕೋಶದ ಮೇಲೆ ಏನೂ ದುಷ್ಪರಿಣಾಮ ಬೀರದಿರಲಿ ಎಂದು ಆ ದೇವರನ್ನು ಪ್ರಾರ್ಥಿಸೋಣ. ಮಾನವೀಯ, ದೈಹಿಕ, ದೈವಿಕ ಕ್ರಿಯಾದಿಗಳಿಗೆ ಚ್ಯುತಿ ಉಂಟಾಗದಿರಲಿ. ಈಗ ನಾನು ತಿಳಿಸಿದ ವಿಚಾರದಲ್ಲಿ ಸತ್ಯವಿದೆಯೋ ಇಲ್ಲವೋ ಎಂಬುದನ್ನು ಪ್ರಾಜ್ಞರು ಪರೀಕ್ಷಿಸಲಿ ಎಂಬುದು ನನ್ನ ಅಭಿಪ್ರಾಯ.