ದೇಶದ ಪ್ರತಿಭಟನೆಗಳು ರೈಲ್ವೇ ಮೇಲೆ ಏಕೆ ಕೇಂದ್ರಿತವಾಗಿವೆ?
ನವದೆಹಲಿ, ಜೂ. 23: ಕೇಂದ್ರ ಸರ್ಕಾರವು ಜಾರಿಗೆ ತರುವ ಯೋಜನೆ, ಕಾಯ್ದೆಗಳು ಹಾಗೂ ಬದಲಾವಣೆ ಖಂಡಿಸಿ ಜನರು ಆಕ್ರೋಶಗೊಂಡಿದ್ದಾರೆ. ಈ ಆಕ್ರೋಶಗಳು ಪ್ರತಿಭಟನೆಗಳಾಗಿ ಪರಿವರ್ತನೆಯಾಗಿ ರೈಲು ಹಳಿಗಳ ಮೇಲೆ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಕಾರಣವೇನು?, ಯಾಕೆ ಜನರು ರೈಲು ನಿಲ್ದಾಣಗಳಲ್ಲಿ ಪ್ರತಿಭಟನೆಗಳನ್ನು ಮಾಡುತ್ತಾರೆ? ಎಂಬುದು ಕುತೂಹಲಕಾರಿಯಾಗಿದೆ.
ಕೇಂದ್ರದ ಅಲ್ಪಾವಧಿಯ ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದು, ಬಿಹಾರ, ಪಶ್ಚಿಮ ಬಂಗಾಳ, ತೆಲಂಗಾಣದಲ್ಲಿ ರೈಲ್ವೆ ಇಲಾಖೆಗೆ ಸಂಬಂಧಿಸಿದ ಹಾಗೂ ನೇರವಾಗಿ ರೈಲುಗಳನ್ನೇ ದಾಳಿ ಮಾಡಿ ಸುಟ್ಟುಹಾಕಲಾಗುತ್ತಿದೆ. ಅಲ್ಲದೆ ಉಗ್ರ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಅಗ್ನಿವೀರರಿಗೆ ಸಾಮಾಜಿಕ ಬಹಿಷ್ಕಾರ: ಖಾಪ್ ಪಂಚಾಯಿತಿ, ರೈತ ಮುಖಂಡರ ಬೆದರಿಕೆ
ಸಿಕಂದರಬಾದ್ನಲ್ಲಿಒಬ್ಬ ವ್ಯಕ್ತಿ ಸಾವು
ಅಗ್ನಿಪಥ್ ಪ್ರತಿಭಟನೆಯ ಮೊದಲ ವಾರದಲ್ಲಿ ಮೂರು ರೈಲುಗಳ ಕೋಚ್ಗಳು ಮತ್ತು ಒಂದು ರೈಲ್ವೆಹಳಿಗೆ ಹಾನಿ ಮಾಡಲಾಯಿತು. ಇದೇ ಪ್ರತಿಭಟನೆಯಲ್ಲಿ ಒಂದು ರೈಲನ್ನು ಧ್ವಂಸಗೊಳಿಸಲಾಯಿತು. ಅಲ್ಲದೇ ರೈಲು ನಿಲ್ದಾಣವನ್ನು ವಿರೂಪಗೊಳಿಸಲಾಯಿತು. ಮುಖ್ಯವಾಗಿ ಬಿಹಾರದ ರೈಲು ನಿಲ್ದಾಣವನ್ನು ಮತ್ತು ತೆಲಂಗಾಣದ ಸಿಕಂದರಾಬಾದ್ನಲ್ಲಿ ಕನಿಷ್ಠ ಮೂರು ರೈಲುಗಳನ್ನು ಸುಟ್ಟು ಹಾಕಲಾಯಿತು. ಘಟನೆಯಲ್ಲಿ ಸಿಕಂದರಬಾದ್ನಲ್ಲಿ ಒಬ್ಬ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾರೆ.
ಅಂದಾಜು 700 ಕೋಟಿ ರೂ. ಹಾನಿ
ರೈಲು ಸಚಿವಾಲಯದ ಪ್ರಕಾರ ಜೂನ್ ತಿಂಗಳ ಮಂಗಳವಾರದವರೆಗೆ ಪ್ರತಿಭಟನೆಗಳು 612 ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿವೆ. ಪರಿಣಾಮವಾಗಿ ಅವುಗಳಲ್ಲಿ 602 ರೈಲುಗಳು ಕೂಡ ರದ್ದಾಯಿತು. 10 ಭಾಗಶಃ ರದ್ದಾಯಿತು. ಮೂಲಗಳ ಪ್ರಕಾರ ಪ್ರತಿಭಟನೆಯ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಮೇಲೆ ಉಂಟಾದ ಹಾನಿಯು ಕನಿಷ್ಠ 700 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು, ಮಾಹಿತಿ ಇನ್ನಷ್ಟೆ ತಿಳಿಯಬೇಕಿದೆ.
ರೈಲ್ವೆ ವ್ಯಾಪ್ತಿ ದೊಡ್ಡದು
ಭಾರತೀಯ ರೈಲ್ವೇ ಇಂತಹ ಪ್ರತಿಭಟನೆಗಳಿಗೆ ಹಾಗೂ ಹಾನಿಗಳಿಗೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ. 168 ವರ್ಷಗಳಷ್ಟು ಹಳೆಯದಾದ ಸಂಸ್ಥೆಯಾಗಿ, ಲಕ್ಷಾಂತರ ಭಾರತೀಯರಿಗೆ ಪ್ರಯಾಣಕ್ಕೆ ಪ್ರಮುಖ ಸಾರಿಗೆಯಾಗಿ ಭಾರತದಲ್ಲಿ ಘೋಷಿತವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸಾರಿಗೆ ವ್ಯವಸ್ಥೆಯ ವ್ಯಾಪ್ತಿಯು ಬಹುದೊಡ್ಡದು. ಹೀಗಾಗಿ ಪ್ರತಿಭಟನಾಕಾರರನ್ನು ಜನಪ್ರಿಯ ರೇಲ್ವೆಯಿಂದ ದೂರವಿಡುವುದು ಬಹುಕಷ್ಟದ ಕೆಲಸವಾಗಿರುತ್ತದೆ.
23 ಮಿಲಿಯನ್ ಪ್ರಯಾಣಿಕರ ಸಾಗಣೆ
ವಿಶ್ವದ ನಾಲ್ಕನೇ ಅತಿದೊಡ್ಡ ರೈಲು ಜಾಲವಾಗಿರುವ ಭಾರತೀಯ ರೈಲ್ವೆಯು 64,000 ಕಿಲೋಮೀಟರ್ಗಳಲ್ಲಿ ಮಾರ್ಗವನ್ನು ಹರಡಿಕೊಂಡಿದೆ. ರೈಲ್ವೇ ಇಲಾಖೆ ಪ್ರಕಾರ ಇದು 13,000 ಪ್ರಯಾಣಿಕ ರೈಲುಗಳಲ್ಲಿ ದಿನಕ್ಕೆ ಸುಮಾರು 23 ಮಿಲಿಯನ್ ಪ್ರಯಾಣಿಕರನ್ನು ಸಾಗಿಸುತ್ತದೆ. ಸುಮಾರು 1.3 ಮಿಲಿಯನ್ ರೈಲ್ವೇ ಉದ್ಯೋಗಿಗಳನ್ನು ಇದು ಹೊಂದಿದೆ.
ಸರ್ಕಾರಿ ಆಸ್ತಿಗಳ ಮೇಲೆ ದಾಳಿ ಸುಲಭ
ರೈಲ್ವೆಯನ್ನು ಪ್ರತಿಭಟನೆಗೆ ಗುರಿಯಾಗಿಸುವುದು ಅತ್ಯಂತ ಹಳೆಯ ರೂಢಿಯಾಗಿದೆ. ತುರ್ತು ಪರಿಸ್ಥಿತಿ ಹಾಗೂ ಜಯಪ್ರಕಾಶ್ ನಾರಾಯಣ್ ಚಳವಳಿಯ ಸಮಯದಲ್ಲಿಯೂ ಸಹ ರೈಲ್ವೆಯನ್ನು ಗುರಿಯಾಗಿಸಲಾಯಿತು. ಏಕೆಂದರೆ ಅದು ಸುಲಭವಾಗಿ, ಬೃಹತ್ತಾಗಿರುವ ಮಹತ್ವದ ಕಣ್ಣಿಗೆ ಕಾಣುವ ಸರ್ಕಾರಿ ವ್ಯವಸ್ಥೆಯಾಗಿದೆ. ವಿಶೇಷವಾಗಿ ಒಳಾಂಗಣದಲ್ಲಿ ಪೊಲೀಸ್ ಉಪಸ್ಥಿತಿ ಇಲ್ಲಿ ದೊಡ್ಡದಾಗಿರುವುದಿಲ್ಲ. ಇತರ ಸರ್ಕಾರಿ ಕಚೇರಿಗಳು ಹೆಚ್ಚಿನ ಭದ್ರತಾ ಸಿಬ್ಬಂದಿಯ ಉಪಸ್ಥಿತಿಯನ್ನು ಹೊಂದಿವೆ. ಹೀಗಾಗಿ ರೈಲ್ವೆ ಇಲಾಖೆ ಮೂಲಕ ಸರ್ಕಾರಿ ಆಸ್ತಿಗಳ ಮೇಲೆ ದಾಳಿ ಮಾಡುವುದು ಸದ್ಯ ಸುಲಭವಾಗುತ್ತದೆ ಎಂದು ಅಲಹಾಬಾದ್ನ ಗೋವಿಂದ್ ಬಲ್ಲಭ್ ಪಂತ್ ಸಮಾಜ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಬದ್ರಿ ನಾರಾಯಣ್ ಹೇಳುತ್ತಾರೆ.
ಹಿರಿಯ ರೈಲ್ವೇ ಅಧಿಕಾರಿಯೊಬ್ಬರ ಪ್ರಕಾರ ಸಾಮಾನ್ಯವಾಗಿ ಪ್ರತಿಭಟನೆಗಳು ಇಲಾಖೆಗೆ ಗಮನಾರ್ಹವಾದ ನಷ್ಟಗಳಿಗೆ ಕಾರಣವಾಗುತ್ತವೆ ಎಂದು ಹೇಳಿದ್ದಾರೆ. ಪ್ರತಿಭಟನಾಕಾರರು ಪ್ರತಿಭಟನೆ ನಡೆಸುವಾಗ ರೈಲ್ವೆ ಬೋಗಿಗಳು ಹಾಗೂ ಹಳಿಗಳ ಮೇಲೆ ಗುರಿಯಾಗಿರುತ್ತಾರೆ. ಜನ ಸಮೂಹ ಅಧಿಕವಾಗಿ ಭದ್ರತೆ ಕಡಿಮೆ ಇರುವಾಗ ದಾಳಿಗಳು ನಡೆದು ಹಾನಿ ಹೆಚ್ಚಾಗಿಯೇ ನಡೆಯುತ್ತವೆ ಎಂದರು.
200- 300 ಕಿ.ಮೀ ದೂರದವರೆಗೆ ರೈಲು ಸ್ಥಗಿತ
ಪ್ರತಿಭಟನೆಗಳು ಹಿಂಸಾತ್ಮಕವಾದ ಸಂದರ್ಭಗಳಲ್ಲಿ ನಾವು ತುರ್ತು ಸಭೆಯನ್ನು ನಡೆಸುತ್ತೇವೆ ಮತ್ತು ನಾವು 24X7 ಆಪರೇಟಿಂಗ್, ಕಮರ್ಷಿಯಲ್ ಮತ್ತು ಆರ್ಪಿಎಫ್ ವಿಭಾಗಗಳ ಅಧಿಕಾರಿಗಳಿಂದ ವಿಭಾಗೀಯ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳುತ್ತೇವೆ. ಏಕೆಂದರೆ ಪ್ರತಿಭಟನೆ ಸಂದರ್ಭ ತ್ವರಿತವಾಗಿ ಪ್ರತಿಕ್ರಿಯಿಸಬೇಕಿರುತ್ತದೆ. ಒಂದು ಸಣ್ಣ ನಿಲ್ದಾಣವನ್ನು ನಿರ್ಬಂಧಿಸಿದರೂ, ಅದು ಇತರ ನಿಲ್ದಾಣಗಳಾದ್ಯಂತ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುತ್ತದೆ. ದೆಹಲಿಯಂತಹ ಮುಖ್ಯ ಮಾರ್ಗದ ಒಂದು ಚಿಕ್ಕ ನಿಲ್ದಾಣದಲ್ಲಿ ಇಂದು ಬಾರಿಯ ದಿಗ್ಬಂಧನವು 200- 300 ಕಿ.ಮೀ ದೂರದವರೆಗೆ ಡಜನ್ಗಟ್ಟಲೆ ರೈಲುಗಳ ಸ್ಥಗಿತಕ್ಕೆ ಕಾರಣವಾಗುತ್ತದೆ ಎಂದು ಅಧಿಕಾರಿ ವಿವರಿಸಿದರು.
ಇದು ಪ್ರಯಾಣಿಕರಿಗೆ ತೊಂದರೆಯಲ್ಲದೆ ಆರ್ಥಿಕವಾಗಿ ಹಾನಿಯಾಗುತ್ತದೆ. ಹೀಗಾಗಿ ಒಂದು ವಿಭಾಗದಲ್ಲಿ ಮುಖ್ಯ ಮಾರ್ಗವನ್ನು ನಿರ್ಬಂಧಿಸಿದರೆ ಅದು ಇಡೀ ರಾಜ್ಯ ಅಥವಾ ಪ್ರದೇಶದಲ್ಲಿ ಆಹಾರ ಧಾನ್ಯಗಳು, ಸಿಮೆಂಟ್, ಎಣ್ಣೆ, ಉಪ್ಪು ಮುಂತಾದ ಸರಕುಗಳ ಕೊರತೆಗೆ ಕಾರಣವಾಗಬಹುದು ಎಂದು ಅಧಿಕಾರಿಗಳು ಹೇಳಿದರು. ಅಗ್ನಿಪಥ್ ಯೋಜನೆ ಮೇಲಿನ ಪ್ರತಿಭಟನೆಗೂ ಮುನ್ನ, ಈ ವರ್ಷದ ಜನವರಿಯಲ್ಲಿ ಬಿಹಾರದಲ್ಲಿ ತಾಂತ್ರಿಕವಲ್ಲದ ಹುದ್ದೆಗಳಿಗೆ ನಡೆಸಿದ ಮೊದಲ ಹಂತದ ಪರೀಕ್ಷೆಯ ಫಲಿತಾಂಶಗಳಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ವಿದ್ಯಾರ್ಥಿಗಳು ನಡೆಸಿದ ಹಿಂಸಾತ್ಮಕ ಆಂದೋಲನದ ಸಮಯದಲ್ಲಿ ರೈಲ್ವೇ ಸುಮಾರು 18 ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಅನುಭವಿಸಿತ್ತು.
ಸುಮಾರು 1,200 ಕೋಟಿ ರೂಪಾಯಿ ನಷ್ಟ
ದೇಶದಲ್ಲಿ ಭಾರೀ ಕೋಲಾಹಲ ಎಬ್ಬಿಸಿದ್ದ ಕೃಷಿ ಮಸೂದೆಗಳ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಪಂಜಾಬ್ನಲ್ಲಿ ರೈತರು ರೈಲು ತಡೆಗಳನ್ನು ನಡೆಸಿದರು. ಇದರ ಪರಿಣಾಮವಾಗಿ ಸುಮಾರು ಎರಡು ತಿಂಗಳ ಕಾಲ ರಾಜ್ಯದಲ್ಲಿ ರೈಲುಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು. ರಾಜ್ಯದಲ್ಲಿ ರೈಲುಗಳ ಓಡಾಟದ ಬಗ್ಗೆ ಕೇಂದ್ರ ಮತ್ತು ಪಂಜಾಬ್ ಸರ್ಕಾರದ ನಡುವೆ ಜಗಳ ನಡೆದಿತ್ತು. ಆಗ 2,225ಕ್ಕೂ ಹೆಚ್ಚು ಸರಕು ಸಾಗಾಣೆ ರೈಲುಗಳನ್ನು ಸ್ಥಗಿತಗೊಳಿಸಲಾಗಿತ್ತು. 1,350 ಪ್ಯಾಸೆಂಜರ್ ರೈಲುಗಳನ್ನು ರದ್ದು ಮಾಡಿ ಆ ಸಮಯದಲ್ಲಿ ಬೇರೆಡೆಗೆ ತಿರುಗಿಸಬೇಕಾಯಿತು. ಇದರಿಂದ ಸರಕು ಸಾಗಣೆಯಿಂದ ಬರುವ ಆದಾಯದಲ್ಲಿ ಸುಮಾರು 1,200 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ರೈಲ್ವೇ ಹೇಳಿಕೊಂಡಿದೆ.
ರೈಲ್ವೇ ಪ್ರೊಟೆಕ್ಷನ್ ಫೋರ್ಸ್ನ 20 ಪಡೆಗಳು ಭದ್ರತೆಗೆ
ದೇಶಾದ್ಯಂತ ನಾಲ್ಕು ಗಂಟೆಗಳ ರೈಲ್ ರೋಕೋ ಅಭಿಯಾನದ ಕರೆಗೆ ಮುಂಚಿತವಾಗಿ 2021 ರ ಫೆಬ್ರವರಿಯಲ್ಲಿ ರೈಲ್ವೆಯು ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಾದ್ಯಂತ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ನ 20 ಹೆಚ್ಚುವರಿ ಪಡೆಗಳನ್ನು ಕಳುಹಿಸಬೇಕಾಗಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆಯು ಜಾಗ್ರತೆ ವಹಿಸುವುದು ಅತ್ಯಗತ್ಯವಾಗಿದೆ.