ಕೆಸಿಆರ್ ಭೇಟಿಗೆ ಸ್ಟಾಲಿನ್ ಒಲ್ಲೆ ಎಂದಿದ್ದೇಕೆ? ಕಾರಣ ಹಲವು!
ಇದ್ದಕ್ಕಿದ್ದಂತೆ ತೃತೀಯ ರಂಗದ ಕನಸು ಹೊತ್ತು ಹೊರಟಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ವೇಗಕ್ಕೆ ಬ್ರೇಕ್ ಹಾಕಿದ ಎಂಕೆ ಸ್ಟಾಲಿನ್ ನಡೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ತೃತೀಯ ರಂಗಕ್ಕೆ ತಮ್ಮ ಬೆಂಬಲವಿಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಸಿದ ಡಿಎಂಕೆ ನಾಯಕ ಸ್ಟಾಲಿನ್ ನಡೆಯ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳಿವೆ. ರಾಜಕೀಯದ ಆಳ ಅಗಲವನ್ನು ಅರಿತಿರುವ ಸ್ಟಾಲಿನ್ ಅವರಿಗೆ ಯಾವ ಸಂದರ್ಭದಲ್ಲಿ ಎಂಥ ನಡೆ ಇಡಬೇಕು ಎಂಬುದು ಗೊತ್ತಿಲ್ಲದ್ದೇನಲ್ಲ. ತಮಿಳುನಾಡಿನ ರಾಜಕೀಯದಲ್ಲೇ ಪಳಗಿರುವ ಅವರಿಗೆ ರಾಷ್ಟ್ರದ ರಾಜಕಾರಣದಲ್ಲಿ ಎಂಥ ಹೆಜ್ಜೆ ಇಡಬೇಕು ಎಂಬುದನ್ನು ಅರಿತುಕೊಳ್ಳುವುದು ಕಷ್ಟದ ಕೆಲಸವೂ ಅಲ್ಲ!
ತೃತೀಯ ರಂಗದ ಕನಸು ಹೊತ್ತ ಕೆಸಿಆರ್ ಗೆ ಭಾರೀ ಮುಖಭಂಗ ಮಾಡಿದ ಸ್ಟಾಲಿನ್
"ನಾನು ಚುನಾವಣೆಯ ಕೆಲಸದಲ್ಲಿ ಬ್ಯುಸಿ, ಭೇಟಿ ಮಾಡೋಕೆ ಆಗೋಲ್ಲ" ಎನ್ನುವ ಮೂಲಕ ಕೆಸಿಆರ್ ಗೆ ಮುಖಭಂಗವನ್ನುಂಟು ಮಾಡಿದ ಸ್ಟಾಲಿನ್, ಆ ಮೂಲಕ ತಮ್ಮ ಬೆಂಬಲ ಮಹಾಘಟಬಂಧನಕ್ಕೆ ಎಂದಿದ್ದಾರೆ. ಆದರೆ ಎಂದಿನಿಂದಲೂ ಕಾಂಗ್ರೆಸ್ ಗೆ ನಿಷ್ಠರಾಗಿರುವ ಸ್ಟಾಲಿನ್ ಅವರನ್ನು ಒಲಿಸಿಕೊಳ್ಳುವ ತಪ್ಪು ಪ್ರಯತ್ನವನ್ನು ಅದ್ಯಾವ ಆತ್ಮವಿಶ್ವಾಸದಲ್ಲಿ ಕೆಸಿಆರ್ ಮಾಡಿದರೋ ದೇವರೇ ಬಲ್ಲ!
ಅಂಗೈ ತೋರಿಸಿ ಅವಲಕ್ಷಣ ಹೇಳಿಸಿಕೊಂಡ ಕೆಸಿಆರ್ ಇದೀಗ ಬಿಜೆಪಿ ಕೆಂಗಣ್ಣಿಗೂ ಗುರಿಯಾಗಬಹುದು. ಆದರೆ ಸ್ಟಾಲಿನ್ ಮಾತ್ರ ಕೆಸಿಆರ್ ಭೇಟಿಗೆ ನಿರಾಕರಿಸಿ, ಕಾಂಗ್ರೆಸ್ ಪಾಲಿನ ಹೀರೋ ಆಗಿದ್ದು ಸತ್ಯ!
ಟಿಆರ್ ಎಸ್ ಬಳಿ ಇರೋದು 17 ಕ್ಷೇತ್ರ!
"ತೆಲಂಗಾಣದಲ್ಲಷ್ಟೇ ಬಲಿಷ್ಠವಾಗಿರುವ ಟಿಆರ್ ಎಸ್, ಅಬ್ಬಬ್ಬಾ ಅಂದ್ರೂ ಗೆಲ್ಲೋಕೆ ಸಾಧ್ಯವಿರೋದು ಕೇವಲ 17 ಕ್ಷೇತ್ರಗಳನ್ನು ಮಾತ್ರ. ಆ 17 ಕ್ಷೇತ್ರಗಳನ್ನಿಟ್ಟುಕೊಂಡು ತೃತೀಯ ರಂಗ ಎನ್ನುತ್ತ ಹೊರಟ ಕೆಸಿಆರ್ ಅವರನ್ನು ಬೆಂಬಲಿಸುವುದರಿಂದ ಯಾರಿಗೆ ಲಾಭ? ಅಕಸ್ಮಾತ್ ಎಸ್ಪಿ-ಬಿಎಸ್ಪಿ ಮೈತ್ರಿಕೂಟವೇನಾದರೂ ತೃತೀಯ ರಂಗದ ಮಾತನ್ನಾಡಿದ್ದರೆ ಕೊಂಚ ಯೋಚಿಸಬಹುದಿತ್ತು" ಎಂದು ಸ್ವತಃ ಸ್ಟಾಲಿನ್ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ.
ಕಾಂಗ್ರೆಸ್ ಗೆ ನಿಷ್ಠರಾಗಿರುವ ಸ್ಟಾಲಿನ್
ಟಿಆರ್ ಎಸ್ ಮತ್ತು ಕಾಂಗ್ರೆಸ್ ಅನ್ನು ಒಂದು ತಕ್ಕಡಿಯಲ್ಲಿ ಇಟ್ಟು ತೂಗಿ ಲಾಭ ಯಾವುದರಿಂದ ಜಾಸ್ತಿ ಎಂದು ಸ್ಟಾಲಿನ್ ಈಗಾಗಲೇ ತೂಗಿ ನೋಡಿದ್ದಾರೆ. ಗರಿಷ್ಠ 17 ಸ್ಥಾನ ಗೆಲ್ಲಬಹುದಾದ ಟಿಆರ್ ಎಸ್ ಮತ್ತು ಕನಿಷ್ಠ 100 ಕ್ಕೂ ಹೆಚ್ಚು ಸ್ಥಾನ ಗೆಲ್ಲಬಹುದಾದ ಕಾಂಗ್ರೆಸ್ ನಡುವಲ್ಲಿ ಕಾಂಗ್ರೆಸ್ ಅನ್ನೇ ಸ್ಟಾಲಿನ್ ಆಯ್ದುಕೊಳ್ಳುವುದು ಸಹಜ.
ಸಂಯುಕ್ತ ರಂಗದ ಸೃಷ್ಟಿ ಹಿಂದೆ ಕೆಸಿಆರ್ ಪ್ರಧಾನಿ ಪಟ್ಟದ ಕನಸು...
ಹೀರೋ ಆದ ಸ್ಟಾಲಿನ್
ಕೆ.ಚಂದ್ರಶೇಖರ್ ರಾವ್ ಅವರನ್ನು ಸೌಜನ್ಯಕ್ಕೂ ಭೇಟಿಯಾಗದೆ ಸ್ಟಾಲಿನ್ ಕಾಂಗ್ರೆಸ್ ಪಾಲಿನ ಹೀರೋ ಆದರು. ಸ್ಟಾಲಿನ್ ಸೌಜನ್ಯಕ್ಕಾದರೂ ಕೆಸಿಆರ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿ, ನಂತರ ತೃತೀಯ ರಂಗದ ಆಫರ್ ಅನ್ನು ತಿರಸ್ಕರಿಸಿದ್ದರೆ ಬೇರೆ ಮಾತು. ಆದರೆ ಭೇಟಿಯನ್ನೇ ಮಾಡದೆ ಉಳುಯುವ ಮೂಲಕ ಸ್ಟಾಲಿನ್ ಕಾಂಗ್ರೆಸ್ ಪಾಲಿನ ಹೀರೋ ಆಗಿ ಉಳಿದರು.
ಕೈ ಸುಟ್ಟಿಕೊಂಡಿದ್ದು ಟಿಆರ್ ಎಸ್!
ಕಳೆದ ಲೋಕಸಭಾ ಚುನಾವಣೆಯ ನಂತರ ಎನ್ ಡಿಎ ಮೈತ್ರಿಕೂಟಕ್ಕೆ ಪರೋಕ್ಷ ಬೆಂಬಲ ನೀಡಿದ್ದ ಟಿಆರ್ ಎಸ್, ಬಿಜೆಪಿ ನಾಯಕರೊಂದಿಗೆ ಆತ್ಮೀಯವಾಗಿಯೇ ಇದ್ದರು. ಕೇಂದ್ರ ಸರ್ಕಾರದೊಂದಿಗೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ಆದರೆ ಇದೀಗ ಬಿಜೆಪಿ-ಕಾಂಗ್ರೆಸ್ ಅನ್ನು ಹೊರಗಿಟ್ಟು ತೃತೀಯ ರಂಗ ರಚಿಸುತ್ತೇನೆ ಎಂದು ಹೊರಟ ಅವರ ನಡೆಯಿಂದ ಬಿಜೆಪಿಯ ನಿಷ್ಠುರವನ್ನೂ ಅವರು ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ ಎದುರಾದರೆ ಅಚ್ಚರಿಯಿಲ್ಲ.