ಕರ್ತರ್ ಪುರ್ ಕಾರಿಡಾರ್ ಯೋಜನೆಗೆ ತಕರಾರು ಏಕೆ ಗೊತ್ತೆ? ಇಲ್ಲಿದೆ ವಿಶ್ಲೇಷಣೆ
ಕರ್ತರ್ ಪುರ್ ಕಾರಿಡಾರ್ ಯೋಜನೆಗೆ ಬುಧವಾರ ಪಾಕಿಸ್ತಾನದಲ್ಲಿ ಶಂಕುಸ್ಥಾಪನೆ ಆಗಿದೆ. ಅದಕ್ಕೂ ಎರಡು ದಿನ ಮೊದಲೇ ಭಾರತದ ಪಂಜಾಬ್ ನ ಗುರ್ ದಾಸ್ ಪುರ್ ನಲ್ಲಿ ಚಾಲನೆ ಸಿಕ್ಕಿದೆ. ಆದರೆ ಈ ಯೋಜನೆ ಬಗ್ಗೆ ತಜ್ಞರಿಗೆ ಬಹಳ ತಕರಾರುಗಳಿವೆ. ಈ ನಾಲ್ಕು ಕಿಲೋಮೀಟರ್ ನ ಕಾರಿಡಾರ್ ಯೋಜನೆ ಭಾರತದ ಪಾಲಿಗೆ ಬಹಳ ದುಬಾರಿ ಆಗಲಿದೆ ಎಂಬುದು ಹಲವರ ಅಭಿಮತ.
ಮೇಲ್ನೋಟಕ್ಕೆ ಕಾಣಿಸುವಂತೆ, ಕೇಳಿಸುವಂತೆ ಸಿಖ್ಖರ ಮೇಲಿನ ಪ್ರೀತಿಯಿಂದ ಈ ಕಾರಿಡಾರ್ ಯೋಜನೆಗೆ ಪಾಕಿಸ್ತಾನ ಒಪ್ಪಿಕೊಂಡಿರುವುದಲ್ಲ. ಅದರ ಹಿಂದಿನ ಹುನ್ನಾರ ಬೇರೆ ಇದೆ ಎಂಬುದು ಯೋಜನೆಗೆ ಆಕ್ಷೇಪ ಎತ್ತಿರುವವರ ವಾದ. ಹೌದು, ಇದೊಂದು ಶಾಂತಿ ಸಂದೇಶ ಸಾರುವ ಪ್ರಯತ್ನದಂತೆ ಕಾಣುತ್ತಿದೆಯಲ್ಲಾ, ಮತ್ಯಾಕೆ ತಕರಾರು ಅಂತೆನಿಸಬಹುದು.
ಭಾರತ-ಪಾಕ್ ನಿಂದ ಮಹತ್ವದ ಹೆಜ್ಜೆ; ಕರ್ತರ್ ಪುರ್ ಕಾರಿಡಾರ್ ಯೋಜನೆ ಘೋಷಣೆ
ಆದರೆ, ಅದರ ಹಿಂದೊಂದು ಮಸಲತ್ತಿದೆ. ಅದು ಗೊತ್ತಾಗಬೇಕು ಅಂದರೆ ಖಲೀಸ್ತಾನ್ ಹೋರಾಟದ ಬಗ್ಗೆ ಚೂರಾದರೂ ಮಾಹಿತಿ ಇರಬೇಕು. ಇದೀಗ ಮತ್ತೆ ಆ ಧ್ವನಿ ಕೇಳುತ್ತಿರುವುದರ ಹಿಂದಿನ ಕೈ ಯಾವುದಿರಬಹುದು ಎಂಬ ಅಂದಾಜು ಸುಲಭಕ್ಕೆ ಆಗಬಹುದು. ಆದ್ದರಿಂದ ಕರ್ತರ್ ಪುರ್ ಕಾರಿಡಾರ್ ಬೇಡ ಎನ್ನುವವರ ವಾದ ಏನು ತಿಳಿದುಕೊಳ್ಳಿ.
ಖಲೀಸ್ತಾನ್ ಹೋರಾಟದ ಬಗ್ಗೆ ತಿಳಿದುಕೊಳ್ಳಬೇಕು
ಭಾರತದ ಪಂಜಾಬ್ ಅನ್ನು ಖಲೀಸ್ತಾನ್ ಎಂದು ಘೋಷಿಸಿ, ಸಿಖ್ಖರಿಗೆ ಪ್ರತ್ಯೇಕ ದೇಶ ಬೇಕು ಎಂಬುದು ಬಹಳ ಹಳೇ ಬೇಡಿಕೆ. ಅದಕ್ಕಾಗಿಯೇ ಖಲೀಸ್ತಾನ್ ಹೋರಾಟ ನಡೆಸುತ್ತಾ, ತಮ್ಮ ಚಟುವಟಿಕೆಗಳ ಕಾರ್ಯಸ್ಥಾನವನ್ನಾಗಿ ಸ್ವರ್ಣ ಮಂದಿರವನ್ನೇ ಮಾಡಿಕೊಳ್ಳಲಾಗಿತ್ತು. ಇವೆಲ್ಲ ಮೂವತ್ತೈದು ವರ್ಷಗಳ ಹಿಂದಿನ ವಿಚಾರ. ಆಗ ಆ ಧ್ವನಿಗೆ ದೊಡ್ಡ ಗಂಟಲಾಗಿದ್ದ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆಯನ್ನು ಆಗಿನ ಕೇಂದ್ರ ಸರಕಾರ ಮಾತುಕತೆಗೆ ಆಹ್ವಾನಿಸಿತ್ತು. ಆದರೆ ಆತ ಯಾರ ಮಾತನ್ನೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲೇ ಇರಲಿಲ್ಲ. ಆತನ ವಿಚಿತ್ರ ವರ್ತನೆ, ಧೋರಣೆ ಗಮನಿಸಿದ ಆಗಿನ ಕಾಂಗ್ರೆಸ್ ಸರಕಾರದ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಇದು ಮಾತಿಗೆ ಬಗ್ಗುವುದಲ್ಲ ಅನ್ನೋದು ಗೊತ್ತಾಯಿತು.
ಉಗ್ರಗಾಮಿಗಳನ್ನು ಜತೆ ಮಾಡಿಕೊಂಡು, ಶಸ್ತ್ರಾಸ್ತ್ರ ಸಂಗ್ರಹಿಸಿದ್ದ
ಆದರೆ, ಅಷ್ಟರಲ್ಲಾಗಲೇ ಭಿಂದ್ರನ್ ವಾಲೆ ಅಮೃತ್ ಸರ್ ನಲ್ಲಿರುವ ಸಿಖ್ಖರ ಪವಿತ್ರ ಸ್ವರ್ಣ ಮಂದಿರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಉಗ್ರಗಾಮಿಗಳನ್ನು ಜಮೆ ಮಾಡಿಕೊಂಡು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಆರಂಭಿಸಿದ್ದ. ಖಲೀಸ್ತಾನ್ ಹೋರಾಟದ ಭಾಗವಾಗಿ ಅಷ್ಟರಲ್ಲಾಗಲೇ ವಿಮಾನ ಅಪಹರಣದಂಥ ವಿಫಲ ಯತ್ನಗಳನ್ನು ಸಹ ಮಾಡಲಾಗಿತ್ತು. ಇನ್ನು ಸುಮ್ಮನಿದ್ದರೆ ಆಗಲ್ಲ ಎನಿಸಿ, ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ಕೈಗೊಂಡ ಸರಕಾರ, ಭಿಂದ್ರನ್ ವಾಲೆ ಸೇರಿದಂತೆ ಉಗ್ರಗಾಮಿಗಳನ್ನು ಹೊಡೆದುರುಳಿಸಿತ್ತು. ಈ ಕಾರ್ಯಾಚರಣೆಯಲ್ಲಿ ಸ್ವತಃ ಭಾರತೀಯ ಸೇನೆಯೇ ಭಾಗಿಯಾಗಿತ್ತು.
ಒಂದು ಸೆಕೆಂಡ್ ಅಪ್ಪಿದ್ದೇನೆ ಅಷ್ಟೇ, ಅದು ರಫೇಲ್ ಡೀಲ್ ಅಲ್ಲ: ಸಿಧು
ಇತಿಹಾಸದಲ್ಲಿ ಅಳಿಸಲಾಗದ ಕಪ್ಪು ಚುಕ್ಕೆ
ಸಿಖ್ಖರ ಪವಿತ್ರ ಧಾರ್ಮಿಕ ಕ್ಷೇತ್ರದಲ್ಲಿ ಹೀಗೆ ರಕ್ತಪಾತ ನಡೆದಿದ್ದು ಆ ಸಮುದಾಯಕ್ಕೆ ಭಾರೀ ಸಿಟ್ಟು ಹಾಗೂ ಅವಮಾನದ ವಿಷಯ ಆಯಿತು. ಆ ಕಾರ್ಯಾಚರಣೆಗೆ ನಿರ್ಧರಿಸಿದ ಆಗಿನ ಪ್ರಧಾನಿ ಇಂದಿರಾಗಾಂಧಿ ಅವರನ್ನು ಕೊಲ್ಲಲು ನಿರ್ಧರಿಸಲಾಯಿತು. ಅದೇ ವರ್ಷ ಅಂದರೆ 1984ರ ಅಕ್ಟೋಬರ್ ನಲ್ಲಿ ಅಂಗರಕ್ಷಕರಾಗಿದ್ದ ಬೇಅಂತ್ ಸಿಂಗ್ ಹಾಗೂ ಸತ್ವಂತ್ ಸಿಂಗ್ ಇಂದಿರಾ ಅವರನ್ನು ಹತ್ಯೆ ಮಾಡಿಬಿಟ್ಟರು. ಆ ಹತ್ಯೆ ನಂತರ ದೆಹಲಿ ಸೇರಿದಂತೆ ದೇಶದ ವಿವಿಧೆಡೆ ನಡೆದ ಹಿಂಸಾಚಾರದಲ್ಲಿ ಹಲವು ಸಿಖ್ಖರನ್ನು ಹತ್ಯೆ ಮಾಡಲಾಯಿತು. ಒಟ್ಟಾರೆ ಆ ಎರಡು ಘಟನೆ, ಅಂದರೆ ಆಪರೇಷನ್ ಬ್ಲೂ ಸ್ಟಾರ್ ಹಾಗೂ ಇಂದಿರಾ ಹತ್ಯೆ ನಂತರದ ಸಿಖ್ಖರ ವಿರುದ್ಧದ ಹಿಂಸಾಚಾರ ಇತಿಹಾಸದಲ್ಲಿ ಅಳಿಸಲಾಗದ ಕಪ್ಪು ಚುಕ್ಕೆಯಾಗಿ ಉಳಿದುಹೋಯಿತು.
ಭಾರತವನ್ನು ಒಡೆಯುವ ಧ್ವನಿಗೆ ಪಾಕ್ ಬೆಂಬಲ
ಈ ಮಧ್ಯೆ ಪಾಕಿಸ್ತಾನದಲ್ಲಿ ಸಿಖ್ ಸಮುದಾಯದವರ ಸಂಖ್ಯೆ ಕಡಿಮೆ ಏನಿಲ್ಲ. ಪಾಕಿಸ್ತಾನ ಅಂತಲ್ಲ, ಅಮೆರಿಕ, ಇಂಗ್ಲೆಂಡ್ ಮತ್ತಿತರ ಕಡೆ ಸಿಖ್ ಸಮುದಾಯದವರು ಇದ್ದಾರೆ. ಆ ಪೈಕಿ ಬಹುಸಂಖ್ಯಾತರಿಗೆ ಭಾರತದ ಮೇಲೆ ಸಿಟ್ಟೊಂದಿದೆ. ಅಷ್ಟೇ ಅಲ್ಲ, ಭಾರತದ ಪಂಜಾಬ್ ಅನ್ನು ಪ್ರತ್ಯೇಕ ದೇಶವಾಗಿ ಘೋಷಿಸಬೇಕು, ಅದಕ್ಕೆ ಖಲೀಸ್ತಾನ್ ಎಂದು ಹೆಸರಿಡಬೇಕು ಎಂಬುದು ಅವರ ಆಗ್ರಹ. ಹೀಗೆ ಭಾರತವನ್ನು ಒಡೆಯುವ ಧ್ವನಿಗೆ ಪಾಕಿಸ್ತಾನದ ಬೆಂಬಲವಿದೆ. ಏಕೆಂದರೆ, ಪೂರ್ವ ಪಾಕಿಸ್ತಾನ ಆಗಿದ್ದ ಬಾಂಗ್ಲಾದೇಶವನ್ನು ಸ್ವತಂತ್ರ ದೇಶವಾಗಿ ಮಾಡಿದ್ದೇ ಭಾರತ ಎಂಬ ಸಿಟ್ಟು ಪಾಕ್ ಗೆ ಇದೆ. ಜತೆಗೆ ಭಾರತದಲ್ಲಿ ಅಸ್ಥಿರತೆ ಉಂಟು ಮಾಡುವ ಯಾವ ಅವಕಾಶವನ್ನೂ ಅದು ತಪ್ಪಿಸಿಕೊಳ್ಳುವುದಿಲ್ಲ.
ರಾಯಭಾರ ಅಧಿಕಾರಿಗಳಿಗೆ ಕಿರುಕುಳ: ಪಾಕ್ ವಿರುದ್ಧ ಭಾರತದ ಪ್ರತಿಭಟನೆ
ವಿಶೇಷ ಅನುಮತಿ ಹಾಗೂ ವೀಸಾದ ಅಗತ್ಯವಿಲ್ಲ
ಹಾಗೆ ನೋಡಿದರೆ ಭಾರತ-ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಬಹಳ ನೋವನ್ನು ಅನುಭವಿಸಿದವರು ಸಿಖ್ಖರು. ಅವರಿಗೆ ಪಾಕಿಸ್ತಾನದ ಮೇಲೆ ಸಿಟ್ಟಿದೆ. ಆದರೆ ರಾಜಕೀಯ ಬೆಂಬಲದ ಕಾರಣಕ್ಕೆ ಪಾಕಿಸ್ತಾನದ ಒಲವು-ನಿಲುವುಗಳ ಬಗ್ಗೆ ಖಲೀಸ್ತಾನ್ ಹೋರಾಟಗಾರರಿಗೆ ಅಂಥ ತಕರಾರಿಲ್ಲ. ಖಲೀಸ್ತಾನ್ ಹೋರಾಟಗಾರರ ಸಿಟ್ಟನ್ನು ಮತ್ತಷ್ಟು ಹೆಚ್ಚು ಮಾಡಿ, ಅವರ ಮೂಲಕ ಭಾರತದಲ್ಲಿ ದಾಳಿಗಳನ್ನು ಮಾಡಿಸುವುದು ಆ ದೇಶದ ಹುನ್ನಾರ. ಅದರ ಭಾಗವಾಗಿಯೇ ಸಿಖ್ಖರಿಗೆ ಪವಿತ್ರ ಕ್ಷೇತ್ರವಾದ ಕರ್ತರ್ ಪುರ್ ಸಾಹಿಬ್ ಕಾರಿಡಾರ್ ಯೋಜನೆಗೆ ತಕ್ಷಣ ಒಪ್ಪಿಕೊಂಡು, ಕಾಮಗಾರಿಯನ್ನೂ ಆರಂಭಿಸುತ್ತಿದೆ. ಅಲ್ಲಿಗೆ ತೆರಳಲು ಭಾರತೀಯ ಸಿಖ್ ಸಮುದಾಯದವರಿಗೆ ಪಾಕಿಸ್ತಾನದ ವಿಶೇಷ ಅನುಮತಿ, ವೀಸಾ ಸಹ ಬೇಕಾಗಿಲ್ಲ. ಅದನ್ನೇ ತನಗಿರುವ ಸಿಖ್ ಸಮುದಾಯದ ಮೇಲಿನ ಪ್ರೀತಿ ಎಂದು ಬಿಂಬಿಸಿ, ಖಲೀಸ್ತಾನ್ ಹೋರಾಟಕ್ಕೆ ಇನ್ನಷ್ಟು ಬೆಂಬಲ ನೀಡಿ, ಭಾರತದಲ್ಲಿ ಅಸ್ಥಿರತೆ ಸೃಷ್ಟಿಸಬಹುದು ಎಂಬುದು ತಜ್ಞರ ಅಭಿಮತ.