ಕರ್ನಾಟಕ ರಾಜಕಾರಣದ ಸಂಖ್ಯಾಶಾಸ್ತ್ರದಲ್ಲಿ 16 ಹಾಗೂ 20ಕ್ಕೆ ಮಹತ್ವ ಏಕೆ?
ಗೋಕಾಕ ಕ್ಷೇತ್ರದ ಶಾಸಕ, ನಾಲ್ಕು ಬಾರಿ ಕಾಂಗ್ರೆಸ್ ನಿಂದ ಆಯ್ಕೆಯಾಗಿರುವ ಜನಪ್ರತಿನಿಧಿ, ಸಣ್ಣ ಕೈಗಾರಿಕೆ ಜತೆಗೆ ಬೆಳಗಾವಿ ಉಸ್ತುವಾರಿ ವಹಿಸಿರುವ ರಮೇಶ ಜಾರಕಿಹೊಳಿ ಹೊತ್ತಿಸಿರುವ ಬೆಂಕಿಗೆ ಕಾಂಗ್ರೆಸ್-ಜೆಡಿಎಸ್ ನಲ್ಲಿ ನಡುಕ ಉಂಟಾಗುತ್ತಿದ್ದರೆ, ಎಷ್ಟು ಹೊತ್ತಿಗೆ ನಾವು ಮೈ ಕಾಯಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.
ಈಗ ಬಹಳ ಚರ್ಚೆ ಆಗುತ್ತಿರುವುದು ಏನೆಂದರೆ ಪದೇ ಪದೇ 16 ಹಾಗೂ 20 ಎಂದು ಶಾಸಕರ ಸಂಖ್ಯೆಯನ್ನು ಹೇಳುವುದರ ಹಿಂದೆ ಅಂಥ ವಿಶೇಷ ಏನಿದೆ ಎಂಬ ವಿಚಾರ. ಲೆಕ್ಕಾಚಾರವಿಲ್ಲದೆ ರಾಜಕಾರಣವೇ ಸಾಧ್ಯವಿಲ್ಲ. ಚೌಕಾಸಿ -ಕೊಟ್ಟು, ತೆಗೆದುಕೊಳ್ಳುವುದು ಏನೇ ಆದರೂ ಅದರ ಹಿಂದೆ ಲೆಕ್ಕಾಚಾರವೇ ಕೆಲಸ ಮಾಡುತ್ತಿರುತ್ತದೆ.
ಕರ್ನಾಟಕದ ಪಾಲಿಟಿಕ್ಸ್ ಎಂಬ ಪಕ್ಕಾ ರೂಮರ್ ಬಜಾರ್!
ಈಗ ಬೃಹನ್ನಾಟಕದಲ್ಲಿ ತೆರೆಯ ಮೇಲೆ ರಾರಾಜಿಸುತ್ತಿರುವ ಅಂಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಉರುಳಿಹೋಗಿ, ಬಿಜೆಪಿ ಗದ್ದುಗೆಗೆ ಬಂದು ಬಿಡುತ್ತದಾ? ಬೆಳಗಾವಿಯಿಂದ ಶುರುವಾದ ಬೆಂಕಿಯ ಹೊಡೆತಕ್ಕೆ ಬೆಂಗಳೂರಿನ ವಿಧಾನಸೌಧದಲ್ಲಿ ಬದಲಾವಣೆ ತರುವ ಶಕ್ತಿ ಇದೆಯಾ? ಒಟ್ಟಿನಲ್ಲಿ ಏನಿದು ಲೆಕ್ಕಾಚಾರ ಅನ್ನೋದರ ವಿವರ ಇಲ್ಲಿದೆ.
ಅತಿ ದೊಡ್ಡ ಪಕ್ಷವಾಗಿ ಬಿಜೆಪಿ
ಕರ್ನಾಟಕ ವಿಧಾನಸಭೆಯ ಒಟ್ಟು ಸದಸ್ಯತ್ವ ಬಲ 224.
ಬಿಜೆಪಿ 104
ಕಾಂಗ್ರೆಸ್ 79
ಜೆಡಿಎಸ್ 36
ಬಿಎಸ್ ಪಿ 1
ಕೆಪಿಜೆಪಿ 1
ಪಕ್ಷೇತರ 1
ಇದು ಸದ್ಯಕ್ಕೆ ಇರುವ ಪಕ್ಷಗಳ ಬಲಾಬಲ. ಅತಿ ದೊಡ್ಡ ಪಕ್ಷ ಬಿಜೆಪಿ. ಮೈತ್ರಿ ಸರಕಾರ ರಚಿಸಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಸೇರಿ 118 ಸದಸ್ಯತ್ವ ಬಲ ಇದೆ. ಕುಮಾರಸ್ವಾಮಿ ಅವರು ಎರಡು ಸ್ಥಾನಗಳಲ್ಲಿ ಗೆದ್ದು, ರಾಮನಗರಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿರುವುದು ಹಾಗೂ ಜಮಖಂಡಿಯಿಂದ ಗೆದ್ದಿದ್ದ ಕಾಂಗ್ರೆಸ್ ನ ಶಾಸಕ ಮೃತಪಟ್ಟಿದ್ದರಿಂದ ತೆರವಾದ ಕ್ಷೇತ್ರಕ್ಕೆ ಮತ್ತೆ ಚುನಾವಣೆ ನಡೆಯಬೇಕಿದೆ. ಅಲ್ಲಿಗೆ ಸದ್ಯಕ್ಕೆ ಒಟ್ಟು ಬಲ 222. ಬಹುಮತ ಸಾಬೀತಿಗೆ 111 ಮ್ಯಾಜಿಕ್ ನಂಬರ್ ಆಗುತ್ತದೆ.
ಹದಿನಾರು ಶಾಸಕರು ರಾಜೀನಾಮೆ ನೀಡಿದರೆ ಏನಾಗುತ್ತದೆ?
ಹಾಗಿದ್ದರೆ ಕಾಂಗ್ರೆಸ್ ಹಾಗೂ/ಅಥವಾ ಜೆಡಿಎಸ್ ನಿಂದ ಹದಿನಾರು ಶಾಸಕರು ರಾಜೀನಾಮೆ ನೀಡಿದರೆ ಏನಾಗುತ್ತದೆ? ಈಗಿರುವ ಸರಕಾರ ಬಹುಮತ ಕಳೆದುಕೊಳ್ಳುತ್ತದೆ. ಅದು ಹೇಗೆ ಅಂತೀರಾ? 222ರಲ್ಲಿ ಹದಿನಾರು ಕಳೆದರೆ ಬಾಕಿ ಉಳಿಯುವುದು 206. ಬಹುಮತ ಸಾಬೀತು ಮಾಡಬೇಕು ಅಂದರೆ 104 ಸದಸ್ಯರು ಬೇಕು. ಆ ಪ್ರಮಾಣದ ಸಂಖ್ಯೆ ಸದ್ಯಕ್ಕೆ ಬಿಜೆಪಿ ಬಳಿ ಇದೆ. ಅಂದರೆ ಆ ಸಂಖ್ಯೆ ಇಟ್ಟುಕೊಂಡು ಅಧಿಕಾರಕ್ಕೆ ಏರಿಬಿಡಬಹುದು. ಅದಾದ ಮೇಲೆ ರಾಜೀನಾಮೆ ನೀಡಿದ ಹದಿನಾರು ಹಾಗೂ ತೆರವಾದ ಎರಡು ಸ್ಥಾನಗಳಿಗೆ ಚುನಾವಣೆ ನಡೆಯುತ್ತದಲ್ಲಾ ಆ ವೇಳೆಗೆ ಹನ್ನೆರಡಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದು ಲೆಕ್ಕಾಚಾರ.
ಮೈತ್ರಿ ಸರ್ಕಾರಕ್ಕೆ 100 ದಿನ : ಮಾಡಿದ್ದೇನು?, ಮಾಡಬೇಕಿರುವುದೇನು?
ಸರಳ ಬಹುಮತದೊಂದಿಗೆ ಸರಕಾರ ನಡೆಸುವುದು ಕಷ್ಟ
ಆದರೆ, ಸರಳ ಬಹುಮತದ ಮೂಲಕ ಸರಕಾರ ರಚಿಸುವುದು ಬಹಳ ಕಷ್ಟ ಹಾಗೂ ಸವಾಲಿನ ಕೆಲಸ. ಅಂಥ ಸನ್ನಿವೇಶದಲ್ಲಿ ಸರಕಾರಕ್ಕೆ ಪಕ್ಷದ ಒಳಗಿಂದಲೂ ಕೆಲವು ಬೆದರಿಕೆಗಳಿರುತ್ತವೆ ಹಾಗೂ ವಿಪಕ್ಷಗಳು ಸಹ ಸುಮ್ಮನೆ ಕೂರಲ್ಲ. ಆದ್ದರಿಂದ ಹದಿನಾರು ಶಾಸಕರ ಬದಲು ಇಪ್ಪತ್ತು ಶಾಸಕರಿಂದ ರಾಜೀನಾಮೆ ಕೊಡಿಸಿದರೆ ಒಂದಿಷ್ಟು ಆತ್ಮವಿಶ್ವಾಸದಿಂದ ಇರಬಹುದು. ಮೊದಲ ಕಂತಿನಲ್ಲಿ 16 ಶಾಸಕರಿಂದ, ಆ ನಂತರ ಬಿಜೆಪಿ ಸರಕಾರ ನಿರಾತಂಕವಾಗಿ ರಚಿಸಬಹುದು ಅಂತಾದಾಗ ಇನ್ನೂ ನಾಲ್ಕು ಶಾಸಕರಿಂದ ರಾಜೀನಾಮೆ ಕೊಡಿಸಬೇಕು ಎಂಬುದು ಸದ್ಯಕ್ಕೆ ಲೆಕ್ಕಾಚಾರ. ವಿಪಕ್ಷಗಳ ಶಾಸಕರ ರಾಜೀನಾಮೆ ಕೊಡಿಸಿದರಷ್ಟೇ ಸಾಲದು, ತಮ್ಮ ಪಕ್ಷದ ಶಾಸಕರು ನಿಷ್ಠೆ ಬದಲಿಸದಂತೆ ಎಚ್ಚರ ವಹಿಸಬೇಕು. ಮುಂದೆ ನಡೆಯುವ ಉಪ ಚುನಾವಣೆಗಳಲ್ಲಿ ಪಕ್ಷದಿಂದ ನಿಲ್ಲುವ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲೇಬೇಕು.
ಸಹೋದರನಿಗೆ ಟಾಂಗ್ ಕೊಟ್ಟ ನೂತನ ಸಚಿವ ರಮೇಶ ಜಾರಕಿಹೊಳಿ
ಯಡಿಯೂರಪ್ಪ ಮುಖ್ಯಮಂತ್ರಿ, ಶ್ರೀರಾಮುಲು ಉಪ ಮುಖ್ಯಮಂತ್ರಿ
ಬಿಜೆಪಿಗೆ ಆಪರೇಷನ್ ಕಮಲವನ್ನು ಸಾರ್ವಜನಿಕವಾಗಿ ಮಾಡುವುದು ಸುತರಾಂ ಒಪ್ಪಿಗೆ ಇಲ್ಲ. ಏಕೆಂದರೆ, ಹಾಗೆ ಮಾಡಿದರೆ ಲೋಕಸಭೆ ಚುನಾವಣೆಯಲ್ಲಿ ವರ್ಚಸ್ಸಿಗೆ ಹೊಡೆತ ಬೀಳುತ್ತದೆ. ಆದ್ದರಿಂದ ಆ ರೀತಿ ಮಾಡುವ ಬದಲಿಗೆ, ಕಾಂಗ್ರೆಸ್ ಪಕ್ಷದಲ್ಲಿ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಶಾಸಕರು ತಾವಾಗಿಯೇ ರಾಜೀನಾಮೆ ನೀಡಿದರು. ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದೇವೆ ಅಷ್ಟೇ ಎನ್ನಬಹುದು ಎಂಬ ಚಿತ್ರಕಥೆ ಇದು. ಸದ್ಯಕ್ಕೆ ಹೆಣೆದಿರುವ ತಂತ್ರದಂತೆ ಎಲ್ಲವೂ ಸರಿಯಾಗಿ ನಡೆದರೆ, ಬಿಜೆಪಿಯು ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ. ಜತೆಗೆ ಶ್ರೀರಾಮುಲು ಉಪ ಮುಖ್ಯಮಂತ್ರಿ ಆಗುತ್ತಾರೆ. ಇದರ ಜತೆಗೆ ರಮೇಶ್ ಜಾರಕಿಹೊಳಿ ಸೂಚಿಸುವವರೊಬ್ಬರನ್ನು ಉಪ ಮುಖ್ಯಮಂತ್ರಿ ಮಾಡಲಾಗುತ್ತದೆ. ಮುಂದೆ ನಡೆಯುವ ಉಪ ಚುನಾವಣೆಗಳಲ್ಲಿ ಇಂತಿಷ್ಟು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಅವರಿಗಿರುತ್ತದೆ.