ಸದಾ ಸುದ್ದಿಯಲ್ಲೇ ಇರುವ JNU ಹಿಂದಿದೆ ವೈಭವದ ಇತಿಹಾಸ
1965 ರ ಒಂದು ದಿನ. ರಾಜ್ಯಸಭೆಯಲ್ಲಿ ಮಾತನಾಡುತ್ತಿದ್ದ ಅಂದಿನ ಜವಾಹರಲಾಲ್ ನೆಹರೂ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಮೊಹಮ್ಮದ್ ಅಲಿ ಚಗ್ಲಾ, ವಿಶ್ವವಿದ್ಯಾಲಯಗಳು ಹೇಗಿರಬೇಕು ಎಂಬ ಬಗ್ಗೆ ತಮ್ಮದೇ ಆದ ಒಂದು ಪರಿಕಲ್ಪನೆಯನ್ನು ಪ್ರಸ್ತುತ ಪಡಿಸಿದ್ದರು. ಅದು ಸ್ವತಂತ್ರ ಚಿಂತನೆಗೆ ಅವಕಾಶ ನೀಡುವಂಥ ವಾತಾವರಣ ನಿರ್ಮಿಸಿ ಒಂದು ಮಾದರಿ ಸಂಸ್ಥೆಯಾಗಬೇಕು ಎಂಬ ಕನಸು ಕಂಡಿದ್ದರು. ಅವರ ಆ ಕನಸಿನ ಸಾಕಾರ ರೂಪ ಎಂಬಂತೆ ನಾಲ್ಕು ವರ್ಷದ ನಂತರ, ಅಂದರೆ 1969 ರಲ್ಲಿ ದೆಹಲಿಯಲ್ಲಿ "ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ" ಆರಂಭವಾಯ್ತು. ಚಗ್ಲಾ ಅಂದುಕೊಂಡಂತೆ ಈ ವಿಶ್ವವಿದ್ಯಾಲಯ ನೂರಾರು ಸ್ವತಂತ್ರ ಚಿಂತಕರ ಹುಟ್ಟಿಗೆ ಕಾರಣವಾಯ್ತು... ದೇಶಕ್ಕೆ ಅತ್ಯುತ್ತಮ ರಾಜಕಾರಣಿಗಳನ್ನೂ, ಹೋರಾಟಗಾರರನ್ನೂ ನೀಡಿತು. ಸಂಶೋಧನಾ ಕ್ಷೇತ್ರದಲ್ಲಿ ಅಸಂಖ್ಯ ಕೊಡುಗೆಗಳನ್ನು ನೀಡಿತು.
ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಸಮಿತಿ(NAAC)ಯಿಂದ ಅಗ್ರಸ್ಥಾನ ಪಡೆದಿದ್ದ ಜೆಎನ್ ಯು ಇತ್ತೀಚೆಗೆ ಮತ್ತೆ ಸುದ್ದಿಗೆ ಬಂದಿರುವುದು ಶುಲ್ಕ ಹೆಚ್ಚಳದ ಗಲಾಟೆಗೆ ಸಂಬಂಧಿಸಿದಂತೆ.
ದೆಹಲಿಯಲ್ಲಿ ಕಲ್ಲು ಎಸೆದವರ ವಿರುದ್ಧ ಪೊಲೀಸ್ ಕೇಸ್!
ದೇಶದಲ್ಲಿರುವ ಸಾವಿರಾರು ವಿಶ್ವವಿದ್ಯಾಲಯಗಳಲ್ಲಿ ದಿನೇ ದಿನೇ ಶುಲ್ಕ ಹೆಚ್ಚಳವಾಗುತ್ತಲೇ ಇದ್ದರೂ ಮುನ್ನಲೆಗೆ ಬರದ ಪ್ರತಿಭಟನೆಯ ಸುದ್ದಿ ಜೆಎನ್ ಯುವಿನಲ್ಲಿ ಕಡ್ಡಿ ಅಲ್ಲಾಡಿದರೂ ರಾಷ್ಟ್ರ ಮಟ್ಟದ ಗಮನ ಸೆಳೆಯುವುದು ಏಕೆ? ಬೇರೆ ಯಾವ ಪ್ರತಿಭಟನೆಗೂ ಕ್ಯಾರೆ ಎನ್ನದ ಸರ್ಕಾರ, ರಾಜಕೀಯ ಪಕ್ಷಗಳು ಜೆಎನ್ ಯುವಿನಲ್ಲಿ ಪ್ರತಿಭಟನೆ ಆರಂಭವಾದರೆ ಮಾತ್ರ ನಿದ್ದೆಗೆಡುವುದೇಕೆ?
ಜೆಎನ್ ಯುವಿನ ಇತಿಹಾಸ ತಡಕಾಡಿದರೆ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರಕುತ್ತದೆ.
ಜೆಎನ್ ಯು ಇತಿಹಾಸ
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಆರಂಭವಾಗಿದ್ದು 1969 ರಲ್ಲಿ. ಶಿಕ್ಷಣತಜ್ಞರಾಗಿದ್ದ ಪ್ರೊ. ಮೂನಿಸ್ ರಾಜಾ ಈ ವಿಶ್ವವಿದ್ಯಾಲಯದ ಸಂಸ್ಥಾಪಕರಾದರೆ, ಪತ್ರಕರ್ತ, ಶಿಕ್ಷಣ ತಜ್ಞ ಜಿ.ಪಾರ್ಥಸಾರಥಿ ಮೊದಲ ಉಪಕುಲಪತಿಯಾಗಿದ್ದರು. 1965 ರಲ್ಲಿಯೇ ಚಾಗ್ಲಾ ಅವರ ನೇತೃತ್ವದಲ್ಲಿ ಜೆಎನ್ ಯು ಸ್ಥಾಪಿಸುವ ಕುರಿತು ಮಸೂದೆಯೊಂದನ್ನು ಸಂಸತ್ತಿನ ಮುಂದಿಡಲಾಗಿತ್ತು. ನಂತರ 1966 ರ ನವೆಂಬರ್ 16 ರಂದು ಜೆಎನ್ ಯು ಮಸೂದೆಯನ್ನು ಮಂಡನೆ ಮಾಡಲಾಯ್ತು. 1969 ಏಪ್ರಿಲ್ 22 ರಂದು ಜೆಎನ್ ಯು ಮಸೂದೆ ಜಾರಿಗೆ ಬಂತು. 1970 ರಲ್ಲಿ ಇಂಡಿಯನ್ ಸ್ಕೂಲ್ ಆಫ್ ಇಂಟರ್ನ್ಯಾಶ್ನಲ್ ಸ್ಟಡೀಸ್ ಅನ್ನು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದೊಂದಿಗೆ ವೀಲಿನಗೊಳಿಸಲಾಯ್ತು.
ಎಡಪಂಥೀಯ ಸಿದ್ಧಾಂತಕ್ಕೆ ಒತ್ತು ಎಂಬ ವಾದ
ಕಮ್ಯುನಿಸ್ಟ್ ಸಿದ್ಧಾಂಮತದ ಪ್ರತಿಪಾದಕರಾದ ಪ್ರಕಾಶ್ ಕಾರಟ್, ಸೀತಾರಾಮ್ ಯಚೂರಿಯವರಂಥ ನಾಯಕರು ಇದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು. ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ವಿಶ್ವವಿದ್ಯಾಲಯಕ್ಕೆ ಶೈಕ್ಷಣಿಕವಾಗಿ ಸಾಕಷ್ಟು ಕೊಡುಗೆ ನೀಡಿದ ಕಾರಣಕ್ಕೆ ಈಗಲೂ ಪ್ರಕಾಶ್ ಕಾರಟ್ ಅವರ ಹೆಸರು ಜೆಎನ್ ಯುವಿನಲ್ಲಿ ಪ್ರಸ್ತುತವಾಗಿದೆ. ಸಾಮಾಜಿಕ ಅನಿಷ್ಟಗಳ ವಿರುದ್ಧ ಧ್ವನಿ, ಸ್ತ್ರೀವಾದಕ್ಕೆ ಬೆಂಬಲ, ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಟ ಈ ಎಲ್ಲಾ ಕಾರಣಗಳಿಂದಾಗಿ ಜೆಎನ್ ಯು ಎಡಪಂಥೀಯ ವಾದವನ್ನು ಬೆಂಬಲಿಸುತ್ತದೆ ಎಂಬ ತಕರಾರಿದೆ. ಆದರೆ ಪ್ರಸ್ತುತ ಎನ್ ಡಿಎ ಸರ್ಕಾರದ ಹಲವು ಸಚಿವರು ಜೆಎನ್ ಯುವಿನ ಹಳೆಯ ವಿದ್ಯಾರ್ಥಿಗಳು ಎಂಬುದನ್ನು ಮರೆಯಬಾರದು.
ಕ್ಯಾಂಪಸ್ ಒಳಗೆ ಸ್ಟೂಡೆಂಟ್ಸ್, ಹೊರಗೆ ಪೊಲೀಸ್: ಇದು ಖಾಕಿ ದಿಗ್ಬಂಧನ
ನಿರ್ದಿಷ್ಟ ವಾದಕ್ಕಿಂತ ಸ್ವತಂತ್ರ ಚಿಂತನೆಗೆ ಮನ್ನಣೆ
ಮಾರ್ಕ್ಸ್ ವಾದ, ಲೊಹಿಯಾ ವಾದ, ಗೋಳ್ವಲ್ಕರ್ ವಾದ, ಎಡಪಂಥೀಯ, ಬಲಪಂಥೀಯ, ಸ್ತ್ರೀವಾದ... ಹೀಗೇ ಎಲ್ಲಾ ಸಿದ್ಧಾಂತಗಳಿಗೂ ಜೆ ಎನ್ ಯುವಿನಲ್ಲಿ ನೆಲೆ ಇದೆ. ಯಾವುದೇ ಒಮದು ನಿರ್ದಿಷ್ಟ ಸಿದ್ಧಾಂತಕ್ಕೆ ಜೋತು ಬೀಳದೆ ಪ್ರತಿ ವಿದ್ಯಾರ್ಥಿಗೂ ಸ್ವತಂತ್ರ ಚಿಂತನೆಗೆ ಅವಕಾಶ ನೀಡಬೇಕು ಎಂಬುದು ಜೆಎನ್ ಯುವಿನ ಉದ್ದೇಶ. ಅದು ಸ್ಥಾಪನೆಯಾದಂದಿನಿಂದಲೂ ಅದೇ ಉದ್ದೇಶದ ಆಧಾರದ ಮೇಲೆ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಸಾಮಾಜಿಕ ಅಭಿಪ್ರಾಯ ಸೃಷ್ಟಿಸುವ ತಾಕತ್ತಿರುವ ಕಾರಣದಿಂದ ಜೆಎನ್ ಯುವಿನ ವಿದ್ಯಾರ್ಥಿಗಳ ಮೇಲೆ ಎಲ್ಲ ರಾಜಕೀಯ ಪಕ್ಷಗಳಿಗೂ ಸುಪ್ತವಾದ ಭಯವೊಂದು ಇದ್ದೇ ಇದೆ ಎಂಬ ಮಾತು ಚಾಲ್ತಿಯಲ್ಲಿದೆ.
ಪದೇ ಪದೇ ವಿವಾದದಲ್ಲಿ...
2015 ರಲ್ಲಿ ಸಲಿಂಗಕಾಮಿಗಳನ್ನು ಬೆಂಬಲಿಸಿ ಜೆಎನ್ ಯು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದು ವಿವಾದ ಸೃಷ್ಟಿಸಿತ್ತು. ಸಲಿಂಗ ಕಾಮ ಅಪರಾದ ಎಂದ ಸಂವಿಧಾನದ 377 ನೇ ವಿಧಿಯನ್ನು ರದ್ದುಗೂಳಿಸುವಂತೆ ಹೋರಾಟ ನಡೆದಿತ್ತು. ಕಳೆದ ವರ್ಷ ಸುಪ್ರೀಂ ಕೋರ್ಟ್ ಈ ವಿಧಿಯನ್ನು ರದ್ದುಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ನಂತರ 2016 ರಲ್ಲಿ ಗಲ್ಲುಶಿಕ್ಷೆಗೊಳಗಾದ ಸಂಸತ್ ದಾಳಿ ರೂವಾರಿ ಅಫ್ಜಲ್ ಗುರುವಿಗೆ ನೀಡಿದ ಗಲ್ಲುಶಿಕ್ಷೆಯನ್ನು ವಿರೋಧಿಸಿ, ದೇಶವಿರೋಧಿ ಘೋಷಣೆ ಕೂಗಿದ್ದಾರೆಂದು ಜೆಎನ್ ಯು ವಿದ್ಯಾರ್ಥಿಗಳಾದ ಕನ್ನಯ್ಯ ಕುಮಾರ್, ಉಮರ್ ಖಲೀಸ್ ಅವರನ್ನು ಬಂಧಿಸಲಾಗಿತ್ತು. ಇದು ದೇಶದೆಲ್ಲೆಡ ಬಾರಿ ಸಂಚಲನ ಮೂಡಿಸಿತ್ತು. ಆದರೆ ಈ ಘೋಷಣೆಗಳು ಜೆಎನ್ ಯು ಹೆಸರಿಗೆ ಮಸಿಬಳಿಯಲಿಕ್ಕೆಂದು ಮಾಡಿದ ಕಾರ್ಯ. ಆಡಿಯೋವನ್ನು ತಿರುಚಲಾಗಿದ್ದು, ವಿಡಿಯೋ ಮತ್ತು ಆಡಿಯೋಕ್ಕೆ ಹೊಂದಾಣಿಕೆಯಾಗಿಲ್ಲ ಎನ್ನಲಾಗಿತ್ತು. ಇವರ ವಿರುದ್ಧದ ಪ್ರಕರಣವನ್ನೂ ಕೈಬಿಡಲಾಗಿತ್ತು. ಇದೀಗ ಶುಲ್ಕ ಹೆಚ್ಚಳದ ಕುರಿತು ಈ ವಿಶ್ವವಿದ್ಯಾಲಯ ಮತ್ತೆ ಸುದ್ದಿಯಲ್ಲಿದೆ.
ಜೆಎನ್ಯುದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ವಿರೂಪ
ಜೆಎನ್ ಯು ಚುನಾವಣೆಗೆ ಯಾಕಷ್ಟು ಪ್ರಾಮುಖ್ಯ?
ಜೆಎನ್ ಯುವಿನಲ್ಲಿ ಚುನಾವಣೆ ನಡೆಯಬೇಕೆಂದರೆ ಅದು ಯಾವ ಲೋಕಸಭೆ, ವಿಧಾನಸಭೆ ಚುನಾವಣೆಗೂ ಕಡಿಮೆ ಇರುವುದಿಲ್ಲ. ಜೆಎನ್ ಯುವಿನಲ್ಲಿ ನಡೆಯುವ ಚುನಾವಣೆ ರಾಜಕೀಯವೇ ಹಲವು ರಾಜಕಾರಣಿಗಳ ರಾಜಕೀಯ ಭವಿಷ್ಯಕ್ಕೆ ಬುನಾದಿಯಾಗಿದೆ. ಆ ಕಾರಣದಿಂದಲೇ ಇಲ್ಲಿನ ಚುನಾವಣೆಗೆ ಸಾಕಷ್ಟು ಪ್ರಾಮುಖ್ಯವಿದೆ. 2008 ರಲ್ಲಿ ಜೆಎನ್ ಯುವಿನಲ್ಲಿ ನಡೆಯಬೇಕಿದ್ದ ವಿದ್ಯಾರ್ಥಿ ಸಂಘಟನೆಯ ಚುನಾವಣೆಯನ್ನು ಸುಪ್ರೀಂ ಕೋರ್ಟ್ ಬ್ಯಾನ್ ಮಾಡುವ ಮೂಲಕ, ವಿಶ್ವವಿದ್ಯಾಲಯವೊಂದರ ಚುನಾವಣೆಗೆ ಇರುವ ಗಾಂಭೀರ್ಯವನ್ನು ಅರ್ಥ ಮಾಡಿಸಿತ್ತು. ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಜೆ ಎಮ್ ಲಿಂಗದೋಹ್(ನಿ.) ಅವರ ನೇತೃತ್ವದ ಲಿಂಗದೋಹ್ ಸಮಿತಿ ನೀಡಿದ ಮಾರ್ಗಸೂಚಿ ಆಧಾರದ ಮೇಲೆ ಜೆಎನ್ ಯುವಿನಲ್ಲಿ ಚುನಾವಣೆಯ ಮೇಲೆ ನಿರ್ಬಂಧ ಹೇರಲಾಗಿತ್ತು. ಚುನಾವಣಾ ವೆಚ್ಚದ, ಪಾರದರ್ಶಕತೆಯ ಬಗ್ಗೆ ಈ ಸಮಿತಿ ವರದಿ ನೀಡಿತ್ತು. ಆದರೆ ನಂತರ 2011 ರಲ್ಲಿ ಈ ನಿರ್ಬಂಧವನ್ನು ತೆರವುಗೊಳಿಸಿದ ಮೇಲೆ ನಡೆದ ಚುನಾವಣೆಯಲ್ಲಿ ಎಂದಿನಂತೆ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (ಎಐಎಸ್ ಐ) ಜಯಗಳಿಸಿತ್ತು.
ತೆರಿಗೆದಾರರ ಹಣವನ್ನು JNU ಬಳಸುತ್ತಿರುವುದು ಹೇಗೆ?
ಜೆಎನ್ ಯುವಿನಿಂದ ಬಂದ ಖ್ಯಾತನಾಮರು
ಜೆಎನ್ ಯು ದೇಶಕ್ಕೆ ಹಲವು ಖ್ಯಾತನಾಮರನ್ನು ನೀಡಿದೆ. ನೊಬೆಲ್ ಪುರಸ್ಕೃತರಿಂದ ಹಿಡಿದು ಸಾಮಾಜಿಕ ಚಿಂತಕರವರೆಗೆ ಜೆಎನ್ ಯುವಿನಿಂದ ಹೊರಬಂದ ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ ಪ್ರಮುಖವಾಗಿ ಹೆಸರಿಸಬಹುದಾದರೆ, ಅರ್ಥಶಾಸ್ತ್ರಕ್ಕಾಗಿ ನೊಬೆಲ್ ಪ್ರಶಸ್ತಿ ಗೆದ್ದ ಕೊಲ್ಕತ್ತಾದ ಅಭಿಜಿತ್ ಬ್ಯಾನರ್ಜಿ, ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಎಸ್.ಜೈಶಂಕರ್, ಸಿಪಿಐಎಂ ಮುಖಂಡರಾದ ಪ್ರಕಾಶ್ ಕಾರಟ್, ಸೀತಾರಾಮ್ ಯೆಚೂರಿ, ಸಂಮಸದೆ ಮನೇಕಾ ಗಾಂಧಿ, ನಟಿ ಸ್ವರಾ ಭಾಸ್ಕರ್, ಭದ್ರತಾ ಇಲಾಖೆಗೆ ಉಪಸಲಹಗಾರರಾಗಿದ್ದ ಅರವಿಂದ್ ಗುಪ್ತ, ಆರ್ ಬಿಐ ನ ಮಾಜಿ ಉಪಗವರ್ನರ್ ಹಾರುನ್ ರಶಿದ್ ಖಾನ್ ಮುಂತಾದವರು ಇದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು.