'ಮಹಾ' ದೇವೇಂದ್ರನ ಬದಲಿಗೆ ಏಕನಾಥನಿಗೆ ಒಲಿದಿದ್ದು ಏಕೆ ಸಿಎಂ ಪಟ್ಟ?
ಮುಂಬೈ, ಜೂನ್ 30: ಮಹಾರಾಷ್ಟ್ರದಲ್ಲಿ ಮುಂದಿನ ಮುಖ್ಯಮಂತ್ರಿ ಆಗಿ ದೇವೇಂದ್ರ ಫಡ್ನವೀಸ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬುದಕ್ಕೆ ಪೂರಕವಾಗಿ ಎಲ್ಲಾ ಸಿದ್ಧತೆಗಳೂ ಆಗಿದ್ದವು, ಆದರೆ ಅಚ್ಚರಿ ಮೂಡಿಸುವಂತ ರಾಜಕೀಯ ಬೆಳವಣಿಗೆಯೊಂದು ದಿಢೀರನೇ ನಡೆಯಿತು.
ಗುರುವಾರ ಸಂಜೆ 7 ಗಂಟೆಗೆ ಸಿಎಂ ಆಗಿ ಫಡ್ನವೀಸ್ ಪದಗ್ರಹಣ ಎಲ್ಲೆಲ್ಲೂ ಸುದ್ದಿ ಗುಲ್ಲಾಗಿತ್ತು. ಅದಾಗಿ ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ ನಡೆಸಿದ ದೇವೇಂದ್ರ ಫಡ್ನವೀಸ್, ರಾಜ್ಯದ ಮುಖ್ಯಮಂತ್ರಿ ಆಗಿ ಏಕನಾಥ್ ಶಿಂಧೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಘೋಷಿಸಿ ಬಿಟ್ಟರು.
Eknath Shinde Oath Taking Ceremony LIVE: ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಮತ್ತು ಫಡ್ನವೀಸ್ ಪ್ರಮಾಣವಚನ
ನಾನು ಸರ್ಕಾರದ ಭಾಗವಾಗಿಯೇ ಇರುವುದಿಲ್ಲ ಎಂದು ಫಡ್ನವೀಸ್ ಘೋಷಿಸಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್, ಹೊಸ ಕಟ್ಟಪ್ಪಣೆಯನ್ನು ಹೊರಡಿಸಿದ್ದು, ಅಂತಿಮವಾಗಿ ಡಿಸಿಎಂ ಆಗಿ ಫಡ್ನವೀಸ್ ಪ್ರಮಾಣವಚನ ಸ್ವೀಕರಿಸುವುದಕ್ಕೆ ಒಪ್ಪಿಗೆ ಸೂಚಿಸಿದರು. ಏಕಾಏಕಿ ನಡೆದ ರಾಜಕೀಯ ಬೆಳವಣಿಗೆಯ ಮಧ್ಯೆ ದೇವೇಂದ್ರ ಫಡ್ನವೀಸ್ ಹೊರತಾಗಿ ಏಕನಾಥ್ ಶಿಂಧೆ ಏಕೆ ಮಹಾರಾಷ್ಟ್ರದ ಮುಖ್ಯಮಂತ್ರಿ ಆದರು ಎಂಬುದಕ್ಕೆ ಪ್ರಮುಖವಾಗಿ ಐದು ಕಾರಣಗಳಿವೆ. ಆ ಕಾರಣಗಳನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ದೇವೇಂದ್ರ ಫಡ್ನವೀಸ್ ತರಾತುರಿ ಪದಗ್ರಹಣ ಮತ್ತು ರಾಜೀನಾಮೆ
2019ರಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿ ಗೆಲುವು ಸಾಧಿಸಿದ್ದವು. ಆದಾಗ್ಯೂ ಫಲಿತಾಂಶದ ನಂತರ, ಮುಖ್ಯಮಂತ್ರಿ ಯಾರು ಎನ್ನುವ ಪ್ರಶ್ನೆಯಿಂದಲೇ ಮೈತ್ರಿಕೂಟವು ಮುರಿದು ಬಿತ್ತು. ಇದರ ಬೆನ್ನಲ್ಲೇ ಬಿಜೆಪಿಯ ದೇವೇಂದ್ರ ಫಡ್ನವೀಸ್ ಮತ್ತು ಎನ್ಸಿಪಿಯ ಅಜಿತ್ ಪವಾರ್ ಒಟ್ಟುಗೂಡಿ ಮೈತ್ರಿಯ ಮಂತ್ರ ಜಪಿಸಿದರು. ಬೆಳ್ಳಂಬೆಳಗ್ಗೆಯೇ ಮುಖ್ಯಮಂತ್ರಿ ಆಗಿ ದೇವೇಂದ್ರ ಫಡ್ನವೀಸ್ ಪ್ರಮಾಣವಚನ ಸ್ವೀಕರಿಸುವ ಮೂಲಕ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದರು. ಈ ತರಾತುರಿಯಲ್ಲಿ ರಚನೆಯಾದ ಮೈತ್ರಿಕೂಟ ಒಂದು ವಾರವೂ ಉಳಿಯಲಿಲ್ಲ. 80 ಗಂಟೆಗಳಲ್ಲೇ ಫಡ್ನವೀಸ್ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಅಂದು ಬಿಜೆಪಿ ಅಧಿಕಾರ ಲಾಲಸೆ ಅನ್ನು ಎತ್ತಿ ತೋರುವಂತೆ ಮಾಡಿತು. ಈ ಬಾರಿ ಏಕನಾಥ್ ಶಿಂಧೆಗೆ ಸಿಎಂ ಪಟ್ಟ ಬಿಟ್ಟುಕೊಡುವ ಮೂಲಕ ಡ್ಯಾಮೇಜ್ ಕಂಟ್ರೋಲ್ ಮಾಡುವುದಕ್ಕೆ ಬಿಜೆಪಿ ಸ್ಕೆಚ್ ಹಾಕಿದೆ.
ಉದ್ಧವ್ ಠಾಕ್ರೆ ಭಾವನಾತ್ಮಕ ಭಾಷಣದಲ್ಲಿ ಬಿಜೆಪಿ ಟೀಕೆ
ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಕ್ಕೂ ಪೂರ್ವದಲ್ಲಿ ಭಾವನಾತ್ಮಕವಾಗಿ ಮಾತನಾಡಿದ ಉದ್ಧವ್ ಠಾಕ್ರೆ, ಬಿಜೆಪಿಯವರು ತಮ್ಮ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ ಎಂದು ದೂರಿದ್ದರು. ಬಿಜೆಪಿಯವರು ಬಾಳಾಸಾಹೇಬ್ ಅವರ ಮಗನನ್ನು ಅಧಿಕಾರದಿಂದ ಕೆಳಗೆ ಇಳಿಸಿದ್ದೀರಿ ಎಂದು ಹೇಳಿದ್ದರು. ಈ ಒಂದು ಭಾಷಣವು ಶಿವಸೇನೆಯ ಪಾಲಿಗೆ ಲಾಭವನ್ನು ತಂದುಕೊಡುವ ಮಟ್ಟಿಕ್ಕೆ ಇತ್ತು. ಶಿವಸೈನಿಕನೊಬ್ಬ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದ್ದೀರಿ ಎಂಬ ಆರೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ಬಿಜೆಪಿಯು ಅದೇ ಶಿವಸೇನೆಯ ಬಂಡಾಯ ನಾಯಕನಿಗೆ ಮುಖ್ಯಮಂತ್ರಿ ಪಟ್ಟವನ್ನು ಕೊಟ್ಟಿದೆ.
ಬಾಳಾಸಾಹೇಬ್ ಕನಸು ನನಸಾಗಿದೆ ಎಂದ ಫಡ್ನವೀಸ್
ಮಹಾರಾಷ್ಟ್ರದಲ್ಲಿ ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಪರಂಪರೆಯನ್ನು ಬಿಜೆಪಿಯು ನಿಜವಾಗಿಯೂ ಬೆಂಬಲಿಸುತ್ತದೆ ಎಂಬುದನ್ನು ಜನರಿಗೆ ಸಾರಿ ಹೇಳಬೇಕಾಗಿದೆ. ಈ ನಿಟ್ಟಿನಲ್ಲಿ ದೇವೇಂದ್ರ ಫಡ್ನವೀಸ್ ಕೂಡ ಮಾತನಾಡಿದ್ದಾರೆ. ಏಕನಾಥ್ ಶಿಂಧೆ ಮುಂದಿನ ಸಿಎಂ ಎಂದು ಘೋಷಿಸುವ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. "ಸಿಎಂ ಕುರ್ಚಿಯಲ್ಲಿ ಶಿವಸೈನಿಕ ಇರುವಾಗ ಬಾಳಾಸಾಹೇಬ ಕನಸು ಇನ್ನೂ ನನಸಾಗಲಿದೆ," ಎಂದು ಫಡ್ನವೀಸ್ ಹೇಳಿದ್ದರು.
ಬಿಜೆಪಿ ಜೊತೆಗೇ ಇರುತ್ತೆ ಶಿವಸೇನೆ ಎಂದು ಬಿಂಬಿಸುವ ತಂತ್ರ
ಮಹಾರಾಷ್ಟ್ರದಲ್ಲಿ ಇತ್ತೀಚಿನ ಬೆಳವಣಿಗೆಗಳು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದವು. ನಿಜವಾದ ಶಿವಸೇನೆ ಎಂದರೆ ಅದು ಯಾರು? ಈ ಪ್ರಶ್ನೆಗೆ ಕೆಲ ಕಾಲದವರೆಗೂ ಉತ್ತರ ಸಿಗದೇ ಇರಬಹುದು. ಆದರೆ, ಬಾಳಾಸಾಹೇಬರ ನಿಜವಾದ ಪರಂಪರೆಯನ್ನು ಮುಂದಿಟ್ಟುಕೊಂಡು ದನಿಯೆತ್ತಿರುವ ಏಕನಾಥ್ ಶಿಂಧೆ, ಸಿಎಂ ಆಗುವುದರಿಂದ 2024ರ ಚುನಾವಣೆ ಬಂದಾಗ ನಿಜವಾದ ಶಿವಸೇನೆ ಪಕ್ಷದೊಂದಿಗಿದೆ ಎಂದು ಹೇಳಿಕೊಳ್ಳಲು ಬಿಜೆಪಿಗೆ ಸುಲಭವಾಗಲಿದೆ.
ಶಿವಸೇನೆಯಲ್ಲಿ ಬಂಡಾಯದ ಬೆದರಿಕೆ ಮರೆಯಾಗಲ್ಲ
ಮಹಾರಾಷ್ಟ್ರದಲ್ಲಿ ವಾಸ್ತವ ಸ್ಥಿತಿಯಲ್ಲಿ ಏಕನಾಥ್ ಶಿಂಧೆಯು ಅತಿಹೆಚ್ಚು ಶಿವಸೇನೆ ಶಾಸಕರ ಬೆಂಬಲವನ್ನು ಹೊಂದಿರಬಹುದು. ಆದರೆ ರಾಜಕೀಯ ತಂತ್ರಗಾರಿಕೆಯ ಮಧ್ಯೆ ಯಾವಾಗ ಏನು ಬೇಕಾದರೂ ನಡೆಯಬಹುದು. ಉದ್ಧವ್ ಠಾಕ್ರೆ ಕಡೆಗೆ ಹೊರಳುವತ್ತ ಶಾಸಕರು ಚಿತ್ತ ಹರಿಸಿದರೆ ಮತ್ತೊಮ್ಮೆ ಅಪಾಯ ಸೃಷ್ಟಿ ಆಗುವುದರಲ್ಲಿ ಅನುಮಾನ ಇಲ್ಲ. ಹೀಗಾಗಿ ಮತ್ತೊಮ್ಮೆ ಮುಖಭಂಗವನ್ನು ಅನುಭವಿಸದೇ ಇರಲು ಬಿಜೆಪಿಯು ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಡುವುದಕ್ಕೆ ಈ ಬಾರಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.