ವೀಕೆಂಡ್ ಕರ್ಫ್ಯೂ ಶುಕ್ರವಾರ ನಿರ್ಧಾರ: ಹೋಟೆಲ್ ನವರು ಉದ್ದಿನಬೇಳೆ ನೆನೆಸಿಡ ಬೇಕಾ, ಬೇಡ್ವಾ?
ಈ ವಾರಾಂತ್ಯ ವೀಕೆಂಡ್ ಕರ್ಫ್ಯೂ ಇರಲಿದೆಯಾ? ಅದನ್ನು ಪ್ರಕಟಿಸಲು ಸರಕಾರ ಶುಕ್ರವಾರದವರೆಗೆ ಕಾಯಬೇಕಾ? ಎನ್ನುವ ತರಹೇವಾರಿ ಪ್ರಶ್ನೆಗಳು/ಮೀಮ್ಸ್ ಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೆ ಸರಕಾರದ ಬಳಿ ಉತ್ತರವೂ ಇದೆ.
ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರಕಾರ, "ಶುಕ್ರವಾರದ ಹೊತ್ತಿಗೆ ಸ್ಪಷ್ಟ ಅಂಕಿಅಂಶ ಸಿಗುವುದರಿಂದ ವೀಕೆಂಡ್ ಕರ್ಫ್ಯೂ ಸೇರಿದಂತೆ, ನಿರ್ಬಂಧದ ವಿಚಾರದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸರಕಾರಕ್ಕೆ ಸುಲಭವಾಗುವುದು" ಎಂದು.
ಸಂಕಷ್ಟದಲ್ಲಿರುವ ಪ್ರವಾಸೀ ವಾಹನ ಮಾಲೀಕರ ಅಳಲನ್ನು ಆಲಿಸುವಿರಾ ಮುಖ್ಯಮಂತ್ರಿಗಳೇ
ಒಂದು ಕಡೆ ಕೊರೊನಾ ಹೊಸ ಪ್ರಕರಣಗಳು ಏರುತ್ತಲೇ ಇವೆ, ಇನ್ನೊಂದು ಕಡೆ, ವಾರಾಂತ್ಯದ ಕರ್ಫ್ಯೂ ವಿಚಾರದಲ್ಲಿ ಸರಕಾರ ಮತ್ತು ಬಿಜೆಪಿಯೊಳಗೂ ವಿರೋಧ ವ್ಯಕ್ತವಾಗುತ್ತಿದೆ. ಇನ್ನು, ಉದ್ಯಮ ವಲಯದಲ್ಲಂತೂ ಸರಕಾರಕ್ಕಿರುವ ಒತ್ತಡ ಅಷ್ಟಿಷ್ಟಲ್ಲ.
ವಾರಾಂತ್ಯದ ಕರ್ಫ್ಯೂ ವಿಚಾರದಲ್ಲಿ ಒಂದು ದಿನ ಮುನ್ನ ನಿರ್ಧಾರ ಪ್ರಕಟಿಸುವ ಸರಕಾರದ ನಿಲುವಿನ ವಿರುದ್ದವೂ ಆಕ್ರೋಶ ಹೊರಬೀಳಲಾರಂಭಿಸಿದೆ. ಸಾವಿನ ಪ್ರಮಾಣದಲ್ಲಿ ಮತ್ತು ಆಸ್ಪತ್ರೆಗೆ ದಾಖಲಾಗುತ್ತಿರುವರ ಸಂಖ್ಯೆ ತೀರಾ ಕಮ್ಮಿಯಿರುವುದರಿಂದ ಜನರೂ ರಿಲ್ಯಾಕ್ಸ್ ಆಗುತ್ತಿದ್ದಾರೆ ಎನ್ನುವುದು ಗಮನಿಸಬೇಕಾದ ವಿಚಾರ.
ಪ್ರಧಾನಮಂತ್ರಿಗಳ ಮುಖ್ಯಮಂತ್ರಿಗಳ ಜೊತೆಗಿನ ಸಭೆ
ಜನಜೀವನಕ್ಕೆ ತೊಂದರೆಯಾಗದಂತೆ, ಆರ್ಥಿಕ ಚಟುವಟಿಕೆಗಳಿಗೆ ಪೆಟ್ಟು ಬೀಳದಂತೆ ಕೊರೊನಾ ನಿಯಮಗಳನ್ನು ರೂಪಿಸಿ ಎಂದು ಪ್ರಧಾನಮಂತ್ರಿಗಳು ಮುಖ್ಯಮಂತ್ರಿಗಳ ಜೊತೆಗಿನ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಈ ವಿಚಾರ ಸಾರ್ವಜನಿಕವಾದ ನಂತರ, ವೀಕೆಂಡ್ ಕರ್ಫ್ಯೂ ಹಿಂದಕ್ಕೆ ಪಡೆಯಬೇಕು ಎನ್ನುವ ಒತ್ತಡ ಬೊಮ್ಮಾಯಿ ಸರಕಾರಕ್ಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉದ್ಯಮ ವಲಯ ಒಂದೇ ಸಮನೆ ಹಠಕ್ಕೆ ಬಿದ್ದಿದೆ.
ಕೇಂದ್ರ ಸಂಸದೀಯ ವ್ಯವಹಾರ ಖಾತೆಯ ಸಚಿವ ಪ್ರಲ್ಹಾದ್ ಜೋಶಿ
ಕೇಂದ್ರ ಸಂಸದೀಯ ವ್ಯವಹಾರ ಖಾತೆಯ ಸಚಿವ ಪ್ರಲ್ಹಾದ್ ಜೋಶಿ ಕೂಡಾ ಕೊರೊನಾ ನಿರ್ಬಂಧದ ವಿಚಾರದಲ್ಲಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. "ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ವಿಧಿಸುವುದಾದರೆ, ಡಬಲ್ ಡೋಸ್ ಲಸಿಕೆಯನ್ನು ತೆಗೆದುಕೊಳ್ಳಲು ಒತ್ತಡ ಹಾಕಿದ್ದು ಯಾಕೆ" ಎಂದು ಮೈಸೂರು - ಕೊಡಗು ಸಂಸದ ಪ್ರತಾಪ್ ಸಿಂಹ ತಮ್ಮದೇ ಸರಕಾರವನ್ನು ಪ್ರಶ್ನಿಸಿದ್ದಾರೆ. ಇನ್ನು, ಈಗಾಗಲೇ ಸಚಿವ ಕೆ.ಎಸ್.ಈಶ್ವರಪ್ಪ ಕೋವಿಡ್ ನಿರ್ಬಂಧದ ಬಗ್ಗೆ ಬಹಿರಂಗವಾಗಿಯೇ ಸರಕಾರದ ತೀರ್ಮಾನವನ್ನು ಪ್ರಶ್ನಿಸಿದ್ದಾರೆ.
ಎಲ್ಲಾ ಉದ್ಯಮ ವಲಯದಿಂದಲೂ ಸರಕಾರಕ್ಕೆ ಒತ್ತಡ
ಇದೆಲ್ಲಾ ಒಂದು ಕಡೆಯಾದರೆ, ವೀಕೆಂಡ್ ಕರ್ಫ್ಯೂ ವಿಚಾರದಲ್ಲಿ ಶುಕ್ರವಾರದ ವರೆಗೆ ಸರಕಾರ ಕಾಯುತ್ತಿರುವುದು ಯಾಕೆ ಎಂದು ಸಾಮಾಜಿಕ ತಾಣದಲ್ಲಿ ಟ್ರೋಲ್ ಆಗಲು ಆರಂಭವಾಗಿದೆ. ಹೋಟೆಲ್ ನವರು ಉದ್ದಿನಬೇಳೆಯನ್ನು ಶುಕ್ರವಾರ ನೆನೆಸಿಡಬೇಕಾ, ಬೇಡವಾ ಎಂದು ವ್ಯಂಗ್ಯವಾಡಲಾಗುತ್ತಿದೆ. ಈ ಟ್ರೋಲ್ ಗಳಿಗೆ ಮತ್ತಷ್ಟು ಹಾಸ್ಯಭರಿತ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ. ಎಲ್ಲಾ ಉದ್ಯಮ ವಲಯದಿಂದಲೂ ಸರಕಾರಕ್ಕೆ ಒತ್ತಡ ಹೆಚ್ಚಾಗುತ್ತಿದೆ.
ಬೃಹತ್ ಬೆಂಗಳೂರು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷರಾದ ಪಿ.ಸಿ.ರಾವ್
ಸರಕಾರದ ವೀಕೆಂಡ್ ಕರ್ಫ್ಯೂ ನಿಯಮದ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿರುವ ಹೊಟೇಲ್ ಮಾಲೀಕರ ಸಂಘ, ಸರಕಾರದ ಆದೇಶವನ್ನು ಧಿಕ್ಕರಿಸುವ ಎಚ್ಚರಿಕೆಯನ್ನು ನೀಡಿದೆ. "ಕೋವಿಡ್ ಮೂರನೇ ಅಲೆ ಮಾರಣಾಂತಿಕವಾಗಿಲ್ಲ, ಹಾಗಾಗಿ ವೀಕೆಂಡ್ ಕರ್ಫ್ಯೂ ಅನಗತ್ಯ. ನೈಟ್ ಕರ್ಫ್ಯೂ ಹನ್ನೊಂದು ಗಂಟೆಯ ನಂತರ ಆರಂಭವಾಗಬೇಕು, ಸೀಟಿಂಗ್ ಕ್ಯಾಪಾಸಿಟಿ 50:50 ಇರಬೇಕು. ಸರಕಾರ ನಮಗೆ ಇದಕ್ಕೆ ಅವಕಾಶವನ್ನು ಕೊಡಬೇಕು"ಎಂದು ಬೃಹತ್ ಬೆಂಗಳೂರು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷರಾದ ಪಿ.ಸಿ.ರಾವ್ ಅವರು 'ಒನ್ ಇಂಡಿಯಾ' ಜೊತೆ ಮಾತನಾಡುತ್ತಾ ಸರಕಾರಕ್ಕೆ ಮನವಿಯನ್ನು ಮಾಡಿದ್ದಾರೆ.
Recommended Video