ಯಡಿಯೂರಪ್ಪ- ಸಿದ್ದರಾಮಯ್ಯ ಹೊಸ ದೋಸ್ತಿ; ಒಬ್ಬರ ನೋವಿಗೆ ಮತ್ತೊಬ್ಬರ ಕೊರಳು
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ಮೇಲೆ ಒಂದು ಕ್ಷಣಕ್ಕೂ ನೆಮ್ಮದಿಯಿಂದ ಇರಲು ಸಾಧ್ಯವಾಗಿಲ್ಲ ಎಂಬರ್ಥದ ಮಾತನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಯಡಿಯೂರಪ್ಪ ಅವರು ಹೇಳಬೇಕಾದ ಮಾತನ್ನೂ ಸಿದ್ದರಾಮಯ್ಯ ಆಡುತ್ತಿದ್ದಾರೆ.
ಇನ್ನು 'ಡಿಸಿಎಂ ಹುದ್ದೆಯೇ ಅಸಾಂವಿಧಾನಿಕ. ಅಂಥದ್ದು ಮೂವರು ಡಿಸಿಎಂಗಳನ್ನು ನೇಮಕ ಮಾಡಿ, ಯಡಿಯೂರಪ್ಪ ಅವರನ್ನು ಕಟ್ಟಿಹಾಕಲು ಬಿಜೆಪಿ ಹೈಕಮಾಂಡ್ ಪ್ರಯತ್ನಿಸುತ್ತಿದೆ' ಎಂದು ಕೂಡ ಎರಡೆರಡು ಬಾರಿ ಉಪ ಮುಖ್ಯಮಂತ್ರಿ ಹುದ್ದೆಯಲ್ಲಿ ಇದ್ದ ಸಿದ್ದರಾಮಯ್ಯ ಅವರು ಹೇಳುತ್ತಿರುವುದು ಒಂದು ವಿಧದಲ್ಲಿ ಅಚ್ಚರಿಗೆ ಕಾರಣವಾಗಿದೆ.
Recommended Video
ಎದುರಾಳಿಯಾದರೂ ಯಡಿಯೂರಪ್ಪ ಮೇಲೆ ಅನುಕಂಪ ಎಂದ ಸಿದ್ದರಾಮಯ್ಯ
ಅಸಲಿಗೆ ರಾಜ್ಯ ರಾಜಕಾರಣದಲ್ಲಿ ಏನು ನಡೆಯುತ್ತಿದೆ. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದ ಹೊಸತರಲ್ಲಿ ಸಿದ್ದರಾಮಯ್ಯ ಬಗ್ಗೆ ಇಂಥದ್ದೇ ಮಾತುಗಳನ್ನು ವಿರೋಧ ಪಕ್ಷದಲ್ಲಿದ್ದ ಯಡಿಯೂರಪ್ಪ ಅವರು ಆಡುತ್ತಿದ್ದರು. ಈಗ ಸಿದ್ದರಾಮಯ್ಯ ಕೂಡ ಅದೇ ಧಾಟಿಯ ಅನುಕಂಪದ ಮಾತುಗಳನ್ನು ಆಡುತ್ತಿದ್ದಾರೆ.
ಬಿಎಸ್ ವೈ- ಸಿದ್ದರಾಮಯ್ಯ ಮಧ್ಯೆ ಹಲವು ಸಾಮ್ಯತೆ
ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಮಧ್ಯೆ ಹಲವು ಸಾಮ್ಯತೆಗಳಿವೆ. ಇಬ್ಬರೂ ಜನನಾಯಕರು. ತಮ್ಮ ಪಕ್ಷಕ್ಕೆ ಮತ ಸೆಳೆಯಬಲ್ಲಂಥ ತಾಕತ್ತು ಇರುವವರು. ಇಬ್ಬರೂ ಹುಂಬರು. ಹಠಮಾರಿಗಳು. ಹಿಡಿದ ಕೆಲಸವನ್ನು ತುದಿ ಮುಟ್ಟಿಸುವ ತನಕ ಸುಮ್ಮನೆ ಕೂರುವವರಲ್ಲ. ಅದ್ಭುತವಾದ ಸಂಘಟಕರು. ಆದರೆ ಯಡಿಯೂರಪ್ಪ ಅವರ ಬಗ್ಗೆ ಕೆಲವು ಆರೋಪಗಳು ಕೇಳಿಬರದಿದ್ದರೆ ಹಾಗೂ ಬಿಜೆಪಿಯಿಂದ ಹೊರಬಂದು, ಒಂದು ಪಕ್ಷ ಕಟ್ಟದೆ ಇದ್ದಿದ್ದರೆ ಈಗಿನ ಸ್ಥಿತಿ ಬೇರೆ ಏನೋ ಇರುತ್ತಿತ್ತು. ಇನ್ನು ಸಿದ್ದರಾಮಯ್ಯ ಅವರು ಕಾಂಗ್ರೆಸ್ ಆನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತಂದರು. ಆದರೆ ಪಕ್ಷದ ಒಳಗೇ ಅವರ ಬಗ್ಗೆ ಅಸಮಾಧಾನ ಬೆಳೆಯುತ್ತಾ ಹೋಯಿತು. ಇವತ್ತಿನ ಪರಿಸ್ಥಿತಿ ಏನಾಗಿದೆ ಅಂದರೆ, ಬಿಜೆಪಿಗೆ ಯಡಿಯೂರಪ್ಪನವರ ಬೇಡ, ಕಾಂಗ್ರೆಸ್ ಸಿದ್ದರಾಮಯ್ಯ ಅವರು ಬೇಡ ಎಂಬ ಸನ್ನಿವೇಶ ಸೃಷ್ಟಿಯಾಗಿದೆ. ಈ ವಿಚಾರದಲ್ಲಿ ಇಬ್ಬರೂ ಸಮಾನ ದುಃಖಿಗಳೇ.
ಪರ್ಯಾಯ ನಾಯಕತ್ವ ಹುಟ್ಟುಹಾಕುವ ಪ್ರಯತ್ನ
ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಲಿಂಗಾಯತರಿಗೆ ಸಿಕ್ಕಾಪಟ್ಟೆ ಪ್ರಾತಿನಿಧ್ಯ ಸಿಕ್ಕಿದೆ. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಬಸವರಾಜ ಬೊಮ್ಮಾಯಿ, ಜೆ.ಸಿ. ಮಾಧುಸ್ವಾಮಿ, ಸಿ.ಸಿ. ಪಾಟೀಲ್, ಶಶಿಕಲಾ ಜೊಲ್ಲೆ ಸಚಿವ ಸ್ಥಾನ ಗಿಟ್ಟಿಸಿದ್ದಾರೆ. ಸ್ವತಃ ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದವರು. ಉಳಿದಂತೆ ಒಕ್ಕಲಿಗ ಸಮುದಾಯಕ್ಕೆ ಪ್ರಾತಿನಿಧ್ಯ ದೊರೆತಿದೆ. ಕರ್ನಾಟಕದಲ್ಲಿ ಇವೆರಡು ಸಮುದಾಯದ ಮತ ಬ್ಯಾಂಕ್ ತೀರಾ ಮುಖ್ಯವಾದದ್ದು. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಬಿಜೆಪಿ ಬೆನ್ನಿಗೆ ನಿಂತಿರುವುದು ಲಿಂಗಾಯತ ಸಮಾಜ. ಈ ಬಾರಿ ಸಚಿವ ಸಂಪುಟದಲ್ಲಿ ಲಿಂಗಾಯತ ಸಮುದಾಯವನ್ನು ಓಲೈಸುವ ಕೆಲಸ ಅಷ್ಟೇ ಮಾಡಿಲ್ಲ. ಜತೆಗೆ ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ಯಾರ ಮೂಲಕ ಆ ಸಮುದಾಯದ ಮತ ಸೆಳೆಯಬಹುದೋ ಆ ಬಾಗಿಲು ತೆರೆಯುವ ಪ್ರಯತ್ನ ಮಾಡಲಾಗಿದೆ. ಈ ಬಾರಿಯ ಸಚಿವ ಸಂಪುಟ ರಚನೆಯು ಬಿಜೆಪಿಯ ಮೊದಲ ತಲೆಮಾರಿನ ಹಲವು ನಾಯಕರಿಗೆ ಪರ್ಯಾಯ ಹುಟ್ಟುಹಾಕುವ ಪ್ರಯತ್ನವೇ. ಈ ರೀತಿ ಪರ್ಯಾಯ ಅಧಿಕಾರ ಕೇಂದ್ರ ಸೃಷ್ಟಿ ಆಗಿರುವುದರಿಂದ ಯಡಿಯೂರಪ್ಪ್ ಕೊತಕೊತ ಕುದಿಯುತ್ತಿದ್ದಾರೆ.
ಅಧಿಕಾರದ ಕಿತ್ತಾಟ... ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ...!
ದೇವೇಗೌಡರು- ಕುಮಾರಸ್ವಾಮಿಯಿಂದ ಆರೋಪ
ಇತ್ತ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಈಗ ಹೈಕಮಾಂಡ್ ಗೆ ಬೇಡದ ಕೂಸು. ದೇವೇಗೌಡರು, ಕುಮಾರಸ್ವಾಮಿ ಇಬ್ಬರೂ ಸೇರಿ ಸಿದ್ದರಾಮಯ್ಯ ಮೇಲೆ ವಾಗ್ದಾಳಿ ನಡೆಸುತ್ತಿದ್ದರೆ ಪ್ರಮುಖವಾದ ನಾಯಕರು, ಸರಕಾರದಲ್ಲಿ ಸಚಿವರಾಗಿದ್ದವರು ಯಾರಾದರೂ ರಕ್ಷಣೆಗೆ, ಅರ್ಥಾತ್ ಸಿದ್ದರಾಮಯ್ಯ ಪರವಾಗಿ ಮಾತನಾಡಿದರಾ? ದೇವೇಗೌಡರು 'ದಿ ಹಿಂದೂ' ಪತ್ರಿಕೆಗೆ ಸಂದರ್ಶನ ನೀಡಿ, ಸಿದ್ದರಾಮಯ್ಯರಿಂದಲೇ ಮೈತ್ರಿ ಸರಕಾರ ಬಿತ್ತು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿ, ತಾವು ವಿರೋಧ ಪಕ್ಷದ ನಾಯಕ ಆಗಬೇಕು ಎನ್ನುವುದು ಸಿದ್ದರಾಮಯ್ಯ ಉದ್ದೇಶ ಆಗಿತ್ತು ಅಂತೆಲ್ಲ ಆರೋಪ ಮಾಡಿದ ಮೇಲೆ, ಕೊನೆಗೆ ತಮ್ಮ ಪರವಾಗಿ ಬ್ಯಾಟಿಂಗ್ ಗೆ ಕಣ್ಣಿನ ಆಪರೇಷನ್ ಆದ ಸಿದ್ದರಾಮಯ್ಯ ಅವರೇ ಇಳಿಯಬೇಕಾಯಿತು. ಮೈತ್ರಿ ಸರಕಾರ ಬಿದ್ದಿದ್ದಕ್ಕೆ ಕಾಂಗ್ರೆಸ್ ನಲ್ಲಿ ಯಾರಿಗೆಲ್ಲ ಅಸಮಾಧಾನ ಇದೆಯೋ ಅವರಿಗೆಲ್ಲ ಸಿದ್ದರಾಮಯ್ಯ ಮೇಲೆ ಸಿಟ್ಟಿದೆ. ಹೆಚ್ಚು- ಕಡಿಮೆ ಸಿದ್ದರಾಮಯ್ಯ ಹಾಗೂ ಬಿಎಸ್ ಯಡಿಯೂರಪ್ಪ ಇಬ್ಬರೂ ತಂತಮ್ಮ ಪಕ್ಷದಲ್ಲಿ ಮುಜುಗರ ಎದುರಿಸುತ್ತಿದ್ದಾರೆ.
ಸಮಾನ ಶಕ್ತಿವಂತರು, ಸಮಾನ ದುಃಖಿಗಳು
ಸಮಾನ ಮನಸ್ಕರು, ಸಮಾನ ಶಕ್ತಿವಂತರು ಹಾಗೂ ಸಮಾನ ದುಃಖಿಗಳು ಆದ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಪರಸ್ಪರರಿಗೆ ಕೊರಳಾಗಿ ಮಾತನಾಡುತ್ತಿರುವುದು ಅದೇ ಕಾರಣದಿಂದ ಎನ್ನುವುದು ಸದ್ಯಕ್ಕೆ ಕೇಳಿಬರುತ್ತಿರುವ ವಿಶ್ಲೇಷಣೆ. ಈಗಿನ ಸ್ಥಿತಿ ನೋಡಿದರೆ, ಇಬ್ಬರೂ ಒಟ್ಟಾಗಿ, ತಂತಮ್ಮ ಪಕ್ಷವನ್ನು ಬಲ ಕುಂದಿಸಲು ಬೇಕಾದ ರಣತಂತ್ರವನ್ನು ರೂಪಿಸಿದರೂ ಅಚ್ಚರಿಯಿಲ್ಲ. ಏಕೆಂದರೆ, ಮೈತ್ರಿ ಸರಕಾರ ಕೆಡವುವ ಮುಂಚಿನಿಂದಲೂ ಸಿದ್ದರಾಮಯ್ಯ ಜತೆಗೆ ಯಡಿಯೂರಪ್ಪ ಅವರದು ಮಾತುಕತೆ ಇದ್ದೇ ಇದೆ ಎಂಬ ಸುದ್ದಿ ಗಿರಕಿ ಹೊಡೆಯುತ್ತಿದೆ. ಕೇಂದ್ರದಲ್ಲಿ ಬಿ. ಎಲ್. ಸಂತೋಷ್ ರನ್ನು ತನ್ನ ತಲೆ ಮೇಲೆ ತಂದು ಕೂರಿಸಿದ್ದಾರೆ. ಅದರ ಫಲವಾಗಿಯೇ ಮೂರು ಡಿಸಿಎಂಗಳು, ಸಂಪುಟ ರಚನೆಯೇ ವಿಳಂಬ, ರಾಜ್ಯಾಧ್ಯಕ್ಷ ಸ್ಥಾನದಲ್ಲಿ ನಳಿನ್ ರನ್ನು ಕೂರಿಸಲಾಗಿದೆ. ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಿಲ್ಲ ಎಂಬ ಸಿಟ್ಟು ಯಡಿಯೂರಪ್ಪ ಅವರಲ್ಲಿ ಇದೆ. ಸಿದ್ದರಾಮಯ್ಯ ಅವರನ್ನು ಪಕ್ಷದಿಂದ ದೂರ ಮಾಡಿದರೆ, ಜೆಡಿಎಸ್ ದೋಸ್ತಿ ಮಾಡಿಕೊಂಡು ಹೇಗೋ ಅಧಿಕಾರ ಅನುಭವಿಸಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ನೊಳಗೆ ಹಲವರಲ್ಲಿದೆ. ಇಂಥ ಸ್ಥಿತಿಯಲ್ಲಿ ಯಡಿಯೂರಪ್ಪ- ಸಿದ್ದರಾಮಯ್ಯ ಕೈ ಜೋಡಿಸುತ್ತಾರೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿದೆ.
ಸೋತ ಲಕ್ಷ್ಮಣ ಸವದಿಗೆ ದೊಡ್ಡ ಹುದ್ದೆ ಕೊಟ್ಟಿರುವ ಹಿಂದಿದೆ ಭಾರಿ ಲೆಕ್ಕಾಚಾರ