ಮಹಾರಾಷ್ಟ್ರ ರಾಜಕೀಯ ಪ್ರಹಸನದಲ್ಲಿ ಕೊನೆಗೆ ಗೆದ್ದಿದ್ದು ಕಾಂಗ್ರೆಸ್!
ಅಕ್ಟೋಬರ್ 24 ರಿಂದ ಮಹಾರಾಷ್ಟ್ರದಲ್ಲಿ ಆರಂಭವಾದ ಸರ್ಕಾರ ರಚನೆಯ ಕಸರತ್ತು ಕೊನೆಗೂ ವೈಫಲ್ಯ ಕಂಡು, ಮಂಗಳವಾರ ರಾಷ್ಟ್ರಪತಿ ಆಳ್ವಿಕೆಗೆ ಅಂಕಿತ ದೊರಕಿದೆ.
ಚುನಾವಣೆಗೂ ಪೂರ್ವದಲ್ಲಿ ಮೈತ್ರಿಮಾಡಿಕೊಂಡ ಪಕ್ಷಗಳ ನಡುವೆ ಅಧಿಕಾರಕ್ಕಾಗಿ ಉಂಟಾದ ಬಿರುಕು ಅತಿದೊಡ್ಡ ಪಕ್ಷವನ್ನು ಹೊರಗಿಟ್ಟು ಅಧಿಕಾರ ನಡೆಸಬಹುದಾದ ಸಾಧ್ಯತೆಗಳ ಹುಡುಕಾಟಕ್ಕೆ ನಾಂದಿ ಹಾಡಿತ್ತು.
ಮತದಾರ ನಿರೀಕ್ಷೆಯನ್ನೇ ಮಾಡಿರದಂಥ 'ಮೈತ್ರಿ ಕಾಂಬಿನೇಷನ್' ಗಳು ಮಹಾರಾಷ್ಟ್ರ ರಾಜಕೀಯ ಪ್ರಹಸನಕ್ಕೆ ಮತ್ತಷ್ಟು ರೋಚಕತೆ ತಂದಿತ್ತು.
ಪರಸ್ಪರ ವಿರೋಧಿ ಪಕ್ಷಗಳೇ ಜೊತೆಯಾಗಿ ಸರ್ಕಾರ ರಚಿಸುವ 'ಚೌಕಾಸಿ'ಗಿಳಿದವು! ಚುನಾವಣೆಗೂ ಮುನ್ನ ಹೆಸರೇ ಇಲ್ಲದ ಎನ್ ಸಿಪಿ ಕಿಂಗ್ ಮೇಕರ್ ಸ್ಥಾನ ಅಲಂಕರಿಸಿತ್ತು. ಮುಖ್ಯಮಂತ್ರಿ ಸ್ಥಾನಕ್ಕಾಗಿ ದುಂಬಾಲು ಬಿದ್ದ ಶಿವಸೇನೆ ಯಾರೊಂದಿಗಾದರೂ ಸರಿ, ಮೈತ್ರಿಗೆ ಸಿದ್ಧ ಎಂಬ ನಿರ್ಧಾರಕ್ಕೆ ಬಂದುನಿಂತಿತ್ತು!
ಹಿಂದುತ್ವದ ಬಗ್ಗೆ ಮಾತೇ ಆಡೊಲ್ಲ: ಕಾಂಗ್ರೆಸ್ಗೆ ಶಿವಸೇನಾ ಭರವಸೆ?
ಕಳೆದ ಹತ್ತು ದಿನಗಳ ಕಾಲ ನಡೆದ ಈ ರಾಜಕೀಯ ಪ್ರಹಸನದಲ್ಲಿ ಕೊನೆಗೆ ನಿಜವಾಗಿಯೂ ಗೆದ್ದವರು ಯಾರು? 'ಅಧಿಕಾರಕ್ಕಾಗಿ ಸಿದ್ಧಾಂತದೊಂದಿಗೆ ರಾಜಿಯಾಗುವುದಿಲ್ಲ' ಎಂಬ ಸಂದೇಶ ನೀಡುವ ಮೂಲಕ ಕಾಂಗ್ರೆಸ್ ತನ್ನ ಕಾರ್ಯಕರ್ತರ, ಮತದಾರರ ಮನಸ್ಸಿನಲ್ಲಿ ಗೆಲುವು ಸಾಧಿಸಿದೆ.
ಸೊನಿಯಾ ಗಾಂಧಿ ಅನಿರೀಕ್ಷಿತ ನಡೆ
ಶಿವಸೇನೆಗೆ ಬೆಂಬಲ ನೀಡಲು ಮುಂದಾದ ಎನ್ ಸಿಪಿಯೊಂದಿಗೆ ಕಾಂಗ್ರೆಸ್ ಬಾಹ್ಯ ಬೆಂಬಲ ನೀಡಬಹುದು ಎಂಬ ಲೆಕ್ಕಾಚಾರ ತಲೆಕೆಳಗಾಗಿದೆ. ದೇಶದಲ್ಲಿ ಕಾಂಗ್ರೆಸ್ ಈಗ ನೆಲಕಚ್ಚಿರುವ ಪರಿಸ್ಥಿತಿಯಲ್ಲಿ ಯಾವ ಪಕ್ಷದೊಂದಿಗೆ ಬೇಕಾದರೂ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸಲು ಮುಂದಾಗುತ್ತದೆ ಎಂಬ ಊಹೆ ಮಹಾರಾಷ್ಟ್ರದ ಮಟ್ಟಿಗೆ ಸುಳ್ಳಾಗಿದೆ. ತನಗೆ ಅಧಿಕಾರಕ್ಕಿಂತ ನಂಬಿರುವ ಸಿದ್ಧಾಂತ ಮುಖ್ಯ ಎಂಬುದನ್ನು ಈ ಮೂಲಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಅಂದಿ ತೋರಿಸಿಕೊಟ್ಟಿದ್ದಾರೆ.
ಮುಖ್ಯಮಂತ್ರಿ ಪಟ್ಟದ ಆಸೆಗೆ ಬಿದ್ದ ಶಿವಸೇನೆ
ಚುನಾವಣೆಗೂ ಮುನ್ನ ಬಿಜೆಪಿಯೊಂದಿಗೆ ಮೈತ್ರಿಮಾಡಿಕೊಂಡಿದ್ದ ಶಿವಸೇನೆ, ಫಲಿತಾಂಶದ ನಂತರ ತಲೆದೋರಿದ ಅತಂತ್ರ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿತ್ತು. ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ(105), ಕೇವಲ 56 ಸ್ಥಾನಗಳಲ್ಲಿ ಜಯಗಳಿಸಿರುವ ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ ನೀಡುವುದು ಎಂದರೆ ಅದು ಸಾಧ್ಯವಿಲ್ಲದ ಮಾತು. ಆದರೆ ಪೂರ್ಣಾವಧಿ ಸಿಎಮ ಎಂಬ ಬೇಡಿಕೆಯನ್ನು ಬಿಜೆಪಿ ಒಪ್ಪುವುದಕ್ಕೆ ಸಾಧ್ಯವೇ ಇಲ್ಲ ಎಂಬುದನ್ನು ಮನಗಂಡ ಶಿವಸೇನೆ 50:50 ಸೂತ್ರವನ್ನು ಮುಂದಿಟ್ಟಿತ್ತು. ಆದರೆ ಬಿಜೆಪಿ ಅದಕ್ಕೂ ಸಿದ್ಧವಾಗಲಿಲ್ಲ. ಹಲವು ದಿನಗಳ ಕಾಲ ನಡೆದ ಈ ಸಂಧಾನ ಪ್ರಹಸನ ಕೊನೆಗೂ ಸಫಲತೆ ಪಡೆಯದೆ, ಬಿಜೆಪಿ ಸರ್ಕಾರ ರಚನೆಯಿಂದ ದೂರವೇ ಉಳಿಯುವಂತೆ ಮಾಡಿತು.
ಮಾತು ತಪ್ಪುವುದು ನೈಜ ಹಿಂದುತ್ವವಲ್ಲ: ಬಿಜೆಪಿ ವಿರುದ್ಧ ಶಿವಸೇನಾ ವಾಗ್ದಾಳಿ
ಶಿವಸೇನೆ ಸುಮ್ಮನಾಗಲಿಲ್ಲ!
ಇಷ್ಟಾದರೂ ಶಿವಸೇನೆ ಸುಮ್ಮನಾಗಲಿಲ್ಲ. ಪರ್ಯಾಯ ಸಾಧ್ಯತೆಯ ಹುಡುಕಾಟದಲ್ಲಿ ತೊಡಗಿತು. ಆಗ ಭರವಸೆಯಾಗಿ ಕಾಣಿಸಿದ್ದು ಎನ್ ಸಿಪಿ! ಹೇಗೂ ಎರಡು ಕುಟುಂಬಗಳೂ ಸಂಬಂಧಿಗಳು! ಬಾಳ್ ಠಾಕ್ರೆ ಸಹೋದರಿ ಸುಧಾ ಸುಳೆ ಅವರ ಮಗ ಸದಾನಂದ ಸುಳೆ, ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರ ಪತಿ! ಈ ಸಂಬಂಧ ವೈಯಕ್ತಿಕ ಬದುಕನ್ನು ಮೀರಿ ರಾಜಕೀಯ ಮೈತ್ರಿಗೂ ಹಾದಿ ತೋರಿಸಿಕೊಡಬಹುದು ಎಂಬ ಆಸೆ ಶಿವಸೇನೆಯಲ್ಲೂ, ಜೊತೆಗೆ ಎನ್ ಸಿಪಿಯಲ್ಲೂ ಚಿಗುರಿತ್ತು.
ಬೆಂಬಲಕ್ಕೆ ಸಿದ್ಧವಿದ್ದ ಎನ್ ಸಿಪಿ
ಶಿವಸೇನೆಗೆ ಬೆಂಬಲ ನೀಡಲು ಎನ್ ಸಿಪಿಯೇನೋ ತುದಿಗಾಲಲ್ಲಿ ನಿಂತಿತ್ತು. ಆದರೆ ಚುನಾವನೆಗೂ ಮುನ್ನ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದ ಆ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮುಂದಿನ ನಡೆ ಇಡುವುದು ಎನ್ ಸಿಪಿಗೂ ಸಾಧ್ಯವಿರಲಿಲ್ಲ. ಅದೊಂದೇ ಕಾರಣವಲ್ಲ, ಕಾಂಗ್ರೆಸ್ ಬೆಂಬಲವಿಲ್ಲದೆ ಕೇವಲ ಶಿವಸೇನೆ ಮತ್ತು ಎನ್ ಸಿಪಿ ಮೈತ್ರಿ ಮಾಡಿಕೊಂಡರೆ ಬಹುಮತ ಪಡೆಯುವುದಕ್ಕೂ ಸಾಧ್ಯವಿಲ್ಲ. ಅದನ್ನು ಅರಿತ ಎನ್ ಸಿಪಿ ಕಾಂಗ್ರೆಸ್ ಅನ್ನು ವಿಶ್ವಾಸಕ್ಕೆ ತೆಗೆದುಕೊಳಲ್ಳುವ ಪ್ರಯತ್ನ ನಡೆಸಿತ್ತು.
ಸೋನಿಯಾ ಗಾಂಧಿ ಅನಿರೀಕ್ಷಿತ ನಡೆ
ಕಾಂಗ್ರೆಸ್ ಈಗಿರುವ ಪರಿಸ್ಥಿತಿಯಲ್ಲಿ, ಮಹಾರಾಷ್ಟ್ರದಂಥ ದೊಡ್ಡ, ಪ್ರಮುಖ ರಾಜ್ಯದ ಅಧಿಕಾರ ಮೈತ್ರಿ ಮಾಡಿಕೊಂಡಾದರೂ ದೊರಕುತ್ತದೆ ಎಂದಾದರೆ ಬಿಟ್ಟುಬಿಡುವುದಿಲ್ಲ ಎಂಬ ಅತಿಯಾದ ಆತ್ಮವಿಶ್ವಾಸ ಎನ್ ಸಿಪಿ ಮತ್ತು ಶಿವಸೇನೆಗಿತ್ತು. ಕಾಂಗ್ರೆಸ್ ಬೆಂಬಲಿಸುವುದಾದರೆ ಕೆಲವು ಸೈದ್ಧಾಂತಿಕ ರಾಜಿಗೂ ಸಿದ್ಧ ಎಂಬ ನಿರ್ಧಾರಕ್ಕೆ ಶಿವಸೇನೆ ಬಂದಿತ್ತು. ಆದರೆ ಸೋನಿಯಾ ಗಾಂಧಿ ನಡೆಯೇ ಬೇರೆಯಾಗಿತ್ತು. ಬೆಂಬಲ ನೀಡುವುದೇ ಹೌದಾದರೆ ನೀವೂ 50:50 ಸೂತ್ರವನ್ನು ಮುಂದಿಡಿ ಎಂಬ ವಿಚಿತ್ರ ಬೇಡಿಕೆಯನ್ನು ಪವಾರ್ ಮುಂದೆ ಸೋನಿಯಾ ಗಾಂಧಿ ಇಟ್ಟರು. ಅದುವರೆಗೂ ಆ ಕೋನದಿಂದ ಯೋಚನೆಯನ್ನೇ ಮಾಡಿರದ ಪವಾರ್ ಗೆ ಅಚ್ಚರಿ! ವಿಪಕ್ಷದಲ್ಲಿರಬೇಕಾದವರಿಗೆ ಸಿಎಂ ಸ್ಥಾನವೇ ಸಿಕ್ಕೀತು ಎಂದಾದರೆ ಬಿಟ್ಟುಬಿಡುವಷ್ಟು ಮೂರ್ಖರು ರಾಜಕೀಯದಲ್ಲಿ ಯಾರಿದ್ದಾರೆ? 'ಕಲ್ಲು ಹೊಡೆದರಾಯ್ತು, ಬಿದ್ದರೆ ಹಣ್ಣು, ಹೋದರೆ ಕಲ್ಲು' ಎಂಬ ನಿರ್ಧಾರಕ್ಕೆ ಬಂದರು ಶರದ್ ಪವಾರ್. ಸೋನಿಯಾ ಬೇಡಿಕೆಯನ್ನೇ ತಮ್ಮ ಬೇಡಿಕೆ ಎಂಬಂತೆ ಶಿವಸೇನೆ ಮುಂದಿಟ್ಟರು.
ಗೆದ್ದಿದ್ದು ಯಾರು?
ಎನ್ ಸಿಪಿಯಿಂದ ಅಂಥದೊಂದು ಬೇಡಿಕೆ ಬಂದೀತು ಎಂಬ ನಿರೀಕ್ಷೆಯನ್ನೂ ಮಾಡಿರದ ಶಿವಸೇನೆಗೆ ಶಾಕ್ ಆಗಿತ್ತು. ಗಡುವು ಮೀರಿತ್ತು. ಅತ್ತ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಿತ್ತು.... ಕೊನೆಗೆ ಗೆದ್ದವರು ಯಾರು? ಪೂರ್ಣಾವಧಿ ಸಿಎಂ ಪಟ್ಟವೇ ಬೇಕು ಎಂದು ಮೈತ್ರಿಪಕ್ಷದೊಂದಿಗೆ ಸೆಣಸಾಡಿದ ಬಿಜೆಪಿಯೇ? ಅಧಿಕಾರಕ್ಕೋಸ್ಕರ ಮೈತ್ರಿ ಪಕ್ಷಕ್ಕೇ ದ್ರೋಹ ಬಗೆಯಲು ಮುಂದಾದ ಶಿವಸೇನೆಯೇ? ಅಧಿಕಾರಕ್ಕಾಗಿ ಸಿದ್ಧಾಂತದೊಂದಿಗೆ ರಾಜಿಯಾಗಲು ಮುಂದಾಗಿ, ವಿರೋಧಿಗಳೊಂದಿಗೇ ಕೈಜೋಡಿಸಲು ಹೊರಟ ಎನ್ ಸಿಪಿಯೇ? ಅಥವಾ ಅಧಿಕಾರಕ್ಕಾಗಿ ಸಿದ್ಧಾಂತದೊಂದಿಗೆ ರಾಜಿಯಾಗಲಾರೆ ಎಂಬ ಸಂದೇಶ ನೀಡಿದ ಕಾಂಗ್ರೆಸ್ಸೇ? ಮೂರು ಪಕ್ಷಗಳ ಮೈತ್ರಿ ಸರ್ಕಾರ ಯಶಸ್ವಿಯಾಗಲು ಸಾಧ್ಯವೇ ಇಲ್ಲ ಎಂಬ ದೂರದೃಷ್ಟಿಯಿಂದ ಸೋನಿಯಾ ಗಾಂಧಿ ಈ ನಿರ್ಧಾರ ತೆಗೆದುಕೊಂಡಿರಬಹುದು. ಆದರೆ ಸದ್ಯಕ್ಕೆ ಈ ಪ್ರಹಸನದಲ್ಲಿ ಗೆಲುವು ಸಾಧಿಸಿದ್ದೇ ಅವರು!