ಹಾಗಾದರೆ ಹಾನಗಲ್ ಚುನಾವಣೆಯ ಗೆಲುವಿನ ಶ್ರೇಯಸ್ಸು ಯಾರಿಗೆ?
ಹಾನಗಲ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಶಿವರಾಜ್ ಸಜ್ಜನರ ವಿರುದ್ದ 7,373 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 'ನಾನು ಅಕ್ಕಿ ಆಲೂರಿನ ಅಳಿಯ' ಎಂದು ಪ್ರಚಾರದಲ್ಲಿ ಹೇಳುತ್ತಿದ್ದರೂ, ಬಿಜೆಪಿ ಇಲ್ಲಿ ಮುಗ್ಗರಿಸಿದೆ.
ಸೋಲು ಎದುರಾದಾಗ ಅದನ್ನು ಯಾರ ತಲೆಗೆ ಕಟ್ಟುವುದು ಎನ್ನುವ ಆಲೋಚನೆಯಲ್ಲಿರುವ ರಾಜಕಾರಣಿಗಳು, ಅದೇ ಗೆಲುವು ದಕ್ಕಿದಾಗ ಅದರ ಕ್ರೆಡಿಟ್ ಪಡೆದುಕೊಳ್ಳುವುದಕ್ಕೆ ಉತ್ಸುಕ ತೋರುವುದು ಮಾಮೂಲಿ.
ಡಿ.ಕೆ.ಶಿವಕುಮಾರ್ ಪ್ರಾರ್ಥನೆಗೆ ಕಣ್ಬಿಟ್ಟ ಗ್ರಾಮ ದೇವತೆ, ಹರಕೆ ಸಲ್ಲಿಕೆ
ಹಾಗಾದರೆ, ಹಾನಗಲ್ ಚುನಾವಣೆಯ ಗೆಲುವಿನ ಶ್ರೇಯಸ್ಸು ಯಾರಿಗೆ ಸಲ್ಲಬೇಕು ಎನ್ನುವ ವಿಚಾರ, ಕಾಂಗ್ರೆಸ್ಸಿನಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ಆದರೆ, ಹಾನಗಲ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಕ್ಕೆ, ಅದರಲ್ಲಿ ಬಿಜೆಪಿಯವರು ಯಾಕೆ ಕಡ್ಡಿಯಾಡಿಸುತ್ತಾರೆ ಎನ್ನುವುದು ಸ್ವಾಭಾವಿಕವಾಗಿ ಅವರಿಗೆ ಎದುರಾಗಿರುವ ಪ್ರಶ್ನೆ.
ಹಾನಗಲ್ನಲ್ಲಿ ಬಿಜೆಪಿಗೆ ಮುಖಭಂಗ: ಈ ಇಬ್ಬರನ್ನು ನಂಬಿಕೆಟ್ಟ ಬೊಮ್ಮಾಯಿ?
ಹಾನಗಲ್ನಲ್ಲಿ ಎರಡು ದಿನದ ಮುನ್ನವೇ ದೀಪಾವಳಿ ಆಚರಿಸಿಕೊಂಡಿರುವ ಕಾಂಗ್ರೆಸ್ಸಿನಲ್ಲಿ ಇದೆ ಎನ್ನಲಾಗುತ್ತಿರುವ ಎರಡು ಬಣಗಳು, ಗೆಲುವು ನಮ್ಮ ಪರಿಶ್ರಮದಿಂದಲೇ ಎಂದು ಹೇಳಿಕೊಳ್ಳುತ್ತಿದೆ. ಆದರೆ, ಬಿಜೆಪಿಯವರು ಅದು ಕಾಂಗ್ರೆಸ್ಸಿನ ಗೆಲುವು ಅಲ್ಲ ಎನ್ನುತ್ತಿದ್ದಾರೆ.
ಹಾನಗಲ್ನಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆಗೆ ಗೆಲುವು
ಹಾನಗಲ್ನಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆಯ ಬಗ್ಗೆ ಕ್ಷೇತ್ರದಲ್ಲಿ ಮೆಚ್ಚುಗೆಯ ಮಾತು ಕೇಳಿ ಬರುತ್ತಿದ್ದವು. ಹಾಗಾಗಿ, ಅವರ ವೈಯಕ್ತಿಕ ವರ್ಚಸ್ಸೇ ಗೆಲುವಿಗೆ ಕಾರಣ ಎನ್ನುವುದು ಬಿಜೆಪಿಯ ವಾದ, ಅದೆಲ್ಲಾ ನಿಮಗ್ಯಾಕೆ ಸೋಲು ಒಪ್ಪಿಕೊಳ್ಳಿ ಎನ್ನುವುದು ಕಾಂಗ್ರೆಸ್ಸಿನ ಕೌಂಟರ್. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಹೆಚ್ಚಿನ ಬಿಜೆಪಿ ಮುಖಂಡರ ಮಾನೆಯವರ ಕೆಲಸವೇ ಅವರ ಕೈಹಿಡಿದಿದೆ ಎಂದು ಈಗಲೇ ಅವರ ಪರವಾಗಿ ಬ್ಯಾಟ್ ಮಾಡುತ್ತಿರುವುದು ಯಾಕೆ ಎನ್ನುವ ಗೊಂದಲದಲ್ಲಿ ಕಾಂಗ್ರೆಸ್ ಮುಖಂಡರು ಇದ್ದಾರೆ.
ಮಾನೆ ವೈಯಕ್ತಿಕ ವರ್ಚಸ್ಸಿನಿಂದ ಗೆದ್ದಿದ್ದಾರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
"ಹಾನಗಲ್ ಕ್ಷೇತ್ರದಲ್ಲಾದ ಸೋಲನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈ ಸೋಲನ್ನು ಮುಂದಿನ ಚುನಾವಣೆಯಲ್ಲಿ ಗೆಲುವಾಗಿ ಪರಿವರ್ತಿಸಲು ಬೇಕಾದ ಪೂರ್ವಸಿದ್ದತೆಯನ್ನು ಮಾಡಿಕೊಳ್ಳುತ್ತೇವೆ. ಆದರೆ, ಈ ಗೆಲುವಿಗಾಗಿ ಕಾಂಗ್ರೆಸ್ಸಿನವರು ಹಿಗ್ಗಬೇಕಾಗಿಲ್ಲ, ಯಾಕೆಂದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕ ಗೆಲುವಲ್ಲ. ಶ್ರೀನಿವಾಸ ಮಾನೆಯವರು ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಗೆದ್ದಿದ್ದಾರೆ ಎನ್ನುವ ಸತ್ಯವನ್ನು ಕಾಂಗ್ರೆಸ್ಸಿನವರು ಅರಿತುಕೊಳ್ಳಲಿ'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
ಬೊಮ್ಮಾಯಿಯವರ ಮಾತಿಗೆ ಧ್ವನಿಗೂಡಿಸಿರುವ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ
ಸಿಎಂ ಬೊಮ್ಮಾಯಿಯವರ ಮಾತಿಗೆ ಧ್ವನಿಗೂಡಿಸಿರುವ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ, "ಹೌದು, ಇದು ಶ್ರೀನಿವಾಸ ಮಾನೆಯವರು ತಮ್ಮ ಪ್ರಭಾವದಿಂದಲೇ ಗೆದ್ದಿರುವುದು, ಕಾಂಗ್ರೆಸ್ ಇಲ್ಲಿ ಚಿಹ್ನೆ ಮಾತ್ರ. ಕೋವಿಡ್ ಸಮಯದಲ್ಲಿ ಅವರು ಮಾಡಿರುವ ಜನಸೇವೆ ಅವರ ಕೈಹಿಡಿದಿದೆಯೇ ಹೊರತು, ಕಾಂಗ್ರೆಸ್ ಹೆಸರಿನಿಂದ ಅಲ್ಲ. ಕೊರೊನಾ ಸಮಯದಲ್ಲಿ ಮಾನೆಯವರು ಮಾಡಿದಂತಹ ಸಾಮಾಜಿಕ ಕೆಲಸದ ಬಗ್ಗೆ ನಮಗೂ ಗೌರವವಿದೆ"ಎಂದು ಈಶ್ವರಪ್ಪ ಹೇಳಿದ್ದಾರೆ.
ಬಿಜೆಪಿಯವರು ಯಾಕೆ ಶ್ರೀನಿವಾಸ ಮಾನೆಯವರ ಪರವಾಗಿ ಮಾತನಾಡುತ್ತಿದ್ದಾರೆ
ಬಿಜೆಪಿಯವರು ಯಾಕೆ ಶ್ರೀನಿವಾಸ ಮಾನೆಯವರ ಪರವಾಗಿ ಮಾತನಾಡುತ್ತಿದ್ದಾರೆ ಎನ್ನುವ ಗೊಂದಲದಲ್ಲಿರುವ ವೇಳೆ ಮಾನೆ ಹೇಳಿರುವುದಿಷ್ಟು. "ಇದು, ಪಕ್ಷದ ಗೆಲುವು, ಕಾರ್ಯಕರ್ತರ ಸಂಘಟಿತ ಪ್ರಯತ್ನದಿಂದ ಜಯದಕ್ಕಿದೆ. ಕೊರೊನಾ ವೇಳೆ ಜನಸೇವೆ ಮಾಡಿರುವುದಂತೂ ಹೌದು, ನಮ್ಮ ಮುಖಂಡರ ಅವಿರತ ಪ್ರಚಾರದಿಂದ ಗೆಲುವು ದಕ್ಕಿದೆ"ಎಂದು ಮಾನೆ ಹೇಳಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ 'ಗೆಲುವಿನ ಶ್ರೇಯಸ್ಸು' ಯಾರಿಗೆ ದಕ್ಕಬೇಕು ಎನ್ನುವ ಹೇಳಿಕೆಯ ನಡುವೆ, ಎರಡೂ ಪಕ್ಷದ ಕಾರ್ಯಕರ್ತರಿಗೆ ಕಾಡುವ ಪ್ರಶ್ನೆ ಹಾಗಾದರೆ ಹಾನಗಲ್ ಚುನಾವಣೆಯ ಗೆಲುವಿನ ಶ್ರೇಯಸ್ಸು ಯಾರಿಗೆ ಎನ್ನುವುದು.