ಡಿಕೆಶಿ ವಿರುದ್ದ '% ಖೆಡ್ಡಾ' ತೋಡಿದವರು ಯಾರು? ಎಲ್ಲರ ಬೊಟ್ಟು ಒಬ್ಬರತ್ತ
ಆಡಳಿತಾರೂಢ ಬಿಜೆಪಿಯು ಖಾಸಗಿ ಸಂಸ್ಥೆಯ ಮೂಲಕ ನಡೆಸಿದ ಎರಡು ಅಸೆಂಬ್ಲಿ ಕ್ಷೇತ್ರಗಳ ಆಂತರಿಕ ಸಮೀಕ್ಷೆಯಲ್ಲಿ, ವಿರೋಧ ಪಕ್ಷವಾದ ಕಾಂಗ್ರೆಸ್ಸಿಗೆ ಪೂರಕವಾದ ವಾತಾವರಣವಿದೆ ಎನ್ನುವ ವರದಿ ಬಂದಿತ್ತು ಎಂದು ಹೇಳಲಾಗುತ್ತಿತ್ತು. ಆದರೆ, ಈಗ?
ರಾಜ್ಯ ಕಾಂಗ್ರೆಸ್ಸಿನ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ವಿರುದ್ದ, ಅವರದ್ದೇ ಪಕ್ಷದ ನಾಯಕರು ಭ್ರಷ್ಟಾಚಾರದ ಮಾತನ್ನಾಡಿದ್ದು ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ. ಉಪ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಮತ್ತು ಜೆಡಿಎಸ್ಸಿಗೆ ಕಾಂಗ್ರೆಸ್ ತಾನೇ ಅಸ್ತ್ರ ನೀಡಿದಂತಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಗ್ಗೆ ಕಾಂಗ್ರೆಸ್ ನಾಯಕರ ಇದೆಂಥಾ ಮಾತುಗಳು?
ಕೆಪಿಸಿಸಿ ವಕ್ತಾರರಾದ ವಿ.ಎಸ್. ಉಗ್ರಪ್ಪ ಮತ್ತು ಮಾಧ್ಯಮ ಸಂಯೋಜಕ ಎಂ.ಎ. ಸಲೀಂ ನಡುವಿನ ಗುಟ್ಟುಮಾತು, ರಾಜ್ಯದ ಮೂಲೆಮೂಲೆಯಲ್ಲಿ ಸದ್ದು ಮಾಡುತ್ತಿದೆ. ಆದ ಮುಜುಗುರಕ್ಕೆ ತೇಪೆ ಹಚ್ಚಲು ಕೈ ನಾಯಕರು ಹರಸಾಹಸ ಪಟ್ಟರೂ, ಅದು ಅಷ್ಟಾಗಿ ವರ್ಕೌಟ್ ಆಗಿಲ್ಲ.
ಡಿ. ಕೆ. ಶಿವಕುಮಾರ್ ವಿರುದ್ಧದ ಷಡ್ಯಂತ್ರ ಬಿಚ್ಚಿಟ್ಟ ಕಟೀಲ್!
ಮಾಧ್ಯಮದ ಕ್ಯಾಮರಾಗಳು, ಮೈಕ್ ಬಾಕ್ಸ್ಗಳು ಎದುರುಗಡೆ ಇದ್ದರೂ, ಇಬ್ಬರು ಕೈ ಮುಖಂಡರು ಎಡವಟ್ಟು ಮಾಡಿಕೊಂಡಿದ್ದು ಹೇಗೆ? ಇದು ಗೊತ್ತಾಗದೇ ನಡೆದ ಅಚಾತುರ್ಯವೇ ಅಥವಾ ಇದೊಂದು ಉದ್ದೇಶಪೂರ್ವಕವೇ ಎನ್ನುವ ಪ್ರಶ್ನೆ ಎದುರಾದಾಗ, ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಬೊಟ್ಟು ಮಾಡುವುದು ಒಬ್ಬರತ್ತ.
ಸಲೀಂ ಕಿವಿಯಲ್ಲಿ ಮಾತನಾಡುತ್ತಿದ್ದಾಗ, ಅದನ್ನು ತಡೆಯುವ ಪ್ರಯತ್ನವನ್ನು ಉಗ್ರಪ್ಪ ಮಾಡಿಲ್ಲ
ಕಾಂಗ್ರೆಸ್ಸಿನಲ್ಲಿ ಇದೆ ಎನ್ನಲಾಗುತ್ತಿರುವ ಬಣ ರಾಜಕೀಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರದ್ದು ಒಂದೊಂದು ಬಣ ಎಂದು ಹೇಳಲಾಗುತ್ತಿದೆ. ಗುಟ್ಟು ಮಾತಿನಿಂದ ಈಗ ಉಚ್ಚಾಟನೆಗೊಂಡಿರುವ ಎಂ.ಎ.ಸಲೀಂ ಅವರು ಡಿಕೆಶಿ ಕಡೆ, ಉಗ್ರಪ್ಪನವರು ಸಿದ್ದರಾಮಯ್ಯ ಕಡೆ ಎನ್ನುವ ಮಾತಿದೆ. ಸಲೀಂ ಕಿವಿಯಲ್ಲಿ ಮಾತನಾಡುತ್ತಿದ್ದಾಗ, ಅದನ್ನು ತಡೆಯುವ ಪ್ರಯತ್ನವನ್ನು ಉಗ್ರಪ್ಪ ಮಾಡಿಲ್ಲ ಎನ್ನುವುದು ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ಸಿನ ಹಿರಿಯ ಮುಖಂಡರ ಕೋಪಕ್ಕೂ ಕಾರಣವಾಗಿತ್ತು.
ಇದೆಲ್ಲಾ ಸಿದ್ದರಾಮಯ್ಯನವರ ತಂತ್ರಗಾರಿಕೆ ಎಂದ ನಳಿನ್ ಕುಮಾರ್ ಕಟೀಲ್
"ಕಾಂಗ್ರೆಸ್ ರಾಜ್ಯಾಧ್ಯಕ್ಷ @DKShivakumar ಬಗ್ಗೆ ಅವರ ಪಕ್ಷದವರೇ ಹೇಳಿರುವ ಮಾತುಗಳನ್ನು ರಾಜ್ಯದ ಜನ ಕೇಳುತ್ತಿದ್ದಾರೆ. ಡಿಕೆಶಿ ಮೇಲೆ ಇಡಿ, ಸಿಬಿಐ ದಾಳಿಯಾದಾಗ ರಾಜಕೀಯ ಪ್ರೇರಿತ ಎಂದವರಿಗೆ ಅವರದ್ದೇ ಪಕ್ಷದ ಮುಖಂಡರು ಸಾಕ್ಷ್ಯ ನೀಡಿದ್ದಾರೆ. ಇದೊಂದು ಡಿಕೆಶಿಯನ್ನು ಮುಗಿಸಲು ಕಾಂಗ್ರೆಸ್ನಲ್ಲಿ ಮಾಡಲಾಗುತ್ತಿರುವ ವ್ಯವಸ್ಥಿತ ಷಡ್ಯಂತ್ರದ ಭಾಗ. ಡಿ. ಕೆ. ಶಿವಕುಮಾರ್ ಪ್ರಭಾವ ಕಡಿಮೆ ಮಾಡಲು ಮತ್ತು ಕುಗ್ಗಿಸಲು ಸಿದ್ದರಾಮಯ್ಯ ಮಾಡಿರೋ ತಂತ್ರಗಾರಿಕೆ ಇರಬಹುದು. ಸಿದ್ದರಾಮಯ್ಯ, ಉಗ್ರಪ್ಪ ಹಾಗೂ ಸಲೀಂ ಮೂಲಕ ಈ ಹೇಳಿಕೆ ಮಾಡಿಸಿದ್ದಾರೆ. ಸತ್ಯಾಸತ್ಯತೆ ಬಯಲಾಗಲು ತನಿಖೆ ಆಗಲಿ, ಆಗ ಸಿದ್ದರಾಮಯ್ಯ ಸಿಕ್ಕಿ ಹಾಕಿಕೊಳ್ತಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯ ಪಟ್ಟಿದ್ದಾರೆ.
ವೈರಲ್ ಮಾಡಿರುವ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯನವರ ಪಟಾಲಂನವರು
ಆ ವಿಡಿಯೋವನ್ನು ಯಾರು ಮಾಧ್ಯಮಕ್ಕೆ ಕೊಟ್ಟರು ಅಥವಾ ಸಿದ್ದರಾಮಯ್ಯನವರೇ ಕೊಟ್ಟರೋ ಗೊತ್ತಿಲ್ಲ. ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಸಿದ್ದರಾಮಯ್ಯ ಒಪ್ಪುತ್ತಾರಾ? ಡಿಕೆಶಿ ನನ್ನ ಸ್ನೇಹಿತ, ಅವರನ್ನು ಮನೆಗೆ ಕಳುಹಿಸಲು ಇನ್ನೇನು ಅವರು (ಸಿದ್ದರಾಮಯ್ಯ) ಮಾಡುತ್ತಾರೋ? ವೈರಲ್ ಮಾಡಿರುವ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯನವರ ಪಟಾಲಂನವರು, ಇನ್ನೂ ಮುಖ್ಯಮಂತ್ರಿಯಾಗಬೇಕು ಎನ್ನುವ ಆಸೆಯನ್ನು ಅವರು ಇಟ್ಟುಕೊಂಡಿದ್ದಾರೆ"ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನೇರವಾಗಿ ಈ ವಿದ್ಯಮಾನಕ್ಕೆ ಸಿದ್ದರಾಮಯ್ಯನವರನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ.
|
ಸಿದ್ದರಾಮಯ್ಯನವರ ಶಿಷ್ಯ ಪಡೆ ನಿಮಗೆ ಖೆಡ್ಡಾ ತೋಡಲು ಪ್ರಾಯಶಃ ಸಜ್ಜಾಗಿರುವಂತೆ ಕಾಣುತ್ತಿದೆ
"ಕೊತ್ವಾಲ್ ರಾಮಚಂದ್ರನ ಶಿಷ್ಯನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಅವರದೇ ಪಕ್ಷದ ಮುಖಂಡರು @INCKarnataka ಕಚೇರಿಯಲ್ಲೇ ಬಹಿರಂಗಪಡಿಸಿದ್ದಾರೆ ಎಂದರೆ ಕೆಪಿಸಿಸಿಗೆ ಎಂಥ ದುರ್ಗತಿ ಬಂದಿರಬಹುದು? ಅವರು ನಡೆಸುತ್ತಿರುವ ಕಲೆಕ್ಷನ್ ಗುಟ್ಟನ್ನು ಕೊನೆಗೂ ಅವರದೇ ಪಕ್ಷದ ಮುಖಂಡರಾದ ವಿ.ಎಸ್.ಉಗ್ರಪ್ಪ ಮತ್ತು ಸಲೀಂ ಅಹಮ್ಮದ್ ಗುಸುಗುಸಿನಲ್ಲೇ ಜಗಜ್ಜಾಹಿರು ಮಾಡಿದ್ದಾರೆ. ಸಿದ್ದರಾಮಯ್ಯನವರ ಶಿಷ್ಯ ಪಡೆ ನಿಮಗೆ ಖೆಡ್ಡಾ ತೋಡಲು ಪ್ರಾಯಶಃ ಸಜ್ಜಾಗಿರುವಂತೆ ಕಾಣುತ್ತಿದೆ. ಒಂದು ಕಡೆ ತಮ್ಮ ನಾಯಕನನ್ನು ಹೊಗಳಿ, ಇನ್ನೊಂದು ಕಡೆ ನಿಮ್ಮನ್ನು ಜನತೆ ಮುಂದೆ ಬೆತ್ತಲು ಮಾಡಲು ಹೊರಟಿದಂತಿದೆ. ಯಾವುದಕ್ಕೂ ಎಚ್ಚೆತ್ತುಕೊಳ್ಳುವುದು ಒಳಿತು" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.