ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ವ್ಯಕ್ತಿಚಿತ್ರ
ನವದೆಹಲಿ, ಏಪ್ರಿಲ್ 13: ಕೇಂದ್ರ ಚುನಾವಣಾ ಆಯೋಗದ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಸೋಮವಾರ ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕವಾಗಿದ್ದಾರೆ.
ಇವರು 2022ರ ಮೇ 14 ರಂದು ತಮ್ಮ ಹುದ್ದೆಯಿಂದ ನಿವೃತ್ತರಾಗಲಿದ್ದು, ಇವರ ಅಧಿಕಾರಾವಧಿಯಲ್ಲಿ ಗೋವಾ, ಮಣಿಪುರ, ಉತ್ತರಾಖಂಡ್, ಪಂಜಾಬ್ ಹಾಗೂ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಳು ನಡೆಯಲಿವೆ.
ಈ ಸಂಬಂಧ ಸೋಮವಾರ ಹೇಳಿಕೆ ಬಿಡುಗಡೆ ಮಾಡಿದ ಕೇಂದ್ರ ಕಾನೂನು ಇಲಾಖೆ ಸುಶೀಲ್ ಚಂದ್ರಾ ಅವರು ಏ.13ರಿಂದಲೇ ಆಯೋಗದ ಮುಖ್ಯ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದಿದೆ. ಆಯೋಗದ ಮುಖ್ಯ ಆಯುಕ್ತರಾಗಿದ್ದ ಸುನೀಲ್ ಕುಮಾರ್ ಅರೋರಾ ಅವರು ಸೋಮವಾರ ನಿವೃತ್ತಿ ಹೊಂದಿದರು.
1957ರ ಮೇ 15ರಂದು ಜನಿಸಿರುವ ಸುಶಿಲ್ ಚಂದ್ರ ಅವರು ಭಾರತೀಯ ಕಂದಾಯ ಸೇವೆಯ (ಐಆರ್ಎಸ್) 1980ನೇ ಬ್ಯಾಚಿಗೆ ಸೇರಿದವರು. ಐಆರ್ಎಸ್ ಅಧಿಕಾರಿಯಾಗಿ ಇವರು ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಗುಜರಾತ್ಮತ್ತು ಮಹಾರಾಷ್ಟ್ರಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ರೂರ್ಕಿ ವಿಶ್ವವಿದ್ಯಾಲಯದಿಂದ ಪದವಿ, ಡೆಹ್ರಾಡೂನ್ ಡಿಎವಿ ಕಾಲೇಜಿನಲ್ಲಿ ಕಾನೂನು ಪದವಿ ಪಡೆದುಕೊಂಡಿದ್ದಾರೆ. ಇಂಟರ್ನ್ಯಾಷನಲ್ಟ್ಯಾಕ್ಸೇಷನ್ ಮತ್ತು ಇನ್ವೆಸ್ಟಿಗೇಷನ್ವಿಭಾಗದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ.
ಭಾರತ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸುವುದಕ್ಕೂ ಮುನ್ನ ಸುಶಿಲ್ ಚಂದ್ರ ಅವರು ಕೇಂದ್ರೀಯ ನೇರ ತೆರಿಗೆಗಳ ನಿಗಮ(ಸಿಬಿಡಿಟಿ)ದ ಚೇರ್ಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮುಂಬೈ, ಗುಜರಾತಿನ ಡಿಜಿ ತನಿಖಾ ವಿಭಾಗದಲ್ಲಿದ್ದರು. ಸಿಂಗಪುರ ವಾರ್ಟನ್, ಐಐಎಂ ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.
ಸುಶೀಲ್ ಕುಮಾರ್ ಅವರು ಫೆಬ್ರವರಿ 14 2019 ರಲ್ಲಿ ಚುನಾವಣಾ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು. ಚುನಾವಣಾ ಆಯೋಗದ ಅತ್ಯಂತ ಹಿರಿಯ ಆಯುಕ್ತರನ್ನೇ ಸಿಇಸಿ ಹುದ್ದೆಗೆ ನೇಮಕ ಮಾಡುವ ಪರಿಪಾಠ ಇದೆ, ಹೀಗಾಗಿ ಸುಶೀಲ್ ಚಂದ್ರ ಅವರನ್ನೇ ನೇಮಕ ಮಾಡುವುದಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದೆ.