Justice UU Lalit Profile : ತಲಾಖ್ ತೀರ್ಪು ಕೊಟ್ಟವರು... ನೂತನ ಸಿಜೆಐ ಲಲಿತ್ ಪರಿಚಯ
ನವದೆಹಲಿ, ಆಗಸ್ಟ್ 10: ನ್ಯಾ| ಉದಯ್ ಯು ಲಲಿತ್ ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದಾರೆ. ಸಿಜೆಐ ಎನ್ ವಿ ರಮಣ ಇದೇ ಆಗಸ್ಟ್ 26ರಂದು ನಿವೃತ್ತರಾಗಲಿದ್ದಾರೆ. ತಮ್ಮ ಸ್ಥಾನಕ್ಕೆ ನ್ಯಾ| ಯುಯು ಲಲಿತ್ ಅವರನ್ನು ಶಿಫಾರಸು ಮಾಡಿದ್ದರು.
ಯಾವುದೇ ಸಿಜೆಐ ನಿವೃತ್ತರಾಗುವ ಮುನ್ನ ತಮ್ಮ ನಂತರ ಸ್ಥಾನ ಯಾರಿಗೆ ಕೊಡಬಹುದು ಎಂಬುದನ್ನು ಶಿಫಾರಸು ಮಾಡಬಹುದು. ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಕಳೆದ ವಾರ ಸಿಜೆಐ ಎನ್ ವಿ ರಮಣ ಅವರಿಗೆ ಈ ಸಂಬಂಧ ಮನವಿ ಮಾಡಿದ್ದರು. ಸಿಜೆಐ ಸ್ಥಾನಕ್ಕೆ ನ್ಯಾ| ಯುಯು ಲಲಿತ್ರನ್ನು ಶಿಫಾರಸು ಮಾಡಿದ್ದರು.
ಹಿಜಾಬ್ ಆರ್ಜಿ ವಿಚಾರಣೆಗೆ ಪೀಠ ಸ್ಥಾಪನೆ-ಸುಪ್ರೀಂ ಕೋರ್ಟ್
ಆಗಸ್ಟ್ 26ರಂದು ಸಿಜೆಐ ಆಗಿ ರಮಣ ನಿವೃತ್ತರಾಗಲಿದ್ಧಾರೆ. ಆಗಸ್ಟ್ 27ರಂದು ನ್ಯಾ| ಉದಯ್ ಯು ಲಲಿತ್ ನೂತನ ಸಿಜೆಐ ಆಗಿ ಅಧಿಕಾರ ವಹಿಸಲಿದ್ದಾರೆ. ಆದರೆ, ನ್ಯಾ| ಲಲಿತ್ ಅವರು ನವೆಂಬರ್ 8ಕ್ಕೆ ನಿವೃತ್ತರಾಗಲಿದ್ದಾರೆ. ಅವರ ಅಧಿಕಾರಾವಧಿ ನವೆಂಬರ್ 8ರವರೆಗೆ ಮಾತ್ರ ಇರಲಿದೆ.
ಲಲಿತ್ ಅವರು ಭಾರತದ 49ನೇ ಸಿಜೆಐ ಆಗಿದ್ದಾರೆ.. 74 ದಿನಗಳ ಕಾಲ ಅವರು ಸಿಜೆಐ ಆಗಿ ಕಾರ್ಯನಿರ್ವಹಿಸಲಿದ್ಧಾರೆ. ನವೆಂಬರ್ 8ರಂದು ನ್ಯಾ| ಲಲತ್ ನಿವೃತ್ತರಾದ ಬಳಿಕ ನ್ಯಾ| ಡಿವೈ ಚಂದ್ರಚೂಡ್ 50ನೇ ಸಿಜೆಐ ಆಗಲಿದ್ದಾರೆ.
ಏನಿದು 'ಉಚಿತ ರೇವಾಡಿ ಸಂಸ್ಕೃತಿ'?; ಕಾನೂನು ರೂಪಿಸಲು ಸುಪ್ರೀಂ ಸೂಚಿಸಿದ್ದು ಯಾಕೆ?
ವಕೀಲಿಕೆಯಿಂದ ನೇರ ಸುಪ್ರೀಂ ನ್ಯಾಯಮೂರ್ತಿಯಾದವರು
ನ್ಯಾ| ಯುಯು ಲಲಿತ್ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗುವ ಮುನ್ನ ವಕೀಲರಾಗಿದ್ದರು. ಬಾರ್ ಕೌನ್ಸಿಲ್ನಿಂದ ನೇರವಾಗಿ ಅವರನ್ನು 2014 ಆಗಸ್ಟ್ 13ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತು. ಸುಪ್ರೀಂ ಕೋರ್ಟ್ ಇತಿಹಾಸದಲ್ಲಿ ಇದೂವರೆಗೂ ಕೇವಲ 8 ಮಂದಿ ಮಾತ್ರ ಈ ರೀತಿ ನೇರವಾಗಿ ಸರ್ವೋಚ್ಚ ನ್ಯಾಯಾಲಯದ ಜಡ್ಜ್ ಆಗಿ ನೇಮಕವಾಗಿದ್ದಾರೆ.
2014ರಿಂದೀಚೆಗೆಯೇ ನಾಲ್ವರು ಈ ರೀತಿ ನೇಮಕವಾಗಿದ್ಧಾರೆ. ನ್ಯಾ| ರೋಹಿಂಗ್ಟನ್ ಫಾಲಿ ನಾರಿಮನ್, ನ್ಯಾ| ಯುಯು ಲಲಿತ್, ನ್ಯಾ| ನಾಗೇಶ್ವರರಾವ್ ಮತ್ತು ನ್ಯಾ| ಇಂದು ಮಲ್ಹೋತ್ರಾ ಅವರು ಬಾಕ್ ಕೌನ್ಸಿಲ್ನಿಂದ ನೇರವಾಗಿ ಸುಪ್ರೀಂ ಜಡ್ಜ್ ಆಗಿ ನೇಮಕವಾಗಿದ್ದರು.
ಕರ್ನಾಟಕ ಲೋಕಾಯುಕ್ತರಾಗಿದ್ದ ನ್ಯಾ| ಸಂತೋಷ್ ಹೆಗ್ಡೆ ಕೂಡ ಹೀಗೆಯೇ ನೇಮಕವಾಗಿದ್ದರು. 1971ರಲ್ಲಿ ಎಸ್ಎಂ ಸಿಕ್ರಿ ಈ ರೀತಿ ನೇಮಕವಾದ ಮೊದಲ ನ್ಯಾಯಮೂರ್ತಿ ಎನಿಸಿದ್ದಾರೆ. ಹಾಗೆಯೇ, ಈ ರೀತಿ ನೇಮಕವಾಗಿ ಸಿಜೆಐ ಸ್ಥಾನಕ್ಕೆ ಏರಿದ ಮೊದಲಿಗರು ನ್ಯಾ| ಎಸ್ ಎಂ ಸಿಕ್ರಿ. ಅವರನ್ನು ಬಿಟ್ಟರೆ ಆ ಭಾಗ್ಯ ಸಿಕ್ಕಿರುವುದು ಈಗ ನ್ಯಾ| ಉದಯ್ ಯು ಲಲಿತ್ ಅವರಿಗೆಯೇ.
ತ್ರಿವಳಿ ತಲಾಖ್ ಪ್ರಕರಣ
ಕಳೆದ ಆರು ವರ್ಷಗಳಲ್ಲಿ ನ್ಯಾ| ಯುಯು ಲಲಿತ್ ಸುಪ್ರೀಂ ನ್ಯಾಯಮೂರ್ತಿಯಾಗಿ ಹಲವು ಐತಿಹಾಸಿಕ ಪ್ರಕರಣಗಳಲ್ಲಿ ತೀರ್ಪು ನೀಡಿದ್ದಾರೆ. ಅದರಲ್ಲಿ ಪ್ರಮುಖವಾದುದು ತ್ರಿವಳಿ ತಲಾಖ್. ಆ ಪ್ರಕರಣದಲ್ಲಿ ತೀರ್ಪು ನೀಡಿದ ಐವರು ಸದಸ್ಯರ ಸಾಂವಿಧಾನಿಕ ಪೀಠದಲ್ಲಿ ನ್ಯಾ| ಲಲಿತ್ ಕೂಡ ಇದ್ದರು. ತ್ರಿವಳಿ ತಲಾಖ್ ಅಸಂವಿಧಾನಿಕ, ಅಕ್ರಮ ಎಂದು ಈ ಪೀಠ 3-2ರಿಂದ ತೀರ್ಪು ನೀಡಿತು.
ಸಿಜೆಐ ಜೆಎಸ್ ಖೆಹಾರ್ ಮತ್ತು ನ್ಯಾ| ಅಬ್ದುಲ್ ನಜೀರ್ ಅವರು ಆರು ತಿಂಗಳ ಕಾಲ ತೀರ್ಪು ಮುಂದೂಡಲು ನಿರ್ಧರಿಸಿದ್ದರು. ಆದರೆ ಪೀಠದಲ್ಲಿದ್ದ ಇತರ ಮೂವರು ನ್ಯಾಯಮೂರ್ತಿಗಳಾದ ಲಲಿತ್, ಆರ್ ಎಫ್ ನಾರಿಮನ್ ಮತ್ತು ಕುರಿಯನ್ ಜೋಸೆಫ್ ಅವರು ಟ್ರಿಪಲ್ ತಲಾಖ್ ಅನ್ನು ಅಮಾನ್ಯ ಮಾಡುವುದು ಲೇಸು ಎಂದು ತೀರ್ಪಿತ್ತಿದ್ದರು.
ಟ್ರಾವಂಕೋರ್ ರಾಜಮನೆತನದವರ ಪರ ತೀರ್ಪು
ನ್ಯಾ| ಉದಯ್ ಲಲಿತ್ ನೀಡಿದ ಮಹತ್ವದ ತೀರ್ಪುಗಳಲ್ಲಿ ಕೇರಳದ ಪದ್ಮನಾಭಸ್ವಾಮಿ ದೇವಸ್ಥಾನದ ಹಕ್ಕು ವಿಚಾರದ ಪ್ರಕರಣ ಇದೆ. ಪದ್ಮನಾಭಸ್ವಾಮಿ ದೇವಸ್ಥಾನದ ಸಂಪತ್ತು ಮತ್ತು ಆಡಳಿತದ ಹಕ್ಕು ತಿರುವಾಂಕೂರು ರಾಜಮನೆತನಕ್ಕೆ ಸೇರಿದ್ದು ಎಂದು 2020ರಲ್ಲಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠದಲ್ಲಿ ಯುಯು ಲಲಿತ್ ಇದ್ದರು.
ಅಪಾರ ಸಂಪತ್ತಿರುವ ಆ ದೇವಸ್ಥಾನದ ಆಡಳಿತ ನಿರ್ವಹಣೆಗೆ ಟ್ರಸ್ಟ್ ಸ್ಥಾಪಿಸುವಂತೆ ಕೇರಳ ಸರಕಾರಕ್ಕೆ ಅಲ್ಲಿನ ಹೈಕೋರ್ಟ್ 2011ರಲ್ಲಿ ನಿರ್ದೇಶನ ನೀಡಿತ್ತು. ಒಂಬತ್ತು ವರ್ಷಗಳ ಬಳಿಕ ನ್ಯಾ| ಉದಯ್ ಯು ಲಲಿತ್ ಹಾಗು ಮತ್ತೊಬ್ಬ ನ್ಯಾಯಮೂರ್ತಿಗಳಿದ್ದ ಸುಪ್ರೀಂ ನ್ಯಾಯಪೀಠ ಕೆಳಗಿನ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿತು. ಈ ಮೂಲಕ ಟ್ರಾವಂಕೋರ್ ರಾಜಮನೆತನರು ನಿಟ್ಟುಸಿರು ಬಿಡುವಂತಾಗಿತ್ತು.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ
ಪೋಕ್ಸೋ ಕಾಯ್ದೆ ಅಡಿ ದಾಖಲಾಗಿದ್ದ ಎರಡು ಪ್ರಕರಣಗಳಲ್ಲಿ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪುಗಳ ಬಹಳ ವಿವಾದಕ್ಕೆ ಒಳಗಾಗಿದ್ದವು. ಮಗುವಿನ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದಲ್ಲಿ ದೈಹಿಕ ಸ್ಪರ್ಶವಾಗಿದ್ದರೆ ಮಾತ್ರ ಪರಿಗಣಿಸಲು ಸಾಧ್ಯ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಆದರೆ, ನ್ಯಾ| ಉದಯ್ ಯು ಲಲಿತ್ ಅವರಿದ್ದ ಸುಪ್ರೀಂ ನ್ಯಾಯಪೀಠವೊಂದು ಮಕ್ಕಳ ಲೈಂಗಿಕ ದೌರ್ಜನ್ಯ ವಿಚಾರದಲ್ಲಿ ವಿಭಿನ್ನ ತೀರ್ಪು ನೀಡಿತ್ತು.
ಮಗುವಿನ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದಲ್ಲಿ ದೈಹಿಕ ಸ್ಪರ್ಶಕ್ಕಿಂತ ಹೆಚ್ಚಾಗಿ ಲೈಂಗಿಕ ಉದ್ದೇಶದ ಭಾವನೆ ಇದೆಯಾ ಎಂಬುದು ಮುಖ್ಯ ಎಂದು ಸುಪ್ರೀಂ ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಬಾಬ್ರಿ ಮಸೀದಿ ಪ್ರಕರಣ
ಐತಿಹಾಸಿ ಅಯೋಧ್ಯೆ ರಾಮಮಂದಿರ ಬಾಬ್ರಿ ಮಸೀದಿ ಪ್ರಕರಣದಲ್ಲಿ ವಿಚಾರಣೆ ನಡೆಸಿದ ಸುಪ್ರೀಂ ನ್ಯಾಯಪೀಠದಲ್ಲಿ ಲಲಿತ್ ಇರಬೇಕಿತ್ತು. ಆದರೆ, ಬಾಬ್ರಿ ಮಸೀದಿಗೆ ಸಂಬಂಧಿಸಿದ ಬೇರೊಂದು ಪ್ರಕರಣದಲ್ಲಿ ಅವರು ಈ ಹಿಂದೆ ವಕಾಲತ್ತು ಮಾಡಿದ್ದ ಹಿನ್ನೆಲೆಯಲ್ಲಿ ನ್ಯಾಯಪೀಠದಿಂದ ಅವರು ಹಿಂದಕ್ಕೆ ಸರಿದಿದ್ದರು. ಬಾಬ್ರಿ ಮಸೀದಿ ಧ್ವಂಸ ಘಟನೆಗೆ ಸಂಬಂಧಿಸಿ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಲಲಿತ್ ಅವರು ಮಾಜಿ ಯುಪಿ ಸಿಎಂ ಕಲ್ಯಾಣ್ ಸಿಂಗ್ ಪರ ವಾದ ಮಾಡಿದ್ದರು. ಈ ಕಾರಣಕ್ಕೆ ಅಯೋಧ್ಯೆ ಪ್ರಕರಣದಿಂದ ಯುಯು ಲಲಿತ್ ಕೆಳಗೆ ಸರಿದಿದ್ದರು.
ನ್ಯಾ| ಉದಯ್ ಲಲಿತ್ ಬಗ್ಗೆ
ಬಾಂಬೆ ಹೈಕೋರ್ಟ್ನ ಮಾಜಿ ಹೆಚ್ಚುವರಿ ನ್ಯಾಯಾಧೀಶರಾಗಿದ್ದ ಯು ಆರ್ ಲಲಿತ್ ಅವರ ಕುಟುಂಬದಲ್ಲಿ ಜನಿಸಿದವರು ಉದಯ್ ಉಮೇಶ್ ಲಲಿತ್. ೧೯೮೩ರ ಜೂನ್ನಲ್ಲಿ ಅವರು ವಕೀಲಿಕೆ ವೃತ್ತಿ ಆರಂಭಿಸಿದರು. ಬಾಂಬೆ ಹೈಕೋರ್ಟ್ನಲ್ಲೇ ಅವರ ಮೊದಲ ಕೈಂಕರ್ಯ ನಡೆಯಿತು. 1986ರಲ್ಲಿ ಡೆಲ್ಲಿಗೆ ಅವರ ಕಾರ್ಯಸ್ಥಾನ ಬದಲಾಯಿತು. 2004ರಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಹಿರಿಯ ವಕೀಲರಾದರು. 2ಜಿ ಸ್ಪೆಕ್ಟ್ರಂ ಪ್ರಕರಣದಲ್ಲಿ ಸಿಬಿಐ ಪರ ಅವರು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕವಾದರು. 2014ರಲ್ಲಿ ವಕೀಲರಾಗಿದ್ದ ಅವರನ್ನು ನೇರವಾಗಿ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯಿತು.
(ಒನ್ಇಂಡಿಯಾ ಸುದ್ದಿ)