ಸಂಘಟನಾ ಚತುರ ಜಗತ್ ಪ್ರಕಾಶ್ ನಡ್ಡಾ ವ್ಯಕ್ತಿಚಿತ್ರ
ಆರ್ಎಸ್ಎಸ್ನ ವಿದ್ಯಾರ್ಥಿ ಸಂಘಟನೆಯಾಗಿರುವ ಎಬಿವಿಪಿಯಿಂದ ಸಾರ್ವಜನಿಕ ಬದುಕು ಆರಂಭಿಸಿರುವ ಜೆಪಿ ನಡ್ಡಾ ಆರ್ಎಸ್ಎಸ್ ಮತ್ತು ಬಿಜೆಪಿ ಸಂಘಟನೆಯಲ್ಲಿ ಮೊದಲಿನಿಂದಲೂ ತೊಡಗಿಕೊಂಡಿದ್ದವರು. ಸಂಘಟನಾ ಚತುರ, ರಾಜಕೀಯ ತಂತ್ರಗಾರಿಕೆ ನಿಪುಣ ಎನಿಸಿಕೊಂಡ ಜಗತ್ ಪ್ರಕಾಶ್ ನಡ್ಡಾ ಅವರು ಇಂದು(ಜನವರಿ 20) ಭಾರತೀಯ ಜನತಾ ಪಕ್ಷ(ಬಿಜೆಪಿ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಾಲಿ ಅಧ್ಯಕ್ಷ ಅಮಿತ್ ಶಾ ಅವರು 2019ರ ಡಿಸೆಂಬರ್ ಅಂತ್ಯಕ್ಕೆ ತಮ್ಮ ಸ್ಥಾನದಿಂದ ಕೆಳಗಿಳಿಯುವ ಸುದ್ದಿಯಿತ್ತು. 2019ರ ಜೂನ್ ತಿಂಗಳಲ್ಲಿ ಪಕ್ಷದ ಕಾರ್ಯಕಾರಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜೆಪಿ ನಡ್ಡಾ ಅವರು ಅಧ್ಯಕ್ಷ ಪದಗ್ರಹಣ ಕಾರ್ಯಕ್ರಮವನ್ನು ದೊಡ್ಡಮಟ್ಟದಲ್ಲಿ ಆಯೋಜಿಸಲು ಬಿಜೆಪಿ ಮುಂದಾಗಿದೆ.
ನರೇಂದ್ರ ಮೋದಿಯವರ ಮೊದಲ ಅವಧಿಯ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ ನಡ್ಡಾ ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯರೂ ಆಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಪ್ರಭಾರಿಯಾಗಿ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಚುನಾವಣಾ ರಣತಂತ್ರದಲ್ಲಿ ಚತುರ
ಮೃದು ಸ್ವಭಾವಿ ನಡ್ಡಾ ಸಂಘಟನೆ ಹಾಗೂ ಚುನಾವಣಾ ರಣತಂತ್ರದಲ್ಲಿ ಚತುರರೂ ಎನಿಸಿಕೊಂಡಿದ್ದಾರೆ. ಆದರೆ ಕಾರ್ಯಾಧ್ಯಕ್ಷ ಅವಧಿಯಲ್ಲಿ ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್ನಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವುದು ಜೆಪಿ ನಡ್ಡಾ ಅವರಿಗೂ ಹಿನ್ನಡೆಯಾದಂತಾಗಿದೆ. ಈ ವರ್ಷ ನಡೆಯಲಿರುವ ದೆಹಲಿ ಹಾಗೂ ಬಿಹಾರ ವಿಧಾನಸಭಾ ಚುನಾವಣೆಯು ನಡ್ಡಾ ಅವರಿಗೆ ಅತಿ ಮುಖ್ಯವಾಗಿರಲಿದೆ.
59 ವರ್ಷ ವಯಸ್ಸಿನ ನಡ್ಡಾ ಅವರು ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಆರೋಗ್ಯ ಸಚಿವರಾಗಿದ್ದರು. ಮೋದಿ 2.0ರಲ್ಲಿ ನಡ್ಡಾ ಅವರನ್ನು ಬಿಜೆಪಿ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಅಮಿತ್ ಶಾ ಅವರು ಗೃಹ ಸಚಿವರಾಗಿದ್ದು, ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರು. ಆದರೆ, ಬಿಜೆಪಿಯಲ್ಲಿರುವ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಧ್ಯೇಯದಂತೆ ಅಮಿತ್ ಶಾ ಅವರು ನಡ್ಡಾ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.
ಕಮಾಂಡೋಗಳ ಭದ್ರತೆ
ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಝಡ್ ಶ್ರೇಣಿ ಭದ್ರತೆ ಒದಗಿಸಲಾಗಿತ್ತು. ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್) ಕಮಾಂಡೋಗಳು ಅವರಿಗೆ 24 X7 ರಕ್ಷಣೆ ಒದಗಿಸುತ್ತಿದ್ದಾರೆ. ಒಟ್ಟಾರೆ 35 ಮಂದಿ ಸಿ ಆರ್ ಪಿಎಫ್ ಕಮಾಂಡೊಗಳು ನಡ್ಡಾ ಅವರಿಗೆ ರಕ್ಷಣೆ ಒದಗಿಸಲಿದ್ದಾರೆ, ವಿವಿಧ ಪಾಳೆಯದಲ್ಲಿ ಕಾರ್ಯ ನಿರ್ವಹಿಸಲಿದ್ದು, ಪ್ರತಿ ಬಾರಿ 8 ರಿಂದ 9 ಮಂದಿ ಅವರನ್ನು ಸುತ್ತುವರೆದು ಭದ್ರತಾ ಲೋಪವಾಗದಂತೆ ನೋಡಿಕೊಳ್ಳಲಿದ್ದಾರೆ.
ದೇಶದ ಯಾವುದೇ ಭಾಗದಲ್ಲಿ ಪ್ರವಾಸ ಕೈಗೊಂಡರೂ ಕಮಾಂಡೋಗಳ ಭದ್ರತೆ ಇರಲಿದೆ. ಇದಲ್ಲದೆ, ಸಿಆರ್ ಪಿಎಫ್ ಸಿಬ್ಬಂದಿಗಳು ನಡ್ಡಾ ಅವರ ಮನೆ ಕಾವಲು ವ್ಯವಸ್ಥೆ ನೋಡಿಕೊಳ್ಳಲಿದ್ದಾರೆ.
ಪಾಟ್ನಾ ಮೂಲದ ನಡ್ಡಾ
ನಾರಾಯಣ್ ಲಾಲ್ ನಡ್ಡಾ ಹಾಗೂ ಶ್ರೀಮತಿ ಕೃಷ್ಣಾ ನಡ್ಡಾ ದಂಪತಿ ಪುತ್ರರಾಗಿ ನಡ್ಡಾ ಅವರು 1960ರ ಡಿಸೆಂಬರ್ 2ರಂದು ಜನಿಸಿದರು.ಬಿಹಾರದ ಪಾಟ್ನಾದ ಸೈಂಟ್ ಕ್ಸೇವಿಯರ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಪಾಟ್ನಾ ವಿವಿಯಿಂದ ಬಿ.ಎ ಪದವಿ ಪಡೆದರು. ಎಲ್ಎಲ್ ಬಿ ಓದಲು ಪಾಟ್ನಾದಿಂದ ಹಿಮಾಚಲ ಪ್ರದೇಶದ ವಿವಿಗೆ ಶಿಫ್ಟ್ ಆದರು.
ನಡ್ಡಾ ಅವರು ಮಲ್ಲಿಕಾ ನಡ್ಡಾ ಅವರನ್ನು ವರಿಸಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ನಡ್ಡಾ ಅವರ ಅತ್ತೆ ಸಂಸದೆ ಜಯಶ್ರೀ ಬ್ಯಾನರ್ಜಿ ಅವರು ಮಧ್ಯಪ್ರದೇಶದ ಹಿರಿಯ ಬಿಜೆಪಿ ನಾಯಕಿಯಾಗಿದ್ದಾರೆ.
ರಾಜಕೀಯ ಅನುಭವ
ಹಿಮಾಚಲ ಪ್ರದೇಶದಲ್ಲಿ 1993, 1998 ಹಾಗೂ 2007ರಲ್ಲಿ ಶಾಸಕರಾಗಿ ಆಯ್ಕೆಯಾದರು. ಹಿಮಾಚಲ ಪ್ರದೇಶ ಸರ್ಕಾರದಲ್ಲಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಖಾತೆ, ಸಂಸದೀಯ ವ್ಯವಹಾರ, ಅರಣ್ಯ, ಪರಿಸರ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಎಬಿವಿಪಿ ಸದಸ್ಯರಾಗಿದ್ದ ನಡ್ಡಾ ಅವರು ಮೊದಲ ಬಾರಿಗೆ ಹಿಮಾಚಲ ಪ್ರದೇಶದ ಶಾಸಕರಾಗಿದ್ದರು. 1975ರಲ್ಲಿ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದಕ್ಕೆ 45ದಿನಗಳ ಕಾಲ ಬಂಧನಕ್ಕೊಳಗಾಗಿದ್ದರು.ಮೇ 2010ರಲ್ಲಿ ರಾಷ್ಟ್ರೀಯ ರಾಜಕೀಯ ರಂಗಕ್ಕೆ ಕಾಲಿಟ್ಟರು. ಅಂದಿನ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಅವರು ನಡ್ಡಾ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದರು. ನಂತರ 2012ರಲ್ಲಿ ರಾಜ್ಯಸಭಾ ಸದಸ್ಯರಾದರು. 2019ರಲ್ಲಿ ಉತ್ತರಪ್ರದೇಶ ಚುನಾವಣೆ ಉಸ್ತುವಾರಿ ನೋಡಿಕೊಂಡರು. 2014 ರಿಂದ 2019ರ ಅವಧಿಯಲ್ಲಿ ಕೇಂದ್ರ ಆರೋಗ್ಯ ಸಚಿವರಾಗಿದ್ದರು.