ಝೀರೋ ಟ್ರಾಫಿಕ್ ಸೌಲಭ್ಯಕ್ಕೆ ಶಾಸಕರು ಅರ್ಹರೇ? ಅದು ಯಾರಿಗಷ್ಟೇ ಅನ್ವಯ?
ಕರ್ನಾಟಕ ವಿಧಾನಸಭೆಯಲ್ಲಿ ಬೆಳಗ್ಗೆಯಿಂದಲೂ ನಡೆಯುತ್ತಲೇ ಇದ್ದ ಚರ್ವಿತಚರ್ವಣ ವಾದ-ವಿವಾದದ ನಡುವಲ್ಲಿ ಇದ್ದಕ್ಕಿದ್ದಂತೇ ಸದ್ದು ಮಾಡಿದ್ದು ಝೀರೋ ಟ್ರಾಫಿಕ್ ನ ಸೈರನ್!
ವಿಶ್ವಾಸಮತ ಪ್ರಕ್ರಿಯೆಯಂತೂ ನಡೆಯುತ್ತದೋ ಬಿಡುತ್ತದೋ! ವಿಶ್ವಾಸಮತದ ನೆಪದಲ್ಲಿ ವಿಧಾನಸಭೆಯಲ್ಲಿ ಹಲವು ಸತ್ಯಗಳಂತೂ ಹೊರಬರುತ್ತಿವೆ. ಅದಕ್ಕೆ ಉದಾಹರಣೆ ಎಂಬಂತೆ ಜೆಡಿಎಸ್ ಶಾಸಕ ಎಟಿ ರಾಮಸ್ವಾಮಿ ಮಾತನಾಡುತ್ತ, ರಾಜೀನಾಮೆ ನೀಡಲು ಸ್ಪೀಕರ್ ಅವರನ್ನು ಭೇಟಿಯಾಗಲು ಮುಂಬೈಯಿಂದ ಬಂದ ಅತೃಪ್ತ ಶಾಸಕರಿಗೆ ವಿಮಾನ ನಿಲ್ದಾಣದಿಂದ ವಿಧಾನಸೌಧಕ್ಕೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಕೊಡಲಾಗಿತ್ತು ಎಂಬ ವಿಷಯವನ್ನು ಪ್ರಸ್ತಾಪಿಸಿದರು.
LIVE: ರಾತ್ರಿ 12 ಗಂಟೆ ಆದರೂ ಕಾಯುತ್ತೇವೆ ಇಂದೇ ಪ್ರಕ್ರಿಯೆ ಮುಗಿಯಲಿ: ಯಡಿಯೂರಪ್ಪ
ಅತೃಪ್ತ ಶಾಸಕರಿಗೆ ಝೀರೋ ಟ್ರಾಫಿಕ್ ನೀಡುವ ಅವಕಾಶ ಶಿಷ್ಟಾಚಾರದಲ್ಲಿದೆಯೇ ಎಂದು ರಾಮಸ್ವಾಮಿ ಪ್ರಶ್ನಿಸಿದರು.
ಇದಕ್ಕೆ ಸ್ಪಷ್ಟೀಕರಣ ನೀಡಲು ಮುಂದಾದ ಎಂಬಿ ಪಾಟೀಲ್ ಸ್ಪೀಕರ್ ರಿಂದ ಬೈಗುಳವನ್ನೂ ಕೇಳಬೇಕಾಯ್ತು ಅನ್ನೋದು ಬೇರೆ ವಿಚಾರ. ನಂತರ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರನ್ನು ಎಂಬಿ ಪಾಟೀಲರು ಕರೆಸಿ ಮಾತುಕತೆ ನಡೆಸಿ, ಅಂದು ಶಾಸಕರಿಗೆ ಭದ್ರತೆಯನ್ನಷ್ಟೇ ನೀಡಲಾಗಿದೆ, ಝೀರೋ ಟ್ರಾಫಿಕ್ ನೀಡಲಾಗಿಲ್ಲ ಎಂಬ ವರದಿಯನ್ನು ಸ್ಪೀಕರ್ ಗೆ ನೀಡಿದರು. ಝೀರೋ ಟ್ರಾಫಿಕ್ ವಿಷಯ ಪ್ರಸ್ತಾಪವಾಗಿದ್ದರ ಹಿನ್ನೆಲೆ ಇದು.
ಅತೃಪ್ತರಿಗೆ ಝೀರೋ ಟ್ರಾಫಿಕ್: ಎಂ.ಬಿ.ಪಾಟೀಲ್ ಮೇಲೆ ಸ್ಪೀಕರ್ ಗರಂ
ಆದರೆ ನಿಜಕ್ಕೂ ಈ ಝೀರೋ ಟ್ರಾಫಿಕ್ ಸೌಲಭ್ಯಕ್ಕೆ ಶಾಸಕರು ಅರ್ಹರೇ? ಇದು ಯಾರಿಗಷ್ಟೇ ಅನ್ವಯವಾಗುತ್ತದೆ? ಒಂದಷ್ಟು ಮಾಹಿತಿ ಇಲ್ಲಿದೆ.
ಯಾರಿಗಷ್ಟೇ ಅನ್ವಯ?
ಗೃಹ ಸಚಿವಾಲಯವು ಕೇಂದ್ರ ಭದ್ರತಾ ದಳದೊಂದಿಗೆ ನಡೆಸಿ ಸಿದ್ಧಪಡಿಸಿದ ಮಾರ್ಗಸೂಚಿಯ ಪ್ರಕಾರ ಭಾರತದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿ-ಪ್ರಧಾನಿ ಮಟ್ಟದ ಭದ್ರತೆಯನ್ನು ಪಡೆದ ವಿದೇಶಿ ಗಣ್ಯರಿಗೆ ಮಾತ್ರವೇ ಝೀರೋ ಟ್ರಾಫಿಕ್ ಸೌಲಭ್ಯ ನೀಡಬಹುದು. ಭದ್ರತೆಯ ದೃಷ್ಟಿಯಿಂದ ಈ ಗಣ್ಯರಿಗಷ್ಟೇ ಈ ಸೌಲಭ್ಯ ಅನ್ವಯ. ಆದರೆ ಈ ಕುರಿತಂತೆ ಇನ್ನಿತರ ಮಾಹಿತಿಯನ್ನು ಆರ್ ಟಿಐ ಕಾಯ್ದೆ 2005 ರ ಸೆಕ್ಷನ್ 24(1) ಮತ್ತು 8(1) ಅಡಿಯಲ್ಲಿ ಬಹಿರಂಗಪಡಿಸಲಾಗಿಲ್ಲ.
ಆರ್ ಟಿಐ ಗೆ ಅರ್ಜಿ ಸಲ್ಲಿಸಿದ್ದು ಯಾರು?
ಜಮ್ಮು ಮೂಲದ ಆರ್ ಟಿಐ ಕಾರ್ಯಕರ್ತ ದೀಪಕ್ ಶರ್ಮಾ ಎಂಬುವವರು ಆರ್ ಟಿಐಗೆ ಸಲ್ಲಿಸಿದ್ದ ಅರ್ಜಿಯಿಂದ ಎಲ್ಲ ಶಾಸಕರು, ಮಂತ್ರಿಗಳೂ ಈ ವಿಐಪಿ ಸೌಲಭ್ಯವನ್ನು ಹೊಂದಿಲ್ಲ ಎಂಬುದು ತಿಳಿದುಬಂತು. ಮುಖ್ಯಮಂತ್ರಿ ಅಥವಾ ಯಾವುದೇ ಮಂತ್ರಿಗಳ ವಾಹನ, ಬೆಂಗಾವಲು ವಾಹನಗಳು ಸಂಚರಿಸುವಾಗ ಇದ್ದಕ್ಕಿದ್ದಂತೆ ರಸ್ತೆಯನ್ನು ಝೀರೋ ಟ್ರಾಫಿಕ್ ವಲಯವನ್ನಾಗಿ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುವ ಕ್ರಮದಿಂದ ಬೇಸತ್ತಿದ್ದ ದೀಪಕ್ ಶರ್ಮಾ, ಕುತೂಹಲದಿಂದ ಅರ್ಜಿ ಸಲ್ಲಿಸಿದ್ದರು. ಆದರೆ ಮಾಹಿತಿ ಹಕ್ಕು ಇಲಾಖೆಯಿಂದ ಅವರಿಗೆ ಸಿಕ್ಕ ಪ್ರತಿಕ್ರಿಯೆ ಅಚ್ಚರಿ ಮೂಡಿಸಿತ್ತು. ಝೀರೋ ಟ್ರಾಫಿಕ್ ಸೌಲಭ್ಯಕ್ಕೆ ಅರ್ಹರಲ್ಲದವರೂ ಶಿಷ್ಟಾಚಾರ ಉಲ್ಲಂಘಿಸಿ ಆ ಸೌಲಭ್ಯ ಪಡೆಯುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿದ್ದೇ ಆಗ!
ಅಂಬುಲೆನ್ಸ್ ಗೂ ನೋ ವೇ!
"ವಿಐಪಿಗಳಿಗೆ ಸುಲಭವಾಗಿ ಸಂಚರಿಸಲು ಅನುವು ಮಾಡಿಕೊಡುವುದಕ್ಕಾಗಿ ಜನಸಾಮಾನ್ಯರಿಗೆ ತೊಂದರೆ ಉಂಟು ಮಾಡುತ್ತಿದ್ದ ಸಂಗತಿ ನನಗೆ ಬಹಳ ಕೋಪ ತರಿಸುತ್ತಿತ್ತು. ಇದರಿಂದ ಅಂಬುಲೆನ್ಸ್ ನಂಥ ತುರ್ತುನಿಗಾ ವಾಹನಗಳ ಸಂಚಾರಕ್ಕೂ ಅಡ್ಡಿಯುಂಟಾಗುತ್ತಿತ್ತು" ಎಂಬುದು ದೀಪಕ್ ಶರ್ಮಾ ಮಾತು. ಕಳೆದ ಕೆಲವು ವರ್ಷಗಳ ಹಿಂದೆ ಅಂದಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರಿಗೆ ಜೀರೋ ಟ್ರಾಫಿಕ್ ಸೌಲಭ್ಯ ನೀಡಿ, ಅಂಬುಲೆನ್ಸ್ ಅನ್ನೂ ನಿಲ್ಲಿಸಿದ್ದರಿಂದ ರೋಗಿಯೊಬ್ಬ ಹತರಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಇತ್ತೀಚೆಗೆ ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳನ್ನು ಹೊತ್ತ ಅಥವಾ ಅಂಗಾಂಗ ಕಸಿಗಾಗಿ ದೇಹದ ಅಂಗಾಂಗಗಳನ್ನು ಹೊತ್ತ ಅಂಬುಲೆನ್ಸ್ ಗಳು ಕಡಿಮೆ ಅವಧಿಯಲ್ಲಿ ಆಸ್ಪತ್ರೆ ತಲುಪಬೇಕಾಗಿರುವುದರಿಂದ ರಸ್ತೆಯ ಒಂದು ಬದಿಯನ್ನು 'ಗ್ರೀನ್ ಕಾರಿಡಾರ್' ಎಂದು ಪರಿವರ್ತಿಸಿ, ಅವಕ್ಕೆ ಸಂಚಾರಕ್ಕೆ ಅನುವು ಮಾಡಿಕೊಡುವ ವ್ಯವಸ್ಥೆ ಆರಂಭವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಕರ್ನಾಟಕದಲ್ಲಿ ಜೀರೋ ಟ್ರಾಫಿಕ್!
ಝೀರೋ ಟ್ರಾಫಿಕ್ ಗೆ ಅರ್ಹರಾದ ವ್ಯಕ್ತಿಗಳು ಯಾವುದೇ ರಾಜ್ಯಕ್ಕೆ ತೆರಳಿದರೆ ಅಲ್ಲಿ ಅವರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಆಯಾ ರಾಜ್ಯಗಳ ಪೊಲೀಸ್ ಮುಖ್ಯಸ್ಥರು ಮತ್ತು ರಾಜ್ಯ ಸರ್ಕಾರ ಚರ್ಚಿಸಿ ವ್ಯವಸ್ಥೆ ಕಲ್ಪಿಸಬೇಕು. ಆದರೆ ಕರ್ನಾಟಕದಲ್ಲಿ ಮುಖ್ಯಮಂತ್ರಿ, ಮಾಜಿ ಪ್ರಧಾನಿ, ಉಪಮುಖ್ಯಮಂತ್ರಿ... ಸೇರಿದಂತೆ ಹಲವರು ಈ ಸೌಲಭ್ಯವನ್ನು ದಿನೇ ದಿನೇ ಪಡೆಯುತ್ತಿರುವುದು ವಿಷಾದದ ವಿಷಯ!
ತುಮಕೂರಲ್ಲಿ ಗೌಡ್ರು ಸೋಲೋಕೆ ಕಾರಣ ಜೀರೋ ಟ್ರಾಫಿಕ್!
ಲೋಕಸಭೆ ಚುನಾವಣೆಯಲ್ಲಿ ತುಮಕೂರಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಮಾಜಿ ಪ್ರಧಾನಿ ದೇವೇಗೌಡರು ಅಚ್ಚರಿಯ ಸೋಲು ಕಂಡಿದ್ದರು. ಆ ನಂತರ ಮಾತನಾಡಿದ್ದ ಕಾಂಗ್ರೆಸ್ ನ ಮಾಜಿ ಶಾಸಕ ಕೆ ಎನ್ ರಾಜಣ್ಣ, "ದೇವೇಗೌಡರ ಸೋಲಿಗೆ ಝೀರೋ ಟ್ರಾಫಿಕ್ ಕಾರಣ. ತುಮಕೂರಿನವರೇ ಆದ ಉಪಮುಖ್ಯಂತ್ರಿಗಳು ಝೀರೋ ಟ್ರಾಫಿಕ್ ಸೌಲಭ್ಯ ಕಲ್ಪಿಸಿದ್ದು ಬಿಟ್ಟರೆ ಮತ್ತೇನನ್ನೂ ಮಾಡಿರಲಿಲ್ಲ. ಅದು ದೇವೇಗೌಡರ ಸೋಲಿಗೂ ಕಾರಣವಾಯಿತು" ಎಂದು ವ್ಯಂಗ್ಯವಾದ ಹೇಳಿಕೆ ನೀಡಿದ್ದರು! ತಮ್ಮ ಸಂಚಾರಕ್ಕೆ ಅನುಕೂಲವಾಗುವಂತೆ ಹಲವು ಬಾರಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ಝೀರೋ ಟ್ರಾಫಿಕ್ ಸೌಲಭ್ಯ ಪಡೆದಿದ್ದಾರೆ ಎಂಬ ಆರೋಪ ಇತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಡಾ. ಪರಮೇಶ್ವರ್, ಅದು ನನಗೆ ಸಿಕ್ಕ ಸೌಲಭ್ಯ, ನಾನು ಅದನ್ನು ಬಳಸಿಕೊಂಡರೆ ತಪ್ಪೇನು ಎಂದು ಕೇಳಿ ವಿವಾದ ಸೃಷ್ಟಿಸಿದ್ದರು.