ಉಗ್ರರ ಮೇಲಿನ ಭಾರತದ ವಾಯು ದಾಳಿ: ಯಾವ ಪತ್ರಿಕೆ ಬೆಸ್ಟ್ ಕವರೇಜ್?
ಫೆಬ್ರವರಿ ಹದಿನಾಲ್ಕನೇ ತಾರೀಕಿನಂದು ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಸಿಬ್ಬಂದಿ ಮೇಲೆ ನಡೆದ ಉಗ್ರರ ಆತ್ಮಾಹುತಿ ದಾಳಿಗೆ ಮಂಗಳವಾರ ಪ್ರತೀಕಾರವನ್ನು ಭಾರತ ಹೇಳಿದೆ. ಉರಿ ದಾಳಿಯ ನಂತರ ನಡೆದ ಸರ್ಜಿಕಲ್ ಸ್ಟ್ರೈಕ್ ಗೆ ಹೋಲಿಸಿದರೆ ಈ ಬಾರಿಯ ಕಾರ್ಯಾಚರಣೆ ಹೆಚ್ಚು ಆಕ್ರಮಣಕಾರಿಯಾಗಿತ್ತು ಎಂಬುದು ಸರಕಾರದ ಮೂಲಗಳಿಂದ ತಿಳಿದು ಬರುತ್ತಿರುವ ಮಾಹಿತಿ.
ಆದರೆ, ಭಾರತ ಹೇಳಿಕೊಂಡಂತೆ ಯಾವುದೇ ದಾಳಿ ಹಾಗೂ ಸಾವು-ನೋವು ಸಂಭವಿಸಿಯೇ ಇಲ್ಲ ಎಂಬುದು ಪಾಕಿಸ್ತಾನ ಕಡೆಯ ಸಮರ್ಥನೆ. ಆದರೂ ಮಂಗಳವಾರ ಇಡೀ ದಿನ ರಾಷ್ಟ್ರೀಯ ಭದ್ರತಾ ಸಮಿತಿ ಸಭೆ ಹಾಗೂ ಸೇನಾಧಿಕಾರಿಗಳ ಜತೆಗೆ ಸಭೆ ಹೀಗೆ ನಾನಾ ಸಭೆಗಳನ್ನು ನಡೆಸಲಾಗಿದೆ. ಇದರ ಜತೆಗೆ, ಭಾರತಕ್ಕೆ ನಾವೂ ಉತ್ತರ ನೀಡುತ್ತೇವೆ ಎಂದು ಪಾಕ್ ಹೇಳಿದೆ.
ದಿನದ ಮುಖ್ಯ ಸುದ್ದಿ: ಭಾರತದ ಪ್ರತೀಕಾರ ಹೇಗಿತ್ತು? ಪಾಕ್ ಪ್ರತಿಕ್ರಿಯೆ ಹೇಗಿತ್ತು?
ಭಾರತೀಯ ವಾಯುಸೇನೆ ಗಡಿ ನಿಯಂತ್ರಣ ರೇಖೆಯನ್ನೂ ದಾಟಿ, ನಡೆಸಿದ ಕಾರ್ಯಾಚರಣೆಯ ಬಗ್ಗೆ ಕನ್ನಡ ದಿನಪತ್ರಿಕೆಗಳು ಹೇಗೆ ವರದಿ ಮಾಡಿವೆ ಎಂಬುದನ್ನು ಒನ್ಇಂಡಿಯಾ ಕನ್ನಡ ಓದುಗರ ಮುಂದಿಡುವ ಪ್ರಯತ್ನ ಇದು. ದೊಡ್ಡ ಘಟನೆಗಳು ನಡೆದಾಗ ಹಾಗೂ ಸಂದರ್ಭಗಳಲ್ಲಿ ಈ ರೀತಿ ದಿನಪತ್ರಿಕೆಗಳ ವರದಿಗಳ ಬಗ್ಗೆ ಮಾಹಿತಿ ನೀಡುತ್ತಾ ಬರಲಾಗಿದೆ. ಇದೀಗ ಮತ್ತೊಂದು ಸಂದರ್ಭ ಬಂದಿದೆ. ಯಾವ ಕನ್ನಡ ದಿನ ಪತ್ರಿಕೆಯಲ್ಲಿ ಹೇಗಿದೆ ಕವರೇಜ್? ಮುಂದೆ ಓದಿ...
ಪ್ರಜಾವಾಣಿ
ಓದುಗರಿಗೆ ಏನನ್ನು ದಾಟಿಸಬೇಕು ಎಂಬುದನ್ನು ನಿರ್ದಿಷ್ಟವಾಗಿ, ಸ್ಪಷ್ಟ ಪದಗಳಲ್ಲಿ ತಿಳಿಸಿರುವ ಶೀರ್ಷಿಕೆ ಪ್ರಜಾವಾಣಿಯದು. ಇದು ಯಾವುದೇ ಪಕ್ಷ ಅಥವಾ ಒಂದು ಸರಕಾರದ ಯುದ್ಧ ಅಲ್ಲ. ಭಾರತವು ಉಗ್ರರ ವಿರುದ್ಧ ಮಾಡಿದ ಯುದ್ಧ. ಅದರಲ್ಲೂ ಯುದ್ಧ ಎಂಬ ಪದಕ್ಕೆ ಸಿಂಗಲ್ ಕೋಟ್ ಬಳಸಲಾಗಿದೆ. ಅದರರ್ಥ ಕೂಡ ಇದು ಪೂರ್ಣ ಪ್ರಮಾಣದ್ದಲ್ಲ ಎಂದು ಧ್ವನಿಸುವಂತಿದೆ. ಮುಖಪುಟದಲ್ಲಿ ಭಾರತ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ನಕ್ಷೆ ಜತೆಗೆ ದಾಳಿ ನಡೆದ ಸ್ಥಳಗಳು, ಸಮಯ, ಬಳಕೆಯಾದ ಯುದ್ಧ ವಿಮಾನಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಇತ್ಯಾದಿ ವಿವರಗಳ ಜತೆಗೆ ಇದು ಪುಲ್ವಾಮಾದಲ್ಲಿ ನಡೆದ ಉಗ್ರಗಾಮಿಗಳ ಕೃತ್ಯಕ್ಕೆ ನೀಡಿದ ಪ್ರತೀಕಾರ ಎಂಬುದನ್ನು ಹೇಳಲಾಗಿದೆ. ಜತೆಗೆ ಪಾಕಿಸ್ತಾನದ ಪ್ರತಿಕ್ರಿಯೆಯನ್ನು ದಾಖಲಿಸಲಾಗಿದೆ. ಏಳು ಕಾಲಂ ಶೀರ್ಷಿಕೆ: ಉಗ್ರರ ವಿರುದ್ಧ ಭಾರತ 'ಯುದ್ಧ' ಎಂಬುದು ಮೊದಲೇ ಹೇಳಿದಂತೆ ಪರಿಣಾಮಕಾರಿ ಆಗಿದೆ.
ವಿಜಯ ಕರ್ನಾಟಕ
ಸೇನೆ ಪ್ರತಿಕಾರ ದೇಶದ ಜೈಕಾರ ಎಂಬುದು ಈ ಪತ್ರಿಕೆಯ ಶೀರ್ಷಿಕೆ. ಭಾರತ ಪ್ರತಿಕಾರ ಹೇಳಿದ ನಂತರ ದೇಶದಲ್ಲಿ ಹೇಗಿದೆ ಪ್ರತಿಕ್ರಿಯೆ ಎಂಬುದನ್ನು ಸಹ ಹೇಳಲಾಗಿದೆ. ದಾಳಿ ನಡೆದಿದ್ದು ಯಾವಾಗ, ಯಾವ ಸಮಯ, ಹೇಗೆ, ಎಲ್ಲೆಲ್ಲಿ, ಅದರ ಪರಿಣಾಮ ಏನಾಯಿತು? ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಇತರರು ಈ ದಾಳಿ ಬಗ್ಗೆ ಏನು ಹೇಳಿದರು ಎಂಬ ವಿವರಗಳನ್ನು ಮುಖಪುಟದಲ್ಲಿ ನೀಡಲಾಗಿದೆ. ಇದರ ಜತೆಗೆ ಪಾಕ್ ನಿಂದ ಮುಂದಿನ ನಡೆ ಏನಾಗಬಹುದು ಎಂಬುದರ ಆಯ್ಕೆಗಳನ್ನು ಸಹ ಮುಂದಿಡಲಾಗಿದೆ. ದಾಳಿಯ ಮಾಹಿತಿ ಮೊದಲು ಇಡೀ ಜಗತ್ತಿಗೆ ತಿಳಿಸಿದ್ದು ಪಾಕಿಸ್ತಾನ, ಬಾಲಾಕೋಟ್ ನ ಗುರಿ ಮಡಿಕೊಂಡಿದ್ದು ಏಕೆ ಇತ್ಯಾದಿ ವಿವರ ಸೇರಿ ಮಾಹಿತಿ ಭರಪೂರ ಇದೆ. ಇಲ್ಲೂ ಏಳು ಕಾಲಂನ ಶೀರ್ಷಿಕೆ ನೀಡಲಾಗಿದೆ.
ಮೋದಿ ಸೇನೆಗೆ ಜೈ ಹೋ
ಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿ
ವಿಜಯವಾಣಿ
ಈಗಿನ ದಾಳಿಯ ಯಶಸ್ಸು ಯಾರಿಗೆ ಸೇರಬೇಕು? ದಾಳಿ ಮಾಡಿದ ಸೈನಿಕರಿಗೋ ಅಥವಾ ಅಂಥ ದಾಳಿ ನಡೆಸುವುದಕ್ಕೆ ಪೂರ್ಣ ಸಹಕಾರ ನೀಡಿದ ಪ್ರಧಾನಿ ಮೋದಿಗೋ? ಮೊದಲು ಪ್ರಧಾನಿ ಮೋದಿಗೆ ನೀಡಿ, ಸೇನೆಗೂ ನೀಡುವ ಕೆಲಸ ಈ ಪತ್ರಿಕೆಯಲ್ಲಿ ಆಗಿದೆ. ಏಳು ಕಾಲಂನ ಶೀರ್ಷಿಕೆ: ಮೋದಿ ಸೇನೆಗೆ ಜೈ ಹೋ ಎಂದಿದೆ. ಯಾವುದೇ ಸೇನೆ ಭಾರತದ್ದಾಗಿರುತ್ತದೆ. ಆದರೂ ಮೋದಿ ಸೇನೆ ಎಂದು 'ಸೇನೆ' ಎಂಬ ಪದಕ್ಕೆ ಕೆಂಪು ಬಣ್ಣ ನೀಡಿ, ಮೋದಿಗೆ ಜೈ ಹೋ ಅಂತಲೂ ಹೇಳಲು ಪ್ರಯತ್ನಿಸಿದಂತಿದೆ. ಪುಲ್ವಾಮಾ ದಾಳಿಗೆ ಪ್ರತೀಕಾರ, ಇಪ್ಪತ್ತೊಂದು ನಿಮಿಷದ ದಾಳಿ, ಜೈಷ್ ತರಬೇತಿ ಕೇಂದ್ರ ಧ್ವಂಸ ಇತ್ಯಾದಿ ಮಾಹಿತಿಗಳು ಇವೆ. ಜತೆಗೆ ಸಿದ್ಧತೆ ಹೇಗಿತ್ತು ಎಂಬುದು ಕೂಡ ಸೇರಿಸಿಕೊಳ್ಳಲಾಗಿದೆ. ಅಂಕಿಗಳಲ್ಲಿ ಕೆಲವು ಮಾಹಿತಿ ನೀಡಲಾಗಿದೆ.
ಕನ್ನಡಪ್ರಭ
ಕನ್ನಡಪ್ರಭದ ಸಂಪಾದಕರಾಗಿರುವ ರವಿ ಹೆಗಡೆ ಅವರದು ಯಾವಾಗಲೂ ಸಿಗ್ನೇಚರ್ ನಂಥ ಪ್ರಯತ್ನ ಹಾಗೂ ಆಲೋಚನೆ. ಈ ದಿನದ ಪುಟ ವಿನ್ಯಾಸ ಅಂಥದ್ದೇ ಪ್ರಯತ್ನವಾಗಿದೆ. 'ನಮೋ ವಾಯುಸೇನಾ' ಎಂದು ಬ್ಯಾನರ್ ಹೆಡ್ ಲೈನ್ ನೀಡಲಾಗಿದೆ. 'ನಮೋ' ಪದ ಬಳಕೆಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ. ಸಾಂಪ್ರದಾಯಿಕವಾದ ಪುಟ ವಿನ್ಯಾಸವನ್ನು ಮೀರಿ ರೂಪಿಸಿರುವ ಮೊದಲ ಪುಟವಿದು. ಅಂಕಿಗಳಲ್ಲಿ ಮಾಹಿತಿ, ಪಾಕ್ ಗೆ ಮುಂದಿರುವ ಆಯ್ಕೆಗಳು, ದಾಳಿಯ ಕ್ಷಣಗಳು ಇತ್ಯಾದಿ ಮಾಹಿತಿಗಳಿವೆ. ಇದರ ಜತೆಗೆ ನಕ್ಷೆಯನ್ನು ಹಾಗೂ ಮಾಸ್ಟ್ ಹೆಡ್ ನ ಕೆಳಗೆ ವಿಮಾನವೊಂದು ಉದ್ದೋಉದ್ದಕ್ಕೆ ಹಾರುತ್ತಿರುವ ಫೋಟೋ ಇದೆ. ಮೊದಲೇ ಹೇಳಿದ ಹಾಗೆ ಇದು ಸಂಪಾದಕ ರವಿ ಹೆಗಡೆ ಅವರ ಮಾದರಿ. ಶೀರ್ಷಿಕೆಗೆ ಕಡಿಮೆ ಪದ ಬಳಸಬೇಕು. ತುಂಬ ದಪ್ಪಕ್ಷರಗಳಲ್ಲಿ ಎಂಟೂ ಕಾಲಂ ಹೆಡ್ಡಿಂಗ್ ಬರಬೇಕು. ಜತೆಗೆ ಮುಖ್ಯವಾದ ಮಾಹಿತಿಗಳೂ ದಪ್ಪಕ್ಷರಗಳಲ್ಲಿ ಓದುಗರ ಕಣ್ಣು ಸೆಳೆಯುವಂತಿರಬೇಕು. ಅವೆಲ್ಲವೂ ಈ ಬಾರಿಯೂ ಅನ್ವಯ ಆಗಿವೆ.
ನಮ್ಮ ನೆಲೆ ಮೇಲೆ ಭಾರತ ದಾಳಿ ಮಾಡಿದ್ದು ಸತ್ಯ: ಜೈಷ್ ಉಗ್ರ ಮಸೂದ್
ಉದಯವಾಣಿ
ಜೈಶಾಸುರ ಸಂಹಾರ- ಜೈ ಹಿಂದ್ ಎಂಬ ಶೀರ್ಷಿಕೆ ನೀಡಲಾಗಿದೆ. ಮೂರು ಕಾಲಂನಲ್ಲಿ ಹೆಡ್ಡಿಂಗ್ ಇದ್ದು, ಭಾರತ ಹಾಗೂ ಪಾಕಿಸ್ತಾನದ ಮುಂದೆ ಇರುವ ಆಯ್ಕೆಗಳೇನು ಎಂಬುದನ್ನು ನೀಡಲಾಗಿದೆ. ಇನ್ ಫೋಗ್ರಾಫಿಕ್ಸ್ ಚೆನ್ನಾಗಿ ಮಾಡಿದ್ದಾರೆ ಮತ್ತು ಅದರ ಬಳಕೆ ಬಹಳ ಚೆನ್ನಾಗಿ ಆಗಿದೆ. ದಾಲಿಯ ಸಮಯ, ಸ್ಥಳ ಇತ್ಯಾದಿ ವಿವರಗಳನ್ನು ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಎದ್ದು ಕಾಣುವಂತೆ ದಪ್ಪ ಅಕ್ಷರಗಳಲ್ಲಿ ಹಾಕಲಾಗಿದೆ. ವಿಭಿನ್ನವಾದ ಪ್ರಯತ್ನ ಎನಿಸುವುದು ಮೊದಲ ಮೂರು ಸಾಲುಗಳಲ್ಲಿ ಪತ್ರಿಕೆ ಅಭಿಪ್ರಾಯ ಹಾಗೂ ದೇಶಾದ್ಯಂತ ವ್ಯಕ್ತವಾಗುತ್ತಿರುವ ಶ್ಲಾಘನೆ ಎರಡನ್ನೂ ಹೇಳಿದ ರೀತಿಗೆ.
ವಿಶ್ವವಾಣಿ
ಪ್ರತ್ಯುತ್ತರ ಪಾಕ್ ತತ್ತರ ಎಂದು ಐದು ಕಾಲಂನಷ್ಟು ಜಾಗ ಬಳಸಿಕೊಂಡು ಎರಡು ಸಾಲಿನ ಶೀರ್ಷಿಕೆ ನೀಡಲಾಗಿದೆ. ಈ ದಾಳಿಯಲ್ಲಿ ಬಳಕೆಯಾದ ಮಿರಾಜ್ ವಿಮಾನ ವೈಶಿಷ್ಟ್ಯ ತಿಳಿಸುವುದಕ್ಕೆ ಸಾಕಷ್ಟು ಸ್ಥಳ- ವಿಷಯ ಮೀಸಲಿಡಲಾಗಿದೆ. ಈಗಿನ ಓದುಗರ ಓದುವ ಆಸಕ್ತಿಯನ್ನು ತುಂಬ ಚೆನ್ನಾಗಿ ಗ್ರಹಿಸಿ, ರೂಪಿಸಿದ ಮುಖಪುಟ ಇದು. ಸಣ್ಣ ವಾಕ್ಯಗಳ ಮೂಲಕ, ಬಿಡಿಬಿಡಿಯಾಗಿ ಓದುಕೊಂಡರೂ ಅರ್ಥ ಮಾಡಿಕೊಳ್ಳುವಂತೆ, ಇಷ್ಟೆಲ್ಲ ಓದಬೇಕಾ ಎಂಬ ಪ್ರಶ್ನೆ ಬಾರದಂತೆ ತುಂಬ ಚೆನ್ನಾಗಿ ರೂಪಿಸಲಾಗಿದೆ. ಸದ್ಯದ ಕಾಲಘಟ್ಟಕ್ಕಿಂತ ಮುಂದಿನ ಕೆಲ ವರ್ಷಕ್ಕೆ ಹೀಗಾಗಬಹುದು ಎಂದು ಯೋಚಿಸುವುದಕ್ಕೆ ಇದು ಒಂದು ಮಾದರಿ. ಸಾಂಪ್ರದಾಯಿಕ ಪುಟ ವಿನ್ಯಾಸ ಬಯಸುವವರಿಗೆ ಇದು ಇಷ್ಟವಾಗಬಹುದಾ? ಗೊತ್ತಿಲ್ಲ. ಆದರೆ ಮಾಹಿತಿ ಬಯಸುವ, ಹೆಚ್ಚು ಸಮಯ ಇರದ ಎರಡೂ ಬಗೆಯ ಓದುಗರಿಗೆ ಒಳ್ಳೆ ಆಯ್ಕೆ ವಿಶ್ವವಾಣಿ.
ಸರ್ಜಿಕಲ್ ಸ್ಟ್ರೈಕ್: ಸುಳ್ಳಿನ ಸರಮಾಲೆ ಕಟ್ಟಿ ಕೊನೆಗೆ ಸತ್ಯ ಒಪ್ಪಿಕೊಂಡ ಪಾಕ್
ಹೊಸದಿಗಂತ
ವಾಹ್! ಹೊಸದಿಗಂತ ಮುಖಪುಟದ ಬಗ್ಗೆ ಹೇಳಬಹುದಾದದ್ದು. ಮಾಸ್ಟ್ ಹೆಡ್ ನ ಸುತ್ತ ಅಂಕಿಗಳು, ವಿಮಾನ, ನರೇಂದ್ರ ಮೋದಿ ಹೇಳಿಕೆ ಹೀಗೆ ಸೊಗಸಾಗಿ ರೂಪಿಸಲಾಗಿದೆ. ಕಣ್ಣಿಗೆ ಕೂಡ ಹೆಚ್ಚು ರಾಚದಂಥ ಬಣ್ಣ ಬಳಸಲಾಗಿದೆ. ಇನ್ನು ಬ್ಯಾನರ್ ಹೆಡ್ ಲೈನ್ 'ಉಗ್ರ ಸಂಹಾರ' ಎಂದಿದೆ. ಶೀರ್ಷಿಕೆ ಕೆಳಗೆ ಪುಲ್ವಾಮಾ ದಾಳಿ ಪ್ರತೀಕಾರ ಮತ್ತಿತರ ಮಾಹಿತಿ ಇದೆ. ದಾಳಿ ನಡೆಸಿದ ಸ್ಥಳ, ಸಮಯದ ಬಗ್ಗೆ ಮತ್ತು ಪಾಕಿಸ್ತಾನದ ಪ್ರತಿಕ್ರಿಯೆ ಕೂಡ ಹಾಕಲಾಗಿದೆ. ಅಂತರರಾಷ್ಟ್ರೀಯ ಮಟ್ಟದ ಪತ್ರಿಕೆಯ ಪುಟ ವಿನ್ಯಾಸ ಮಾದರಿಯನ್ನು ಸ್ಥಳೀಯವಾಗಿ ಒಗ್ಗಿಸಿಕೊಂಡರೆ ಹೇಗೆ ಅದ್ಭುತವಾಗಿ ಮಾಡಬಹುದು ಎಂಬಂತೆ ಅನಿಸುತ್ತದೆ. ಪುಟ ವಿನ್ಯಾಸ ಮಾಡಿದವರು ಶ್ಲಾಘನೆಗೆ ಅರ್ಹರು. ಮಾಹಿತಿ ಆಯ್ಕೆ ಹಾಗೂ ಸ್ಥಳ ವ್ಯರ್ಥ ಆಗುತ್ತದೆ ಎಂದು ಯೋಚಿಸದೆ ಪುಟ ವಿನ್ಯಾಸವನ್ನು ಒಪ್ಪಿಕೊಂಡ ಸಂಪಾದಕರ ಧೈರ್ಯವನ್ನು ಸಹ ಮೆಚ್ಚಬೇಕು.
ವಾರ್ತಾ ಭಾರತಿ
ಮತ್ತೆ ಸರ್ಜಿಕಲ್ ಸ್ಟ್ರೈಕ್ ಎಂಬ ಶೀರ್ಷಿಕೆ ನೀಡಲಾಗಿದೆ. ಪತ್ರಿಕೋದ್ಯಮದ ಮೊದಲ ಪಾಠವಾದ 'ಸಮತೋಲನ' ಎಂಬುದನ್ನು ಸರಿಯಾಗಿ ಹೇಳುವಂಥ ಮಾಹಿತಿಗಳು ಇವೆ. ಇದು ಸರ್ಜಿಕಲ್ ಸ್ಟ್ರೈಕ್. ಈ ಬಗ್ಗೆ ವಿವರಗಳಿವೆ. ವಾಯು ಪಡೆ ಏನು ಹೇಳಿದೆ, ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಏನು ಹೇಳಿದೆ? ಪ್ರಧಾನಿ ನರೇಂದ್ರ ಮೋದಿ ಹೇಳಿಕೆ, ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಪತ್ರಿಕಾಗೋಷ್ಠಿ, ದಾಳಿ ನಡೆದ ಸ್ಥಳ, ಸಮಯ ಹಾಗೂ ನಕ್ಷೆ ಜತೆಗೆ ಮುಖ ಪುಟದಲ್ಲಿ ಹಾಕಲಾಗಿದೆ. ಪಾಕಿಸ್ತಾನದ ಜನತೆಗೆ ಪ್ರಧಾನಿ ಇಮ್ರಾನ್ ಖಾನ್ ಏನು ಹೇಳಿದ್ದಾರೆ ಎಂಬುದು ಸಹ ಮೊದಲ ಪುಟದಲ್ಲಿ ಇದೆ.
ಉಗ್ರರ ಬೇಟೆಗೆ ವಾಯುಪಡೆ ಬಳಸಿದ್ದು 1.7 ಕೋಟಿ ಮೌಲ್ಯದ ಬಾಂಬ್!
ಸಂಯುಕ್ತ ಕರ್ನಾಟಕ
ಕನ್ನಡದಲ್ಲಿ ಉಳಿದೆಲ್ಲ ಪತ್ರಿಕೆಗಿಂತ ವಿಭಿನ್ನವಾದ ಪ್ರಯತ್ನ್ ಸಂಯುಕ್ತ ಕರ್ನಾಟಕ ಮಾಡಿದೆ. ಮುಕ್ಕಾಲು ಪುಟವನ್ನು ಈ ಘಟನೆಗೆ ಮೀಸಲಿಟ್ಟಿದೆ. ಸರ್ಜಿಕಲ್ ಸ್ಟ್ರೈಕ್ ಎರಡು, ಜೈ ಹೋ, ಸೊಕ್ಕಿದ ಪಾಕ್ ಗೆ ಗರ್ವಭಂಗ, ಬಿಲಕ್ಕೆ ಗುರಿ 300 ಹರಕೆಯ ಕುರಿ ಎಂಬ ಶೀರ್ಷಿಕೆ ನೀಡಲಾಗಿದೆ. ಪುಟ ವಿನ್ಯಾಸ ಮಾಡಿದ ರೀತಿ, ಪ್ರಯತ್ನ ಎಲ್ಲವೂ ಚೆನ್ನಾಗಿದೆ. ಆದರೆ ಯಾವುದನ್ನು ಓದುಗರಿಗೆ ಹೇಳಬೇಕು ಎಂಬುದರ ಪ್ರಸ್ತಾವವೇ ಇಲ್ಲ. ಘಟನೆ ಬಗ್ಗೆ ಮಾಹಿತಿಯೇ ಇಲ್ಲದ ಓದುಗರು ಇದನ್ನು ಓದಿದರೆ ಏನು ಹೇಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂಬುದು ತಿಳಿಯುವುದಿಲ್ಲ.