ಕರ್ನಾಟಕ ರಾಜಕೀಯ ದೊಂಬರಾಟ, ಮತಹಾಕಿದ ಮತದಾರರ ಸಂಕಟ
Recommended Video
ಕರ್ನಾಟಕದ ಸದ್ಯದ ರಾಜಕೀಯ ಎಷ್ಟು ಗಬ್ಬೆದ್ದು ಹೋಗಿದೆಯೆಂದರೆ, ಇದನ್ನು ಸದ್ಯಕ್ಕೆ ಶುದ್ಧಗೊಳಿಸುವುದು ಆ ದೇವರಿಂದಲೂ ಸಾಧ್ಯವಿಲ್ಲ. ಮುಂದೆ ಏನಾಗಲಿದೆ, ಸರಕಾರ ಉರುಳುವುದೋ, ಉಳಿಯುವುದೋ, ಬಿಜೆಪಿ ಸರಕಾರವೋ, ರಾಷ್ಟ್ರಪತಿ ಆಳ್ವಿಕೆಯೋ ಎಂಬುದನ್ನು ಊಹಿಸುವುದು ಬ್ರಹ್ಮನಿಗೂ ಸಾಧ್ಯವಿಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ರಾಜಕಾರಣಿಗಳ ದೊಂಬರಾಟ ನೋಡಿ ಮತ ಹಾಕಿದ ಮತದಾರರೇ ಹತಾಶರಾಗಿದ್ದಾರೆ, ರೊಚ್ಚಿಗೆದ್ದಿದ್ದಾರೆ, ಛೀ ಥೂ ಎಂದು ಉಗಿಯುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿನ ಶಾಸಕರ ಗಣಿತ ಕ್ಷಣಕ್ಷಣಕ್ಕೂ ಲೆಕ್ಕತಪ್ಪುತ್ತಿದೆ. ಇದರ ಲೆಕ್ಕಾಚಾರ ತೆರೆಮರೆಯಲ್ಲಿಯೇ ದಾಳ ಉರುಳಿಸುತ್ತಿರುವ ಬಿಜೆಪಿಗೂ ದಕ್ಕುತ್ತಿಲ್ಲ.
ಹೋಗಲಿ, ಈ ಗೊಂದಲಗಳೇ ಬೇಡ, ಮೈತ್ರಿ ಸರಕಾರವನ್ನು ಕಿತ್ತುಹಾಕಿ, ಬಿಜೆಪಿಗೆ ಸರಕಾರ ರಚಿಸಲು ಅವಕಾಶ ನೀಡುವುದಾ ಅಥವಾ ವಿಧಾನಸಭೆಯನ್ನು ವಿಸರ್ಜಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಿ, ಮತ್ತೊಂದು ವಿಧಾನಸಭೆ ಚುನಾವಣೆಗೆ ನಾಂದಿ ಹಾಡುವುದಾ? ಎಂದರೆ ಅದಕ್ಕೆ ಕೂಡ ಸೂಕ್ತವಾದ ವಾತಾವರಣ ಸೃಷ್ಟಿಯಾಗಿಲ್ಲ.
ಸರ್ಕಾರದ ಭವಿಷ್ಯ ನಿರ್ಧಾರ, ಸ್ಪೀಕರ್ ರಮೇಶ್ ಮುಂದಿರುವ 7 ಆಯ್ಕೆಗಳು
ಅಧಿಕಾರ ಲಾಲಸೆ, ಒಳಜಗಳ, ಕಾಲೆಳೆತ, ಸ್ವಜನ ಪಕ್ಷಪಾತ, ಅನುದಾನ ಹಂಚಿಕೆಯಲ್ಲಿ ತಾರತಮ್ಯ, ನೆಗೆದುಬಿದ್ದ ಅಭಿವೃದ್ಧಿ, ಮೊಸಳೆ ಕಣ್ಣೀರು, ಆಪರೇಷನ್ ಕಮಲ, ಕುದುರೆ ವ್ಯಾಪಾರ ಮುಂತಾದವು ಕರ್ನಾಟಕದ ರಾಜಕೀಯವನ್ನು ವ್ಯಾಖ್ಯಾನಿಸುತ್ತಿವೆ. ಯಾರು ಯಾಕೆ ರಾಜೀನಾಮೆ ನೀಡುತ್ತಿದ್ದಾರೆ ಎಂಬುದೇ ಗೊತ್ತಿಲ್ಲದೆ, ಇಡೀ ವಾತಾವರಣ ಕಲುಷಿತಗೊಂಡಿದೆ.
ಮೈತ್ರಿ ಸರಕಾರದ ವಿರುದ್ಧ ಸಿಡಿದೆದ್ದಿರುವ ಶಾಸಕರು
ಮೇಲ್ನೋಟಕ್ಕೆ ಆಡಳಿತ ವಿರೋಧಿ ಅಲೆ ದಿಟ್ಟವಾಗಿ ಕಾಣಿಸುತ್ತಿದ್ದು, ಮಂತ್ರಿಗಿರಿ ಸಿಗದೆ, ಅನುದಾನ ಸಿಗದೆ, ಮರ್ಯಾದೆ ಸಿಗದೆ, ನಿರ್ಲಕ್ಷಿತಗೊಂಡಿರುವ ಶಾಸಕರ ಒಂದು ಹಿಂಡು ಮೈತ್ರಿ ಸರಕಾರದ ವಿರುದ್ಧ ಸಿಡಿದೆದ್ದಿರುವಂತೆ ಗೋಚರಿಸುತ್ತಿದೆ. ಆದರೆ ಹಿನ್ನೆಲೆಯಲ್ಲಿ, ಭಿನ್ನಮತೀಯರನ್ನು ತನ್ನ ಬುಟ್ಟಿಗೆ ಭಾರತೀಯ ಜನತಾ ಪಕ್ಷದ ಹೈಕಮಾಂಡ್ ಹಾಕಿಕೊಂಡಿರುವುದು ಸ್ಪಷ್ಟವಾಗಿದೆ. ನಮಗೂ ಭಿನ್ನಮತೀಯರ ರಾಜೀನಾಮೆಗೂ ಸಂಬಂಧವಿಲ್ಲ ಎಂದು ಬಿಜೆಪಿ ನಾಯಕರು ಎಷ್ಟೇ ಬೊಂಬಬಾ ಬಜಾಯಿಸಿಕೊಳ್ಳುತ್ತಿದ್ದರೂ ನಂಬುವವರು ಯಾರೂ ಇಲ್ಲ. ಇದಕ್ಕೆ ಸಾಕ್ಷಿಯೆಂಬಂತೆ, ಬಿಜೆಪಿಯ ಕೆಲ ಎರಡನೇ ದರ್ಜೆಯ ನಾಯಕರೇ ಈ ಅತೃಪ್ತರ ಜೊತೆ ಕಾಣಿಸಿಕೊಂಡಿರುವುದು ಎಲ್ಲ ಸುಳ್ಳುಗಳನ್ನು ಸತ್ಯವಾಗಿಸಿದೆ. ಮೈತ್ರಿ ಸರಕಾರವನ್ನು ಈ ರೀತಿ ಉರುಳಿಸಿ ಸರಕಾರ ಸ್ಥಾಪಿಸುವ ಶ್ರೀಮಾನ್ ಯಡಿಯೂರಪ್ಪ ಅವರ ತಂತ್ರಗಾರಿಕೆ ನಿಚ್ಚಳವಾಗಿದ್ದು, ಕೈಗೂಡುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.
ರಾಜೀನಾಮೆ ನೀಡಿರುವ ಶಾಸಕರಿಗೆ ಕೊನೆ ಎಚ್ಚರಿಕೆ ಕೊಟ್ಟ ಸಿದ್ದರಾಮಯ್ಯ
ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ
ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಘಟಾನುಘಟಿ ನಾಯಕರು ಚಳ್ಳೆಹಣ್ಣು ತಿನ್ನಲು ಸಿದ್ಧರಾಗಿ ಕುಳಿತಿಲ್ಲ. ಬಿಜೆಪಿಯ ತಂತ್ರ, ಕುತಂತ್ರಕ್ಕೆ ಪ್ರತಿತಂತ್ರ ಹೂಡಲು ಸಿದ್ಧರಾಗಿದ್ದಾರೆ. ಯಾವುದೇ ಕಾರಣಕ್ಕೂ ಮೈತ್ರಿ ಸರಕಾರ ಉರುಳಬಾರದು, ಬಿಜೆಪಿಗೆ ಅಧಿಕಾರ ಸಿಗಬಾರದು ಎನ್ನುವ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಜರುಗಿಸುತ್ತಿದ್ದಾರೆ. ತಮ್ಮ ಕ್ಷೇತ್ರ ಉದ್ಧಾರವಾಗಿಲ್ಲವೆಂದೋ, ಕಡೆಗಣಿಸಲಾಗಿದೆಯೆಂದೋ, ಮಂತ್ರಿಗಿರಿ ಸಿಕ್ಕಿಲ್ಲವೆಂದೋ ಮುನಿಸಿಕೊಂಡು, ರಾಜೀನಾಮೆ ಬಿಸಾಕಿ ಮುಂಬೈಗೆ ಹಾರಿರುವ ಶಾಸಕರನ್ನು ಮನವೊಲಿಸುವ ಪ್ರಯತ್ನ ನಡೆದಿದೆ. ಮತ್ತೊಂದೆಡೆ, ಅತೃಪ್ತರಿಗೆ ಮಂತ್ರಿಗಿರಿ ನೀಡಬೇಕೆಂದು ಹಲವಾರು ಸಚಿವರು ರಾಜೀನಾಮೆ ನೀಡಿದ್ದಾರೆ. ಜೊತೆಗೆ, ರಾಜೀನಾಮೆ ನೀಡಿರುವ ಎಲ್ಲರೂ ಖುದ್ದಾಗಿ ರಾಜೀನಾಮೆ ಪತ್ರ ನೀಡದಿದ್ದರೆ ಯಾವುದೇ ರಾಜೀನಾಮೆಯನ್ನು ಸ್ವೀಕರಿಸುವುದಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಅವರು ಅತೃಪ್ತರಿಗೆ ಗೂಗ್ಲಿ ಎಸೆದಿದ್ದಾರೆ.
ಮಧ್ಯಂತರ ಚುನಾವಣೆ ನಮ್ಮ ಆಯ್ಕೆ ಅಲ್ಲ: ಯಡಿಯೂರಪ್ಪ
ಕೈಕಟ್ಟಿ ಕುಳಿತಿರುವ ಕುಮಾರಸ್ವಾಮಿ
ಇದು ಮೈತ್ರಿ ಸರಕಾರದ ಅಸಾಮರ್ಥ್ಯ ಎಂದು ಕಣ್ಣಿಗೆ ಕಂಡರೂ, ಮೈತ್ರಿಯಲ್ಲಿಯೇ ಬಿರುಕುಗಳು ಬಿಟ್ಟಿವೆ. ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರ ಮಂತ್ರಿಮಂಡಲದಲ್ಲಿರುವ ಕೆಲ ಜೆಡಿಎಸ್ ನಾಯಕರ ನಿರ್ಲಕ್ಷ್ಯದಿಂದ ಹಲವಾರು ಕಾಂಗ್ರೆಸ್ ನಾಯಕರು ಸಿಡಿದೆದಿದ್ದಾರೆ. ಇದನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೂಡ ಕೆಲವರು ಹೇಳಿದ್ದಾರೆ. ಇಷ್ಟೆಲ್ಲ ದೊಂಬರಾಟಗಳು ನಡೆದಿದ್ದಾಗ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಅಮೆರಿಕದಿಂದಲೇ ಎಲ್ಲವನ್ನೂ ಸಂಭಾಳಿಸುವ, ಸರಿದಾರಿಗೆ ತರುವ ಪ್ರಯತ್ನವನ್ನೂ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಾಗಿ ಮಂತ್ರಿಮಂಡಲದಲ್ಲಿರುವ ಜೆಡಿಎಸ್ ಸಚಿವರು ಕೂಡ ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ. ಆದರೆ, ಶಾಸಕರ ರಾಜೀನಾಮೆಯಿಂದ ಅಲ್ಪಮತಕ್ಕೆ ಕುಸಿಯುವ ಭೀತಿಯಲ್ಲಿರುವ ಮೈತ್ರಿ ಸರಕಾರವನ್ನು ಉಳಿಸಲು ಕುಮಾರಸ್ವಾಮಿ ಅವರಿಗಾಗಲಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಾಗಲಿ ಏನೂ ಮಾಡಲಾಗದೆ ಕೈಕಟ್ಟಿ ಕುಳಿತುಕೊಳ್ಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ, ಜೆಡಿಎಸ್ ನಿಂದಲೂ ಮೂವರು ರಾಜೀನಾಮೆ ಸಲ್ಲಿಸಿದ್ದಾರೆ.
ಸ್ಪೀಕರ್ ಬತ್ತಳಿಕೆಯಲ್ಲಿ ಯಾವ ಅಸ್ತ್ರವಿದೆಯೋ?
ಸದ್ಯಕ್ಕೆ ಚೆಂಡು ರಾಜ್ಯಸಭಾ ಅಧ್ಯಕ್ಷ ರಮೇಶ್ ಕುಮಾರ್ ಅವರ ಅಂಗಳದಲ್ಲಿದೆ. ಇಂಥ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ನಿಪುಣರಾಗಿರುವ, ಜಾಣ ಮಾತುಗಾರ ರಮೇಶ್ ಕುಮಾರ್ ಅವರು, ತಮ್ಮದೇ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ರಾಜೀನಾಮೆ ಸಲ್ಲಿಸಿದವರು ಖುದ್ದಾಗಿ ಬಂದು ರಾಜೀನಾಮೆ ಪತ್ರ ಸಲ್ಲಿಸದಿದ್ದರೆ ಸ್ವೀಕರಿಸುವುದಿಲ್ಲ ಎಂದು ಹಠಕ್ಕೆ ಕುಳಿತಿದ್ದಾರೆ. ಅಂದ ಹಾಗೆ, ರಾಜೀನಾಮೆ ಪತ್ರಗಳನ್ನು ಸ್ವೀಕರಿಸಿ, ಸ್ವೀಕಾರ ಪತ್ರ ನೀಡುವಂತೆ ತಮ್ಮ ಆಪ್ತ ಕಾರ್ಯದರ್ಶಿಗೆ ಆದೇಶ ನೀಡಿದವರೇ ರಮೇಶ್ ಕುಮಾರ್. ರಾಜೀನಾಮೆ ಸಲ್ಲಿಸಿದವರು ಯಾವುದೇ ಒತ್ತಡಕ್ಕೆ, ಆಮಿಷಕ್ಕೆ ಒಳಗಾಗದೆ, ಸ್ವಇಚ್ಛೆಯಿಂದ ನೀಡಿದ್ದಾರೆ ಎಂದು ಖಚಿತಪಡಿಸಿಕೊಳ್ಳುವ ಅಧಿಕಾರ ರಮೇಶ್ ಕುಮಾರ್ ಅವರಿಗಿದೆ. ಇದೇ ತಂತ್ರಗಾರಿಕೆಯನ್ನು ಅವರು ಉಮೇಶ್ ಜಾಧವ್ ಅವರು ರಾಜೀನಾಮೆ ಸಲ್ಲಿಸಿದಾಗಲೂ ಅನುಸರಿಸಿದ್ದರು. ಆದರೆ, ಅತೃಪ್ತರು ಖುದ್ದಾಗಿ ಬಂದು ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ಸಲ್ಲಿಸುತ್ತಾರಾ? ಎಂಬುದೇ ಬಗೆಹರಿಯದ ಪ್ರಶ್ನೆಯಾಗಿದೆ. ಅಲ್ಲದೆ, ಅತೃಪ್ತರ ವಿರುದ್ಧ ಸ್ಪೀಕರ್ ಅವರಿಗೆ ಪಕ್ಷವಿರೋಧಿ ಚಟುವಟಿಕೆಯ ದೂರು ಕೂಡ ನೀಡಲು ಕಾಂಗ್ರೆಸ್ ಸಿದ್ಧವಾಗಿದ್ದು, ಅವರೊಂದು ವೇಳೆ ಅನರ್ಹಗೊಂಡರೆ ತ್ರಿಶಂಕು ಸ್ಥಿತಿಯನ್ನು ಅತೃಪ್ತರು ತಲುಪಲಿದ್ದಾರೆ.
ರಾಜ್ಯಪಾಲರು ಏನು ಕ್ರಮ ಜರುಗಿಸಲಿದ್ದಾರೆ?
ಇದೆಲ್ಲ ಬಹನ್ನಾಟಕವನ್ನು ರಾಜ್ಯಪಾಲರು ವಜುಭಾಯಿ ವಾಲಾ ಅವರು ಗಮನಿಸುತ್ತಿದ್ದಾರೆ. ಅವರಿನ್ನೂ ಅಂಗಳಕ್ಕಿಳಿಯುವ ಪರಿಸ್ಥಿತಿ ಉದ್ಭವವಾಗಿಲ್ಲ. ಆದರೆ, ಪರಿಸ್ಥಿತಿ ವಿಪರೀತಕ್ಕೆ ಹೋದರೆ ಮತ್ತು ಮೈತ್ರಿ ಸರಕಾರಕ್ಕೆ ಬಹುಮತವಿಲ್ಲ ಎಂದು ಕಂಡುಬಂದರೆ, ಅವರಿಗೆ ಬಹುಮತ ಸಾಬೀತುಪಡಿಸಲು ಆದೇಶಿಸಬಹುದು. ಅದು ಸಾಧ್ಯವಾಗದಿದ್ದರೆ, ಅತಿದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಸರಕಾರ ರಚಿಸಲು ಆಹ್ವಾನವನ್ನೂ ನೀಡುವ ಸಾಧ್ಯತೆಯಿದೆ. ಜೊತೆಗೆ, ರಾಜಕೀಯ ಪರಿಸ್ಥಿತಿ ತೀರ ಹದಗೆಟ್ಟರೆ, ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ರಾಜ್ಯಪಾಲರಿಗೆ ಮನವರಿಕೆಯಾದರೆ, ರಾಷ್ಟ್ರಪತಿಯವರ ಅನುಮತಿ ಪಡೆದು, ಸರಕಾರವನ್ನು ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಆದರೆ, ಒಂದೇ ವರ್ಷದಲ್ಲಿ ಮತ್ತೊಂದು ವಿಧಾನಸಭೆ ಚುನಾವಣೆಗೆ ಕರ್ನಾಟಕದ ಜನರು ಸಿದ್ಧರಿದ್ದಾರಾ?