ಸಿದ್ದರಾಮಯ್ಯ ರಾಜಕಾರಣವನ್ನೇ ಬಿಡುವ ನಿರ್ಧಾರ ಮಾಡಿದ ಆ ಕ್ಷಣ!
Recommended Video
"ಆ ಸೋಲಿನಿಂದ ಕಂಗೆಟ್ಟಿದ್ದ ಸಿದ್ದರಾಮಯ್ಯ ಅವರು ದೇವೇಗೌಡರ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದರು. ನಾನು ರಾಜಕಾರಣವನ್ನೇ ಬಿಟ್ಟುಬಿಡ್ತೀನಿ. ವಾಪಸ್ ಊರಿಗೆ ಹೋಗಿ ವಕೀಲಿಕೆ ಮಾಡಿಕೊಂಡು ಇರ್ತೀನಿ ಅಂದರು. ಆದರೆ ದೇವೇಗೌಡರು ಧೈರ್ಯ ಹೇಳಿದರು. ಮತ್ತೊಮ್ಮೆ ಒಳ್ಳೆ ಕಾಲ ಬರುತ್ತದೆ ಎಂಬ ವಿಶ್ವಾಸ ತುಂಬಿದರು".
-ಹೀಗೆ ಜೆಡಿಎಸ್, ದೇವೇಗೌಡರು ಹಾಗೂ ಸಿದ್ದರಾಮಯ್ಯ ಅವರ ಪಾಲಿನ ಸಂಕಷ್ಟದ ದಿನಗಳ ವಿಚಾರವನ್ನು ತಿಳಿಸಿದವರು ಕಡೂರು ಜೆಡಿಎಸ್ ಶಾಸಕ ಹಾಗೂ ದೇವೇಗೌಡರ ಆತ್ಮಚರಿತ್ರೆಗೆ ಅಕ್ಷರ ರೂಪ ನೀಡಿದ ವೈಎಸ್ ವಿ ದತ್ತ. ಆತ್ಮಚರಿತ್ರೆಯಲ್ಲಿ ಪ್ರಸ್ತಾವ ಆಗಿರುವ ಒಂದು ಘಟನೆ ಅಥವಾ ಪ್ರಮುಖ ಸನ್ನಿವೇಶದ ಬಗ್ಗೆ ತಿಳಿಸುವಂತೆ ಒನ್ಇಂಡಿಯಾ ಕನ್ನಡವು ದತ್ತ ಅವರನ್ನು ಸಂಪರ್ಕಿಸಿತು.
ಎಲೆಕ್ಷನ್ ಗೆ ಮುನ್ನವೇ ಅಪ್ಪಳಿಸಲಿದೆ ದೇವೇಗೌಡರ 'ಅಗ್ನಿ ದಿವ್ಯ'
ಆತ್ಮಚರಿತ್ರೆಯೇ ಒಟ್ಟಾರೆ ಹಲವು ರೋಚಕ ಘಟನೆಗಳ ಸಂಕಲನ. ಅದು ಬಿಡುಗಡೆ ಆದ ಮೇಲೆ ನೀವೇ ಓದಿ ಎಂದು ಮೊದಲಿಗೆ ಹೇಳಿದ ಅವರು, ಆ ನಂತರ ನಮ್ಮ ಒತ್ತಡಕ್ಕೆ ಮಣಿದು ಒಂದು ಘಟನೆಯನ್ನಷ್ಟೇ ಹೇಳಿದರು. ಅವರು ಹೇಳಿದ ಘಟನೆಗೆ ನಾವಿಲ್ಲಿ ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೀವಿ. ಮುಂದಿನ ಮಾತುಗಳು ವೈಎಸ್ ವಿ ದತ್ತ ಅವರದು.
ಕಂಗಾಲಾಗಿದ್ದ ಸಿದ್ದರಾಮಯ್ಯ
ಆಗ 1999ರ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಿತ್ತು. ದೇವೇಗೌಡರ ಆದಿಯಾಗಿ ಕುಮಾರಸ್ವಾಮಿ, ಸಿದ್ದರಾಮಯ್ಯ ಎಲ್ಲ ಸೋತಿದ್ದರು. ಪಕ್ಷಕ್ಕೆ ಹತ್ತೇ ಸ್ಥಾನಗಳು ಬಂದಿದ್ದವು. ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರು ಆ ಸೋಲಿನಿಂದ ಭಾರೀ ಕಂಗಾಲಾಗಿದ್ದರು. ದೇವೇಗೌಡರ ಬಳಿ ಬಂದು ಬಿಕ್ಕಿಬಿಕ್ಕಿ ಅತ್ತ ಅವರು, ರಾಜಕೀಯವನ್ನೇ ಬಿಡುವ ಮಾತನಾಡಿದರು. ಮತ್ತೆ ವಕೀಲಿಕೆ ಮಾಡ್ತೀನಿ, ಈ ರಾಜಕೀಯವೇ ಬೇಡ ಅಂದರು.
ಕಾಂಗ್ರೆಸ್ ಗೆ ಬಹುಮತ, ವಿಪಕ್ಷ ಸ್ಥಾನದಲ್ಲಿ ಬಿಜೆಪಿ
ಆ ಚುನಾವಣೆಗೆ ನಮ್ಮ ಪಕ್ಷದ ಹೆಸರು ಜನತಾದಳ ಎಂಬುದರಿಂದ ಜೆಡಿಎಸ್ ಅಂತಾಗಿತ್ತು. ಪಕ್ಷದ ಚಿಹ್ನೆ ಬದಲಾಗಿತ್ತು. ಕಾಂಗ್ರೆಸ್ ಭಾರೀ ಬಹುಮತದಿಂದ ಗೆದ್ದು ಬಂದಿತ್ತು. ಎಸ್ಸೆಂ ಕೃಷ್ಣ ಮುಖ್ಯಮಂತ್ರಿ ಆದರು. ಪ್ರತಿಪಕ್ಷದ ಸ್ಥಾನ ಬಿಜೆಪಿ ಅವರ ಪಾಲಿಗೆ ಸಿಕ್ಕಿತು. ಈ ಎಲ್ಲ ಘಟನೆಗಳಿಂದ ಸಿದ್ದರಾಮಯ್ಯ ಅವರು ವಿಚಲಿತರಾಗಿದ್ದರು.
ಪಕ್ಷದಿಂದ ಖರ್ಚು-ವೆಚ್ಚ ನೋಡಿಕೊಳ್ಳಲಾಗುತ್ತದೆ
ಅಂಥ ಸಮಯದಲ್ಲಿ ಸಿದ್ದರಾಮಯ್ಯ ಅವರಿಗೆ ಧೈರ್ಯ ತುಂಬಿದವರು ದೇವೇಗೌಡರು. ಬಾಡಿಗೆ ಮನೆಯೊಂದನ್ನು ಮಾಡಿ, ಅದರ ಖರ್ಚು-ವೆಚ್ಚ ಪಕ್ಷದಿಂದ ನೋಡಿಕೊಳ್ಳಲಾಗುತ್ತದೆ. ಈಗಿನ ಸೋಲು ತಾತ್ಕಾಲಿಕ. ಮುಂದೆ ನಮಗೆ ಜಯವಿದೆ ಎಂದು ವಿಶ್ವಾಸ ತುಂಬಿದವರು ದೇವೇಗೌಡರು.
ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ತಪ್ಪಿಸಿದ್ದು ಯಾರು?
ಆ ನಂತರ 2004ರಲ್ಲಿ ಜೆಡಿಎಸ್ 58 ಸ್ಥಾನಗಳಲ್ಲಿ ಜಯ ಗಳಿಸಿತು. ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಆದರು. ಆ ಸಂದರ್ಭದಲ್ಲಿ ದೇವೇಗೌಡರು ತಮಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದರು ಆಂತ ಈಗಲೂ ಸಿದ್ದರಾಮಯ್ಯ ಆರೋಪಿಸುತ್ತಾರೆ. ಆಗ ನಿಜವಾಗಲೂ ನಡೆದಿದ್ದೇನು? ಆ ನಿರ್ಣಯ ದೇವೇಗೌಡರದಾ ಅಥವಾ ಸೋನಿಯಾ ಗಾಂಧಿ ಅವರದಾ? ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ತಪ್ಪಿದ್ದು ಹೇಗೆ ಎಂಬ ಸಂಪೂರ್ಣ ವಿವರಣೆ ಆತ್ಮಚರಿತ್ರೆಯಲ್ಲಿ ಅಡಕವಾಗಿದೆ.
1983ರಿಂದ 1999ರ ವರೆಗೆ ಆರೋಹಣ ಕ್ರಮದಲ್ಲೇ ಸಾಗಿದ್ದ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರು ಒಂದು ಸೋಲಿನಿಂದ ಅಷ್ಟು ಕಂಗಾಲಾಗಿದ್ದರಾ ಎಂಬ ಪ್ರಶ್ನೆ ಬರುತ್ತದೆ. 1983ರಲ್ಲಿ ರಾಜಕೀಯ ಪ್ರವೇಶ ಮಾಡಿದ ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿ ಅಧ್ಯಕ್ಷ, ಹಣಕಾಸು ಸಚಿವ, ಉಪ ಮುಖ್ಯಮಂತ್ರಿ ಹೀಗೆ ಅವರು 1999ರ ವರೆಗೆ ಆರೋಹಣ ಕ್ರಮದಲ್ಲೇ ಮುಂದುವರಿದಿದ್ದರು. ಆ ಮಧ್ಯೆ ಒಮ್ಮೆ ಸೋತಿದ್ದರಾದರೂ ಪಕ್ಷ ಅಧಿಕಾರದಲ್ಲಿತ್ತು. ಆದರೆ ಆಗಿನ ಸೋಲಿನಿಂದ ವಿಪರೀತವಾಗಿ ವಿಚಲಿತರಾಗಿದ್ದು ಹೌದು.
ಲಿಂಗಾಯತ ಶಾಸಕರ ಅಸಮಾಧಾನಕ್ಕೆ ಕಾರಣ ಆಗುತ್ತಿತ್ತು
ದೇವೇಗೌಡರು ಪ್ರಧಾನಮಂತ್ರಿ ಆದಾಗ ಜೆ.ಎಚ್.ಪಟೇಲ್ ರನ್ನು ಮುಖ್ಯಮಂತ್ರಿ ಮಾಡಿ, ಸಿದ್ದರಾಮಯ್ಯ ಅವರನ್ನು ಉಪ ಮುಖ್ಯಮಂತ್ರಿ ಮಾಡಿದರು. ಆದರೆ ಆಗಲೇ ತನ್ನನ್ನು ಮುಖ್ಯಮಂತ್ರಿ ಮಾಡಲಿಲ್ಲ ಅನ್ನೋದು ಸಿದ್ದರಾಮಯ್ಯ ಅವರ ಅಸಮಾಧಾನ ಹಾಗೂ ಆಕ್ಷೇಪ ಆಗಿತ್ತು. ಜೆ.ಎಚ್.ಪಟೇಲ್ ಹಿರಿಯರಿದ್ದರು ಹಾಗೂ ಅವರನ್ನು ಮುಖ್ಯಮಂತ್ರಿ ಮಾಡದಿದ್ದರೆ ಪಕ್ಷದಲ್ಲಿನ ಲಿಂಗಾಯತ ಶಾಸಕರಿಗೆ ಅಸಮಾಧಾನ ಆಗುವ ಸಾಧ್ಯತೆ ಇತ್ತು. ಆದ್ದರಿಂದ ದೇವೇಗೌಡರು ಅಂಥ ತೀರ್ಮಾನ ಕೈಗೊಳ್ಳಬೇಕಾಯಿತು. ಆದರೆ ಸಿದ್ದರಾಮಯ್ಯ ಬೆಳವಣಿಗೆಯಲ್ಲಿ ದೇವೇಗೌಡರ ಪಾತ್ರ ಯಾವ ಮಟ್ಟದ್ದು ಅನ್ನೋದು ಕೂಡ ಆತ್ಮಚರಿತ್ರೆಯಿಂದ ಗೊತ್ತಾಗುತ್ತದೆ.