ವಿಶ್ಲೇಷಣೆ : ಪ್ರಜಾತಂತ್ರದಲ್ಲಿ ಮೋದಿಯ ಬಜೆಟ್ ತಂತ್ರ ಪರಿಣಾಮ ಬೀರುತ್ತಾ?
ಲೋಕಸಭಾ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿವೆ. ಹೀಗಾಗಿ ರಾಜಕೀಯ ಪಕ್ಷಗಳಲ್ಲಿ ಹೊಸ ಹುರುಪು ಬಂದಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕೆಡವಿ ಬಿಜೆಪಿಯೇತರ ಸರ್ಕಾರವನ್ನು ಆಡಳಿತಕ್ಕೆ ತರುವ ವಿಪಕ್ಷಗಳ ನಾಯಕರ ಉತ್ಸಾಹಕ್ಕೆ ಕೇಂದ್ರದ ಸದ್ಯದ ಬಜೆಟ್ ಒಂದು ರೀತಿಯಲ್ಲಿ ತಣ್ಣೀರೆರಚಿದೆ ಎಂದರೆ ತಪ್ಪಾಗಲಾರದು.
ಚುನಾವಣೆಗೆ ಇನ್ನೂ ಎರಡ್ಮೂರು ತಿಂಗಳು ಬಾಕಿ ಇರುವುದರಿಂದ ಮೋದಿಯ ಬಜೆಟ್ ತಂತ್ರ ಮತವಾಗಿ ಪರಿವರ್ತನೆಯಾಗುತ್ತಾ ಬಿಡುತ್ತೋ ಗೊತ್ತಿಲ್ಲ. ಆದರೆ ವಿಪಕ್ಷಗಳಿಗೆ ದೊಡ್ಡದೊಂದು ಶಾಕ್ ನೀಡಿದ್ದಂತೂ ಸತ್ಯ. ಈಗ ಮಂಡಿಸಿರುವ ಬಜೆಟ್ನ್ನು ಮುಂದಿಟ್ಟುಕೊಂಡು ಮುಂದಿನ ಲೋಕಸಭಾ ಚುನಾವಣೆಗೆ ತಯಾರಿ ನಡೆಸಲು ಬಿಜೆಪಿಯ ನಾಯಕರು ಮತ್ತು ಕಾರ್ಯಕರ್ತರು ತಯಾರಿಯಾಗುವುದರಲ್ಲಿ ಸಂದೇಹವಿಲ್ಲ.
ಟ್ವಿಟ್ಟರ್ ನಲ್ಲಿ ಮೋದಿ ಗುಣಗಾನ: #ThankYouNamo ಟ್ರೆಂಡಿಂಗ್
ಸಾಮಾಜಿಕ ಜಾಲ ತಾಣಗಳ ಮೂಲಕ ಎಲ್ಲ ರೀತಿಯಲ್ಲೂ ಬಿಜೆಪಿಗೆ ಅನುಕೂಲವಾಗುವಂತಹ ತಂತ್ರಗಳನ್ನು ಹೆಣೆಯಲು ಯುವ ಸಮುದಾಯವೂ ಸಜ್ಜಾಗಿದೆ. ಕಳೆದ 2014ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ನಮೋ ಟೀಂ ಅದ್ಭುತ ಕೆಲಸವನ್ನು ಮಾಡಿತ್ತು. ಈ ಬಾರಿಯೂ ಇನ್ನಷ್ಟು ಪ್ರಭಾವಿಯಾಗಿ ಮುನ್ನಡೆಯಲು ಅದು ಸಜ್ಜಾಗಿದೆ.
ಮಧ್ಯಂತರ ಬಜೆಟ್ 2019: ವಿಶ್ಲೇಷಕರು/ಅರ್ಥಶಾಸ್ತ್ರಜ್ಞರಿಂದ ಟೀಕೆಗೆ ಒಳಪಟ್ಟ 10 ಪ್ರಮುಖ ಯೋಜನೆಗಳು
ಈಗ ಮಂಡಿಸಿರುವ ಬಜೆಟ್ ದೇಶದ ಸರ್ವ ಜನರನ್ನೂ ಅಷ್ಟೋ, ಇಷ್ಟೋ ಸೆಳೆಯುವಲ್ಲಿ ಸಫಲವಾಗಿದೆ. ಬಜೆಟ್ನ ಪ್ರಾಮುಖ್ಯತೆ ಮತ್ತು ಅದು ಸಮಗ್ರ ಅನುಷ್ಠಾನಕ್ಕೆ ಬರಬೇಕಾದರೆ ಮತ್ತೊಮ್ಮೆ ಕೇಂದ್ರದಲ್ಲಿ ಕೇಸರಿ ಬಾವುಟ ಹಾರುವುದು ಅನಿವಾರ್ಯವಾಗಿದೆ.
ಹೊಸ ಭರವಸೆ ಹುಟ್ಟುಹಾಕಿರುವ ಬಜೆಟ್
ಇದೀಗ ಮಧ್ಯಂತರ ಬಜೆಟ್ ಅನ್ನು ಪಿಯೂಶ್ ಗೋಯಲ್ ಅವರು ಮಂಡಿಸಿ ಮೂಗಿಗಷ್ಟೆ ತುಪ್ಪ ಸವರಿದ್ದಾರೆ. ಅದರ ರುಚಿಯನ್ನು ದೇಶವಾಸಿ ಸವಿಯಬೇಕಾದರೆ ಮುಂದೆಯೂ ಎನ್ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲೇ ಬೇಕಾಗಿದೆ. ಅದು ಸಾಧ್ಯವಾಗಬೇಕಾದರೆ ಮತದಾರರು ಒಲವು ತೋರಬೇಕಿದೆ. ಬಜೆಟ್ ಒಂದು ರೀತಿಯಲ್ಲಿ ಮುಂದಿನ ಲೋಕಸಭೆಯ ಪ್ರಣಾಳಿಕೆಯಂತಿದ್ದು ಅದನ್ನು ಜನಸಾಮಾನ್ಯರಿಗೆ ತಲುಪಿಸಿ ಅವರ ಒಲವನ್ನು ಮತವಾಗಿ ಪರಿವರ್ತಿಸುವ ಕಾರ್ಯವನ್ನು ಬಿಜೆಪಿ ಮಾಡಲಿದೆ ಎಂಬ ಧೈರ್ಯವೂ ನಾಯಕರಿಗೆ ಬಂದಿದ್ದು, ಹೀಗಾಗಿ ಮತದಾರ ಮತ ಚಲಾಯಿಸೇ ಚಲಾಯಿಸುತ್ತಾನೆ ಎಂಬ ನಂಬಿಕೆಯೂ ಬಿಜೆಪಿ ನಾಯಕರಲ್ಲಿ ಹೊಸ ಭರವಸೆಯನ್ನು ಹುಟ್ಟು ಹಾಕಿದೆ.
2030ರ ವೇಳೆಗೆ ಭಾರತ ಹೇಗಿರಬೇಕು? ಮೋದಿ ಸರ್ಕಾರದ ಟಾಪ್ 10 ವಿಷನ್ಗಳೇನು ಗೊತ್ತೆ?
ಬಜೆಟ್ಟಲ್ಲಿ ಹುಳುಕು ಹುಡುಕಲು ಪರದಾಟ
ಮತದಾರನನ್ನು ವಿಚಲಿತನನ್ನಾಗಿ ಮಾಡುವ ತಂತ್ರವನ್ನು ಪ್ರತಿಪಕ್ಷದವರು ಮಾಡಿದರೂ ಅದಕ್ಕೆ ಪ್ರತಿಯಾಗಿ ಏನು ಮಾಡಬೇಕು ಎಂಬ ಅಸ್ತ್ರವನ್ನು ಬಿಜೆಪಿ ನಾಯಕರು ಮಾಡಿಟ್ಟುಕೊಂಡಿದ್ದಾರೆ. ಸರ್ವ ಜನರನ್ನು ಸೆಳೆಯುವ ಸಲುವಾಗಿ ಮಂಡಿಸಲ್ಪಟ್ಟಿರುವ ಬಜೆಟ್ ಅನ್ನು ಅಲ್ಲಗೆಳೆಯಲು ವಿಪಕ್ಷ ನಾಯಕರಿಗೂ ಸಾಧ್ಯವಾಗುತ್ತಿಲ್ಲ. ಮೇಲ್ನೋಟಕ್ಕೆ ವಿರೋಧ ವ್ಯಕ್ತಪಡಿಸಿರುತ್ತಿರುವ ವಿಪಕ್ಷ ನಾಯಕರು ಬಜೆಟ್ನಲ್ಲಿನ ಲೋಪಗಳನ್ನು ಮುಂದಿಟ್ಟುಕೊಂಡು ಗಂಭೀರವಾಗಿ ಆರೋಪ ಮಾಡಲು ಕೂಡ ಸಾಧ್ಯವಾಗದೆ ಪರದಾಡುತ್ತಿದ್ದಾರೆ.
ಒಂದು ವೇಳೆ ಆರೋಪ ಮಾಡುವ ಭರದಲ್ಲಿ ಸ್ವಲ್ಪ ಎಚ್ಚರ ತಪ್ಪಿ ಹೇಳಿಕೆ ನೀಡಿದರೂ ಅದನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳಲು ತಯಾರಿದೆ. ಈಗ ಏನಿದ್ದರೂ ಕೊಟ್ಟಿದ್ದು ಸಾಲದು ಎನ್ನುವ ಮಾತಷ್ಟೇ ಆಡಬೇಕಿದೆ. ಉಳಿದಂತೆ ಪ್ರಾಧ್ಯಾನ್ಯತೆ ಕೊಟ್ಟಿರುವ ಕ್ಷೇತ್ರವನ್ನು ಹೀಗಳೆಯುವಂತಿಲ್ಲ. ಏಕೆ ಕೊಟ್ಟಿದ್ದೀರಿ ಎಂದು ಪ್ರಶ್ನೆಯೂ ಮಾಡುವಂತಿಲ್ಲ. ಒಟ್ಟಾರೆ ಅಡಕೆ ಕತ್ತರಿಯಲ್ಲಿ ಸಿಲುಕಿಕೊಂಡಂತ ಪರಿಸ್ಥಿತಿ ವಿಪಕ್ಷ ನಾಯಕರದ್ದಾಗಿದೆ.
ಮಧ್ಯಂತರ ಬಜೆಟ್ 2019: 9 ವಿವಿಧ ಕ್ಷೇತ್ರದ ಪ್ರಮುಖಾಂಶಗಳು
ಇದು ಟ್ರೇಲರ್, ಪಿಚ್ಚರ್ ಇನ್ನೂ ಬಾಕಿ ಇದೆ
ಈ ನಡುವೆ ಇದು ಟ್ರೇಲರ್, ಪಿಚ್ಚರ್ ಇನ್ನೂ ಬಾಕಿ ಇದೆ ಎಂಬಂತಹ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಅದು ಕೂಡ ಜನಸಾಮಾನ್ಯರಲ್ಲಿ ಕುತೂಹಲವನ್ನು ಕೆರಳಿಸಿದ್ದರೆ ವಿರೋಧಿಗಳಲ್ಲಿ ಸಣ್ಣಗೆ ಭಯ ಹುಟ್ಟಿಸಿದೆ. ಚುನಾವಣೆಯ ನಂತರ ಭರ್ಜರಿ ಜಯಗಳಿಸಿ ಮತ್ತೆ ಅಧಿಕಾರಕ್ಕೆ ಬಂದರೆ, ಮುಂದಿನ ಬಜೆಟ್ಟಿನಲ್ಲಿ ದೇಶದ ಯುವಜನರಿಗಾಗಿ, ರೈತರಿಗಾಗಿ ಮತ್ತು ಸಮಾಜದ ಎಲ್ಲ ವರ್ಗಗಳಿಗಾಗಿ ಇನ್ನಷ್ಟು ಬಳುವಳಿಗಳನ್ನು ನೀಡುತ್ತೇವೆ ಎಂದು ಬಜೆಟ್ ಮರುದಿನವೇ, ಪಶ್ಚಿಮ ಬಂಗಾಳದಲ್ಲಿ ನಡೆಸಿದ ಸಮಾವೇಶದಲ್ಲಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಜನರು ತಮ್ಮ ಮೇಲೆ ಇಟ್ಟು ಆರಿಸಿ ಕಳಿಸಿದ ಋಣವನ್ನು ಅವರು ಇನ್ನೂ ತೀರಿಸಬೇಕಿದೆ.
ಬಜೆಟ್ 2019 ನಂತರ ತೆರಿಗೆ ಲೆಕ್ಕಾಚಾರ, 7.75 ಲಕ್ಷ ತನಕ 'ನೋ ಟ್ಯಾಕ್ಸ್'
ಮಹಾಘಟಬಂಧನ್ ವೈಫಲ್ಯತೆಯ ಹಾದಿಯಲ್ಲಿ
ಇದುವರೆಗೆ ನಡೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ 2019ರ ಮೇನಲ್ಲಿ ನಡೆಯಲಿರುವ ಈ ಬಾರಿಯ ಲೋಕಸಭಾ ಚುನಾವಣೆ ಎಲ್ಲ ರೀತಿಯಲ್ಲಿಯೂ ಭಿನ್ನವಾಗಿದೆ. ಜತೆಗೆ ಭಾರೀ ಕುತೂಹಲವನ್ನು ಕೆರಳಿಸಿದೆ. ಈಗಾಗಲೇ ಎನ್ಡಿಎ ಸರ್ಕಾರದ ವಿರುದ್ಧ ವಿಪಕ್ಷಗಳು ಸೇರಿದಂತೆ ಪ್ರಾದೇಶಿಕ ಪಕ್ಷಗಳೆಲ್ಲ ಒಟ್ಟಾಗಿ ಮಾಡಿಕೊಂಡ ಮಹಾಘಟಬಂಧನ್ ಕೂಡ ಚುನಾವಣೆ ಮುನ್ನವೇ ವಿಫಲವಾದಂತೆ ಕಾಣುತ್ತಿದೆ. ಮಹಾಘಟಬಂಧನ್ ರಚಿಸುವಾಗ ನಾಯಕರಲ್ಲಿದ್ದ ಉತ್ಸಾಹ ಇದೀಗ ಕಡಿಮೆಯಾಗಿ ಮುಂದಿಟ್ಟ ಹೆಜ್ಜೆಯನ್ನು ಹಿಂಪಡೆಯಲು ಕೆಲವು ನಾಯಕರು ಮುಂದಾಗಿದ್ದಾರೆ. ಜತೆಗೆ ಅವರೊಳಗೆ ಭಿನ್ನಾಭಿಪ್ರಾಯಗಳು ಆರಂಭವಾಗಿವೆ. ಇತ್ತೀಚೆಗೆ ಮಮತಾ ಬ್ಯಾನರ್ಜಿ ಅವರು ಕೋಲ್ಕತಾದಲ್ಲಿ ಭರ್ಜರಿಯಾಗಿ ಮಹಾಘಟಬಂಧನ್ ದ ಬೃಹತ್ ಸಮಾವೇಶವೇನೋ ಮಾಡಿದರು, ಆದರೆ ಅದರ ಮುಂದಿನ ರೂಪುರೇಷೆ ಇನ್ನೂ ಸಿದ್ಧವಾದಂತೆ ಕಾಣಿಸುತ್ತಿಲ್ಲ.
17 ರೂ. ನೀಡಿ ರೈತರಿಗೆ ಅಪಮಾನ ಮಾಡಿದ್ದಾರೆ ಮೋದಿ: ರಾಹುಲ್ ಕಿಡಿ
ಜೆಡಿಎಸ್-ಕಾಂಗ್ರೆಸ್ ಒಟ್ಟಾಗಿ ಸ್ಪರ್ಧಿಸುವುದೇ ಅನುಮಾನ
ಪ್ರತಿಯೊಂದು ಪ್ರಾದೇಶಿಕ ಪಕ್ಷವೂ ತಮ್ಮ ಕಡೆಯಿಂದ ಹೆಚ್ಚಿನ ಸಂಸದರನ್ನು ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸಿ ಪ್ರಾಬಲ್ಯ ಸಾಧಿಸುವ ತಯಾರಿಯಲ್ಲಿದ್ದಾರೆ. ಇದಕ್ಕೆ ರಾಜ್ಯದಿಂದ 12 ಸ್ಥಾನಗಳಲ್ಲಿ ಗೆಲ್ಲಿಸಿ ಕಳುಹಿಸಿ ಎಂದು ಕರೆ ನೀಡುತ್ತಿರುವ ಜೆಡಿಎಸ್ ವರಿಷ್ಠರ ಹೇಳಿಕೆಗಳು ಸಾಕ್ಷಿಯಾಗಿದೆ. ಕರ್ನಾಟಕದ 28 ಕ್ಷೇತ್ರಗಳಲ್ಲಿ ಹನ್ನೆರಡು ಕ್ಷೇತ್ರಗಳನ್ನು ತಮಗೆ ಬಿಟ್ಟುಕೊಡಬೇಕೆಂದು ದೇವೇಗೌಡರು ಈಗಾಗಲೆ ಆಗ್ರಹ ಮುಂದಿಟ್ಟಿದ್ದಾರೆ. ಆದರೆ, ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪುತ್ತಾರೆಯೆ? ಈಗಾಗಲೆ ಮೈತ್ರಿಯನ್ನೇ ಮುರಿಯುವ, ಕುಮಾರಸ್ವಾಮಿಯನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನಗಳು ತೆರೆಮರೆಯಲ್ಲಿ ಸಾಕಷ್ಟು ನಡೆಯುತ್ತಿವೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಒಟ್ಟಾಗಿ ಸ್ಪರ್ಧಿಸುವ ಲಕ್ಷಣಗಳು ಕ್ಷೀಣಿಸುತ್ತಿವೆ.
ಮೈತ್ರಿಯಲ್ಲಿ ಕಾಂಗ್ರೆಸ್ಸನ್ನು ನಂಬುವಂತೆಯೇ ಇಲ್ಲ, ಕಾರಣಗಳು ಇಲ್ಲಿವೆ
ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟವರು ಹಲವರು
ಇನ್ನು ಮಹಾಘಟಬಂಧನ್ನಲ್ಲಿರುವ ಪಕ್ಷಗಳ ಹಿರಿಯ ನಾಯಕರಲ್ಲಿ ಹೆಚ್ಚಿನ ಮಂದಿ ಪ್ರಧಾನಿ ಸ್ಥಾನದ ಮೇಲೆ ಮೋಹ ಹೊಂದಿದವರಾಗಿದ್ದಾರೆ. ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಮಾಯಾವತಿ, ಚಂದ್ರಬಾಬು ನಾಯ್ಡು, ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಈ ಹಲವರಲ್ಲಿ ಕೆಲವರು. ಹೀಗಿರುವಾಗ ಅವರು ಒಟ್ಟಾಗಿ ಅಧಿಕಾರದ ಆಸೆ ಮರೆತು ಗೆಲುವಿಗಾಗಿ ಹೋರಾಡುತ್ತಾರೆ ಎಂಬುದನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಕೊನೆ ಘಳಿಗೆಯಲ್ಲಿ ಅಸಮಾಧಾನಗೊಂಡು ದೂರವಾದರೂ ಅಚ್ಚರಿಯಿಲ್ಲ. ಇದೆಲ್ಲವನ್ನು ಮನಗಂಡಿರುವ ಪ್ರಧಾನಿ ನರೇಂದ್ರ ಮೋದಿ ಬಜೆಟ್ ಅನ್ನು ಬಿಜೆಪಿಗೆ ಪೂರಕವಾಗುವಂತೆಯೇ ಮಂಡಿಸಿದ್ದಾರೆ. ಅದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂಬುದನ್ನು ಮಾತ್ರ ಕಾದು ನೋಡಲೇ ಬೇಕಾಗಿದೆ.