ಬಿಜೆಪಿ ಪಾಲಿಗೆ ಈ ಬಾರಿ ಕರ್ನಾಟಕದ ಚುನಾವಣೆ ಎಂಥ ಚದುರಂಗದಾಟ!
Recommended Video
ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಅಥವಾ ಸರಳ ಬಹುಮತ ಪಡೆದು ಅಧಿಕಾರಕ್ಕೆ ಏರಿತು ಅಂದುಕೊಳ್ಳಿ, ಹಾವು- ಏಣಿ ಆಟ ನಿಶ್ಚಿತವೇನೋ ಎಂಬ ಅನುಮಾನ ಈಗಲೇ ಬರುತ್ತಿದೆ. ಅಥವಾ ಇನ್ನೊಂದು (ಬಿಜೆಪಿಯವರು ಸೋಲು ಎಂಬ ಪದವನ್ನು ಅಕ್ಷರ ರೂಪದಲ್ಲೂ ನೋಡಲು ಬಯಸುವುದಿಲ್ಲ ಆದ್ದರಿಂದ ಈ ಪ್ರಯೋಗ.) ಆಯಿತು ಅಂದುಕೊಳ್ಳಿ. ಆಗ ಪರಿಸ್ಥಿತಿ ಮತ್ತೂ ಭಯಾನಕ ಆಗುತ್ತದೆ.
ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಬಹಳ ಆಸಕ್ತಿಕರವಾದ ವಿಶ್ಲೇಷಣೆ ಮಾಡಲಾಗಿದೆ. ಒಂದು ವೇಳೆ ಕರ್ನಾಟಕದಲ್ಲಿ ಬಿಜೆಪಿ ಆಧಿಕಾರ ಹಿಡಿಯಲು ಸಾಧ್ಯವಾಗದೇ ಹೋದರೆ ಇದರ ಕಾವು ಮೋದಿಯವರೆಗೂ ತಲುಪುತ್ತದೆ. ಏಕೆಂದರೆ ಅಂಥ ಪರಿಸ್ಥಿತಿಯ ಬೆಂಕಿಯನ್ನು ಸ್ವತಃ ಯಡಿಯೂರಪ್ಪ ಅವರಿಂದ ಕೂಡ ತಮಣಿ ಮಾಡಲು ಸಾಧ್ಯವಿಲ್ಲ ಎಂಬರ್ಥದಲ್ಲಿ ಆ ವಿಶ್ಲೇಷಣೆ ಇದೆ.
ರಾಜ್ಯದಲ್ಲಿ ಬಿಜೆಪಿಗೆ ಸರಳ ಬಹುಮತ: ಕಬ್ಯಾಡಿ ಜಯರಾಮಾಚಾರ್ಯ ಭವಿಷ್ಯ
ಚುನಾವಣೆಯನ್ನು ಮುಂದಿಟ್ಟುಕೊಂಡು ಅಶುಭವಾದದ್ದನ್ನು ಯೋಚಿಸುವುದು ಬೇಡ. ಬಿಜೆಪಿ ಅಧಿಕಾರ ಹಿಡಿಯಿತು ಅಂದುಕೊಳ್ಳೋಣ. ಅಂಥ ಸನ್ನಿವೇಶದಲ್ಲಿ ಪಕ್ಷದೊಳಗೆ ಏನಾಗಬಹುದು? ಯಾರಿಗೆ ಪ್ರಾಮುಖ್ಯ ಸಿಗುತ್ತದೆ? ಎಲ್ಲಕ್ಕಿಂತ ಮುಖ್ಯವಾಗಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಯಾರಿಗೆ ಸಿಗಬಹುದು? ಸಂಪುಟ ರಚನೆ ಹೇಗಿರಬಹುದು? ಇವೆಲ್ಲಕ್ಕೂ ಈಗಲೇ ಸೂತ್ರ ರಚನೆ ಮಾಡಿಟ್ಟುಕೊಳ್ಳುವುದು ಬಿಜೆಪಿ ಪಾಲಿಗೆ ಒಳಿತು.
ಏಕೆಂದರೆ, ಪಕ್ಷದ ಟಿಕೆಟ್ ಗಾಗಿಯೇ ಈ ಪರಿಯ ಕಾಳಗ ನಡೆಯುವಾಗ ಮುಂದೆ ಹೇಗೋ ಏನೋ? ಆದ್ದರಿಂದ ಮುಂದಿನ ಸಾಧ್ಯತೆಗಳ ಬಗ್ಗೆ ಒಂದು ವಿಶ್ಲೇಷಣೆ ಇಲ್ಲಿದೆ.
ಇವರನ್ನೆಲ್ಲ ಏನು ಮಾಡಬಹುದು?
ಬಿಜೆಪಿ ಗೆದ್ದರೆ ಯಡಿಯೂರಪ್ಪ ಮುಖ್ಯಮಂತ್ರಿ ಅಂತ ಘೋಷಣೆ ಮಾಡಿಯಾಗಿದೆ. ಅಲ್ಲಿಗೆ ಸಿಎಂ ಕುರ್ಚಿಯನ್ನು ಯಡಿಯೂರಪ್ಪ ಅವರಿಗೆ ಅಂದುಕೊಳ್ಳೋಣ. ಆ ನಂತರ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ದಲಿತರೊಬ್ಬರನ್ನು ಉಪ ಮುಖ್ಯಮಂತ್ರಿ ಮಾಡಲು ಹೊರಟರೆ, ಸ್ವತಃ ಯಡಿಯೂರಪ್ಪ ಈ ರೀತಿ ಮತ್ತೊಂದು ಶಕ್ತಿ ಕೇಂದ್ರಕ್ಕೆ ಒಪ್ಪುತ್ತಾರಾ? ಒಂದು ವೇಳೆ ಅವರನ್ನು ಒಪ್ಪಿಸಿದರು ಅಂದುಕೊಳ್ಳಿ. ಅದಾಗಲೇ ಹಿಂದಿನ ಬಿಜೆಪಿ ಸರಕಾರದ ವೇಳೆ ಮುಖ್ಯಮಂತ್ರಿ ಆಗಿದ್ದ ಜಗದೀಶ್ ಶೆಟ್ಟರ್, ಉಪ ಮುಖ್ಯಮಂತ್ರಿಗಳಾಗಿದ್ದ ಅಶೋಕ್, ಈಶ್ವರಪ್ಪನವರು ಏನು ಮಾಡಬಹುದು? ಅವರಿಗೆ ಪಕ್ಷದಲ್ಲಿ ಎಂಥ ಸ್ಥಾನ ಮಾನ ಸಿಗಬಹುದು.
ಸಾಧ್ಯತೆಗಳನ್ನು ಹೀಗೆ ಯೋಚಿಸಿದರೆ
ಇನ್ನೂ ಒಂದು ಹೆಜ್ಜೆ ಮುಂದೆ ಯೋಚಿಸಿ, ಯಡಿಯೂರಪ್ಪನವರ ಮನವೊಲಿಸಿ, ಒಂದು ವರ್ಷದ ಅವಧಿಗೆ ಅಂದರೆ ಲೋಕಸಭೆ ಚುನಾವಣೆ ತನಕ ದಲಿತರೊಬ್ಬರನ್ನು ಮುಖ್ಯಮಂತ್ರಿಯಾಗಿ ಮಾಡಿಬಿಡೋಣ. ಆ ನಂತರ ನೀವೇ ಸಿಎಂ ಎಂದು ಹೊಸ ಆಟ ಶುರುವಾದರೆ, ಆಗ ಏನಾಗಬಹುದು? ಅಥವಾ ಉತ್ತರಪ್ರದೇಶದಲ್ಲಿನ ಪ್ರಯೋಗ ಯಶಸ್ವಿ ಆಗಿದೆ. ಹಿಂದುತ್ವದ ಮುಖವೊಂದನ್ನು ಸಿಎಂ ಗಾದಿ ಮೇಲೆ ವರ್ಷದ ಅವಧಿಗೆ ಕೂರಿಸೋಣ. ಆ ನಂತರ ನೀವೇ ಮುಖ್ಯಮಂತ್ರಿ ಎಂದು ದಾಳ ಉರುಳಿಸಿದರೆ ಏನಾಗಬಹುದು? ಅಥವಾ ಯಡಿಯೂರಪ್ಪನವರೇ ಮುಖ್ಯಮಂತ್ರಿ. ಜತೆಗೆ ದಲಿತರೊಬ್ಬರನ್ನು ಹಾಗೂ ಒಕ್ಕಲಿಗ ಸಮಾಜದವರೊಬ್ಬರನ್ನು ಉಪ ಮುಖ್ಯಮಂತ್ರಿ ಮಾಡಿ, ಕುರುಬ ಸಮಾಜದವರೊಬ್ಬರನ್ನು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ಕೂರಿಸುವ ಆಲೋಚನೆ ಮುಂದಿಟ್ಟರೆ...
ಒಂದು ವರ್ಷದ ಮಟ್ಟಿಗಷ್ಟೇ ಮುಖ್ಯಮಂತ್ರಿ ಗಾದಿ
ಸದ್ಯಕ್ಕೆ ಬಿಜೆಪಿಯ ವಲಯದೊಳಗೆ ಹರಿದಾಡುತ್ತಿರುವ ಮಾತನ್ನು ನಂಬುವುದಾದರೆ, ಒಂದು ವೇಳೆ ಬಿಜೆಪಿಗೆ ಸರಳ ಬಹುಮತವೋ ಅಥವಾ ಬಿಜೆಪಿಯಿಂದ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕರೆ ಅದು ಯಡಿಯೂರಪ್ಪನವರಿಗೇ ಅವಕಾಶ. ಮುಂದಿನ ಲೋಕಸಭೆ ಚುನಾವಣೆ ತನಕ ಅವರನ್ನೇ ಮುಂದುವರಿಸಲಾಗುತ್ತದೆ. ಆ ನಂತರ ಪಕ್ಷದೊಳಗೆ ಭೀಷ್ಮಾಚಾರ್ಯರಂತೆ ಬಿಎಸ್ ವೈಗೆ ಗೌರವ ಸ್ಥಾನ ಕೊಟ್ಟು, ಹೊಸದೊಂದು ಮುಖ, ಅದೂ ಆರೆಸ್ಸೆಸ್ ನಿಂದ ಸೂಚಿಸುವ ವ್ಯಕ್ತಿಯನ್ನು ಕರೆತರಲಾಗುತ್ತದೆ ಎನ್ನಲಾಗುತ್ತಿದೆ. ಆದರೆ ಸದ್ಯದ ಸನ್ನಿವೇಶ ಗಮನಿಸಿದರೆ ರಾಜ್ಯ ಬಿಜೆಪಿಯಿಂದ ದಲಿತರ ಓಲೈಕೆಗಾಗಿಯೇ ಪ್ರಯತ್ನ ನಡೆಯುವ ಸಾಧ್ಯತೆ ಹೆಚ್ಚಿದೆ.
ಲಗಾಮು ಹಾಕಿ ನಿಯಂತ್ರಿಸುವಂಥ, ಆರೆಸ್ಸೆಸ್ ನಿಯೋಜನೆಯ ಹಿಂದುತ್ವದ ಮುಖ
ಇನ್ನು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ, ದಲಿತ- ಒಕ್ಕಲಿಗ ಸಮುದಾಯದವರನ್ನು ಉಪ ಮುಖ್ಯಮಂತ್ರಿ ಮಾಡಿ, ಈ ಮೂರೂ ಹುದ್ದೆಗಳನ್ನು ಲಗಾಮು ಹಾಕಿ ನಿಯಂತ್ರಿಸುವಂಥ, ಆರೆಸ್ಸೆಸ್ ನಿಯೋಜನೆ ಮೇಲೆ ಹಿಂದುತ್ವದ ಮುಖ ಆಗುವಂಥವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಬಹುದು. ಆಗ ಮೇಲುನೋಟಕ್ಕೆ ಎಲ್ಲವೂ ಕೊಟ್ಟಂತೆಯೂ ಆಗುತ್ತದೆ. ಎಲ್ಲದರ ಹಿಡಿತವೂ ಸಿಕ್ಕಂತಾಗುತ್ತದೆ. ಏಕೆಂದರೆ, ಕರ್ನಾಟಕದಲ್ಲಿ ಅಧಿಕಾರ ಹಿಡಿಯುವ ಸಲುವಾಗಿ ನಾನಾ ಬಗೆಯಲ್ಲಿ ಸಿದ್ಧಾಂತ- ನಿಯಮಗಳಲ್ಲಿ ರಾಜೀ ಮಾಡಿಕೊಳ್ಳಲಾಗಿದೆ. ಜಾತಿ ಕಾರಣಕ್ಕೆ ಯಡಿಯೂರಪ್ಪ ಅವರನ್ನು ಬಿಡುವಂತಿಲ್ಲ. ಕಾಂಗ್ರೆಸ್, ಅದರಲ್ಲೂ ಸಿದ್ದರಾಮಯ್ಯ ಪ್ರತಿ ಸಲ ಅದೇ ಯಡಿಯೂರಪ್ಪರನ್ನು ಮುಂದೆ ಮಾಡಿ, ಮೋದಿಯವರಿಗೆ ಟಾಂಗ್ ಕೊಡುತ್ತಿದ್ದಾರೆ. ಇರಲಿ ಬಿಡಿ, ಇನ್ನೇನು ಇನ್ನೊಂದು ತಿಂಗಳಿಗೆ ಚುನಾವಣೆ. ಅದಾಗಿ ಮೂರು ದಿನಕ್ಕೆ ಫಲಿತಾಂಶ. ಆ ನಂತರ ಎಲ್ಲವೂ ಸ್ಪಷ್ಟ ಸ್ಪಷ್ಟ.