ಕೊವಿಡ್-19 ಟೆಸ್ಟ್ ಮುಗಿಸಿದ್ರಾ ಮುಂದೇನು ಗತಿ; ಹೀಗಿದೆ ವಾಸ್ತವ ಸ್ಥಿತಿ!
ಬೆಂಗಳೂರು, ಜುಲೈ.10: ಕೊರೊನಾವೈರಸ್ ಮಹಾಮಾರಿ ನಗರ, ಪಟ್ಟಣ ಮತ್ತು ರಾಜಧಾನಿಗಳಿಂದ ಹಳ್ಳಿಗಳಿಗೆ ಶಿಫ್ಟ್ ಆಗುತ್ತಿದೆಯಾ ಎಂಬ ಅನುಮಾನ ಮೂಡುತ್ತಿದೆ. ಪ್ರತಿನಿತ್ಯ ಸಾವಿರ ಸಾವಿರ ಪ್ರಕರಣಗಳು ಬೆಳಕಿಗೆ ಬಂದಾಗಲೂ ಸೋಂಕಿತರ ಸಂಖ್ಯೆ ಗ್ರಾಮೀಣ ಪ್ರದೇಶಗಳಲ್ಲೇ ವರದಿಯಾಗುತ್ತಿವೆ.
Recommended Video
ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಿಂದ ಲಕ್ಷಾಂತರ ವಲಸೆ ಕಾರ್ಮಿಕರು ಈಗಾಗಲೇ ಗೂಡು ಸೇರಿದ್ದಾರೆ. ಕರ್ನಾಟಕದಲ್ಲಿ ಬೆಂಗಳೂರಿನಲ್ಲೇ ನೆಲೆ ಕಂಡುಕೊಂಡಿದ್ದ ಸಾವಿರಾರು ಜನರು ಹಳ್ಳಿಗಳಿಗೆ ವಾಪಸ್ ಹೋಗಿದ್ದಾರೆ. ಅನ್ಯರಾಜ್ಯಗಳ ಸ್ಥಿತಿ ಒಂದು ರೀತಿಯಾಗಿದ್ದರೆ ಕರ್ನಾಟಕದ ಗತಿ ಮತ್ತೊಂದು ರೀತಿಯಲ್ಲಿದೆ.
ಹಳ್ಳಿ ಜೀವನ ಅಂದುಕೊಂಡಷ್ಟು ಸುಲಭ ಅಲ್ಲ, ಬಹಳ ಕಷ್ಟ!
ಕೊರೊನಾವೈರಸ್ ಸೋಂಕಿತ ಲಕ್ಷಣಗಳು ಕಂಡು ಬಂದಲ್ಲಿ ಏನು ಮಾಡುವುದು. ರಾಜ್ಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಕೊರೊನಾವೈರಸ್ ಸೋಂಕು ತಪಾಸಣಾ ವೈಖರಿ ಹೇಗಿದೆ. ಹಳ್ಳಿಗರು ಕೊವಿಡ್-19 ಟೆಸ್ಟ್ ಮಾಡಿಸಿಕೊಳ್ಳುವುದಕ್ಕೆ ತೆರಳಿದರೆ ಪ್ರತಿಕ್ರಿಯೆ ಹೇಗಿರುತ್ತದೆ. ವೈದ್ಯಕೀಯ ತಪಾಸಣೆ ನಂತರ ಪರೀಕ್ಷಾ ವರದಿಯನ್ನು ಗ್ರಾಮಸ್ಥರಿಗೆ ತಲುಪಿಸಲಾಗುತ್ತಿದೆಯೇ. ಕೊರೊನಾವೈರಸ್ ಪಾಸಿಟಿವ್ ಮತ್ತು ನೆಗೆಟಿವ್ ವರದಿ ಬಗ್ಗೆ ಜನರಿಗೆ ತಿಳಿಸಲಾಗುತ್ತಿದೆಯೇ. ಗ್ರಾಮಗಳಲ್ಲಿ ಕೊವಿಡ್-19 ಹರಡುವುದಕ್ಕೆ ನಗರಗಳಿಂದ ತೆರಳಿದ ಜನರಷ್ಟೇ ಕಾರಣವಾಗುತ್ತಿದ್ದಾರಾ.. ಹೀಗೆ ಹುಟ್ಟಿಕೊಳ್ಳುವ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಕೊವಿಡ್-19 ಸೋಂಕಿತ ಲಕ್ಷಣ ಕಂಡು ಬಂದಾಗ ಹೀಗೆ ಮಾಡಿ
1 ಅನಾರೋಗ್ಯದ ಭಾವನೆ ಮೂಡಿದಾಗ ಖಾಸಗಿ ಅಥವಾ ಸರ್ಕಾರಿ ವೈದ್ಯರನ್ನು ಸಂಪರ್ಕಿಸಬೇಕು. ಈ ವೇಳೆ ವೈದ್ಯರು ಕೊವಿಡ್ ತಪಾಸಣೆಗೆ ಶಿಫಾರಸ್ಸು ಮಾಡಿಲ್ಲದಿದ್ದರೆ ಅಗತ್ಯ ಔಷಧಿ ಮತ್ತು ಮುಂಜಾಗ್ರತೆ ವಹಿಸಲು ಸೂಚನೆ ನೀಡುತ್ತಾರೆ. ಇಲ್ಲವೇ ಕೊವಿಡ್ ತಪಾಸಣೆಗೆ ಶಿಫಾರಸು ಮಾಡಿದರೆ ಮೊದಲ ಖಾಸಗಿ ಅಥವಾ ಸರ್ಕಾರಿ ಸ್ವಾಬ್ ಸಂಗ್ರಹ ಕೇಂದ್ರಕ್ಕೆ ತೆರಳಿ ರಕ್ತ ಮತ್ತು ಗಂಟಲು ಮಾದರಿಯನ್ನು ನೀಡಬೇಕು. ಕೊವಿಡ್ ತಪಾಸಣಾ ವರದಿ ಬರುವವರೆಗೂ ಕಟ್ಟುನಿಟ್ಟಾಗಿ ಮನೆಯಲ್ಲೇ ಪ್ರತ್ಯೇಕವಾಗಿ ಇರುವುದು ಹಾಗೂ ವೈದ್ಯರ ಸಲಹೆ-ಸೂಚನೆಗಳನ್ನು ಪಾಲಿಸಬೇಕಾಗುತ್ತದೆ. ಕೊವಿಡ್-19 ಫಲಿತಾಂಶವು ಪಾಸಿಟಿವ್ ಬಂದರೆ ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ತಿಳಿಸಬೇಕು. ಇನ್ನು, ಕೊವಿಡ್-19 ಫಲಿತಾಂಶವು ನಕಾರಾತ್ಮಕವಾಗಿ ಬಂದರೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಸೂಚನೆಗಳನ್ನು ಪಾಲನೆ ಮಾಡುವುದು.
ಆರಂಭಿಕ ಹಂತದಲ್ಲಿ ಸೋಂಕಿತ ಲಕ್ಷಣಗಳಿದ್ದಲ್ಲಿ ಮಾಡುವುದೇನು?
ಕೊರೊನಾವೈರಸ್ ಸೋಂಕಿಗೆ ಸಂಬಂಧಿಸಿದ ಕೆಮ್ಮು, ಶೀತಜ್ವರ, ನೆಗಡಿ, ತಲೆನೋವು ಸೇರಿದಂತೆ ಆರಂಭಿಕ ಮತ್ತು ಸೌಮ್ಯ ಲಕ್ಷಣಗಳು ಕಂಡು ಬಂದಲ್ಲಿ ಆಸ್ಪತ್ರೆಗಳಿಗೆ ದಾಖಲಾಗುವುಂತಾ ಅನಿವಾರ್ಯತೆ ಇರುವುದಿಲ್ಲ. ಬದಲಿಗೆ ಹೋಟೆಲ್ ಗಳಲ್ಲಿ ಪ್ರತ್ಯೇಕವಾಗಿ ರೋಗಿಗಳೇ ಹಣ ಪಾವತಿಸಿ ಇರುವುದು. ಅಥವಾ ಸರ್ಕಾರದ ಸಾಂಸ್ಥಿಕ ಪ್ರತ್ಯೇಕತಾ ಕೇಂದ್ರಗಳಲ್ಲಿ ಇರಬೇಕಾಗುತ್ತದೆ. ಆಸ್ಪತ್ರೆಗೆ ದಾಖಲಾಗುವ ಅಗತ್ಯತೆಯಿದ್ದರೆ 108ಕ್ಕೆ ಕರೆ ಮಾಡಬೇಕಾಗುತ್ತದೆ. ಸಂಪರ್ಕ ಸಾಧ್ಯವಾಗದಿದ್ದಲ್ಲಿ 1912ಕ್ಕೆ ಡಯಲ್ ಮಾಡಬೇಕು.
ಕೊರೊನಾವೈರಸ್ ಸೋಂಕಿತರಲ್ಲಿ ಗೋಚರಿಸುವ ಲಕ್ಷಣಗಳು ಯಾವುವು?
ಪ್ಯಾಟೆ ಮಂದಿ ಹಳ್ಳಿಗೆ ಬಂದಾಗ ಕೊವಿಡ್-19 ಟೆಸ್ಟ್
ಬೆಂಗಳೂರಿನಲ್ಲಿ ಕೊರೊನಾವೈರಸ್ ಅಟ್ಟಹಾಸ ಮಿತಿ ಮೀರುತ್ತಿದ್ದು, ಸಾರ್ವಜನಿಕರು ತಮ್ಮೂರುಗಳತ್ತ ಮುಖ ಮಾಡುತ್ತಿರುವುದು ಹಳೆಯ ವಿಚಾರ. ಹೀಗೆ ಗ್ರಾಮಗಳಿಗೆ ತೆರಳಿದ ಪ್ರತಿಯೊಬ್ಬರು ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಲೇಬೇಕು ಎಂಬ ಕಡ್ಡಾಯ ನಿಯಮವನ್ನು ಜಾರಿಗೊಳಿಸಲಾಗಿದೆ. ಆದರೆ ಸಮಸ್ಯೆ ಇಷ್ಟಕ್ಕೆ ಮುಕ್ತಾಯವಾಗುವುದಿಲ್ಲ. ಅಸಲಿಗೆ ಸಮಸ್ಯೆ ಆರಂಭವಾಗುವುದೇ ಇಲ್ಲಿ.
ಇದು ಉದಾಹರಣೆಯ ವಾಸ್ತವ ಕಥೆ
ಬೆಂಗಳೂರಿನಿಂದ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಗ್ರಾಮವೊಂದಕ್ಕೆ ವ್ಯಕ್ತಿಯೊಬ್ಬರು ವಾಪಸ್ಸಾಗುತ್ತಾರೆ. ಹರಿಹರ ತಾಲೂಕು ಆಸ್ಪತ್ರೆಯಲ್ಲಿ ಕೊವಿಡ್-19 ಟೆಸ್ಟ್ ಮಾಡಿಸಿಕೊಂಡ ವ್ಯಕ್ತಿಯ ವೈದ್ಯಕೀಯ ವರದಿಯು ಗರಿಷ್ಠ ನಾಲ್ಕು ದಿನಗಳಲ್ಲಿ ಬರುತ್ತದೆ. ಒಂದು ವೇಳೆ ವ್ಯಕ್ತಿಯಲ್ಲಿ ಕೊರೊನಾವೈರಸ್ ಪಾಸಿಟಿವ್ ಬಂದಲ್ಲಿ ತಕ್ಷಣ ಸೋಂಕಿತ ವ್ಯಕ್ತಿಗೆ ಮಾಹಿತಿ ನೀಡುತ್ತಾರೆ. ಆರೋಗ್ಯ ಅಧಿಕಾರಿಗಳು, ವೈದ್ಯರು ಹಾಗೂ ಕೊರೊನಾ ವಾರಿಯರ್ಸ್ ವ್ಯಕ್ತಿ ವಾಸವಿರುವ ಗ್ರಾಮಕ್ಕೆ ತೆರಳಿ ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾರೆ.
ಪಾಸಿಟಿವ್ ಬಾರದೇ ಇದ್ದರೆ ಮಾಹಿತಿ ನೀಡುವುದಿಲ್ಲವೇಕೆ?
ಕೊರೊನಾವೈರಸ್ ಸೋಂಕು ಪಾಸಿಟಿವ್ ಬಂದಲ್ಲಿ ಸೋಂಕಿತನಿಗೆ ಮಾಹಿತಿ ನೀಡಿ ಆತನನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ. ಆದರೆ, ಕೊವಿಡ್ ಟೆಸ್ಟ್ ಮಾಡಿಸಿಕೊಂಡ ವ್ಯಕ್ತಿಯಲ್ಲಿ ಸೋಂಕು ನೆಗೆಟಿವ್ ಎಂದು ಬಂದಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ತಾಲೂಕು ಕೇಂದ್ರಗಳಿಂದ ಯಾವುದೇ ಸಂದೇಶಗಳೂ ಪಾಸ್ ಆಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಬೆಂಗಳೂರಿನಂತಾ ನಗರಗಳಿಂದ ವಾಪಸ್ಸಾದ ವ್ಯಕ್ತಿಯು ಕೊವಿಡ್ ಟೆಸ್ಟ್ ಮಾಡಿಸಿಕೊಂಡು ಹಳ್ಳಿಗೆ ವಾಪಸ್ ಆದ ಸಂದರ್ಭದಲ್ಲಿ ಆತನಲ್ಲಿ ಖಡಾಖಂಡಿತವಾಗಿ ಆತಂಕ, ಭಯ, ಸೋಂಕು ತಗಲಿರಬಹುದು ಎಂಬ ನಡುಕ ಇದ್ದೇ ಇರುತ್ತದೆ. ಇಂಥದರಲ್ಲಿ ಸೋಂಕಿನ ತಪಾಸಣೆ ವರದಿಯನ್ನೇ ಎದುರು ನೋಡುತ್ತಿದ್ದ ವ್ಯಕ್ತಿಗೆ ನೆಗೆಟಿವ್ ವರದಿ ಬಗ್ಗೆ ಮಾಹಿತಿ ನೀಡಿದರೆ ನಿರಾಳನಾಗುತ್ತಾರೆ. ಇಲ್ಲದಿದ್ದಲ್ಲಿ ಭಯದಲ್ಲೇ ಬದುಕುವಂತಾ ಮನಸ್ಥಿತಿ ಉದ್ಭವವಾಗುತ್ತದೆ. ವ್ಯಕ್ತಿ ಅಷ್ಟೇ ಅಲ್ಲದೇ ಹಳ್ಳಿಯಲ್ಲಿರುವ ಆತನ ಮನೆಯವರು, ನೆರೆ ಹೊರೆಯವರು ಹೀಗೆ ಪ್ರತಿಯೊಬ್ಬರು ಭಯದಲ್ಲೇ ಬದುಕುವಂತಾ ಪರಿಸ್ಥಿತಿ ಎದುರಿಸಬೇಕಾಗಿರುತ್ತದೆ.
ಸೋಂಕು ನೆಗೆಟಿವ್ ಬಂದಲ್ಲಿ ತಿಳಿದುಕೊಳ್ಳುವುದು ಹೇಗೆ?
ಕೊರೊನಾವೈರಸ್ ಸೋಂಕು ತಗಲಿಲ್ಲ ಎಂದಾದಲ್ಲಿ ವ್ಯಕ್ತಿಗೆ ಆ ಬಗ್ಗೆ ಮಾಹಿತಿ ನೀಡುವುದಿಲ್ಲ. ಅದನ್ನು ಪಡೆಯುವುದಕ್ಕೆ ವ್ಯಕ್ತಿಯೇ ಕೊವಿಡ್ ಟೆಸ್ಟ್ ಸೆಂಟರ್ ಗೆ ಮತ್ತೊಮ್ಮೆ ಭೇಟಿ ನೀಡಬೇಕು. ಆಗ ವರದಿ ನೆಗೆಟಿವ್ ಬಂದಿರುವ ಬಗ್ಗೆ ತಿಳಿಸಲಾಗುತ್ತದೆ. ಇಲ್ಲದೇ ಹೋದಲ್ಲಿ ನೆಗೆಟಿವ್ ಎಂದು ತಾವೇ ತಿಳಿದುಕೊಂಡು ವ್ಯಕ್ತಿ ಸುಮ್ಮನೆ ಇರಬೇಕಂತೆ. ಇಂಥದೊಂದು ವ್ಯವಸ್ಥೆ ಗ್ರಾಮಸ್ಥರನ್ನು ಮತ್ತು ಗ್ರಾಮಗಳಿಗೆ ವಲಸೆ ಹೋಗಿರುವ ಜನರನ್ನು ಕಾಡುತ್ತಿದೆ.
ವರದಿ ಪಡೆಯಲು ತೆರಳಿದ ಸಂದರ್ಭದಲ್ಲಿ ಸೋಂಕು ಅಂಟಿದರೆ?
ಕೊವಿಡ್ ಟೆಸ್ಟ್ ಮಾಡಿಸಿಕೊಂಡು ನೆಗೆಟಿವ್ ಬಂದಿರುವ ವ್ಯಕ್ತಿಯು ಆ ವರದಿ ಬಗ್ಗೆ ತಿಳಿದುಕೊಳ್ಳುವುದಕ್ಕೆ ಗ್ರಾಮದಿಂದ ತಾಲೂಕು ಕೇಂದ್ರಕ್ಕೆ ತೆರಳುತ್ತಾನೆ. ಈ ಸಂದರ್ಭದಲ್ಲಿ ಕೊವಿಡ್-19 ಟೆಸ್ಟಿಂಗ್ ಸೆಂಟರ್ ನಲ್ಲೋ ಅಥವಾ ತಾಲೂಕು ಪ್ರದೇಶದಲ್ಲೋ ಯಾವುದೋ ಒಂದು ಮೂಲದಿಂದ ನೆಗೆಟಿವ್ ಬಂದಿದ್ದ ವ್ಯಕ್ತಿಗೇ ಸೋಂಕು ಅಂಟಿಕೊಂಡರೆ ಮುಂದೇನು ಗತಿ. ನೆಗೆಟಿವ್ ವರದಿ ಪಡೆದುಕೊಂಡ ವ್ಯಕ್ತಿಯು ಗ್ರಾಮಕ್ಕೆ ತೆರಳುವ ವೇಳೆಗೆ ಆತನಲ್ಲಿ ವೈರಸ್ ಹೊಕ್ಕಿರುತ್ತದೆ. ಇದರ ಪರಿವೇ ಇಲ್ಲದ ವ್ಯಕ್ತಿಯು ರಾಜಾರೋಷವಾಗಿ ಗ್ರಾಮದಲ್ಲಿ ಅಲೆದಾಡುತ್ತಾರೆ. ಇದರಿಂದ ಗ್ರಾಮಗಳಲ್ಲೂ ಕೂಡಾ ಕೊರೊನಾವೈರಸ್ ಸೋಂಕು ಎಲ್ಲೆ ಮೀರಿ ಬೆಳೆಯುತ್ತಿದೆ.
ನೆಗೆಟಿವ್ ವರದಿ ಬಗ್ಗೆಯೂ ಹಳ್ಳಿಗಾಡಿನ ಜನರಿಗೆ ಮಾಹಿತಿ ನೀಡಿ
ಕೊರೊನಾವೈರಸ್ ಸೋಂಕು ಪಾಸಿಟಿವ್ ಬಂದಾಗ ಹೇಗೆ ಮೊಬೈಲ್ ಗೆ ಕರೆ ಮಾಡಿ ಮಾಹಿತಿ ನೀಡಲಾಗುತ್ತಿದೆಯೋ ಅದೇ ರೀತಿ ನೆಗೆಟಿವ್ ವರದಿಗಳ ಬಗ್ಗೆಯೂ ಕೊವಿಡ್ ಟೆಸ್ಟ್ ಮಾಡಿಸಿಕೊಂಡವರಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಇಲ್ಲದೇ ಹೋದಲ್ಲಿ ವರದಿಯ ನಿರೀಕ್ಷೆಯಲ್ಲೇ ಜನರು ಭಯದಲ್ಲಿ ಬದುಕುವಂತಾ ಪರಿಸ್ಥಿತಿ ಎದುರಾಗುತ್ತದೆ. ಮನೆಯಲ್ಲಿ ಒಬ್ಬರು ಕೊವಿಡ್ ಟೆಸ್ಟ್ ಮಾಡಿಸಿಕೊಂಡ ಸಂದರ್ಭದಲ್ಲಿ ಮನೆಯ ಮಂದಿಯೆಲ್ಲಾ ಆತಂಕದಲ್ಲೇ ದಿನ ದೂಡುವಂತಾಗುತ್ತದೆ.