ಕೊರೊನಾ 3ನೇ ಅಲೆಯಿಂದ ದೂರವುಳಿಯಲು ಜನಸಾಮಾನ್ಯರು ಸರಳವಾಗಿ ಮಾಡಬಹುದಾದ್ದೇನು?
ಇಡೀ ದೇಶವನ್ನು ಹೈರಾಣುಗೊಳಿಸಿದ್ದ ಕೊರೊನಾ ಎರಡನೇ ಅಲೆಯ ಭೀಕರತೆ ನಮ್ಮೆಲ್ಲರ ಕಣ್ಣಮುಂದೆಯೇ ಇದೆ. ಸಾವಿರ- ಲಕ್ಷಾಂತರ ಜನರ ಸಾವು ನೋವಿಗೆ ಕಾರಣವಾದ ಕೊರೊನಾ ಸೋಂಕಿನೊಂದಿಗೆ ನಡೆದ ಸೆಣೆಸಾಟವೂ ಹಲವು ಪಾಠಗಳನ್ನು ಕಲಿಸಿದೆ.
ಮಾರ್ಚ್ ತಿಂಗಳಿನಲ್ಲಿ ಕಾಣಿಸಿಕೊಂಡ ಕೊರೊನಾ ಎರಡನೇ ಅಲೆ, ಜೂನ್ ತಿಂಗಳಿನಲ್ಲಿ ನಿಯಂತ್ರಣಕ್ಕೆ ಬಂದಿದ್ದು, ಈಚೆಗೆ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಎರಡನೇ ಅಲೆಯಲ್ಲಿ ಪ್ರಕರಣಗಳು ಇಳಿಯುತ್ತಿದ್ದಂತೆ, ಮೂರನೇ ಅಲೆ ಆತಂಕ ಎದುರಾಗಿದೆ. ಆಗಸ್ಟ್ ಕೊನೆ ವೇಳೆಗೆ ಮೂರನೇ ಅಲೆ ಭಾರತದಲ್ಲಿ ಆರಂಭವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದರೆ ಸೋಂಕಿನ ಕುರಿತು ಆತಂಕ ಪಡುವ ಮುನ್ನ ಅದರಿಂದ ದೂರವುಳಿಯುವ ಪ್ರಯತ್ನವನ್ನೂ ಮಾಡಬೇಕಿದೆ. ಕೆಲವು ಸರಳ ಮಾರ್ಗಗಳನ್ನು ಅನುಸರಿಸುವ ಮೂಲಕ ಕೊರೊನಾ ಮೂರನೇ ಅಲೆಯಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಬಹುದಾಗಿದೆ. ಕೊರೊನಾ ಮೂರನೇ ಅಲೆಯಿಂದ ತಪ್ಪಿಸಿಕೊಳ್ಳಲು ಜನರು ಅನುಸರಿಸಬೇಕಾದ ಸರಳ ಕ್ರಮಗಳೇನು? ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ...
30 ದಿನಗಳಲ್ಲಿ ದೇಶದ 75% ಜನರಿಗೆ ಒಂದು ಡೋಸ್ ಲಸಿಕೆಯನ್ನಾದರೂ ನೀಡಲೇಬೇಕು; ಐಸಿಎಂಆರ್
ಶುಚಿತ್ವ ತುಂಬಾ ಮುಖ್ಯ
ಕೊರೊನಾ ಸೋಂಕನ್ನು ದೂರವಿಡುವಲ್ಲಿ ಶುಚಿತ್ವ ಬಹುಮುಖ್ಯ ಪಾತ್ರ ವಹಿಸುತ್ತದೆ. ಹೊರಗಿನಿಂದ ಮನೆಗೆ ವಾಪಸ್ಸಾದರೆ ಕೈಕಾಲು ತೊಳೆದುಕೊಳ್ಳುವುದು, ಸ್ನಾನ ಮಾಡುವುದು ಅವಶ್ಯಕವಾಗಿರಲಿ. ಹೊರಗಿನಿಂದ ಸಾಮಾನುಗಳನ್ನು ತಂದರೆ, ಅವಶ್ಯವಿದ್ದಲ್ಲಿ ಅದನ್ನು ಶುದ್ಧಗೊಳಿಸಿದರೆ ಒಳಿತು. ಇದರಿಂದ ಸೋಂಕು ಅಪ್ಪಿತಪ್ಪಿ ಸೇರಿದ್ದರೂ ಅದನ್ನು ದೇಹದ ಒಳಗೆ ಹೋಗಲು ಬಿಡದಂತೆ ತಡೆಯಬಹುದಾಗಿದೆ. ಹೀಗಾಗಿ ದಿನನಿತ್ಯದ ಜೀವನದಲ್ಲಿ ಶುಚಿತ್ವವನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ.
ಗಮನವಿಡಿ ಈ ಮೂರು ಅಂಶಗಳ ಬಗ್ಗೆ
ಕೊರೊನಾ ಮೂರನೇ ಅಲೆಯಿಂದ ತಪ್ಪಿಸಿಕೊಳ್ಳಲು ಯಾವ ನಿಯಮಗಳನ್ನು ಪಾಲಿಸಬಹುದು ಎಂಬುದರ ಕುರಿತು ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಮೂರು ಮುಖ್ಯ ಅಂಶಗಳನ್ನು ಉಲ್ಲೇಖಿಸಿದ್ದಾರೆ. "ಮೊದಲನೆಯದಾಗಿ, ಕೊರೊನಾ ಮೂಲ ನಿಯಮಗಳ ಪಾಲನೆ ಬಹುಮುಖ್ಯ ಸಂಗತಿ ಎಂದಿದ್ದಾರೆ. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತಿ ಅವಶ್ಯಕ. ಅನವಶ್ಯಕ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಎರಡನೆಯದಾಗಿ, ಆರೋಗ್ಯದಲ್ಲಿ ಒಂದಿಷ್ಟು ಏರುಪೇರಾದರೂ ಅವಶ್ಯಕ ಚಿಕಿತ್ಸೆ ಪಡೆದುಕೊಳ್ಳಬೇಕು. ಮೂರನೇಯದಾಗಿ, ಲಸಿಕೆ ಪಡೆದುಕೊಳ್ಳುವುದು. ಈ ಮೂರು ಅಂಶಗಳನ್ನು ಪಾಲಿಸಿದರೆ ಕೊರೊನಾ ಸೋಂಕಿನಿಂದ ದೂರವುಳಿಯಬಹುದು" ಎಂದು ಅವರು ಹೇಳಿದ್ದಾರೆ.
ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂದಿನ 100ರಿಂದ 125 ದಿನಗಳು ಅತಿ ನಿರ್ಣಾಯಕ; ಕೇಂದ್ರ
ಉತ್ತಮ ಆಹಾರ ಪದ್ಧತಿ ಜೊತೆಗಿರಲಿ
ಕೊರೊನಾ ಸೋಂಕಿನಿಂದ ದೂರವುಳಿಯಲು ದಿನನಿತ್ಯದ ಆಹಾರದಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಿ. ಇದು ಮಳೆಗಾಲವೂ ಆದ್ದರಿಂದ ಬಿಸಿ ಪದಾರ್ಥಗಳ ಸೇವನೆ ಅವಶ್ಯಕವಾಗಿರಲಿ. ರೋಗನಿರೋಧಕ ಶಕ್ತಿ ಹೆಚ್ಚಿಸಬಲ್ಲ ಆಹಾರದ ಸೇವನೆಯೆಡೆ ಗಮನ ನೀಡಿ. ದೇಹಕ್ಕೆ ಶಕ್ತಿಯನ್ನು ತಂದುಕೊಡಬಲ್ಲ, ನಾಲಗೆಗೂ ರುಚಿಕರವಾಗಬಲ್ಲ ಆಹಾರಗಳನ್ನು ಮನೆಯಲ್ಲಿಯೇ ತಯಾರಿಸಿ ಸೇವಿಸಿ. ಮಕ್ಕಳಿಗೆ ಬಹುಮುಖ್ಯವಾಗಿ ಸೊಪ್ಪು, ಹಣ್ಣುಗಳ ಸೇವನೆಗೆ ಪ್ರಾಮುಖ್ಯ ನೀಡಿ...
ಆರೋಗ್ಯದಲ್ಲಿ ಒಂದಿಷ್ಟು ತೊಂದರೆಯಾದರೂ ವೈದ್ಯರನ್ನು ಸಂಪರ್ಕಿಸಿ
ಎಷ್ಟೆಲ್ಲಾ ಕಾಳಜಿ ವಹಿಸಿದರೂ ಆರೋಗ್ಯದಲ್ಲಿ ಒಮ್ಮೊಮ್ಮೆ ಏರುಪೇರಾಗುವುದು ಸಹಜ. ಆರೋಗ್ಯದಲ್ಲಿ ಅಸಹಜತೆ ಕಂಡುಬಂದರೆ, ಸ್ವಾಸ್ಥ್ಯ ಸರಿಯಿಲ್ಲವೆಂಬ ಅನುಮಾನ ಬಂದರೆ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ. ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಸೂಚನೆಯನ್ನು ಕೆಲವು ತಜ್ಞರು ನೀಡಿರುವುದರಿಂದ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವೈದ್ಯರಿಂದ ಸಲಹೆ ಪಡೆಯಿರಿ.
ಜನಸಂದಣಿಯಿಂದ ದೂರವುಳಿಯಿರಿ
ಕೊರೊನಾ ಎರಡನೇ ಅಲೆ ಅಂತ್ಯವಾಗಿಲ್ಲವಾದರೂ ಕೊರೊನಾ ನಿಯಮಗಳ ಸಡಿಲಿಕೆ ಮಾಡುತ್ತಿದ್ದಂತೆ ಎಲ್ಲೆಡೆಯೂ ಜನಜಂಗುಳಿ ಸೇರುತ್ತಿರುವುದು ಕಂಡುಬರುತ್ತಿದೆ. ಆದರೆ ಇಂಥ ಕಠಿಣ ಸಮಯದಲ್ಲಿ ಯಾವುದೇ ಅನ್ಯ ಅವಕಾಶ ತೆಗೆದುಕೊಳ್ಳದೇ ಜನಜಂಗುಳಿಯಿಂದ ದೂರ ಉಳಿಯುವುದು ಅತ್ಯುತ್ತಮ ಆಯ್ಕೆಯಾಗಲಿದೆ.
ಲಸಿಕೆ ಪಡೆದುಕೊಳ್ಳುವುದರಿಂದ ಹಿಂಜರಿಕೆ ಬೇಡ
ಕೊರೊನಾ ಸೋಂಕಿನ ವಿರುದ್ಧ ಹೋರಾಟಕ್ಕೆ ಕೊರೊನಾ ಲಸಿಕೆ ಪಡೆದುಕೊಳ್ಳುವುದು ಅವಶ್ಯಕವಾಗಿದೆ. ಹೀಗಾಗಿ ಯಾವುದೇ ಹಿಂಜರಿಕೆಯಿಲ್ಲದೇ ಲಸಿಕೆ ಪಡೆದುಕೊಳ್ಳಿ ಎಂದು ಜನರಿಗೆ ಕೇಂದ್ರ ಕೂಡ ಮನವಿ ಮಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಐಸಿಎಂಆರ್ ಲಸಿಕೆ ಕುರಿತು ಅಧ್ಯಯನ ನಡೆಸಿದ್ದು, ಇನ್ನು ಮೂವತ್ತು ದಿನಗಳಲ್ಲಿ ಭಾರತದ ಒಟ್ಟಾರೆ ಜನಸಂಖ್ಯೆಯ 75%ಗೆ ಕನಿಷ್ಠ ಒಂದು ಡೋಸ್ ಕೊರೊನಾ ಲಸಿಕೆ ನೀಡಿದರೆ ಮಾತ್ರ ಕೊರೊನಾ ಮೂರನೇ ಅಲೆಯ ನಿಯಂತ್ರಣ ಸಾಧ್ಯ ಎಂದು ಎಚ್ಚರಿಸಿದೆ.
ಮುಂದಿನ ನೂರು ದಿನಗಳು ನಿರ್ಣಾಯಕ
"ಕೆಲವು ದಿನಗಳಿಂದ ಕೊರೊನಾ ಪ್ರಕರಣಗಳ ಕುಸಿತ ನಿಧಾನಗತಿಯಾಗುತ್ತಿದೆ. ಕೊರೊನಾ ಎರಡನೇ ಅಲೆ ಕೊನೆಯಾಗಿದೆ ಎಂದು ಜನರು ಭಾವಿಸಿದಂತಿದೆ. ಆದರೆ ಇದು ಎಚ್ಚರಿಕೆಯ ಸಂಕೇತವಾಗಿದೆ. ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮುಂದಿನ ನೂರರಿಂದ ನೂರಾ ಇಪ್ಪತ್ತೈದು ದಿನಗಳು ನಿರ್ಣಾಯಕವಾಗಿವೆ" ಎಂದು ನೀತಿ ಆಯೋಗ ಸದಸ್ಯ ಡಾ. ವಿ.ಕೆ. ಪೌಲ್ ಎಚ್ಚರಿಸಿದ್ದಾರೆ. ಭಾರತದಲ್ಲಿ ಕೊರೊನಾ ಮೂರನೇ ಅಲೆ ಸಂಭವಿಸದಂತೆ ನೋಡಿಕೊಳ್ಳಬೇಕಾದ ಗುರಿಯನ್ನು ಪ್ರಧಾನಿ ಮೋದಿಯವರು ಹೊಂದಿದ್ದು, ಎಲ್ಲರೂ ಇದರತ್ತ ಕಾರ್ಯ ನಿರ್ವಹಿಸಬೇಕಿದೆ ಎಂದು ಅವರು ಹೇಳಿದ್ದಾರೆ.