ಅಪರೂಪದ ರಾಜಕಾರಣಿ- ಸಾಹಿತಿ ಮುತ್ತುವೇಲ್ ಕರುಣಾನಿಧಿ ನಂತರ ಮುಂದೇನು?
ತಮಿಳುನಾಡು ರಾಜಕಾರಣದ ಆಲದ ಮರ ಮುತ್ತುವೇಲ್ ಕರುಣಾನಿಧಿ (ಎಂ.ಕರುಣಾನಿಧಿ) ತುಂಬು ಜೀವನದ ಪುಸ್ತಕ ಕೊನೆ ಅಧ್ಯಾಯ ಮುಗಿದಿದೆ. ರಾಜಕಾರಣ ಹಾಗೂ ಸಾಹಿತ್ಯ ಎಂಬುದು ತೀರಾ ಅಪರೂಪದ ಜೋಡಿ. ಅಂಥ ಅಪರೂಪದ ಕವಿ-ಸಿನಿಮಾ ಸಾಹಿತಿ-ರಾಜಕಾರಣಿ ಆಗಿದ್ದವರು ಕರುಣಾನಿಧಿ. ದೀರ್ಘ ಅವಧಿಗೆ ದ್ರಾವಿಡ ಮುನ್ನೆತ್ರ ಕಳಗಂ (ಡಿಎಂಕೆ) ಮುನ್ನಡೆಸಿದ ಅವರ ಅನುಪಸ್ಥಿತಿ ಇಡೀ ತಮಿಳುನಾಡಿಗೆ ಕಾಡಲಿದೆ.
ದ್ರಾವಿಡ ರಾಜಕಾರಣದ ಪ್ರಮುಖ ಹೆಸರುಗಳ ಪೈಕಿ ಒಂದಾದ ಕರುಣಾನಿಧಿ ಹಾಗೂ ಎಂಜಿಆರ್ ಅವರ ನಂತರ ಅಲ್ಲಿನ ರಾಜಕಾರಣದ ಪ್ರಮುಖರಾಗಿದ್ದ ಜೆ.ಜಯಲಲಿತಾ ಇವರಿಬ್ಬರ ಸಾವಿನಿಂದ ಒಟ್ಟಾರೆ ಪ್ರಾದೇಶಿಕ ಪಕ್ಷಗಳ ಅಸ್ತಿತ್ವಕ್ಕೆ ಸವಾಲಿನ ಸಮಯವಿದು. ಕರುಣಾನಿಧಿ ಅವರ ಮಗ ಎಂ.ಕೆ.ಸ್ಟಾಲಿನ್ ಡಿಎಂಕೆ ಮುನ್ನಡೆಸಬಹುದು.
ಕವಿ ಹೃದಯ, ಬಂಡಾಯದ ಮನಸ್ಸಿನ 'ಕಲೈನಾರ್' ಕರುಣಾನಿಧಿ
ಆದರೆ, ಸೈದ್ಧಾಂತಿಕವಾಗಿ ಆ ಮುಖ ಉಳಿಸಿಕೊಳ್ಳಲು ಸಾಧ್ಯವೆ? ಹಾಗೂ ತಮಿಳುನಾಡು ರಾಜಕಾರಣದ ಇಂಚಿಂಚೂ ಗೊತ್ತಿದ್ದ ಕರುಣಾನಿಧಿ ಅವರ ಮಟ್ಟಕ್ಕೆ ಜನರ ಮನಗಳಿಗೆ ತಲುಪಲು ಆಗುತ್ತದೆಯೆ ಎಂಬ ಪ್ರಶ್ನೆ ಇದ್ದೇಇದೆ. ಇನ್ನು ಡಿಎಂಕೆ ಕೂಡ ಕುಟುಂಬ ರಾಜಕಾರಣದಿಂದ ಹೊರತಾಗಿರಲಿಲ್ಲ.
ದೆಹಲಿಗೆ ಕನಿಮೊಳಿ, ತಮಿಳುನಾಡಿಗೆ ಸ್ಟಾಲಿನ್
ಈಗಾಗಲೇ ಸ್ಟಾಲಿನ್ ರನ್ನು ತಮ್ಮ ಉತ್ತರಾಧಿಕಾರಿಯಾಗಿ ಕರುಣಾನಿಧಿ ಅವರು ಘೋಷಣೆ ಮಾಡಿದ್ದರು. ಡಿಎಂಕೆ ಕಾರ್ಯಾಧ್ಯಕ್ಷರಾಗಿ ಸ್ಟಾಲಿನ್ ಇದ್ದರು. ಇನ್ನು ತಮ್ಮ ಮಗಳು ಕನಿಮೊಳಿ ಅವರನ್ನು ಸಾಹಿತ್ಯದ ಉತ್ತರಾಧಿಕಾರಿ ಎಂಬಂತೆ ಬಿಂಬಿಸಿದ್ದರು. ದೆಹಲಿ ರಾಜಕಾರಣವನ್ನು ಸಂಭಾಳಿಸಲು ಮಗಳು ಕನಿಮೊಳಿ ಹಾಗೂ ತಮಿಳುನಾಡು ರಾಜಕಾರಣಕ್ಕೆ ಸ್ಟಾಲಿನ್ ಎಂಬುದು ಅವರ ಲೆಕ್ಕಾಚಾರದಂತಿತ್ತು.
ಹಗರಣಗಳು ಹೊಡೆತ ಕೊಟ್ಟಿದ್ದವು
ಬಹಳ ಕಾಲದಿಂದ ವ್ಹೀಲ್ ಛೇರ್ ಮೇಲೆ ಕಾಣಿಸಿಕೊಳ್ಳುತ್ತಿದ್ದ ಕರುಣಾನಿಧಿಯವರ ಡಿಎಂಕೆ ಪಕ್ಷಕ್ಕೆ ಹಗರಣಗಳು ಒಂದಿಷ್ಟು ಹೊಡೆತ ಕೊಟ್ಟಿದ್ದು ಸುಳ್ಳಲ್ಲ. ಅದರಿಂದ ಒಂದಿಷ್ಟು ಕಳೆಗುಂದಿದಂತೆ ಕಂಡುಬಂದ ಪಕ್ಷವು ಕಳೆದ ಬಾರಿ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸೋತ ಮೇಲೆ ಇನ್ನು ಡಿಎಂಕೆ ಕಥೆ ಅಷ್ಟೇ ಎಂದು ಮಾತನಾಡುವಂತೆ ಆಯಿತು.
ಎರಡೂ ಪಕ್ಷಕ್ಕೆ ಒಮ್ಮೊಮ್ಮೆ ಅವಕಾಶ
ಆದರೆ, ತಮಿಳುನಾಡಿನ ರಾಜಕೀಯ ಗಿರಕಿ ಹೊಡೆಯುತ್ತಿದ್ದುದೇ ಜಯಲಲಿತಾ ನೇತೃತ್ವದ ಎಡಿಎಂಕೆ ಹಾಗೂ ಕರುಣಾನಿಧಿ ಅವರ ಡಿಎಂಕೆ ಸುತ್ತ. ಒಮ್ಮೆ ಅವರು, ಮತ್ತೊಮ್ಮೆ ಇವರು ಎಂಬಂತೆ ಅಲ್ಲಿನ ಜನರು ಸಹ ಎರಡೂ ಪಕ್ಷಕ್ಕೂ ಒಮ್ಮೊಮ್ಮೆ ಅವಕಾಶ ನೀಡುತ್ತಾ ಬಂದಿದ್ದಾರೆ. ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಲೆಕ್ಕಾಚಾರ ಕೈ ಕೊಟ್ಟಿತ್ತು.
ಸಿನಿಮಾ ರಂಗದ ಬಂದವರಿಗೆ ರಾಜಕೀಯ ಯಶಸ್ಸು
ಕಳೆದ ಡಿಸೆಂಬರ್ ನಲ್ಲಿ ಜಯಲಲಿತಾರ ನಿಧನಾನಂತರ ಒಂದು ಬಗೆಯ ಪ್ರಶ್ನೆ ಉದ್ಭವಿಸಿದರೆ, ಇದೀಗ ಕರುಣಾನಿಧಿ ತೀರಿಕೊಳ್ಳುವ ಮೂಲಕ ಮುಂದೇನು, ಯಾರು ಎಂಬ ಶೂನ್ಯವೇ ಎದುರಾದಂತೆ ಆಗಿದೆ. ಈಗಾಗಲೇ ರಜನೀಕಾಂತ್ ಹಾಗೂ ಕಮಲ್ ಹಾಸನ್ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಘೋಷಣೆ ಮಾಡಿದ್ದಾರೆ. ವಿಜಯ್ ಕಾಂತ್, ಶರತ್ ಕುಮಾರ್ ಕೂಡ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲಿನ ಜನರು ಕೂಡ ಸಿನಿಮಾ ರಂಗದಿಂದ ಬಂದವರಿಗೆ ಮಣೆ ಹಾಕಿದ ಉದಾಹಣೆ ಢಾಳಾಗಿ ಕಾಣುತ್ತದೆ. ಇವರಿಬ್ಬರಲ್ಲಿ ಯಾರು ರಾಜಕೀಯವಾಗಿ ಹೆಚ್ಚು ಸಕ್ರಿಯರಾಗಬಹುದು ಎಂದು ನೋಡಬೇಕಿದೆ.