ಮೋದಿ ಗುಜರಾತ್ ಮುಖ್ಯಮಂತ್ರಿಯಾದಾಗ ತಾಯಿ ಆಡಿದ ಮಾತುಗಳೇನು
Recommended Video
ಕಾಂಗ್ರೆಸ್ ನಾಯಕರು ಮೋದಿಯವರ ತಾಯಿ ಹೀರಾಬೆನ್ ಮೋದಿಯನ್ನು ಅಣಕಿಸಿದಾಗ, ಮೋದಿಯವರಿಗೆ ತಮ್ಮ ತಾಯಿಯ ಬಗ್ಗೆ ಎಷ್ಟು ಪ್ರೀತಿ, ಮಮತೆಯಿದೆ ಎಂಬುದು ಮನದಟ್ಟಾಯಿತು. ಕುಸಿಯುತ್ತಿದ್ದ ರುಪಾಯಿ ಮೌಲ್ಯವನ್ನು ಮೋದಿಯವರ ವೃದ್ಧ ತಾಯಿಯೊಂದಿಗೆ ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಹೋಲಿಸಿದಾಗ, ಮಧ್ಯ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ಮೋದಿಯವರು ತಮ್ಮ ತಾಯಿಯನ್ನು ಬೆಂಬಲಿಸಿದ್ದರು. ಆದ್ದರಿಂದ, ಹ್ಯೂಮನ್ಸ್ ಆಫ್ ಬಾಂಬೆಗೆ ಅವರು ನೀಡಿದ ಸಂದರ್ಶನದ ನಾಲ್ಕನೇ ಭಾಗದಲ್ಲಿ ಅವರು ತಮ್ಮ ತಾಯಿಯ ಮುಗ್ಧತೆ, ಒಳ್ಳೆಯತನದ ಬಗ್ಗೆ ಹೇಳಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ.
ಎಂಥ ಸಂಕಷ್ಟದ ಸಮಯದಲ್ಲಿಯೂ ಮಕ್ಕಳನ್ನು ಬೆಳೆಸುವಾಗ ಅವರ ತಾಯಿ ಹೊಂದಿದ್ದ ಕಷ್ಟಸಹಿಷ್ಣುತೆ, ಧೈರ್ಯದ ಬಗ್ಗೆ ಮೋದಿಯವರು ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ದೇಶವಿದೇಶಗಳಲ್ಲಿ ಉತ್ತಮ ನಾಯಕ ಎಂದು ಮಾನ್ಯತೆ ಪಡೆದ ಮಗನ ಜನಪ್ರಿಯತೆಯಿಂದಾಗಿ, ಅವರು ಪ್ರಧಾನಿ ಹುದ್ದೆ ಹೊಂದಿರುವುದು ಕೂಡ ತಾಯಿಗೆ ಅಷ್ಟೇನು ಮಹತ್ವದ್ದು ಅಂತ ಅನ್ನಿಸಲೇ ಇಲ್ಲ. ತಾವು ಗುಜರಾತ್ ನಲ್ಲಿ ಮುಖ್ಯಮಂತ್ರಿಯಾಗಿ ಜನಪ್ರಿಯತೆ ಗಳಿಸಿದ್ದರಿಂದ ಪ್ರಧಾನಿಯಾದಾಗ ಅಮ್ಮನಿಗೆ ಅಂತಹ ಅಚ್ಚರಿ ಆಗಲೇ ಇಲ್ಲ ಎಂದು ಮೋದಿ ಹೇಳುತ್ತಾರೆ.
"ನಾನು ಪ್ರಧಾನಿಯಾದ ನನ್ನ ತಾಯಿ ಹೇಗೆ ಪ್ರತಿಕ್ರಿಯಿಸಿದರು ಎಂದು ಹಲವಾರು ಜನ ನನ್ನ ಕೇಳುತ್ತಾರೆ. ಆದರೆ ಈ ಸಮಯಕ್ಕಾಗಲೇ 'ಮೋದಿ' ಎಂಬ ಹೆಸರು ಚಾಲ್ತಿಯಲ್ಲಿ ಇತ್ತು, ನನ್ನ ಫೋಟೋಗಳು ಎಲ್ಲೆಡೆ ಪ್ರಿಂಟ್ ಆಗಿ ಅದಾಗಲೇ ಭಾರೀ ಕುತೂಹಲ ಮೂಡಿಸಿದ್ದವು. ಆದರೆ, ನನಗೆ ತಿಳಿದಿರುವ ಮಟ್ಟಿಗೆ ನಾನು ಮುಖ್ಯಮಂತ್ರಿಯಾಗಿದ್ದೇ ನನ್ನ ತಾಯಿಗೆ ದೊಡ್ಡ ಮೈಲಿಗಲ್ಲು" ಎಂದು ಮೋದಿ ಅನಿಸಿಕೆ ಹಂಚಿಕೊಳ್ಳುತ್ತಾರೆ.
ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಬಂದಾಗ ಅವರು ದೆಹಲಿಯಲ್ಲಿದ್ದರು. ಪ್ರಮಾಣ ವಚನ ಸ್ವೀಕರಿಸುವ ಮುನ್ನ ತಕ್ಷಣವೇ ಅವರು ಅಹ್ಮದಾಬಾದಿಗೆ ತೆರಳಿ ಅಮ್ಮನನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಆ ಭೇಟಿ ಮತ್ತು ತಾಯಿ ಹೀರಾಬೆನ್ ಆ ಸಂದರ್ಭದಲ್ಲಿ ತಮ್ಮ ಮಗನಿಗೆ ನೀಡಿದ ಅನಿರೀಕ್ಷಿತ ಉಪದೇಶ ಮೋದಿಯವರ ಜೀವನದಲ್ಲಿ ಅಪಾರ ಪ್ರಭಾವ ಬೀರಿದೆ.
"ನನಗೆ ಈ ಸುದ್ದಿ ತಿಳಿದಾಗ ದೆಹಲಿಯಲ್ಲಿ ಇದ್ದೆ. ಪ್ರಮಾಣ ವಚನ ಸ್ವೀಕರಿಸುವ ಮುನ್ನ ನಾನು ಅಹ್ಮದಾಬಾದಿಗೆ ದೌಡಾಯಿಸಿದೆ. ಅಲ್ಲಿ ತಾಯಿ ನನ್ನ ಸಹೋದರರೊಂದಿಗೆ ವಾಸಿಸುತ್ತಿದ್ದರು. ಅಲ್ಲಿಗೆ ಹೋಗುವ ಮೊದಲೇ ತಾಯಿಗೆ ನಾನು ಮುಖ್ಯಮಂತ್ರಿಯಾಗಿದ್ದು ತಿಳಿದಿತ್ತು. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಹುದ್ದೆಯ ಬಗ್ಗೆ ಆಕೆಗೆ ಅಷ್ಟು ಗೊತ್ತಿರಲಿಲ್ಲ. ನಾನು ಅಲ್ಲಿ ತಲುಪಿದಾಗ ಅಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು, ಸಂಭ್ರಮ ಮನೆಮಾಡಿತ್ತು" ಎಂದು ಆ ದಿನಗಳನ್ನು ಮೋದಿ ಮೆಲುಕು ಹಾಕುತ್ತಾರೆ.
ಮಗ ತಮ್ಮ ಬಳಿಯೇ ಕೆಲಸ ಮಾಡುತ್ತಾನೆ ಎಂದು ತಿಳಿದಾಗ ಹೀರಾಬೆನ್ ಗೆ ಆತ ಸಂತಸ ಅಷ್ಟಿಷ್ಟಲ್ಲ. ಆಗ ಅವರು, "ಲಂಚ ಸ್ವೀಕರಿಸಿ ಅಧಿಕಾರವನ್ನು ಎಂದೂ ದುರುಪಯೋಗ ಪಡಿಸಿಕೊಳ್ಳಬೇಡ" ಎಂದು ಅತ್ಯಂತ ಸ್ಪಷ್ಟ ನುಡಿಗಳಲ್ಲಿ ತಾಯಿ ಮಗನಿಗೆ ಉಪದೇಶಿಸಿದರು.
"'ನೋಡು ಮಗನೆ, ನನಗೆ ನೀನೇನು ಮಾಡುತ್ತಿ ಎಂದು ಅರ್ಥವಾಗುವುದಿಲ್ಲ. ಆದರೆ ನನಗೊಂದು ಮಾತುಕೊಡು, ನೀನೆಂದೂ ಲಂಚ ತೆಗೆದುಕೊಳ್ಳುವುದಿಲ್ಲ ಎಂದು. ಎಂದೂ ಆ ತಪ್ಪು ಮಾಡಬೇಡ.' ಅಮ್ಮನ ಈ ನುಡಿಗಳು ನನ್ನ ಮೇಲೆ ಭಾರೀ ಪರಿಣಾಮ ಬೀರಿದವು. ಅದು ಹೇಗೆಂದು ನಾನು ಹೇಳುತ್ತೇನೆ. ಒಬ್ಬ ಮಹಿಳೆ ತನ್ನಿಡೀ ಜೀವನವನ್ನು ಬಡತನದಲ್ಲಿ ಕಳೆದವಳು, ಭೌತಿಕ ಸುಖವನ್ನು ಎಂದೂ ಅನುಭವಿಸದವಳು, ನಾನು ಸಮೃದ್ಧಿ ಪಡೆದಿರುವ ಸಮಯದಲ್ಲಿ, ಲಂಚಕ್ಕೆ ಎಂದೂ ಕೈ ಚಾಚಬೇಡ ಎಂದಿದ್ದಳು ನನ್ನ ನಿಸ್ಪೃಹ ಮನಸ್ಸಿನ ತಾಯಿ" ಎಂದು ಮೋದಿ ನೆನಪಿನಂಗಳಕ್ಕೆ ಜಾರುತ್ತಾರೆ.
ಆ ಮಾತುಗಳು ಮುಖ್ಯಮಂತ್ರಿಯಾದಾಗ ಮೋದಿಯವರ ವ್ಯಕ್ತಿತ್ವಕ್ಕೆ ಮತ್ತಷ್ಟು ಹೊಳಪು ತಂದವು. "ನಾನು ಪ್ರಧಾನಿಯಾದ ಮೇಲೂ ನನ್ನ ಬೇರುಗಳನ್ನು ಇನ್ನೂ ಬಲಿಷ್ಠವಾಗಿವೆ ಮತ್ತು ಗಟ್ಟಿಯಾಗಿವೆ" ಎಂದು ಅಭಿಮಾನದಿಂದ ಮೋದಿ ಹೇಳುತ್ತಾರೆ.
ಹ್ಯೂಮನ್ಸ್ ಆಫ್ ಬಾಂಬೆಗೆ ಮೋದಿಯವರು ನೀಡಿದ ಸಂದರ್ಶನದ ನಾಲ್ಕನೇ ಭಾಗ ಇದು. ಹಿಂದಿನ ಮೂರು ಭಾಗಗಳಲ್ಲಿ, ಯೌವನದಿಂದ ಪ್ರೌಢಾವಸ್ಥೆಯವರೆಗೆ ಮೋದಿಯವರ ಪಯಣದಿಂದ ಹಿಡಿದು, ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವವರೆಗೆ ಅವರ ಜೀವನದ ಹಲವಾರು ಮಗ್ಗಲುಗಳನ್ನು, ವಿವಿಧ ಆಯಾಮಗಳನ್ನು ತೆರೆದಿಟ್ಟಿವೆ.
ಮೋದಿ ಜೀವನದ ವಿಶಿಷ್ಟ ಪಯಣ : ಹ್ಯೂಮನ್ಸ್ ಆಫ್ ಬಾಂಬೆ ಸಂದರ್ಶನ