ಶಬರಿಮಲೆ ಮಕರ ಜ್ಯೋತಿಯ ಸತ್ಯಾಸತ್ಯತೆ ಏನು?
ತಿರುವನಂತಪುರಂ, ಅಕ್ಟೋಬರ್ 20: ಮಕರ ಸಂಕ್ರಾಂತಿಯಂದು ಶಬರಮಲೆಯಲ್ಲಿ ಕಾಣಿಸಿಕೊಳ್ಳುವ ಮಕರ ಜ್ಯೋತಿ ಕುರಿತು ಮೊದಲಿನಿಂದಲೂ ಎರಡು ವಾದಗಳು ಕೇಳುತ್ತಲೇ ಬಂದಿದೆ. 41 ದಿನಗಳ ಕಠಿಣ ವ್ರತವನ್ನು ಆಚರಿಸಿದ ಭಕ್ತನು ಶಬರಿಮಲೆಯ ಪೊನ್ನಂಬಲ ಮೇಡುವಿನಲ್ಲಿ ಕಾಣಿಸುವ ಮಕರ ಜ್ಯೋತಿಯನ್ನು ಕಂಡು ಧನ್ಯನಾಗುತ್ತಾನೆ.
ಕೆಲವೊಂದು ಮಂದಿ ಆ ಮಕರ ಜ್ಯೋತಿ ಸುಳ್ಳು ಎಂದು ಹೇಳಿದರೆ ಮತ್ತಷ್ಟು ಮಂದಿ ಅದನ್ನು ಸತ್ಯ ಎಂದು ವಾದಿಸುತ್ತಾರೆ. ಅದನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟಿರುವ ವಿಚಾರ. ಹಾಗಾದರೆ ಮಕರಜ್ಯೋತಿ ಕುರಿತು ಹಲವು ವಿಷಯಗಳನ್ನು ತಿಳಿಯೋಣ. 18 ಮೆಟ್ಟಿಲುಗಳ ಪೂಜಾ ಕಾರ್ಯ ನಡೆದ ನಂತರ ಭಕ್ತರಿಗೆ ಅಯ್ಯಪ್ಪನ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ.
ಶಬರಿಮಲೆ ದೇವಳಕ್ಕೆ ಮಹಿಳೆಯರ ಪ್ರವೇಶ ನಿಷೇಧಕ್ಕೆ ಕಾರಣ ಗೊತ್ತೆ?
ಶಬರಿಗಿರಿಯ ವಿರುದ್ಧದಿಕ್ಕಿನಲ್ಲಿರುವ ಗಿರಿಯೇ ಪೊನ್ನಂಬಲಮೇಡು. ಈ ಪೊನ್ನಂಬಲಮೇಡು ಗಿರಿಯ ತುತ್ತ ತುದಿಯಲ್ಲಿ ಈ ಮಕರ ಜ್ಯೋತಿಯು ಕಾಣಿಸಿಕೊಳ್ಳುತ್ತದೆ. ಮಕರ ಜ್ಯೋತಿಯ ಸಮಯದಲ್ಲಿ ಇಲ್ಲಿ ವೇದಿಕೆಯನ್ನು ನಿರ್ಮಿಸಿ, ಬೃಹತ್ ಬಾಣಲೆಗೆ ಕರ್ಪೂರವನ್ನು ಹಾಕಿ ಮೂರು ಬಾರಿ ಉರಿಸಲಾಗುತ್ತದೆ ಎಂದು ಹೇಳಲಾಗುತ್ತದೆ.
ಕೆಲವೊಂದು ಮೂಲಗಳ ಪ್ರಕಾರ ಪೊನ್ನಂಬಲಮೇಡುವಿನಲ್ಲಿ ವಾಸವಾಗಿದ್ದ ಗಿರಿಜನರು ವರ್ಷದಲ್ಲಿ ಒಮ್ಮೆ ಅಯ್ಯಪ್ಪನಿಗೆ ಪೂಜೆ ಮಾಡಿ, ಕರ್ಪೂರಹಾಕಿ ಕಾಷ್ಠವನ್ನು ಉರಿಸುತ್ತಿದ್ದರು, ಅದನ್ನೇ ಮಕರ ಜ್ಯೋತಿ ಎಂದು ಕರೆಯಲಾಗುತ್ತಿತ್ತು.
ಶಬರಿಮಲೆ ದೇವಸ್ಥಾನದ ವಿವಾದ: ಕಾನೂನು ಹೋರಾಟದ ಟೈಮ್ಲೈನ್
ನಂತರದಲ್ಲಿ ಗಿರಿಜನರು ಅಲ್ಲಿಂದ ಅವಸಾನವಾದ ನಂತರ ಈ ಕಾರ್ಯವನ್ನು ವಿದ್ಯುತ್ ಇಲಾಖೆಯವರು ನಡೆಸಿಕೊಂಡು ಬರುತ್ತಿದ್ದಾರೆಂದು ಹೇಳಲಾಗುತ್ತಿದೆ. ಶಬರಿ ಮಲೆಗೆ ವಿದ್ಯುತ್ ಪೂರೈಸುವ ಕೋಚುಪಾಂಬ ಪವರ್ ಸ್ಟೇಷನ್ ಇಲ್ಲಿಯೇ ಇರುವುದರಿಂದ, ಇಲ್ಲಿಗೆ ಅತಿಕ್ರಮ ಪ್ರವೇಶವನ್ನೂ ನಿಷೇಧಿಸಲಾಗಿದೆ. ಈ ಪ್ರದೇಶದ ಭದ್ರತೆಯನ್ನು ಕೇರಳ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯು ನೋಡಿಕೊಳ್ಳುತ್ತಿದೆ.
ಎಷ್ಟೇ ವಾದಗಳು- ವಿವಾದಗಳು ನಡೆದರೂ ಅಯ್ಯಪ್ಪನ ಮೇಲಿರುವ ಭಕ್ತರ ನಂಬಿಕೆಗೆ ಎಳ್ಳಷ್ಟೂ ಅಡ್ಡಿಯಾಗಿಲ್ಲ ಎನ್ನುವುದು ಕಠಿಣ ವ್ರತವನ್ನು ಪಾಲಿಸಿ, ಬರಿಗಾಲಿನಲ್ಲಿ ಕಲ್ಲು ಮುಳ್ಳುಗಳನ್ನು ತುಳಿದು, ಬೆಟ್ಟವನ್ನು ಹತ್ತಿ, ಮಕರ ಜ್ಯೋತಿಯನ್ನು ಕಂಡು ಭಕ್ತಿಯ ಪರಾಕಾಷ್ಟೆಯನ್ನು ತಲುಪಿ ' ಸ್ವಾಮಿಯೇ ಶರಣಂ ಅಯ್ಯಪ್ಪ' ಎಂದು ಉದ್ಘರಿಸುವ ಧ್ವನಿಗಳಲ್ಲಿ ಕಂಡುಬರುತ್ತದೆ.
ಅಯ್ಯಪ್ಪ ಸ್ವಾಮಿಯ ಪವಿತ್ರ ಆಭರಣಗಳನ್ನು 'ಗರುಡ' ತೆಗೆದುಕೊಂಡು ಹೋಗುವುದೇ ಮಕರಜ್ಯೋತಿ ಎಂದು ನಂಬಿದ್ದಾರೆ. ಅವರ ಬಲವಾದ ನಂಬಿಕೆಗಳನ್ನು ಮುರಿಯುವ ಕೆಲಸಕ್ಕೆ ಯಾರೂ ಕೈಹಾಕಿದರೂ ಪ್ರಯೋಜನ ಮಾತ್ರ ಶೂನ್ಯ. ಆದರೆ ಅಯ್ಯಪ್ಪ ಸ್ವಾಮಿ ಆಲಯಕ್ಕೆ ಮಾತ್ರ ಮಕರಜ್ಯೋತಿಯ ಪ್ರಯುಕ್ತ ಪ್ರತಿವರ್ಷ ಕೋಟ್ಯಾಂತರ ರುಪಾಯಿ ಹರಿದುಬರುತ್ತಿದೆ.
ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ತೆರಳುವುದು ಹೇಗೆ?
ಮಕರಜ್ಯೋತಿಯು ಬಾಹ್ಯಾಕಾಶದಲ್ಲಿ ನಡೆಯುವ ಪ್ರಾಕೃತಿಕ ವಿದ್ಯಮಾನವಲ್ಲ, ಇದರಲ್ಲಿ ಮಾನವನ ಕೈವಾಡವಿದೆ ಎಂಬುದನ್ನು ಕೇರಳ ಸರ್ಕಾರ ಹಾಗೂ ಅಯ್ಯಪ್ಪ ಸ್ವಾಮಿ ಆಲಯ ಮಂಡಳಿಯ ಕೆಲವರು ಈ ಹಿಂದೆ ಹೇಳಿದ್ದರು. ಆದರೆ ಅಯ್ಯಪ್ಪನ ಭಕ್ತರು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಮಕರಜ್ಯೋತಿ ಪಕ್ಕದಲ್ಲಿದ್ದ ಮಂದಿರ ಈಗಿಲ್ಲ
ಪ್ರತಿವರ್ಷ ಜನವರಿ 14ರಂದು ಕರ್ಪೂರವನ್ನು ಹೊತ್ತಿಸಲಾಗುತ್ತಿದ್ದು ಅದನ್ನೇ 'ಮಕರಜ್ಯೋತಿ' ಎನ್ನಲಾಗುತ್ತಿದೆ. ಸದ್ಯಕ್ಕೆ ಮಕರಜ್ಯೋತಿ ಕಾಣಿಸಿಕೊಳ್ಳುವ ಸ್ಥಳದಲ್ಲಿನ ಮಂದಿರ ನಿರ್ನಾಮವಾಗಿದ್ದು, ಅಲ್ಲಿ ಕಾಂಕ್ರೀಟ್ ವೇದಿಕೆಯನ್ನು ನಿರ್ಮಿಸಲಾಗಿದೆ. ಬೃಹತ್ ಬಾಣಲೆಗೆ ಕರ್ಪೂರವನ್ನು ಹಾಕಿ ಉರಿಸಲಾಗುತ್ತದೆ. ಹೀಗೆ ಮೂರು ಬಾರಿ ಮಾಡಲಾಗುತ್ತದೆ. ಅದೇ ಮಕರಜ್ಯೋತಿ ಎಂಬ ಪುರಾಣಕತೆಗೆ ಅಪವಾದವೆಂಬಂತೆ ಸ್ವಾರಸ್ಯ ಕತೆಯೂ ಚಾಲ್ತಿಯಲ್ಲಿದೆ.
ತಿರುವಾಭರಣದ ವಿಶೇಷತೆ ಏನು?
ಮಕರ ಜ್ಯೋತಿಯಂದು ಪಂದಳಂ ರಾಜನ ಅರಮನೆಯಿಂದ ತಿರುವಾಭರಣಗಳನ್ನು ಮಕರ ಸಂಕ್ರಾಂತಿಯಂದು ತಂದು ಅಯ್ಯಪ್ಪನಿಗೆ ಅಲಂಕಾರ ಮಾಡಲಾಗುತ್ತದೆ. ವರ್ಷದಲ್ಲಿ ಒಂದು ಬಾರಿ ಮಾತ್ರ ಮಕರ ಸಂಕ್ರಾಂತಿಯಂದು ಅಯ್ಯಪ್ಪನಿಗೆ ಈ ತಿರುವಾಭರಣಗಳಿಂದ ಅಲಂಕರಿಸುತ್ತಾರೆ. ಪೂಜನೀಯವಾದ ಈ ಆಭರಣಗಳು ಪಂದಳ ರಾಜರು ತಮ್ಮ ವಂಶಸ್ಥನಾದ ಅಯ್ಯಪ್ಪನಿಗೆ ಪ್ರೀತಿಯಿಂದ ಮಾಡಿಸಿದ ಒಡವೆಗಳಾಗಿವೆ. ಇದನ್ನು ಸಂಕ್ರಾಂತಿಯಂದು ಅಯ್ಯಪ್ಪ ಸನ್ನಿಧಾನಕ್ಕೆ ತೆಗೆದುಕೊಂಡು ಹೋಗುವ ಹಾಗೂ ಅಲ್ಲಿಂದ ಮರಳಿ ಅರಮನೆಗೆ ಸೇರಿಸುವ ಜವಾಬ್ದಾರಿಯೂ ಈ ಪಂದಳ ಮನೆತನದವರದೇ ಆಗಿರುತ್ತದೆ. ಇರುಮುಡಿ ಇಲ್ಲದಿದ್ದರೂ ಹದಿನೆಂಟು ಮೆಟ್ಟಲನ್ನು ಹತ್ತುವ ಅವಕಾಶ ಪಂದಳ ರಾಆಜಮನೆತನಕ್ಕೆ ಮಾತ್ರ ಇದೆ.
ಮೂರು ಆಭರಣಗಳ ಪೆಟ್ಟಿಗೆ
ಮೂರು ಆಭರಣಗಳ ಪೆಟ್ಟಿಗೆಯಲ್ಲಿ ಒಂದು ಅಯ್ಯಪ್ಪನ ಆಭರಣದ ಪೆಟ್ಟಿಗೆಯಾದರೆ ಇನ್ನೆರಡು ಪೆಟ್ಟಿಗೆಯಲ್ಲಿ ಮಾತೆಯ ಆಭರಣಗಳಿರುತ್ತದೆ. ಪಂದಳ ಅರಮನೆಯಲ್ಲಿ ಪೂಜೆಯು ನೆರವೇರಿಸಿದ ನಂತರ ಪಲ್ಲಕ್ಕಿಯಲ್ಲಿರಿಸಿ ಶಬರಿಗಿರಿಗೆ ಹೊತ್ತೊಯ್ಯಲಾಗುತ್ತದೆ. ಹೀಗೆ ಅಯ್ಯಪ್ಪನ ಆಭರಣಗಳನ್ನು ತೆಗೆದುಕೊಂಡು ಹೋಗುವವರೂ ಕೂಡಾ ಅಯ್ಯಪ್ಪ ದೀಕ್ಷೆ ತೆಗೆದುಕೊಳ್ಳುವುದು ಕಡ್ಡಾಯ.
ಗರುಡನಿಂದ ಕಾವಲು
ಪಂದಳ ಅರಮನೆಯಿಂದ ಆಭರಣಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವಾಗ ಗರುಡವೂ ಕಾವಲು ಕಾಯುತ್ತದೆ ಎನ್ನುತ್ತಾರೆ. ಇದರಂತೆ ಸಮಯಕ್ಕೆ ಸರಿಯಾಗಿ ಗರುಡನೂ ಕಾಣಿಸಿಕೊಳ್ಳುತ್ತದೆ. ಈ ಚಿನ್ನದ ಆಭರಣಗಳಿಂದ ಅಯ್ಯಪ್ಪನ್ನು ಅಲಂಕರಿಸಿ ದ್ವಾರವನ್ನು ತೆರೆಯುವ ಸಮಯಕ್ಕೆ ಪೊನ್ನಂಬಲಮೇಡು ಗಿರಿಯಲ್ಲಿ ಮಕರ ಜ್ಯೋತಿಯೂ ಕಾಣಿಸಿಕೊಳ್ಳುತ್ತದೆ. ಈ ಮಕರ ಜ್ಯೋತಿಯು ಮೂರು ಬಾರಿ ಬೆಳಗುತ್ತದೆ. ಇದನ್ನೇ ಮಕರವಿಲಕ್ಕು ಎಂದು ಕರೆಯುತ್ತಾರೆ. ಹೀಗೆ ಆಭರಣಗಳು ಅರಮನೆಯಿಂದ ಅಯ್ಯಪ್ಪನ ಸನ್ನಿಧಾನಕ್ಕೆ ಸಂಕ್ರಾಂತಿಯಂದು ಸಂಜೆ ಬಂದು ಸೇರುತ್ತದೆ.