ಮಹಾರಾಷ್ಟ್ರದಲ್ಲಿ BJP-NCP ಸರ್ಕಾರ ರಚನೆಗೆ ಅಸಲಿ ಕಾರಣವೇನು?
ಕಳೆದ ಸೆಪ್ಟೆಂಬರ್ ತಿಂಗಳು. ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಯ ಕಾವೇರಿದ್ದ ಕಾಲ. ವಿಪಕ್ಷದ ನಾಯಕರ ತೇಜೋವಧೆಗಾಗಿ ಕೇಂದ್ರ ಎನ್ ಡಿಎ ಸರ್ಕಾರ ಜಾರಿ ನಿರ್ದೇಶನಾಲಯ(ED)ವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪ ಎಲ್ಲೆಡೆ ಕೇಳಿಬರುತ್ತಿದ್ದ ಸಮಯ ಅದು. ಆಗಷ್ಟೇ ಎಂಎನ್ ಎಸ್ ಮುಖಂಡ ರಾಜ್ ಠಾಕ್ರೆ ಅವರನ್ನು ED ವಿಚಾರಣೆ ನಡೆಸಿ ಕೆಲ ದಿನವಾಗಿತ್ತಷ್ಟೆ.
ಎನ್ ಸಿಪಿ ಮುಖಂಡ ಶರದ್ ಪವಾರ್ ವಿರುದ್ಧ ಮಹಾರಾಷ್ಟ್ರ ಸ್ಟೇಟ್ ಕೊಆಪರೇಟಿವ್ ಬ್ಯಾಂಕ್ ನಲ್ಲಿ ನಡೆದ 2500 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಜಾರಿನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು. ಚುನಾವಣೆ ಪ್ರಚಾರದಲ್ಲಿದ್ದ ಶರದ್ ಪವಾರ್ ಈ ವಿಷಯ ತಿಳಿಯುತ್ತಿದ್ದಂತೆಯೇ ಜಾರಿ ನಿರ್ದೇಶನಾಲಯದ ಕಚೇರಿಗೇ ಬಂದು ಬಿಟ್ಟಿದ್ದರು! ಸಮನ್ಸ್ ನೀಡುವ ಮೊದಲೇ ವಿಚಾರಣೆ ಹಾಜರಾದ ಪವಾರ್ ಅವರ ನಡೆಗೆ ಇಡಿ ಅಧಿಕಾರಿಗಳೇ ಸುಸ್ತಾಗಿದ್ದರು!
"ಚುನಾವಣೆ ಪ್ರಚಾರಕ್ಕಾಗಿ ನಾನು ಬೇರೆ ಬೇರೆ ಕಡೆ ಓಡಾಡುತ್ತಿರುತ್ತೇನೆ. ನೀವು ಸಮನ್ಸ್ ನೀಡಿದಾಗ ನನಗೆ ಬರಲಾಗದಿದ್ದರೆ ನಾನು ಬೇಕೆಂದೇ ವಿಚಾರಣೆಯಿಂದ ದೂರ ಉಳಿದಿದ್ದೇನೆ ಎಂಬ ವದಂತಿ ಹಬ್ಬುತ್ತದೆ. ಈ ಸಮಯದಲ್ಲಿ ಅದು ನನಗೆ ಇಷ್ಟವಿಲ್ಲ. ನಿಮಗೆ ಏನೆಲ್ಲ ಪ್ರಶ್ನೆ ಕೇಳಬೇಕೋ, ಏನೆಲ್ಲ ಮಾಹಿತಿ ಬೇಕೋ ಈಗಲೇ ಕೇಳಿ" ಎಂದು ಇಡಿ ಕಚೇರಿ ಎದುರು ನಿಂತು ದುಂಬಾಲು ಬಿದ್ದಿದ್ದರು. ವಿಚಾರಣೆಯ ಮೂಲಕ ರಾಜಕಾರಣಿಗಳನ್ನು ಕಂಗೆಡಿಸುತ್ತಿದ್ದ ಇಡಿ ಅಧಿಕಾರಿಗಳೇ ಅಂದು ಪವಾರ್ ನಡೆಯಿಂದ ಕಂಗೆಟ್ಟು ಕೂತಿದ್ದರು!
ಮುಂಜಾನೆ 'ಮಹಾ' ಕ್ರಾಂತಿ: ಟ್ರೆಂಡಿಂಗ್ ಆಯ್ತು ಫಡ್ನವಿಸ್ ಟ್ವೀಟ್
ಅದೇ ಸಮಯಕ್ಕೆ ಪವಾರ್ ಅವರ ಸಾವಿರಾರು ಬೆಂಬಲಿಗರು ಇಡಿ ಕಚೇರಿ ಮುಂದೆ ಜಮಾಯಿಸಿದ್ದರು. ಅದನ್ನೇ ಬಳಸಿಕೊಂಡ ಇಡಿ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿ, 'ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಶರದ್ ಪವಾರ್ ಅವರ ವಿಚಾರಣೆಯನ್ನು ಮುಂದೂಡಿದ್ದೇವೆ. ದಯವಿಟ್ಟು ಅವರು ವಾಪಸ್ ತೆರಳಬೇಕು' ಎಂದಿದ್ದರು. ಅಷ್ಟರ ಮಟ್ಟಿಗೆ ಪವಾರ್ ತಮ್ಮ ಪವರ್ ತೋರಿಸಿಕೊಟ್ಟಿದ್ದರು.
ಇದೀಗ ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆ ಆ ಘಟನೆಯನ್ನು ಮತ್ತೊಮ್ಮೆ ನೆನಪಿಸುವುದಕ್ಕೆ ಕಾರಣವಿದೆ....
ಯಾರಿಗೆ ಹೆಚ್ಚು ಲಾಭ?
ಸದ್ಯಕ್ಕೆ ಮಹಾರಾಷ್ಟ್ರದಲ್ಲಿ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಪವಾರ್ ಹೇಳಿರಬಹುದು. ಆದರೆ ಪವಾರ್ ರಾಜಕೀಯದ ಪರಿಚಯ ಇದ್ದವರು ಅದನ್ನು ನಂಬಿಬಿಡುವುದು ಹೇಗೆ? ರಾಜಕೀಯದಲ್ಲಿ ಆರೇಳು ದಶಕಗಳಷ್ಟು ಕಾಲ ಮಾಗಿದ ಅನುಭವಿ ಪವಾರ್ ಯಾರಿಗೆ ಬೆಂಬಲ ನೀಡಿದರೆ ಎಷ್ಟು ಲಾಭ ಎಂಬ ಲೆಕ್ಕಾಚಾರ ಹಾಕದೆ ಉಳಿದುಬಿಡುತ್ತಾರೆಯೇ? ಅಜಿತ್ ಪವಾರ್ ಅವರು ಒಂದು ಬೊಂಬೆಯಾಗಿದ್ದಿರಬಹುದು, ಸೂತ್ರ ಪವಾರ್ ಕೈಯಲ್ಲೇ ಇದ್ದಿರಬಹುದು ಎಂಬ ಅನುಮಾನವನ್ನು ಸುಲಭವಾಗಿ ತಳ್ಳಿಹಾಕಿಬಿಡುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಬಿಜೆಪಿಗೆ ಬೆಂಬಲ ನೀಡುವುದರಿಂದ ಯಾರಿಗೆ ಹೆಚ್ಚು ಲಾಭ ಎಂಬುದನ್ನು ಯೋಚಿಸಿದಾಗ 'ಕಪಟ ನಾಟಕದ ಹಿಂದೊಬ್ಬ ಸೂತ್ರಧಾರ ಇದ್ದೇ ಇರಬೇಕು' ಎನ್ನಿಸುವುದು ಸುಳ್ಳಲ್ಲ!
LIVE Updates: ಬೆನ್ನಿಗೆ ಚೂರಿ ಇರಿದ ಬಿಜೆಪಿ-ಅಜಿತ್ ಪವಾರ್: ಶಿವಸೇನಾ
ED ಕಣ್ಣು ಬಿದ್ದಿದ್ದು ಯಾಕೆ?
ಮಹಾರಾಷ್ಟ್ರ ಸ್ಟೇಟ್ ಕೊಆಪರೇಟಿವ್ ಬ್ಯಾಂಕ್ ನಲ್ಲಿ ನಡೆದ 2500 ಕೋಟಿ ರೂ. ಹಗರಣದಲ್ಲಿ ಶರದ್ ಪವಾರ್ ಮಾತ್ರವಲ್ಲ ಪ್ರಸ್ತುತ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೆಸರೂ ಕೇಳಿಬಂದಿದೆ. ಕೇಂದ್ರದಲ್ಲಿರುವುದು ಎನ್ ಡಿಎ ಸರ್ಕಾರ. ಮುಂದೊಮ್ಮೆ ಇಡಿ ತಮ್ಮ ಕತ್ತಿಗೆ ಉರುಳಾಗುವುದ ಖಂಡಿತ ಎಂಬ ನಿರೀಕ್ಷೆ ಇದ್ದಿದ್ದರಿಂದಲೇ ಬಿಜೆಪಿಯೊಂದಿಗೇ ಹೆಜ್ಜೆ ಹಾಕಿಬಿಟ್ಟರೆ ಹೇಗೆ ಎಂಬ ಯೋಚನೆ ಪವಾರ್ ಅವರಿಗೆ ಬಂದಿದ್ದರೆ ಅಚ್ಚರಿಯೇನಿಲ್ಲ!
ಮೋದಿ ಭೇಟಿಯ ತುರ್ತೇನಿತ್ತು?
ಜೊತೆಗೆ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಪವಾರ್ 'ರೈತರ ಸಮಸ್ಯೆ ಬಗ್ಗೆ ಚರ್ಚಿಸಿದ್ದಾಗಿ' ಹೇಳಿದ್ದರು. ಆದರೆ ಮಹಾರಾಷ್ಟ್ರದ ರಾಜಕೀಯದಲ್ಲಿ ದಿನೇ ದಿನೇ ಅನೂಹ್ಯ ಬೆಳವಣಿಗೆಗಳು ಸಂಭವಿಸುತ್ತಿದ್ದ ಹೊತ್ತಲೇ ಪವಾರ್ ಅವರಿಗೆ ರೈತರ ಕಷ್ಟ ನೆನಪಾಗಬೇಕೆ? ಅದಕ್ಕಾಗಿ ಮೋದಿ ಅವರನ್ನು ಭೇಟಿಯಾಗುವ ತುರ್ತು ಅಷ್ಟರಮಟ್ಟಿಗಿತ್ತೆ? ಎಂಬ ಅನುಮಾನವೂ ಸೃಷ್ಟಿಯಾಗಿತ್ತು.
ರಾಷ್ಟ್ರಪತಿ ಹುದ್ದೆ ಆಫರ್?
ಇದರೊಟ್ಟಿಗೆ ಬಿಜೆಪಿಯೂ ಪವಾರ್ ಅವರಿಗೆ ರಾಷ್ಟ್ರಪತಿ ಹುದ್ದೆಯ ಆಫರ್ ನೀಡಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಸೇವಾವಧಿ ಇನ್ನೂ ಮೂರು ವರ್ಷವಿದ್ದು, 2023 ರಲ್ಲಿ ಅವರು ಸೇವೆಯಿಂದ ನಿವೃತ್ತರಾಗಲಿದ್ದಾರೆ. ಆದರೆ ರಾಷ್ಟ್ರಪತಿ ಹುದ್ದೆ ಆಫರ್ ಗಾಗಿ ಪವಾರ್ ಇದನ್ನೆಲ್ಲ ಮಾಡಿದ್ದಾರೆ ಎಂಬ ಮಾತು ಎಷ್ಟು ಸತ್ಯವೋ ಗೊತ್ತಿಲ್ಲ. ಇಂಥದೊಂದು ವದಂತಿಯಂತೂ ಇರುವುದು ಸುಳ್ಳಲ್ಲ.