ಚಾಮರಾಜನಗರ: ಪಾಳ್ಯದ ಸೀಗಮಾರಮ್ಮನ ಪವಾಡದ ವಿಶೇಷತೆಯೇನು?
ಚಾಮರಾಜನಗರ, ಏಪ್ರಿಲ್ 30: ಸಾಮಾನ್ಯವಾಗಿ ಜಾತ್ರೆ ಎಂದರೆ ಒಂದು ದಿನದ ಆರಂಭವಾಗಿ ವಾರಗಳ ಕಾಲ ನಡೆಯುವುದು ಸಾಮಾನ್ಯ. ಆದರೆ ಕೊಳ್ಳೇಗಾಲ ತಾಲ್ಲೂಕಿನ ಪಾಳ್ಯ ಗ್ರಾಮದಲ್ಲಿ ಸೀಗಮಾರಮ್ಮ ಜಾತ್ರಾ ಮಹೋತ್ಸವವು ಸುಮಾರು ಇಪ್ಪತ್ತೊಂದು ದಿನಗಳ ಕಾಲ ನಡೆಯುತ್ತದೆ.
ಅಷ್ಟೇ ಆಗಿದ್ದರೆ ಅದರ ಬಗ್ಗೆ ಹೇಳುವ ಅಗತ್ಯತೆ ಇರಲಿಲ್ಲ. ಆದರೆ ಸೀಗಮಾರಮ್ಮ ಜಾತ್ರೆಯಲ್ಲಿ ಹಲವು ವಿಶೇಷಗಳು, ಪವಾಡಗಳು ನಡೆಯುವುದರಿಂದ ಎಲ್ಲರೂ ಈ ಜಾತ್ರೆಯತ್ತ ಕಾತರದಿಂದ ನೋಡುತ್ತಾರೆ. ಅಷ್ಟೇ ಅಲ್ಲ ತಾವುಗಳು ಭಾಗಿಯಾಗಿ ಭಕ್ತಿ ಭಾವ ಮೆರೆಯುತ್ತಾರೆ. ಇಲ್ಲಿ ನಡೆಯುವ ಕೌತುಕ ಮತ್ತು ಪವಾಡ ಹತ್ತೂರುಗಳಲ್ಲಿ ಮನೆ ಮಾತಾಗಿದ್ದು ಮಾರಮ್ಮನ ದರ್ಶನಕ್ಕಾಗಿ ಹಾತೊರೆಯುತ್ತಾರೆ.
ಮೈಸೂರಿನಲ್ಲಿ ಮೂಕಜೀವಿಗಳ ದಾಹ ತಣಿಸುವ ಭಗೀರಥರು!
ಸೀಗಮಾರಮ್ಮನ ಹಿನ್ನಲೆ ಏನು?
ಈ ಬಾರಿ ಸೀಗಮಾರಮ್ಮ ಜಾತ್ರಾ ಮಹೋತ್ಸವು ಏಪ್ರಿಲ್ 28ರಿಂದ ಆರಂಭವಾಗಿದ್ದು, ಮೇ 18ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಇಷ್ಟಕ್ಕೂ ಈ ಹಬ್ಬದ ಬಗ್ಗೆ ಒಂದಿಷ್ಟು ವಿಚಾರಗಳು ಹೇಳಲೇಬೇಕಾಗಿದೆ. ಕೆಲವೊಂದು ಕಾರಣಗಳಿಂದ ಈ ಹಬ್ಬವು ಕಳೆದ ಎರಡು ದಶಕಗಳಿಂದ ನಡೆದಿರಲಿಲ್ಲ. ಇಪ್ಪತ್ತು ವರ್ಷಗಳ ಬಳಿಕ ನಡೆಯುತ್ತಿರುವ ಈ ಜಾತ್ರೆಗೆ ಜನ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಜತೆಗೆ ಎಲ್ಲರೂ ಒಟ್ಟಾಗಿ ಸೇರಿ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ.
ಇಷ್ಟಕ್ಕೂ ಪಾಳ್ಯ ಗ್ರಾಮದಲ್ಲಿ ಸೀಗಮಾರಮ್ಮ ಮೂಲತಃ ಇಲ್ಲಿನ ದೇವತೆ ಅಲ್ಲ. ಈಕೆ ತಮಿಳುನಾಡಿನ ಡಂಕಣಿಕೋಟೆಯಿಂದ ಬಂದು ನೆಲೆಸಿದಳೆಂಬುದು ತಿಳಿದು ಬರುತ್ತದೆ. ಗ್ರಾಮದ ಜನರು ತಮ್ಮ ಕಷ್ಟಗಳನ್ನು ದೇವಿಯ ಮುಂದೆ ನಿವೇದಿಸಿಕೊಳ್ಳುತ್ತಾ ಆಕೆಯಲ್ಲಿ ಹರಕೆ ಕಟ್ಟಿಕೊಳ್ಳುತ್ತಿದ್ದರು. ಆಕೆ ಜನರ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಬರುತ್ತಿರುವುದು ಕಂಡು ಬರುತ್ತದೆ.
ಜಾತ್ರಾ ವೇಳೆ ಕಠಿಣ ವೃತ ಪಾಲನೆ
ಇನ್ನು ಪಾಳ್ಯ ಗ್ರಾಮದಲ್ಲಿ ನೆಲೆ ನಿಂತಿರುವ ಸೀಗಮಾರಮ್ಮ ಪವಾಡದ ಮೂಲಕವೇ ಹೆಸರುವಾಸಿಯಾಗಿದ್ದು, ನಂಬಿದವರಿಗೆ ಇಂಬು ನೀಡುತ್ತಿದ್ದಾಳೆ. ಜನ ಕೂಡ ದೇವಿಯನ್ನು ಕಠಿಣ ವೃತಗಳನ್ನು ಪಾಲಿಸುವ ಮೂಲಕ ಆಕೆಯನ್ನು ಆರಾಧಿಸುತ್ತಾರೆ.
ಇಲ್ಲಿ ಮುಖ್ಯವಾಗಿ ಜಾತ್ರಾ ಸಂದರ್ಭದಲ್ಲಿ ವ್ರತ ಮಾಡುವ ವ್ಯಕ್ತಿಯ ಉಸಿರಾಟ ನಿಂತು ಆತ ಜೀವಂತ ಶವದಂತೆ ಇದ್ದು, ದೇವಿಯ ತೀರ್ಥ ಪ್ರೋಕ್ಷಣೆಯಾಗುತ್ತಿದ್ದಂತೆಯೇ ಮತ್ತೆ ಬದುಕಿ ಬರುವುದು ವಿಶೇಷವಾಗಿದೆ. ಹೀಗಾಗಿಯೇ ಜನ ಕಠಿಣ ವೃತ ಪಾಲಿಸುತ್ತಾರೆ.
ಜಾತ್ರಾ ಕಾಲದಲ್ಲಿ ಗ್ರಾಮದ ಯಾರ ಮನೆಯಲ್ಲೂ ಒಗ್ಗರಣೆ ಹಾಕುವಂತಿಲ್ಲ. ಮದ್ಯಪಾನ ಹಾಗೂ ಮಾಂಸ ಮಾರಾಟ ಮತ್ತು ಸೇವನೆ ಮಾಡುವಂತಿಲ್ಲ. 21ದಿನಗಳ ಕಾಲ ಯಾರ ಮನೆಯಲ್ಲೂ ಮದುವೆ ಮಾಡುವಂತಿಲ್ಲ, ಯಾರಾದರೂ ಮೃತರಾದರೆ ಒಂದು ಗಂಟೆಯೊಳಗೆ ಗ್ರಾಮದ ಹೊರಗೆ ಅಂತ್ಯಕ್ರಿಯೆ ಮಾಡಬೇಕು. ಇದು ಈ ಗ್ರಾಮದ ಜಾತ್ರಾ ನಿಯಮವಾಗಿದೆ.
ವ್ರತ ಮಾಡುವ ವ್ಯಕ್ತಿಯ ಪ್ರಾಣ ಪಕ್ಷಿ ಹಾರಿಹೋಗಲಿದೆ
ಜಾತ್ರೆ ಆರಂಭದ ದಿನ ರಾತ್ರಿ ವೇಳೆ ಪಾಳ್ಯ ಗ್ರಾಮದಲ್ಲಿ ದೂಳ್ ಹೆಬ್ರ ಉತ್ಸವ ನಡೆಯುವುದರೊಂದಿಗೆ ಜಾತ್ರೆಗೆ ಚಾಲನೆ ಸಿಗುತ್ತದೆ. ಆ ನಂತರ ಪ್ರತಿದಿನವೂ ಒಂದಲ್ಲ ಒಂದು ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ.
ಜಾತ್ರೆಯಲ್ಲಿ ಸೀಗಮಾರಮ್ಮ ಕುಲದೇವತೆ ಇರುವ ಮನೆಯ ಒಬ್ಬರನ್ನು ವೀಳ್ಯ ನೀಡಿ ಪೂಜೆ ಕರೆತರುತ್ತಾರೆ. ಅವರಿಗೆ ಒಂದು ವಾರದವರೆಗೆ ವ್ರತ ಮಾಡುವಾಗ ಊಟ ನೀರು ಕೊಡುವುದಿಲ್ಲ ಇದರಿಂದರಾಗಿ ವ್ರತ ಮಾಡುವ ವ್ಯಕ್ತಿಯ ಪ್ರಾಣ ಪಕ್ಷಿ ಹಾರಿಹೋಗಲಿದೆ. ಬಳಿಕ ಅವರ ದೇಹವನ್ನು ಗ್ರಾಮದಲ್ಲಿ ತಂದು ಸಾರ್ವಜನಿಕವಾಗಿ ವೈದ್ಯರು ಪರೀಕ್ಷೆ ಮಾಡಿದ ಬಳಿಕ ವ್ಯಕ್ತಿ ಉಸಿರಾಟವಿಲ್ಲದಿರುವುದನ್ನು ಖಚಿತ ಪಡಿಸಿಕೊಂಡು, ಅರಿಶಿನ ಹಾಕಿ ಮಲಗಿಸಲಾಗುತ್ತದೆ.
ಪವಾಡ ಈ ಬಾರಿ ಮೇ 9ರಂದು ನಡೆಯಲಿದೆ
ಆ ನಂತರ ಸೀಗಮಾರಮ್ಮ ಆರಾಧಕರ ಮೇಲೆ ದೇವಿ ಅವಾಹನೆಯಾಗಿ ತೀರ್ಥವನ್ನು ವ್ರತ ಮಾಡಿ ಉಸಿರಾಟ ನಿಂತಿರುವ ವ್ಯಕ್ತಿಯ ಮೇಲೆ ಹಾಕಿದ ಕೂಡಲೇ ವ್ಯಕ್ತಿ ಕಣ್ಣು ಬಿಟ್ಟು ಪುನರ್ಜನ್ಮ ಪಡೆಯುವುದು ಈ ಜಾತ್ರೆಯ ವಿಶೇಷವಾಗಿದೆ.
ಈ ಪವಾಡ ಈ ಬಾರಿ ಮೇ 9ರಂದು ನಡೆಯಲಿದೆಯಂತೆ. ಆಧುನಿಕ ಯುಗದಲ್ಲೂ ಸಹ ವೈದ್ಯಕೀಯ ವಿಜ್ಞಾನಕ್ಕೂ ಸವಾಲಾಗಿರುವ ಪಾಳ್ಯ ಗ್ರಾಮದ ಸೀಗಮಾರಮ್ಮ ಜಾತ್ರಾ ಮಹೋತ್ಸವ ಕೌತುಕಕ್ಕೆ ಸಾಕ್ಷಿಯಾಗಲಿದೆ. ಹೀಗಾಗಿ ಎಲ್ಲರೂ ಜಾತ್ರೆಯ ಆ ದಿನಕ್ಕಾಗಿ ಕಾಯುತ್ತಿದ್ದಾರೆ.