ಅಷ್ಟಕ್ಕೂ ಆ ಭಾನುವಾರ ದೀಪ ಹಚ್ಚಿ ಅಂತಾ ಪ್ರಧಾನಿ ಮೋದಿ ಹೇಳಿದ್ದೇಕೆ?
ನವದೆಹಲಿ, ಏಪ್ರಿಲ್ 3: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆಯುತ್ತಿದೆ. ಎರಡೂ ಸಾವಿರಕ್ಕಿಂತಲೂ ಹೆಚ್ಚು ಜನ ಸೋಂಕು ತಗುಲಿಸಿಕೊಂಡಿದ್ದಾರೆ. 50 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.
ಕೊರೊನಾ ವ್ಯಾಪಕವಾಗಿ ಹರಡುವುದನ್ನು ತಡೆಯಲು ಕಳೆದ ವಾರ ಇಡೀ ದೇಶವನ್ನೇ ಲಾಕ್ಡೌನ್ ಮಾಡಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದರು. ಅದರಂತೆ ದೇಶದ ಜನಜೀವನ ಸ್ತಬ್ದವಾಗಿದೆ. ಆದರೆ ಕೊರೊನಾ ಸೋಂಕು ಹರಡುವುದು ನಿಲ್ಲುತ್ತಿಲ್ಲ. ನಿನ್ನೆ ಒಂದೇ ದಿನ 300 ಜನರಿಗೆ ಸೋಂಕು ಕಾಣಿಸಿಕೊಂಡಿದೆ.
ಏ.5ರಂದು ದೀಪ ಹಚ್ಚಿ ಲಕ್ಷ್ಮಣ ರೇಖೆ ದಾಟಬೇಡಿ, ಇದೇ ರಾಮಬಾಣ: ಮೋದಿ
ಇದರಿಂದ ತೀವ್ರ ಚಿಂತಾಕ್ರಾಂತರಾಗಿರುವ ಪ್ರಧಾನಿ ಮೋದಿ ಅವರು, ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ದೇಶದ ಜನರ ಮನೋಬಲವನ್ನು ಹೆಚ್ಚಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಶುಕ್ರವಾರ ಬೆಳಿಗ್ಗ ದೇಶದ ಜನರ ಮುಂದೆ ಮಾತನಾಡಿರುವ ಮೋದಿ ಅವರು, ಬರುವ ಭಾನುವಾರ ಅಂದರೆ ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ ಪ್ರತಿಯೊಬ್ಬರೂ ತಮ್ಮ ಮನೆಯ ವಿದ್ಯುತ್ ದೀಪ ಆರಿಸಿ ಮೊಂಬತ್ತಿ, ದೀಪ ಅಥವಾ ಮೊಬೈಲ್ ಟಾರ್ಚ್ನ್ನು ಹಚ್ಚಬೇಕು ಎಂದು ಕರೆ ಕೊಟ್ಟಿದ್ದಾರೆ. ಮೋದಿ ಹೀಗೆ ಹೇಳಿರುವುದರಲ್ಲಿ ಜನರ ಮನೋಬಲ ಹೆಚ್ಚಿಸುವ ಉದ್ದೇಶ ಇದೆ ಎಂದು ಮನಶಾಸ್ತ್ರೀಯ ವಿಶ್ಲೇಷಣೆ ನಡೆಯುತ್ತಿದೆ. ಕೆಲ ಟೀಕೆಗಳೂ ಕೂಡ ಕೇಳಿ ಬಂದಿವೆ.
ಸಾಮಾಜಿಕ ಅಂತರವೇ ಪ್ರಬಲ ಅಸ್ತ್ರ
ಕೊರೊನಾ ಸಂಕಷ್ಟಕ್ಕೆ ಇಡೀ ಜಗತ್ತೆ ತತ್ತರಿಸಿದೆ. ಬೆರಳೆಣಿಕೆಯ ದೇಶಗಳನ್ನು ಹೊರತುಪಡಿಸಿ ಜಗತ್ತಿನ ಎಲ್ಲ ರಾಷ್ಟ್ರಗಳು ಲಾಕ್ಡೌನ್ ಘೋಸಿಸಿವೆ. ಭಾರತಕ್ಕೂ ದಾಂಗುಡಿ ಇಟ್ಟಿರುವ ಕೊರೊನಾ, ಸೋಂಕು ಹೆಚ್ಚಿಸುತ್ತಾ ನಡೆದಿದೆ. ಸೋಂಕು ಹರಡುವುದನ್ನು ತಡೆಯಲು ಸಾಮಾಜಿಕ ಅಂತರವೇ ಪ್ರಬಲ ಅಸ್ತ್ರ ಎನಿಸಿದೆ. ಹೀಗಾಗಿ ಕಳೆದ ಎರಡು ವಾರದಿಂದ ದೇಶದಲ್ಲಿ ಲಾಕ್ಡೌನ್ ಪರಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮನೆಯಲ್ಲೇ ಕುಳಿತಿರುವ ಜನತೆ ಒಂದು ರೀತಿ ಆತಂಕದಲ್ಲಿ ಕಾಲ ದೂಡುತ್ತಿದ್ದಾರೆ.
ಮನಶಾಸ್ತ್ರಜ್ಞರು ಏನೆನ್ನುತ್ತಾರೆ?
ಕೊರೊನಾಕ್ಕೆ ಹೆದರಿ ಕಳೆದ ಎರಡು ವಾರಗಳಿಂದ ಮನೆಯಲ್ಲಿ ಕುಳಿತಿರುವವರು ಪ್ರಯಾಸಪಟ್ಟುಕೊಂಡು ಕಾಲ ದೂಡುತ್ತಿದ್ದಾರೆ. ಇನ್ನೂ 12 ದಿನ ಮೆನಯಲ್ಲೇ ಕಾಲ ಕಳೆಯಬೇಕಲ್ಲ ಎಂದು ಚಿಂತೆಗೆ ಈಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಮಾನಸಿಕ ಸಮತೋಲನವೂ ಸ್ವಲ್ಪ ವ್ಯತ್ಯಾಸವಾಗುತ್ತದೆ. ಹೀಗಾಗಿ ಜನರನ್ನು ಹಿಡಿದಿಡಲು ಹಾಗೂ ಇಂತಹ ಸಂದಿಗ್ದ ಸಂದರ್ಭದಲ್ಲಿ ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಅನಿವಾರ್ಯ ಎಂಬ ಅಂಶವನ್ನು ಪರಿಗಣಿಸಿ ಪ್ರಧಾನಿ, ಸಾಮೂಹಿಕವಾಗಿ ದೀಪ ಬೆಳಗಿಸಲು ಹೇಳಿರಬಹುದು. ಒಟ್ಟಾರೆ ಇದೊಂದು ಕೊರೊನಾ ಬಗ್ಗೆ ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕೆಲಸ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಖ್ಯಾತ ಮನಶಾಸ್ತ್ರಜ್ಞರಾದ ಡಾ ಆನಂದ ಪಾಂಡುರಂಗಿ ಅವರು.
ಜನರನ್ನು ಹಿಡಿದಿಡುವುದು ಸರಳವಲ್ಲ
ಈಗ ಕೊರೊನಾ ದಿನದಿಂದ ದಿನಕ್ಕೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತಾ ಸಾಗಿದೆ. ಇದರಿಂದ ಪ್ರಧಾನಿ ಮೋದಿ ಅವರು ಸಹಜವಾಗಿ ದೇಶವಾಸಿಗಳ ಬಗ್ಗೆ ಆತಂಕಗೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಲಾಕ್ಡೌನ್ಗೆ ಬೇಸತ್ತು ಜನ ಮತ್ತೆ ಹೊರಗೆ ಬರಲು ಪ್ರಾರಂಭಿಸಿದರೆ, ಸೋಂಕಿತರ ಸಂಖ್ಯೆ ಹೆಚ್ಚಾಗಬಹುದಲ್ಲಾ ಎಂದು ಮೋದಿ ಅವರು ದೀಪ ಬೆಳಗಿಸಲು ಹೇಳಿದ್ದಾರೆ ಎನ್ನುವುದು ಒಂದು ತರ್ಕವಾಗಿದೆ. ಅದು ಸತ್ಯವೂ ಆಗಿದೆ. ಭಾರತದಂತಹ ವಿಭಿನ್ನ ಜನರನ್ನು ಹಿಡಿದಿಡುವುದು ಸರಳವಲ್ಲ. ಹೀಗಾಗಿ ಭಾವನಾತ್ಮಕವಾಗಿರುವ ಸಂಗತಿಗಳನ್ನು ಪ್ರಯೋಗಿಸಬೇಕಾಗುತ್ತದೆ. ಒಟ್ಟಿನಲ್ಲಿ ಈ ಪರಿಸ್ಥಿತಿಯಲ್ಲಿ ಜನ ಹೊರಗೆ ಬರಬಾರದು ಎನ್ನುತ್ತಾರೆ ಡಾ ಪಾಂಡುರಂಗಿ ಅವರು.
ಟೀಕೆಗಳೂ ಕೂಡ ಕೇಳಿಬರುತ್ತಿವೆ
ಆದರೆ, ಮೋದಿ ಅವರು ದೀಪ ಹಚ್ಚಲು ಹೇಳಿದ್ದಕ್ಕೆ ಸಾಕಷ್ಟು ಟೀಕೆಗಳೂ ಕೇಳಿ ಬರುತ್ತಿವೆ. ದೀಪ ಹಚ್ಚುವುದರಿಂದ ಕೊರೊನಾ ಓಡಿ ಹೋಗುತ್ತದೆ ಎಂದು ಯಾವುದೇ ವೈದ್ಯರು, ವಿಜ್ಞಾನಿಗಳು ಹೇಳುವುದಿಲ್ಲ. ಮೋದಿ ಅವರು ದೇಶದ ಜನರೊಂದಿಗೆ ಭಾವನಾತ್ಮಕ ಆಟ ಆಡುತ್ತಿದ್ದಾರೆ. ಇದರಿಂದ ಏನೂ ಪ್ರಯೋಜನ ಇಲ್ಲ. ಅದರ ಬದಲು ವೈದ್ಯಕೀಯ ಕ್ಷೇತ್ರವನ್ನು ಬಲಗೊಳಿಸುವ ಕೆಲಸವನ್ನು ಮೋದಿ ಮಾಡಬೇಕಿದೆ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುತ್ತಿವೆ.