ದಾಂಡಿ ಸತ್ಯಾಗ್ರಹ, ಆರೆಸ್ಸೆಸ್ ಮತ್ತು ರಮ್ಯಾ ಅವರ ಕೆಣಕುವ ಟ್ವೀಟ್!
Recommended Video
ದಾಂಡಿ ಸತ್ಯಾಗ್ರಹ ಅಥವಾ ಉಪ್ಪಿನ ಸತ್ಯಾಗ್ರಹ, ಭಾರತದ ಸ್ವಾತಂತ್ರ್ಯ ಸಮರಕ್ಕೆ ಅತ್ಯಂತ ಮಹತ್ವದ ತಿರುವು ನೀಡಿದಂಥ ಶಾಂತಿಯುತ ಹೋರಾಟ. ಸರಿಯಾಗಿ 1930ರ ಮಾರ್ಚ್ 12ರಂದು ಮಹಾತ್ಮಾ ಗಾಂಧಿ ನೇತೃತ್ವದಲ್ಲಿ ಬ್ರಿಟಿಷರು ಉಪ್ಪಿನ ಮೇಲೆ ವಿಧಿಸಿದ್ದ ಕರವನ್ನು ವಿರೋಧಿಸಿ ಸತ್ಯಾಗ್ರಹ ಚಳವಳಿ ಆರಂಭಿಸಿದ್ದರು.
ಸ್ವಾತಂತ್ರ್ಯ ಹೋರಾಟದ ಆ ದಿನಗಳನ್ನು ನೆನೆಸಿಕೊಳ್ಳುವುದು, ನಮ್ಮ ಮಕ್ಕಳಿಗೆ ಸತ್ಯಾಗ್ರಹದ ಬಗ್ಗೆ ತಿಳಿವಳಿಕೆ ನೀಡುವುದು, ಹೋರಾಟದ ಮನೋಭಾವ ಬೆಳೆಸುವುದು, ಶಾಂತಿಯುತ ಪ್ರತಿಭಟನೆಯ ಮಹತ್ವವನ್ನು ಸಾರುವುದು ನಮ್ಮ ಧರ್ಮ. ಅಂದು ತಮ್ಮ ಜೀವನವನ್ನೇ ತ್ಯಾಗ ಮಾಡಿದ ಆ ಹೋರಾಟಗಾರರಿಗೆ ನಮೋ ನಮಃ.
ದಾಂಡಿ ಸತ್ಯಾಗ್ರಹದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಪೋಸ್ಟ್ ಗಳನ್ನು ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಉಪ್ಪಿನ ಸತ್ಯಾಗ್ರಹದ ಬಗ್ಗೆ ಒಂದು ಲೇಖನವನ್ನೇ ತಮ್ಮ ಅಧಿಕೃತ ವೆಬ್ ತಾಣದಲ್ಲಿ ಬರೆದಿದ್ದಾರೆ. ಹಲವಾರು ಜನರು ಮಹಾತ್ಮಾ ಗಾಂಧಿಗೆ ಮತ್ತು ಅವರ ಜೊತೆ ಹೆಜ್ಜೆ ಹಾಕಿದ ಸಹಸ್ರಾರು ಸ್ವಾತಂತ್ರ್ಯ ಯೋಧರಿಗೆ ನಮನ ಸಲ್ಲಿಸುತ್ತಿದ್ದಾರೆ.
ಖ್ಯಾತ ನಟಿ ರಮ್ಯಾ ಅವರಿಂದ ಟ್ವಿಟ್ಟರ್ನಲ್ಲಿ ಕನ್ನಡ ಪಾಠ!
ಆದರೆ, ದಾಂಡಿ (ದಂಡಿ) ಎಂದರೇನು? ದಾಂಡಿ ಸತ್ಯಾಗ್ರಹದಲ್ಲಿ 'ದಾಂಡಿ' ಪದ ಹೇಗೆ ಬಂದಿತು? ದಾಂಡಿಗೂ ದಂಡಕ್ಕೂ ಸಂಬಂಧವೇನಾದರೂ ಇದೆಯಾ? ದಾಂಡಿಯಲ್ಲಿ ದಾಂಡವಿದೆಯೆಂದಾದ ಮೇಲೆ ಅದಕ್ಕೂ ದಂಡ ಕೈಯಲ್ಲಿ ಹಿಡಿಯುವ ಆರೆಸ್ಸೆಸ್ಸಿಗೂ ಏನಾದರೂ ಸಂಬಂಧವಿದೆಯಾ? ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ, ಇಂತಹ ತಮಾಷೆಗಳಿಗೇನೂ ಬರವಿರುವುದಿಲ್ಲ.
Array |
ರಮ್ಯಾ ಅವರ ಹಾಸ್ಯಪ್ರಜ್ಞೆಗೆ ಹಿಡಿದ ಕನ್ನಡಿ
ಕಾಂಗ್ರೆಸ್ಸಿನ ಸೋಷಿಯಲ್ ಮೀಡಿಯಾ ಹೆಡ್ ಆಗಿರುವ (ಇನ್ನೂ ಆಗಿದ್ದಾರಾ?), ಮಾಜಿ ಚಿತ್ರನಟಿ, ಮಾಜಿ ಸಂಸದೆ (ಮಂಡ್ಯ) ರಮ್ಯಾ ಅಲಿಯಾಸ್ ದಿವ್ಯಾ ಸ್ಪಂದನಾ ಅವರು, ದಂಡಿ ಸತ್ಯಾಗ್ರಹಕ್ಕೂ, ಅವರು ಸಿಕ್ಕಾಪಟ್ಟೆ ದ್ವೇಷಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನೂ ಬೆಸೆದು ಮಾಡಿರುವ ಟ್ವೀಟ್ ಟ್ವಿಟ್ಟರಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅವರಲ್ಲಿನ 'ಹಾಸ್ಯ ಪ್ರಜ್ಞೆ'ಗೆ ಆ ಟ್ವೀಟ್ ಕನ್ನಡಿ ಹಿಡಿದಂತಿದೆ.
ಅವರು ಮಾಡಿರುವ ಟ್ವೀಟ್ ಹೀಗಿದೆ ನೋಡಿ : "ಆರೆಸ್ಸೆಸ್ ದಂಡಿ ಮಾರ್ಚ್ ನಲ್ಲಿ ಭಾಗವಹಿಸಿರಲಿಲ್ಲ. ಏಕೆಂದರೆ, ಅವರು ದಂಡಿ ಬಗ್ಗೆ ಬೆದರಿದ್ದರು. ಗಮನಿಸಿ : ಎರಡನೇ ಲೈನ್ ಜೋಕ್, ಮೊದಲನೇ ಸಾಲು ಸತ್ಯಸಂಗತಿ."
ರಮ್ಯಾ, ಮೋದಿಯನ್ನು ನಂಬುವುದಿಲ್ಲವಂತೆ: "ಕತ್ತೆ ಬಾಲ ಕುದುರೆ ಜುಟ್ಟು" ಅಂದ್ರು ಟ್ವಿಟ್ಟಿಗರು
ದಾಂಡಿ ಪದ ಹೇಗೆ ಬಂದಿತು?
ರಮ್ಯಾ ಅವರು ಮಾಡಿರುವ ಟ್ವೀಟ್ ನಲ್ಲಿ ಜೋಕ್, ತಮಾಷೆ, ವ್ಯಂಗ್ಯ ಏನೇ ಇರಲಿ. ದಾಂಡಿ ಪದ ಹೇಗೆ ಬಂದಿತು ಎಂಬುದನ್ನು ನೋಡೋಣ. ದಾಂಡಿ ಎನ್ನುವುದು ಗುಜರಾತ್ ನಲ್ಲಿ ಸಮುದ್ರತಟದಲ್ಲಿರುವ ಒಂದು ಗ್ರಾಮ. ಬ್ರಿಟಿಷರು ವಿಧಿಸಿದ್ದ ಉಪ್ಪಿನ ಮೇಲಿನ ಕರವನ್ನು ವಿರೋಧಿಸಿ, 1930 ಮಾರ್ಚ್ 12ರಂದು ಸಾಬರಮತಿ ಆಶ್ರಮದಿಂದ ಹೊರಟು 384 ಕಿ.ಮೀ. ಉದ್ದವನ್ನು ಮಹಾತ್ಮಾ ಗಾಂಧಿ ಅವರು ಸಹಸ್ರಾರು ಜನರೊಂದಿಗೆ ಕಾಲ್ನಡಿಗೆಯಲ್ಲಿ ತಲುಪಿದ್ದರು ಮತ್ತು ದಾಂಡಿ ಗ್ರಾಮದಲ್ಲಿ ತಾವೇ ಉಪ್ಪು ತಯಾರಿಸಿ ಬ್ರಿಟಿಷರಿಗೆ ಸೆಡ್ಡು ಹೊಡೆದಿದ್ದರು. ಈ ಕಾರಣಕ್ಕಾಗಿ ಈ ಐತಿಹಾಸಿಕ ಚಳವಳಿಗೆ ದಾಂಡಿ ಸತ್ಯಾಗ್ರಹ ಅಥವಾ ಉಪ್ಪಿನ ಸತ್ಯಾಗ್ರಹ ಎಂಬ ಹೆಸರು ಬಂದಿತು.
ಯುಪಿಎ ಡೀಲ್ ಪ್ರಕಾರ ನಡೆದಿದ್ರೆ ಕಡಿಮೆ ಬೆಲೆಗೆ ರಫೇಲ್: ರಮ್ಯಾ ಟ್ವೀಟ್
ಉಪ್ಪು ತಿಂದವರಿಗೆ ನೀರು ಕುಡಿಸುತ್ತಿದ್ದಾರೆ
ತಮ್ಮ ಟ್ವೀಟ್ ಗಳಲ್ಲಿ ಭಾರತೀಯ ಜನತಾ ಪಕ್ಷವನ್ನು, ನರೇಂದ್ರ ಮೋದಿಯವರನ್ನು, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಹೀಗಳೆಯಲು, ಕಾಲೆಳೆಯಲು ಯಾವುದೇ ಅವಕಾಶವನ್ನು ರಮ್ಯಾ ಅವರು ಬಿಟ್ಟುಕೊಡುವುದಿಲ್ಲ. ಕಾಂಗ್ರೆಸ್ ಪಕ್ಷದ ಉಪ್ಪು ತಿಂದಿದ್ದಾರೆ. ಸೋಷಿಯಲ್ ಮೀಡಿಯಾ ಹೆಡ್ ಆಗಿಯೂ ಅವರು ಅವರ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಆದರೆ, ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕಲ್ಲ. ರಮ್ಯಾ ಅವರು ಮಾಡಿರುವ 'ದಾಂಡಿ' ಟ್ವೀಟ್ ನೋಡಿ ಬಿಜೆಪಿ ಅಭಿಮಾನಿಗಳು ಅವರಿಗೆ ಸರಿಯಾಗಿಯೇ ನೀರು ಕುಡಿಸುತ್ತಿದ್ದಾರೆ.
ಮದುವೆ ಮಾಡಿಕೊಂಡು ಆರಾಮವಾಗಿರಿ
ಯರಗಟ್ಟಿ ಎಂಬುವವರು, 'ರಮ್ಯಾ ಅವರೇ, ನೀವು ಒಳ್ಳೆಯ ಹುಡುಗನನ್ನು ನೋಡಿಕೊಂಡು ಮದುವೆ ಮಾಡಿಕೊಂಡು, ಆರಾಮವಾಗಿ ಮನೆಯಲ್ಲಿ ಇದ್ದು ಜೀವನ ಮಾಡಿ. ನಿಮಗೆ ರಾಜಕೀಯ ಸರಿ ಹೊಂದಲ್ಲಾ. ನಿಮ್ಮದೇ ಆದ ಜೀವನ ಇದೆ. ಆರಾಮ ಇರುವುದು ಬಹಳ ಉತ್ತಮ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಹೇಳುತ್ತಾ ಇದ್ದೀನಿ.' ಎಂದು ಉಪದೇಶ ನೀಡಿದ್ದಾರೆ. ಇಂಥ ಉಪದೇಶಗಳನ್ನು ರಮ್ಯಾ ಅವರು ಸ್ವೀಕರಿಸುವುದಿಲ್ಲ ಎಂಬುದು ಗೊತ್ತಿದ್ದೂ ಅವರು ಉಪದೇಶ ನೀಡಿದ್ದಾರೆ. ಮತ್ತೊಬ್ಬರು ಶಶಿ ಎಂಬುವವರು, 'ರಮ್ಯಾ ಅವರೇ ಮೊದಲು ನೀವು ನಮ್ಮ ಭಾರತದ ಇತಿಹಾಸವನ್ನು ತಿಳಿದುಕೊಳ್ಳಿ, ಆಮೇಲೆ RSS ಮತ್ತೆ ಇನ್ನೊಂದರ ಬಗ್ಗೆ ಆಮೇಲೆ ಮಾತಾಡಿ.....' ಎಂದು ಹೇಳಿದ್ದಾರೆ. ಇದನ್ನು ಕೂಡ ರಮ್ಯಾ ಅವರು ಸ್ವೀಕರಿಸುತ್ತಾರಾ?
ಆರೆಸ್ಸೆಸ್ ದಾಂಡಿ ಸತ್ಯಾಗ್ರಹದಲ್ಲಿ ಭಾಗವಹಿಸಿತ್ತೆ?
ಆದರೆ, ನಿಜಕ್ಕೂ ಆರೆಸ್ಸೆಸ್ ದಾಂಡಿ ಸತ್ಯಾಗ್ರಹದಲ್ಲಿ ಭಾಗವಹಿಸಿತ್ತೆ? ಇತಿಹಾಸ ತಜ್ಞರ ಪ್ರಕಾರ, ಆರೆಸ್ಸೆಸ್ ಸಂಘವಾಗಿ ಭಾಗವಹಿಸದಿದ್ದರೂ, ಆರೆಸ್ಸೆಸ್ ಕಾರ್ಯಕರ್ತರು ವೈಯಕ್ತಿಕವಾಗಿ ಭಾಗವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ 'ಡಾಕ್ಟರ್ ಜೀ' ಎಂದೇ ಕರೆಯಿಸಿಕೊಳ್ಳುತ್ತಿದ್ದ ಕೇಶವ ಬಲಿರಾಮ್ ಹೆಡ್ಗೇವಾರ್ ಅವರು, ಆರೆಸ್ಸೆಸ್ ಸಂಘಟನೆಯನ್ನು ರಾಜಕೀಯದಿಂದ ದೂರವಿಡುವ ಉದ್ದೇಶದಿಂದ, ಸಂಘದ ಕಾರ್ಯಕರ್ತರಿಗೆ ವೈಯಕ್ತಿಕವಾಗಿ ಭಾಗವಹಿಸಲು ಅನುಮತಿ ನೀಡಿದ್ದರು. ಹೀಗಾಗಿ ಹೆಗ್ಡೇವಾರಿ ಅವರೊಂದಿಗೆ ಸಂಘದ ಕಾರ್ಯಕರ್ತರು ಕೂಡ ದಾಂಡಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು ಎಂದು ಹೇಳುತ್ತದೆ ಇತಿಹಾಸ. ನಂಬುವುದು ಬಿಡುವುದು ಅವರವರಿಗೆ ಬಿಟ್ಟಿದ್ದು.