ರಾಜ್ಯ ಸಚಿವ ಸಂಪುಟ ಸಭೆ ಎಂದರೇನು? ಎಲ್ಲಿ? ಯಾಕೆ ನಡೆಯುತ್ತದೆ?
ಬೆಂಗಳೂರು, ಡಿಸೆಂಬರ್ 12: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಇಂತಹ ಮಹತ್ವದ ನಿರ್ಧಾರಗಳನ್ನು, ತೀರ್ಮಾನಗಳನ್ನು ಕೈಗೊಳ್ಳಲಾಯಿತು ಅಂತಾ ಆಗಾಗ ಕೇಳುತ್ತೇವೆ. ಆದರೆ ಸಚಿವ ಸಂಪುಟ ಸಭೆ ಎಂದರೇನು? ಅದು ಎಲ್ಲಿ? ಯಾಕೇ ನಡೆಯುತ್ತದೆ? ಯಾರು ಯಾರು ಸಂಪುಟ ಸಭೆಯಲ್ಲಿ ಭಾಗವಹಿಸಲು ಅಧಿಕಾರ ಹೊಂದಿರುತ್ತಾರೆ ಎಂಬಂತಹ ಅನೇಕ ವಿಷಯಗಳು ಅನೇಕರಿಗೆ ತಿಳಿದಿಲ್ಲ. ಈ ಬಗ್ಗೆ ವಿವರಣಾತ್ಮಕ ಲೇಖನ ಇಲ್ಲಿದೆ...
ಒಂದು ರಾಜ್ಯ ಅಥವಾ ದೇಶದ ಅಭಿವೃದ್ಧಿಗೆ ಸಂಬಂಧ ಪಟ್ಟಂತೆ ಒಂದು ಸರ್ಕಾರ ಕೈಗೊಳ್ಳುವ ನಿರ್ಧಾರವನ್ನು ಸಾಮೂಹಿಕವಾಗಿ ತೆಗೆದುಕೊಳ್ಳಲು ಸಚಿವರು ಸೇರುವ ಸಭೆಯೇ ಸಚಿವ ಸಂಪುಟ ಸಭೆ. ಸಂಪುಟ ಸಭೆ ಕರೆಯುವ ಅಧಿಕಾರ ಇರುವುದು ಮುಖ್ಯಮಂತ್ರಿಗಳಿಗೆ ಮಾತ್ರ. ಅವರ ನೇತೃತ್ವದಲ್ಲಿಯೇ ಸಂಪುಟ ಸಭೆ ನಡೆಯುತ್ತದೆ.
ಉಪಚುನಾವಣೆ: ತ್ಯಾಗಕ್ಕೆ ತಯಾರಾಗಿ, ಸಚಿವರಿಗೆ ಯಡಿಯೂರಪ್ಪ ಸೂಚನೆ
ಎಲ್ಲ ಸಂಪುಟ ದರ್ಜೆಯ ಸಚಿವರು ಹಾಗು ಸರ್ಕಾರದ ಮುಖ್ಯ ಕಾರ್ಯದರ್ಶಿ ಸಂಪುಟ ಸಭೆಯಲ್ಲಿ ಭಾಗವಹಿಸುತ್ತಾರೆ. ಆಯಾ ಇಲಾಖೆಯ ಪ್ರಸ್ತಾವನೆ ಬೇಡಿಕೆಗಳನ್ನುಇಲಾಖೆಯ ಪ್ರಧಾನ ಕಾರ್ಯದರ್ಶಿ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಮೊದಲೇ ಕಳಿಸಿರುತ್ತಾರೆ. ಸಂಪುಟ ಸಭೆಯ ಅಜೆಂಡಾವನ್ನ ತಯಾರಿಸಿ ಎಲ್ಲ ಸಚಿವರಿಗೆ ಸಭೆಯಲ್ಲಿ ಭಾಗವಹಿಸುವಂತೆ ಮುಖ್ಯಕಾರ್ಯದರ್ಶಿಗಳು ಆಹ್ವಾನ ಕಳಿಸಿರುತ್ತಾರೆ ಎಂದು ಹಿರಿಯ ರಾಜಕಾರಣಿ, ಮಾಜಿ ಸಚಿವ ಡಿ ಎಚ್ ಶಂಕರಮೂರ್ತಿ ಅವರು ಒನ್ಇಂಡಿಯಾಕ್ಕೆ ವಿವರಿಸಿದ್ದಾರೆ.
ನಮ್ಮ ರಾಜ್ಯದಲ್ಲಿ ಹಿಂದೆ ಪ್ರತಿ ಬುಧವಾರ ಸಂಪುಟ ಸಭೆ ನಡೆಯುತ್ತಿತ್ತು. ಆದರೆ ಈಗ ಪ್ರತಿ ಗುರುವಾರ ಸಂಪುಟ ಸಭೆ ನಡೆಯುತ್ತಿದೆ. ಕನಿಷ್ಠ ವಾರಕ್ಕೆ ಒಂದು ಸಲವಾದರೂ ಸಂಪುಟ ಸಭೆ ನಡೆಯುವುದು ವಾಡಿಕೆ.
ಸಚಿವ ಸಂಪುಟ ಸಭೆ ಎಲ್ಲಿ ನಡೆಯುತ್ತೆ?
ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯುವ ಸಭಾಭವನ ಎಲ್ಲಿದೆ? "ಆ ಒಂದು ಕಾರಣ"ಕ್ಕಾಗಿ ಕಾರಣಕ್ಕಾಗಿ ವಿಧಾನಸೌಧದ ಹೊರಗೂ ನಡೆದಿವೆ ಸಂಪುಟ ಸಭೆಗಳು.
ಸಾಮಾನ್ಯವಾಗಿ ವಿಧಾನಸೌಧದ ಮೂರನೇ ಮಹಡಿಯ ಸಂಪುಟ ಸಭಾಭವನದಲ್ಲಿ ಸಂಪುಟ ಸಬೆ ನಡೆಯುತ್ತದೆ. ಮುಖ್ಯಮಂತ್ರಿ, ಸಂಪುಟ ದರ್ಜೆ ಸಚಿವರುಗಳು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಾತ್ರ ಸಂಪುಟ ಸಭೆಯಲ್ಲಿ ಭಾಗವಹಿಸುವ ಅಧಿಕಾರ ಹೊಂದಿದ್ದಾರೆ. ಸಂಪುಟ ಸಭೆ ಆರಂಭವಾಗುತ್ತಿದ್ದಂತೆಯೆ ಸಭೆಯ ಅಜೆಂಡಾವನ್ನು ಸರ್ಕಾರದ ಮುಖ್ಯಕಾರ್ಯದರ್ಶಿಗಳು ಓದುತ್ತಾರೆ.
ಸಭೆ ಆರಂಭವಾಗುತ್ತಿದ್ದಂತೆಯೆ, ಸಭೆ ನಡೆಯುವ ಕೊಠಡಿಯ ಹೊರಗೆ "ಸಚಿವ ಸಂಪುಟದ ಸಭೆ ನಡೆಯುತ್ತಿದೆ ಪ್ರವೇಶ ನಿಷಿದ್ಧ" ಎಂಬ ಕೆಂಪು ದೀಪದ ಬೋರ್ಡ್ ಬೆಳಗುತ್ತದೆ. ಸಭೆ ನಡೆಯುತ್ತಿರುವ ಸಭಾಭವನ ಬಳಿ ಬೇರೆ ಯಾರಿಗೂ ಪ್ರವೇಶ ಇರುವುದಿಲ್ಲ. ರಾಜ್ಯ ಖಾತೆ ಹೊಂದಿರುವ ಸಚಿವರು ತಮ್ಮ ಇಲಾಖೆಯ ವಿಷಯಗಳು ಬಂದಾಗ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.
ಸಚಿವರ ಅನುಪಸ್ಥಿತಿಯಲ್ಲಿ ಕಾರ್ಯದರ್ಶಿಗೆ ಅಧಿಕಾರ
ತಮ್ಮ ಇಲಾಖೆಯ ವಿಷಯ ಮುಗಿಯುತ್ತಿದ್ದಂತೆಯೆ ರಾಜ್ಯಖಾತೆ ಸಚಿವರು ಸಂಪುಟ ಸಭೆಯಿಂದ ತೆರಳಬೇಕು. ಇನ್ನು ಆಯಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಸಂಪುಟ ಸಭೆ ನಡೆಯುವ ಸಭಾಭವನದ ಪಕ್ಕದ ಕೊಠಡಿಯಲ್ಲಿ ಹಾಜರಿರುತ್ತಾರೆ. ತಮ್ಮ ಇಲಾಖೆ ಬೇಡಿಕೆ ಅಥವಾ ವಿಷಯಗಳ ಮೇಲೆ ಚರ್ಚೆ ಬಂದಾಗ ಮಾತ್ರ ಸಂಪುಟ ಸಭೆಯಲ್ಲಿದ್ದು ಮಾಹಿತಿ ಕೊಡುತ್ತಾರೆ.
ಸಚಿವರು ಸಂಪುಟ ಸಭೆಯಲ್ಲಿ ಭಾಗವಹಿಸದೇ ಇದ್ದಾಗ ಸಂಬಂಧಿಸಿದ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭಾಗವಹಿಸಿ ಮಾಹಿತಿ ಕೊಡುತ್ತಾರೆ. ರಾಜಕೀಯ ಕಾರಣಗಳಿಗಾಗಿ ಹಾಗು ರಾಜ್ಯದ ಬೇರೆ ಪ್ರದೇಶಗಳಿಗೆ ಪ್ರಾತಿನಿಧ್ಯ ಕೊಡುವ ನಿಟ್ಟಿನಲ್ಲಿ ವಿಧಾನಸೌಧದ ಹೊರಗೂ ಸಂಪುಟ ಸಭೆ ನಡೆದಿವೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗ ಸುವರ್ಣಸೌಧದಲ್ಲಿ ಹಾಗೂ ರಾಜಕೀಯ ಪ್ರಾತಿನಿಧ್ಯ ಕೊಡಬೇಕು ಎಂಬ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಸಂಪುಟ ಸಭೆಗಳು ನಡೆದಿವೆ.
ಸರ್ಕಾರದ ತೀರ್ಮಾನಕ್ಕೆ ರಾಜ್ಯಪಾಲರ ಅನುಮತಿ ಅಗತ್ಯ
ಸಂಪುಟ ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳಿಗೆ ಅವರ ಅಂಕಿತ ಬೇಕೆ ಬೇಕು. ಸರ್ಕಾರದ ತೀರ್ಮಾನಕ್ಕೆ ರಾಜ್ಯಪಾಲರ ಅನುಮತಿ ಅತ್ಯಗತ್ಯ
ಸಚಿವ ಸಂಪುಟದಲ್ಲಿ ಕೈಗೊಳ್ಳುವ ನಿರ್ಣಯಗಳನ್ನ ರಾಜ್ಯಪಾಲರು ಒಪ್ಪಲೇ ಬೇಕು ಅಂತಿಲ್ಲ. ಸಂಪುಟ ಕೈಗೊಳ್ಳುವ ನಿರ್ಧಾರದಿಂದ ಸಮಾಜದ ಹಿತಕ್ಕೆ ಧಕ್ಕೆ ಆಗುತ್ತದೆ ಎಂಬ ಭಾವನೆ ಬಂದರೆ ಪುನರ್ ಪರಿಶೀಲನೆ ಮಾಡುವಂತೆ ರಾಜ್ಯಪಾಲರು ಸರ್ಕಾರಕ್ಕೆ ಹಿಂದಿರುಗಿ ಕಳಿಸುತ್ತಾರೆ. ನಂತರ ಸರ್ಕಾರ ಯಾಕೆ ಈ ಯೋಜನೆ ಅತವಾ ನಿರ್ಣಯ ಮಹತ್ವದ್ದಾಗಿದೆ ಎಂಬುದನ್ನು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಬೇಕು.
ಸರ್ಕಾರದ ಸ್ಪಷ್ಟನೆ ಬಳಿಕವೂ ರಾಜ್ಯಪಾಲರು ಸಂಪುಟದ ನಿರ್ಣಯ ಒಪ್ಪದೆ ತಮ್ಮಲ್ಲಿ ಇಟ್ಟುಕೊಳ್ಳಲು ಅವಕಾಶವಿದೆ. ಸರ್ಕಾರದ ಎಲ್ಲ ತೀರ್ಮಾನಗಳನ್ನ ರಾಜ್ಯಪಾಲರು ಒಪ್ಪಿದಾಗ ಮಾತ್ರ ಸರ್ಕಾರಕ್ಕೆ ಅನುಷ್ಟಾನಗೊಳಿಸಲು ಸಾಧ್ಯವಾಗುತ್ತದೆ. ಹಾಗಾಗಿ ಸಂಪುಟ ಸಭೆಯ ನಿರ್ಣಯಗಳಿಗೆ ರಾಜ್ಯಪಾಲರ ಒಪ್ಪಿಗೆ ಅಗತ್ಯ.
ತುರ್ತು ಸಂದರ್ಭದಲ್ಲಿ ಸುಗ್ರೀವಾಜ್ಞೆ ಕಾನೂನು ಜಾರಿ
ತುರ್ತು ಸಂದರ್ಭಗಳಲ್ಲಿ ಸಂಪುಟದಲ್ಲಿ ನಿರ್ಣಯಿಸಿ ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿ ಮಾಡಬಹುದು.
ಆದರೆ ಸಚಿವ ಸಂಪುಟದ ಆದೇಶಗಳಿಗೆ ಘಟನೋತ್ತರ ಮಂಜೂರಾತಿ ಪಡೆದುಕೊಳ್ಳಬೇಕು. ವಿಧಾನ ಮಂಡಲ ಅಧಿವೇಶನ ನಡೆಯದೇ ಇರುವ ಸಂದರ್ಭದಲ್ಲಿ ತುರ್ತು ಸರ್ಕಾರಿ ಆದೇಶವನ್ನು ಸಂಪುಟ ಸಭೆಯ ಒಪ್ಪಿಗೆ ಪಡೆದು ಹೊರಡಿಸಲು ಸರ್ಕಾರಕ್ಕೆ ಅಧಿಕಾರವಿದೆ. ಆದರೆ ಆ ಬಳಿಕ 6 ತಿಂಗಳುಗಳಲ್ಲಿ ಉಭಯ ಸದನಗಳಲ್ಲಿ ಸಂಪುಟ ಹೊರಡಿಸಿದ್ದ ಮಸೂದೆಗೆ ಶಾಸನಸಭೆಯ ಒಪ್ಪಿಗೆ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಸರ್ಕಾರದ ಆದೇಶ ತಾನಾಗೇ ಅನೂರ್ಜಿತವಾಗುತ್ತದೆ.
ಹೀಗಾಗಿ ರಾಜ್ಯ ಸಚಿವ ಸಂಪುಟಕ್ಕೆ ಪರಮೋಚ್ಚ ಅಧಿಕಾರ ಇದ್ದರೂ ಕೂಡ ವಿಧಾನಸಭೆ ಹಾಗೂ ವಿಧಾನ ಪರಿಷತ್ಗಳಲ್ಲಿ ಅಂಗೀಕಾರ ಪಡೆದುಕೊಳ್ಳುವುದು ಅತ್ಯಗತ್ಯ. ಜನರ ಕೆಲವೊಮ್ಮ ಜನರ ವಿರೋಧ, ಸಚಿವರುಗಳು ವ್ಯಕ್ತವಾದಾಗಲೂ ಯೋಜನೆ ಕೈಬಿಡಲೂ ಸಚಿವ ಸಂಪುಟದ ಒಪ್ಪಿಗೆ ಬೇಕು. ಯೋಜನೆ ಮಾಡಲು, ಆದೇಶ ಹೊರಡಿಸಲು ಸಂಪುಟದ ತೀರ್ಮಾನ ಹೇಗೆ ಬೇಕೊ ಹಾಗೆ ಆದೇಶ ಅಥವಾ ಯೋಜನೆಯನ್ನು ಹಿಂದಕ್ಕೆ ಪಡೆದುಕೊಳ್ಳಲು ಸಚಿವ ಸಂಪುಟದ ಒಪ್ಪಿಗೆ ಅತ್ಯಗತ್ಯ.