ಕನಿಷ್ಠ ಆದಾಯ ಯೋಜನೆ ಕಡ್ಲೇಪುರಿ ಹಂಚಿದ ಹಾಗಲ್ಲ; ಇಲ್ಲಿದೆ ಲೆಕ್ಕಾಚಾರ!
ಒಂದು ವೇಳೆ ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಅರ್ಥಾತ್ ಜನರು ಅಧಿಕಾರಕ್ಕೆ ತಂದರೆ ಕಡು ಬಡವರಿಗಾಗಿ NYAY ಎಂಬ ಕನಿಷ್ಠ ಆದಾಯ ಖಾತ್ರಿ ಯೋಜನೆಯನ್ನು ಜಾರಿಗೆ ತರುವುದಾಗಿ ಆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಘೋಷಣೆ ಮಾಡಿದ್ದಾರೆ.
ಮೊದಲಿಗೆ ಈ ಯೋಜನೆ ಏನು ಅನ್ನೋದನ್ನು ತಿಳಿದುಕೊಂಡು ಬಿಡಿ: ಈ ಯೋಜನೆ ಅಡಿಯಲ್ಲಿ ವರ್ಷಕ್ಕೆ 72,000 ರುಪಾಯಿಯನ್ನು 5 ಕೋಟಿ ಕುಟುಂಬಗಳಿಗೆ ನೀಡಲಾಗುತ್ತದೆ. ಆ ಐದು ಕೋಟಿ ಅಂದರೆ, ಭಾರತದಲ್ಲಿನ ಶೇಕಡಾ 20ರಷ್ಟಿರುವ ಕಡು ಬಡತನದ ಕುಟುಂಬಗಳಾಗಿ ಇರುತ್ತವೆ. ಬಡತನ ವಿರುದ್ಧದ ಕೊನೆಯ ಅಸ್ತ್ರ ಇದು ಎಂದು ರಾಹುಲ್ ಗಾಂಧಿ ಬಣ್ಣಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ಯೋಜನೆಯನ್ನು ನ್ಯೂನ್ ತಮ್ ಆಯ್ ಯೋಜನಾ (NYAY) (ಕನಿಷ್ಠ ಆದಾಯ ಯೋಜನಾ) ಹಾಗೂ ಇದನ್ನು ನ್ಯಾಯ್ ಅನ್ನಬಹುದು. ನ್ಯಾಯ ಎಂದು ಇದರರ್ಥ. ಈಗಾಗಲೇ ಕೇಂದ್ರದಿಂದ ದೊಡ್ಡ ಮಟ್ಟದಲ್ಲಿ ಹಣವನ್ನು ಹಲವು ಯೋಜನೆಗಳಿಗೆ ನೀಡಲಾಗುತ್ತಿದೆ. ಸಾರ್ವಜನಿಕ ಆಹಾರ ವಿತರಣೆ, ಯೂರಿಯಾ, ನರೇಗಾ ಅಂಥ ಹಲವು ಯೋಜನೆಗಳಲ್ಲಿ ಬಹಳ ದೊಡ್ಡದಾದವು.
ಭರವಸೆ ನೀಡಬಹುದು. ಆದರೆ 'ನ್ಯಾಯ್' ಯೋಜನೆಯನ್ನು ಆರ್ಥಿಕವಾಗಿ ಸಫಲ ಮಾಡಲು ಸಾಧ್ಯವಾ? ಕೆಲವು ಸಲ ಸರಿಯಾದ ಹಾಗೂ ಸಂಪೂರ್ಣ ಮಾಹಿತಿ ಇಲ್ಲದೆ ವಿಶ್ಲೇಷಣೆ ಅಸಾಧ್ಯ. ಈಗ ಒಂದು ವಿಷಯ ಸ್ಪಷ್ಟ ಆಗಬೇಕಿದೆ: ಒಂದು ವೇಳೆ ನ್ಯಾಯ್ ಜಾರಿಗೆ ಬಂದರೆ ಸರಕಾರದ ಈಗಿನ ಯೋಜನೆಯಾದ ನರೇಗಾದಂಥದ್ದನ್ನು ಹಿಂಪಡೆಯಲಾಗುತ್ತದೆಯಾ?
3 ಲಕ್ಷ 60 ಸಾವಿರ ಕೋಟಿ ರುಪಾಯಿಯನ್ನು ರಾಹುಲ್ ಎಲ್ಲಿಂದ ತರುತ್ತಾರೆ?
ಒಂದು ವೇಳೆ ಈ ಪ್ರಶ್ನೆಗೆ ಉತ್ತರ 'ಇಲ್ಲ' ಅನ್ನೋದಾದರೆ, ಆರ್ಥಿಕವಾಗಿ ನ್ಯಾಯ್ ಸಾಕಾರಗೊಳಿಸುವುದು ಸಾಮಾನ್ಯದ ಮಾತಲ್ಲ. 'ನ್ಯಾಯ್' ಯೋಜನೆ ಒಂದನ್ನು ಅನುಷ್ಠಾನಕ್ಕೆ ತರಬೇಕು ಅಂದರೆ 3.6 ಲಕ್ಷ ಕೋಟಿ ರುಪಾಯಿ ಬೇಕಾಗುತ್ತದೆ. ಅಂದರೆ ಒಟ್ಟಾರೆ ಬಜೆಟ್ ನಲ್ಲಿ ಶೇಕಡಾ 12ರಿಂದ 13ರಷ್ಟು ಮೊತ್ತ ಇದು. ಯಾವಾಗ ವಿತ್ತೀಯ ಕೊರತೆ ಹೆಚ್ಚುತ್ತಾ ಹೋಗುತ್ತದೋ ಆಗ ಜಾಗತಿಕ ಮಟ್ಟದಲ್ಲಿ ದೇಶದ ರೇಟಿಂಗ್ ಇಳಿಯುತ್ತದೆ.
ದೇಶದ ಆರ್ಥಿಕತೆ ಮೇಲೆ ನ್ಯಾಯ್ ಪರಿಣಾಮ ಏನು?
ಈ ರೀತಿಯಾಗಿ ಹಣವು ಬಡವರ ಕೈ ಸೇರಿದರೆ ಖಂಡಿತಾ ಅವರ ಆದಾಯ ಹೆಚ್ಚಳ ಆಗುತ್ತದೆ. ಅದರಿಂದ ಹಣದುಬ್ಬರ ಹೆಚ್ಚಳವಾಗುತ್ತದೆ. ಇದರ ಜತೆಗೆ ಜಿಡಿಪಿಗೆ ವೇಗ ದೊರೆಯುತ್ತದೆ ಮತ್ತು ಪ್ರಗತಿ ಕಾಣಬಹುದು. ಯಾವೆಲ್ಲ ಕಂಪನಿಗಳು ಗ್ರಾಮೀಣ ಆರ್ಥಿಕತೆ ಮೇಲೆ ಅವಲಂಬನೆ ಆಗಿವೆಯೋ ಅವುಗಳ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಆದರೆ ಹಣದುಬ್ಬರ ದರ ಏರುಮುಖದಲ್ಲಿ ಇದ್ದರೆ ಬಡ್ಡಿ ದರ ಕೂಡ ಹೆಚ್ಚಳವಾಗುತ್ತದೆ. ಈ ಇಡೀ ಆರ್ಥಿಕ ಪರಿಣಾಮಗಳು ಒಂದಕ್ಕೊಂದು ಸಂಬಂಧ ಇರುವ ಕೊಂಡಿಗಳಂತೆ.
ಚುನಾವಣೆ ಸಂದರ್ಭದಲ್ಲಿ ಈ ಯೋಜನೆ ಮತದಾರರ ಮನಸಿನಲ್ಲಿ ಉಳಿಯುತ್ತಾ?
ಇದನ್ನು ವಿಶ್ಲೇಷಣೆ ಮಾಡುವುದು ಕಷ್ಟ್. ಈ ಯೋಜನೆಯಿಂದ ಬರೀ ಲಾಭವೇ ಕಾಣುತ್ತಿದೆ ಹೊರತು ಹಾನಿಯಂತೂ ಗೋಚರಿಸುತ್ತಿಲ್ಲ. ರಾಹುಲ್ ಗಾಂಧಿ ಕೂಡ ಹೇಳುತ್ತಿದ್ದಾರೆ: ಈ ಹಿಂದೆ ಕಾಂಗ್ರೆಸ್ ಪಕ್ಷ ನೀಡಿದ ಭರವಸೆಗಳನ್ನೆಲ್ಲ ಈಡೇರಿಸಿದೆ. ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತ್ತೀಸ್ ಗಢ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ರೈತರ ಸಾಲ ಮನ್ನಾ ಬಗ್ಗೆ ಭರವಸೆ ನೀಡಿತ್ತು. ಆ ನಂತರ ಅದನ್ನು ಜಾರಿಗೆ ತಂದಿದೆ. ನೆನಪಿಟ್ಟುಕೊಳ್ಳಿ: ಈ ಯೋಜನೆ ಘೋಷಣೆ ಆದಾಗ ಭಾರತದ ಷೇರು ಮಾರುಕಟ್ಟೆಯಲ್ಲಿ ಮಾರಾಟದ ಒತ್ತಡ ಕಂಡುಬಂತು. ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್ ಡಿಎಗೆ ಈ ಯೋಜನೆ ಹೊಡೆತ ನೀಡುತ್ತದೆ ಎಂಬುದು ಲೆಕ್ಕಾಚಾರ ಆಗಿತ್ತು.
ರೈತಾಪಿ ವರ್ಗದವರಿಗೆ ಹೊಸ ಭರವಸೆ
ಒಂದು ವೇಳೆ ಕಾಂಗ್ರೆಸ್ ನಿಂದ ಪ್ರಾದೇಶಿಕ ಮಾಧ್ಯಮಗಳಲ್ಲೂ ಈ ಬಗ್ಗೆ ಪರಿಣಾಮಕಾರಿಯಾದ ಪ್ರಚಾರ ನಡೆದರೆ, ಬಡತನದ ಪ್ರಮಾಣ ಹೆಚ್ಚಿರುವ ಪಟ್ಟಣ- ನಗರ ಪ್ರದೇಶಗಳಲ್ಲಿ ಈ ಬಗ್ಗೆ ಹೆಚ್ಚೆಚ್ಚು ಪ್ರಚಾರವಾದರೆ ಆಗ ಪರಿಣಾಮ ಗಮನಿಸಬಹುದು. ಅದರಲ್ಲೂ ಎಲ್ಲೆಲ್ಲೂ ಬಿಜೆಪಿ ಜತೆಗೆ ನೇರ ಹಣಾಹಣಿ ಇರುವ ಕಡೆ ವಿಶೇಷವಾದ ಪರಿಣಾಮ ಇರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಹೊಡೆತದಿಂದ ತತ್ತರಿಸಿರುವ ರೈತಾಪಿ ವರ್ಗದವರಿಗಂತೂ ಇದು ಹೊಸ ಭರವಸೆ ಆಗುವುದರಲ್ಲಿ ಅನುಮಾನ ಇಲ್ಲ.
ಈಗಾಗಲೇ ಎಲ್ಲ ಲೆಕ್ಕಾಚಾರ ಮಾಡಿದ್ದಾರಂತೆ ರಾಹುಲ್ ಗಾಂಧಿ
ಈ ಯೋಜನೆ ಜಾರಿಗೆ ತಂದರೆ ದುಡಿಯುವ ವರ್ಗವನ್ನು ಅದರಿಂದ ವಿಮುಖಗೊಳಿಸಿದಂತೆ ಆಗುತ್ತದೆ. ಜತೆಗೆ ಆರ್ಥಿಕವಾಗಿ ಕೂಡ ಇದು ಅನುಷ್ಠಾನಕ್ಕೆ ತರುವುದು ಅಸಾಧ್ಯ ಎಂಬುದು ಸದ್ಯಕ್ಕೆ ಕೇಳಿಬರುತ್ತಿರುವ ಆಕ್ಷೇಪ. ಈಗಾಗಲೇ ನ್ಯಾಯ್ ಅನುಷ್ಠಾನದ ಸಾಧಕ-ಬಾಧಕಗಳ ಲೆಕ್ಕಾಚಾರ ಮಾಡಿಯಾಗಿದೆ ಎಂದು ರಾಹುಲ್ ಗಾಂಧಿ ಸ್ಪಷ್ಟನೆ ನೀಡಿದ್ದಾರೆ. ಮತ್ತು ಈ ಹಂತದಲ್ಲಿ ಏನೇ ಹೇಳಿದರೂ ಬಹಳ ಆತುರ ಮಾಡಿದಂತೆ ಆಗುತ್ತದೆ. ನಾವು ಮೊದಲಿಗೆ ಲೋಕಸಭಾ ಚುನಾವಣೆ ಫಲಿತಾಂಶ ಏನು ಬರಬಹುದು ಎಂಬುದನ್ನು ಕಾಯಬೇಕಿದೆ. ಸದ್ಯಕ್ಕಂತೂ ತೀರ್ಮಾನ ತೆಗೆದುಕೊಳ್ಳಬೇಕಿರುವುದು ಭಾರತದ ಪ್ರಜೆಗಳು.