ಮಂಗಳೂರಿನಲ್ಲಿ ಮೃತ ದಂಪತಿಯ ಪ್ರೇತಗಳಿಗೆ ವಿವಾಹ: ಯಾಕೆ ಮಾಡಿದರು ಗೊತ್ತಾ?
ಮಂಗಳೂರು, ಆಗಸ್ಟ್, 06: ಜಗತ್ತು ಸಾಕಷ್ಟು ಮುಂದುವರಿದಿದೆ. ನಾವೀಗ 21ನೇ ಶತಮಾನದಲ್ಲಿದ್ದೇವೆ. ಕರಾವಳಿಗರು ಸಾಕಷ್ಟು ಮುಂದುವರಿದಿದ್ದಾರೆ. ದೇಶ - ವಿದೇಶಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಆದರೆ ಆಚರಣೆ, ಆರಾಧನೆ ವಿಚಾರದಲ್ಲಿ ಇಂದಿಗೂ ತಮ್ಮ ಹಳೇ ಸಂಪ್ರದಾಯವನ್ನು ಶ್ರದ್ಧೆಯಿಂದ ಪಾಲಿಸಿಕೊಂಡು ಬರುತ್ತಿದ್ದಾರೆ.
ತುಳುವರು ತಮ್ಮ ಹಿರಿಯರು ಆರಾಧಿಸಿಕೊಂಡು ಬಂದಿರುವ ಪಿತೃಗಳ ಆರಾಧನೆಯನ್ನು ನಿಷ್ಠೆಯಿಂದ ಪಾಲಿಸಿಕೊಂಡು ಬರುತ್ತಿದ್ದಾರೆ. ಕುಲೆ ಆರಾಧನೆ ಅಥವಾ ಪ್ರೇತ ಆರಾಧನೆ ತುಳುನಾಡಿನ ಪ್ರಾಚೀನತೆಯ ಸಂಪ್ರದಾಯವೂ ಆಗಿದೆ. ಕರಾವಳಿಯಲ್ಲಿ ದೇವರುಗಳನ್ನಷ್ಟೇ ಅಲ್ಲದೆ ಸತ್ತ ಪಿತೃಗಳ ಆರಾಧನೆಯೂ ಮಹತ್ವವನ್ನು ಪಡೆದಿದೆ. ನಿಧನರಾದ 30 ವರ್ಷಗಳ ನಂತರ ಮಂಗಳೂರಿನಲ್ಲಿ ದಂಪತಿಗಳು ಮದುವೆಯಾಗುವ ಸಂಪ್ರದಾಯ ಈಗಲೂ ಜಾರಿಯಲ್ಲಿದೆ.
ಸತ್ತವರ ಬಗ್ಗೆ ತುಳುವರ ಅಭಿಪ್ರಾಯ:
ತುಳುವರು ಸತ್ತ ಆತ್ಮಗಳು ಸ್ವರ್ಗ ಸೇರುತ್ತದೆ ಎಂಬ ಕಲ್ಪನೆಯನ್ನು ನಂಬುವುದಿಲ್ಲ. ಬದಲಾಗಿ ಸತ್ತವರು ತಮ್ಮೊಂದಿಗೆ ಬದುಕುತ್ತಾರೆ ಎಂದು ನಂಬುತ್ತಾರೆ. ಸತ್ತವರಿಗೆ ಎಡೆ ಇಡುವುದು, ಸತ್ತವರು ಮೈಮೇಲೆ ಬರುವುದು, 16ನೇ ದಿನ ಊಟ ಬಡಿಸುವುದು ಇದೆಲ್ಲವೂ ಈ ಮಾತಿಗೆ ಪುಷ್ಟಿ ನೀಡುತ್ತದೆ. ಇದೆಲ್ಲಕ್ಕಿಂತಲೂ ಭಿನ್ನವಾಗಿ ಸತ್ತವರ ಮದುವೆ ಎಂಬ ವಿಭಿನ್ನ ಆಚರಣೆ ಈಗಲೂ ಚಾಲ್ತಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಗಡಿಭಾಗವಾದ ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಈಗಲೂ ಪ್ರೇತಗಳ ಮದುವೆ ಇಂದಿಗೂ ಚಾಲ್ತಿಯಲ್ಲಿದೆ.
ಸಂಪ್ರದಾಯ ಬದ್ಧವಾಗಿ ಪ್ರೇತಗಳಿಗೆ ಮದುವೆ:
ಪ್ರೇತಗಳ ಮದುವೆಯನ್ನು ಮಾಮೂಲಿ ಮದುವೆಯಂತೆ ಸಂಪ್ರದಾಯ ಬದ್ಧವಾಗಿ ಮಾಡುವುದೇ ಇಲ್ಲಿನ ವಿಶೇಷ. ಮದುವೆಯಾಗದೆ ಪ್ರಾಯ ತುಂಬುವ ಮೊದಲೇ ಅಕಾಲಿಕವಾಗಿ ಮೃತಪಟ್ಟ ಹೆಣ್ಣು, ಗಂಡುಗಳನ್ನು ಗುರುತಿಸಿ ಮದುವೆ ಮಾಡಲಾಗುತ್ತದೆ. ಅಲ್ಲೂ ಅವರ ಬಳೆಗಳು, ಮನೆತನ, ಸತ್ತ ಹೆಣ್ಣು, ಗಂಡುಗಳ ನಂಟಸ್ತನ ಸರಿ ಹೊಂದುತ್ತದೆಯೇ ಎಂದು ನೋಡಿಯೇ ವಿವಾಹ ಮಾಡಲಾಗುತ್ತದೆ.
ಸಾಮಾನ್ಯವಾಗಿ ಈ ರೀತಿಯಲ್ಲಿ ಪ್ರೇತಗಳ ಮದುವೆಯನ್ನು ಮಾಡುವ ಮನೆಯಲ್ಲಿ ಮದುವೆಯಾಗಬೇಕಾದ ಹೆಣ್ಣು, ಗಂಡುಗಳಿದ್ದರೆ ಅವರಿಗೆ ಸರಿಯಾಗಿ ಕಂಕಣ ಭಾಗ್ಯ ಕೂಡಿ ಬರುವುದಿಲ್ಲ. ವಿಪರೀತ ಕನಸುಗಳು ಬಿದ್ದು ತೊಂದರೆಯಾಗುವುದು, ಇಲ್ಲದಿದ್ದಲ್ಲಿ ಯಾರದ್ದೋ ಮೈಮೇಲೆ ಬಂದು ತನಗೆ ಮದುವೆ ಮಾಡಿ ಎಂದು ಸತ್ತ ಪ್ರೇತವೇ ಸೂಚನೆ ನೀಡುವುದು, ಇಂಥವೆಲ್ಲಾ ಘಟನೆಗಳು ನಡೆದಿರುತ್ತದೆ. ಆಗ ಮನೆಯವರು ಆ ಪ್ರೇತಕ್ಕೆ ಮದುವೆ ಮಾಡುವುದಾಗಿ ಸಂಕಲ್ಪ ಮಾಡುತ್ತಾರೆ.
ಆಷಾಢ ಅಮವಾಸ್ಯೆ ರಾತ್ರಿ ಪ್ರೇತಗಳ ಮದುವೆ:
ತಮ್ಮ ಮನೆಯ ಸತ್ತ ಪ್ರೇತಕ್ಕೆ ಸರಿಯಾದ ಸತ್ತ ವರ ಅಥವಾ ವಧುವನ್ನು ನೋಡುತ್ತಾರೆ. ಬಳಿಕ ಹೆಣ್ಣು, ಗಂಡು ನೋಡುವ ಶಾಸ್ತ್ರವನ್ನು ಮುಗಿಸಲಾಗುತ್ತದೆ. ಪ್ರೇತದ ಮದುವೆ ಸಾಮಾನ್ಯವಾಗಿ ಆಷಾಢದ ಅಮಾವಾಸ್ಯೆಯ ರಾತ್ರಿಯೇ ನಡೆಯುತ್ತದೆ. ಆದರೆ ಇತ್ತೀಚೆಗೆ ಅನುಕೂಲಕ್ಕೆ ತಕ್ಕಂತೆ ಆಷಾಢದ ಯಾವುದಾದರು ಒಂದು ರಾತ್ರಿ ನಡೆಯುತ್ತದೆ. ಗಂಡು ಪ್ರೇತದ ಮನೆಯಲ್ಲಿಯೇ ಮದುವೆ ನಡೆಯುತ್ತದೆ. ಅಕ್ಕಿ ಹಿಟ್ಟಿನಿಂದ ಪ್ರೇತ ವಧು ವರರ ಬಿಂಬಗಳನ್ನು ತಯಾರಿಸಿ ಮಣೆಯಲ್ಲಿ ಇಡಲಾಗುತ್ತದೆ. ಕುಲೆ ಮುತ್ತೈದೆಯ ಅಲಂಕಾರಕ್ಕೆ ಬೇಕಾದ ಸಾಮಾಗ್ರಿಗಳಾದ ಧಾರೆ ಸೀರೆ, ಕರಿಮಣಿ, ಕಾಲುಂಗುರ, ಒಡ್ಡುಂಗಿಲ, ವಂಕಿ, ಬಳೆ, ಕುಂಕುಮ ಮುಂತಾದವುಗಳನ್ನು ಒಂದು ಮಣೆಯ ಮೇಲೆ ಇರಿಸಲಾಗುತ್ತದೆ. ಪ್ರೇತದ ವರನಿಗೆ ಬೇಕಾದ ಮದುವೆ ವಸ್ತ್ರಗಳು, ಇತರ ಪರಿಕರಗಳನ್ನು ಮತ್ತೊಂದು ಮಣೆಯಲ್ಲಿ ಇಡಲಾಗುತ್ತದೆ. ನಂತರ ಮಣೆಯನ್ನು ಪ್ರೇತದ ಬಿಂಬದ ಎದುರು ಇಡಲಾಗುತ್ತದೆ.
ಕುಲ್ಮೆ ಮದ್ಮೆಯ ಆರ್ಥ:
ಹಿರಿಯರು, ಕುಟುಂಬಸ್ಥರು ಪ್ರೇತಾತ್ಮಗಳನ್ನು ಪ್ರಾರ್ಥಿಸಿ ಇಹಲೋಕದಲ್ಲಿ ಅನುಭವಿಸಲಾಗದ ಸುಖವನ್ನು ಪರಲೋಕದಲ್ಲಿ ಅನುಭವಿಸುವಂತೆ ಪ್ರಾರ್ಥಿಸುತ್ತಾರೆ. ಅಲ್ಲದೆ ತಮ್ಮ ಕುಟುಂಬಕ್ಕೆ ತಮ್ಮಿಂದ ಯಾವುದೇ ಬಾಧೆ ಆಗಬಾರದು ಎಂದು ಪ್ರಾರ್ಥಿಸುತ್ತಾರೆ. ಬಂಟರು ಸಮಾಜೋ ಸಾಂಸ್ಕೃತಿಕ ಅಧ್ಯಯನ ಗ್ರಂಥದಲ್ಲಿ ಡಾ.ಇಂದಿರಾ ಹೆಗ್ಗಡೆ ಈ ರೀತಿ ಉಲ್ಲೇಖಿಸುತ್ತಾರೆ. ತುಳುವಿನಲ್ಲಿ ಈ ಪ್ರೇತಗಳ ಮದುವೆಗೆ ಕುಲೆ ಮದ್ಮೆ ಅಂತಾನೂ ಕರೆಯುತ್ತಾರೆ. ತುಳುವಿನಲ್ಲಿ ಕುಲೆ ಮದ್ಮೆ ಅಂದರೆ ಪ್ರೇತಗಳ ಮದುವೆ ಎಂದು ಅರ್ಥ. ಮದುವೆಯಾಗುವ ಪ್ರಾಯದವರು ಮದುವೆಯಾಗದೆ ಸತ್ತರೆ ಸತ್ತ ಆತ್ಮಕ್ಕೆ ಸದ್ಗತಿ. ಅತೃಪ್ತಿಯಿಂದ ಅಲೆಯುವ ಆತ್ಮಗಳು ಬದುಕಿರುವವರೆಗೆ ತೊಂದರೆ ನೀಡುತ್ತದೆ ಎಂಬ ನಂಬಿಕೆ ಇದೆ.
Recommended Video
ಕುಲೆ ಮದುವೆ ಆಷಾಢ ತಿಂಗಳ ಅಮವಾಸ್ಯೆಯ ರಾತ್ರಿ ನಡೆಯಬೇಕು. ಈ ಮದುವೆಯನ್ನು ಮುಗಿಸಿದ ದ್ಯೋತಕವಾಗಿ ಎರಡು ಮಣೆಗಳ ಮೇಲಿದ್ದ ಹಾರವನ್ನು ವಿನಿಮಯ ಮಾಡುತ್ತಾರೆ. ಬಾಗಿಲೆಳೆದು ಸ್ವಲ್ಪ ಹೊತ್ತು ಹೊರಗೆ ನಿಲ್ಲುತ್ತಾರೆ. ಮತ್ತೆ ಒಳಗೆ ಹೋಗಿ ಮಡಿಸಿಟ್ಟ ವರನ ಉಡುಗೆಯನ್ನು ವಧುವಿನ ಸೀರೆಯನ್ನು ಬಿಚ್ಚಿ ಹಾಕುತ್ತಾರೆ. ಬಡಿಸಿದ್ದ ಎಲೆಗೆ ಮತ್ತೆ ಸೇರಿಸಿ ಎರಡು ಕಡೆಯ ಕುಟುಂಬದವರು ಊಟ ಮಾಡುತ್ತಾರೆ. ಎಲ್ಲರಿಗೂ ಮದುವೆ ಊಟ ಹಾಕಲಾಗುತ್ತದೆ.