Exclusive: 'ಪ್ರಧಾನಿ ನಿಧಿ'ಯೇ ಖೋತಾ ಆಗಿರುವಾಗ ಪ್ರವಾಹ ಪರಿಹಾರ ನೀಡೋಕೆ ಹೇಗೆ ಸಾಧ್ಯ?
ಬೆಂಗಳೂರು, ಅಕ್ಟೋಬರ್ 03: ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ನೀಡಿಲ್ಲ ಎಂಬುದು ರಾಜ್ಯದಲ್ಲಿ ನಡೆಯುತ್ತಿರುವ ಬಿಸಿ-ಬಿಸಿ ಚರ್ಚೆ. ರಾಜ್ಯದಿಂದ 25 ಬಿಜೆಪಿ ಸಂಸದರಿದ್ದು ಅವರು ಪರಿಹಾರ ತರುವಲ್ಲಿ ವಿಫಲರಾಗಿದ್ದಾರೆ ಎಂಬುದು ಚರ್ಚೆಗೆ ನೀಡಲಾದ ಇತ್ತೀಚಿನ ಆಯಾಮ.
ಒಟ್ಟಾರೆ, ಕೇಂದ್ರದಿಂದ ಪ್ರವಾಹ ಪರಿಹಾರ ಬಂದಿಲ್ಲ ಎಂಬ ವಿಚಾರದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಜನರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟಕ್ಕೂ ಯಾಕೆ ಕೇಂದ್ರದಿಂದ ಹಣ ಇನ್ನೂ ಬಿಡುಗಡೆಯಾಗಿಲ್ಲ? ಇದಕ್ಕೆ ರಾಜಕೀಯ ಕಾರಣವಾ ಇಲ್ಲಾ ಆರ್ಥಿಕ ಹಿನ್ನೆಲೆಯೂ ಇದೆಯಾ? ಇದನ್ನು ಹುಡುಕಿಕೊಂಡು ಹೊರಟರೆ ಅಚ್ಚರಿಯ ಸಂಗತಿ, ಅಂಕಿ ಅಂಶಗಳು ಬಯಲಾಗುತ್ತದೆ.
ಕರ್ನಾಟಕ ಪ್ರವಾಹ : ನಷ್ಟದ ಲೆಕ್ಕ ಕೊಟ್ಟ ಸರ್ಕಾರ
ಪ್ರಧಾನಿ ಮೋದಿ ಅವರ ಎರಡನೇ ಬಾರಿಯ ಅಧಿಕಾರ ಗದ್ದುಗೆಗೆ ದೊಡ್ಡ ಪ್ರಮಾಣದ ಕೊಡುಗೆ ನೀಡಿದ ಪೈಕಿ ಕರ್ನಾಟಕವೂ ಒಂದು. ಹೀಗಿರುವಾಗ ಉಳಿದೆಲ್ಲಾ ರಾಜ್ಯಗಳ ಸಂಕಷ್ಟಗಳಿಗೆ ಮಿಡಿಯುವ ನರೇಂದ್ರ ಮೋದಿ ಯಾಕೆ ಕರ್ನಾಟಕದ ವಿಚಾರದಲ್ಲಿ ಮೌನ ವಹಿಸಿದ್ದಾರೆ ಎಂಬುದರ ಸುತ್ತ ಸಾಕಷ್ಟ ಆಯಾಮಗಳ ಚರ್ಚೆ ಜಾರಿಯಲ್ಲಿದೆ.
ರಾಜ್ಯ ಮತ್ತು ಕೇಂದ್ರ ಎರಡಲ್ಲೂ ಬಿಜೆಪಿ ಸರ್ಕಾರವಿದ್ದರೂ ಬೀದಿ ಪಾಲಾದ ಕನ್ನಡ ಜನ
ಇಂತಹ ರಾಜಕೀಯ ಆಯಾಮಗಳನ್ನು ಪಕ್ಕಕ್ಕಿಟ್ಟು ವಾಸ್ತವಕ್ಕೆ ತಿರುಗಿದರೆ ಪ್ರಧಾನ ಮಂತ್ರಿ ರಾಷ್ಟ್ರೀಯ ವಿಕೋಪ ನಿಧಿ ಎಂಬ ಪರಿಹಾರಕ್ಕಾಗಿಯೇ ಸ್ಥಾಪಿಸಲಾದ ಸಂಚಯವೊಂದರ ಅಸಲಿ ಸಂಗತಿ ಹೊರಬೀಳುತ್ತದೆ.
ಉತ್ತರ ಕರ್ನಾಟಕ ಭಾರತಕ್ಕೆ ಸೇರಿದೆ, ಮೋದಿಜೀ ಇತ್ತ ನೋಡಿ!
ನೆರೆ, ಬರ, ಭೂಕಂಪ ಮುಂತಾದ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್ಆರ್ಎಫ್)ನಿಂದ ಪರಿಹಾರ ನೀಡಲಾಗುತ್ತದೆ. 1948ರಲ್ಲಿ ಅಂದಿನ ಪ್ರಧಾನಿ ನೆಹರೂ ಅವರಿಂದ ಸ್ಥಾಪಿಸಲಾದ ಈ ನಿಧಿಗೆ ಜನರಿಂದ ಹಾಗೂ ಸಂಘಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ.
ರಾಜ್ಯದ 22 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿ 2 ತಿಂಗಳು ಕಳೆದಿದ್ದು ಕೇಂದ್ರದಿಂದ ಪರಿಹಾರದ ಬೇಡಿಕೆ ಹೆಚ್ಚಿದೆ. ಅರ್ಥಾತ್ ಇದೇ ನಿಧಿಯಿಂದ ಪರಿಹಾರ ಬಿಡುಗಡೆ ಮಾಡಿ ಎಂಬುದು ಒಟ್ಟಾರೆ ಕೋರಿಕೆ.
ಕರ್ನಾಟಕದಲ್ಲಿ ಆದ ನಷ್ಟವೆಷ್ಟು?
2019ರ ಆಗಸ್ಟ್ನಲ್ಲಿ ಸುರಿದ ಮಳೆ, ಪಕ್ಕದ ರಾಜ್ಯದಿಂದ ನೀರನ್ನು ಹರಿಬಿಟ್ಟ ಪರಿಣಾಮ ಕರ್ನಾಟಕದ 22 ಜಿಲ್ಲೆಗಳ, 103 ತಾಲೂಕುಗಳಲ್ಲಿ ಪ್ರವಾಹ ಉಂಟಾಗಿತ್ತು. ಪ್ರವಾಹದಿಂದ 87 ಜನರು ಮೃತಪಟ್ಟಿದ್ದು, 2.3 ಲಕ್ಷ ಮನೆಗಳಿಗೆ ಹಾನಿಯಾಗಿತ್ತು. 5 ಸಾವಿರ ಹೆಕ್ಟೇರ್ ಕೃಷಿ ಭೂಮಿ ನಾಶವಾಗಿದೆ. 35 ಸಾವಿರ ಕಿ.ಮೀ. ರಸ್ತೆಗೆ ಹಾನಿಯಾಗಿದೆ.
ಪ್ರವಾಹದಿಂದ ಕರ್ನಾಟಕದಲ್ಲಿ 38,451 ಕೋಟಿ ನಷ್ಟವಾಗಿದೆ ಎಂದು ಸರ್ಕಾರ ಹೇಳಿದೆ. ಇದರಲ್ಲಿ ಶೇ. 10ರಷ್ಟು ಅಂದರೆ 3,818 ಕೋಟಿ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕರ್ನಾಟಕದ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು ಎಂಬುದು ಪ್ರತಿಪಕ್ಷಗಳ ಒತ್ತಾಯವಾಗಿದೆ.
ಪರಿಹಾರ ಕೊಡುವುದು ಹೇಗೆ?
ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಕೇಂದ್ರ ಸರ್ಕಾರ ಪ್ರಧಾನಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್ಆರ್ಎಫ್) ನಿಂದ ಪರಿಹಾರ ನೀಡುತ್ತದೆ. ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ರಾಜ್ಯಕ್ಕೆ ಆಗಮಿಸಿ ಪರಿಸ್ಥಿತಿ ಅಧ್ಯಯನ ಮಾಡುತ್ತಾರೆ. ರಾಜ್ಯ ಸರ್ಕಾರದ ಜೊತೆ ಸಭೆ ನಡೆಸಿ, ರಾಜ್ಯ ಸಲ್ಲಿಸುವ ಪ್ರಸ್ತಾವನೆಯನ್ನೂ ಗಮನಿಸಿ ಎಷ್ಟು ಪರಿಹಾರ ನೀಡಬಹುದು ಎಂದು ಶಿಫಾರಸು ಮಾಡುತ್ತಾರೆ. ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಪರಿಹಾರದ ಮೊತ್ತವನ್ನು ತೀರ್ಮಾನಿಸಲಾಗುತ್ತದೆ.
ಕರ್ನಾಟಕದ 22 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಕೇಂದ್ರದ ತಂಡ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿರಲಿಲ್ಲ. ಆದ್ದರಿಂದ, ಎಷ್ಟು ಪರಿಹಾರ ಸಿಗಲಿದೆ? ಎಂಬುದು ಚರ್ಚೆಗೆ ಕಾರಣವಾಗಿದೆ.
ಪಿಎಂಎನ್ಆರ್ಎಫ್ ಅನುದಾನ
ಒಂದು ಕಡೆ ಕೇಂದ್ರದ ಪರಿಹಾರದ ಕುರಿತು ಬಿಸಿಬಿಸಿ ಚರ್ಚೆ ನಡೆಯುತ್ತಿರುವ ವೇಳೆಯಲ್ಲಿಯೇ ಇತರೆ ರಾಜ್ಯಗಳೂ ಕೂಡ ಕೇಂದ್ರದ ಮುಂದೆ ಪರಿಹಾರಕ್ಕಾಗಿ ಬೇಡಿಕೆ ಮುಂದಿಟ್ಟಿವೆ. ಪಕ್ಕದ ಮಹಾರಾಷ್ಟ್ರ ಸರಕಾರ ಸುಮಾರು 7 ಸಾವಿರ ಕೋಟಿ ಬೇಡಿಕೆ ಇಟ್ಟಿದೆ. ಅಚ್ಚರಿಯ ಸಂಗತಿ ಏನೆಂದರೆ, ಕಳೆದ ವರ್ಷದ ಅಂತ್ಯಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ವಿಪತ್ತು ನಿಧಿಯಲ್ಲಿ ಉಳಿದಿರುವ ಮೊತ್ತವೇ 3411 ಕೋಟಿ ರೂಪಾಯಿಗಳಷ್ಟೆ. ಅಂದರೆ ಕರ್ನಾಟಕ ಇಟ್ಟಿರುವ ಬೇಡಿಕೆಯಷ್ಟೆ ಮೊತ್ತ ಈಗ ಪರಿಹಾರ ನಿಧಿಯಲ್ಲಿದೆ. ಒಂದು ವೇಳೆ ಕರ್ನಾಟಕದ ಬೇಡಿಕೆ ಪೂರೈಸಿದರೆ ಕೇಂದ್ರ ಪರಿಹಾರ ನಿಧಿ ಖಾಲಿಯಾಗುತ್ತದೆ. ಕಳೆದ ಐದು ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದರೆ, ಯಾವ ವರ್ಷವೂ ಕೇಂದ್ರ ರಾಜ್ಯಗಳು ಕೇಳಿದಷ್ಟು ಪರಿಹಾರ ಮೊತ್ತ ಬಿಡುಗಡೆ ಮಾಡಿಲ್ಲ. ಹೀಗಿರುವಾಗ ಕರ್ನಾಟಕದ ನಿರೀಕ್ಷೆಯನ್ನು ಈ ಬಾರಿ ಪೂರೈಕೆಯಾಗುತ್ತದಾ? ನಿಧಿಯ ಲೆಕ್ಕಾಚಾರಗಳನ್ನು ಗಮನಿಸಿದರೆ ಉತ್ತರ, ಸಾಧ್ಯವಿಲ್ಲ ಎಂದೇ ಹೇಳಬೇಕಾಗುತ್ತದೆ.
ಯಾವ ವರ್ಷ ಎಷ್ಟು ಬಿಡುಗಡೆಯಾಗಿದೆ?
ಪಿಎಂಎನ್ಆರ್ಎಫ್ ಅಡಿ 2015 ರಿಂದ 2018ರ ತನಕ ಬಿಡುಗಡೆಯಾದ ಪರಿಹಾರದ ವಿವರ ಇಲ್ಲಿದೆ.
*
2015ರಲ್ಲಿ
372
ಕೋಟಿ
ರೂ.
*
2016ರಲ್ಲಿ
624
ಕೋಟಿ
ರೂ.
*
2017ರಲ್ಲಿ
204
ಕೋಟಿ
ರೂ.
*
2018ರಲ್ಲಿ
180
ಕೋಟಿ
ರೂ.
ನಿಧಿಯ ಹಣದಲ್ಲೇ ಹೂಡಿಕೆ ಬೇರೆ
ಪಿಎಂಎನ್ಆರ್ಎಫ್ ಖಾತೆಗೆ ವೈಯಕ್ತಿಕ ಕೊಡುಗೆ, ಬಡ್ಡಿ ಮತ್ತು ಇತರ ಆದಾಯ, ವಾಪಸ್ ಬಂದ ಹಣ, ಖರ್ಚಾಗದೇ ಉಳಿದ ಹಣ ಎಂದು ಪ್ರತಿ ವರ್ಷ ಅನುದಾನ ಸಂಗ್ರಹವಾಗುತ್ತದೆ. ಬಡ್ಡಿ ಮತ್ತು ಇತರ ಆದಾಯ ಎಂದರೆ ಸರ್ಕಾರ ಇದರಲ್ಲಿರುವ ಹಣವನ್ನು ಹೂಡಿಕೆ ಮಾಡುತ್ತದೆ.
ಕೇಂದ್ರ ಸರ್ಕಾರ 2017ರಲ್ಲಿ ಮೊದಲ ಬಾರಿಗೆ ಪಿಎಂಎನ್ಆರ್ಎಫ್ ಖಾತೆಯ 250 ಕೋಟಿ ಹಣವನ್ನು perpetual bond ಮೂಲಕ ಯೂನಿಯನ್ ಬ್ಯಾಂಕ್ನಲ್ಲಿ ಹೂಡಿಕೆ ಮಾಡಿತ್ತು. ಬಡ್ಡಿದರ ಶೇ 9.10 ದರದಲ್ಲಿ ಮಾಡಿರುವ ಹೂಡಿಕೆಯಿಂದ ಎಷ್ಟು ಗಳಿಸಲಾಗಿದೆ ಎಂಬ ಮಾಹಿತಿ ಲಭ್ಯ ಇಲ್ಲ. 2018ರಲ್ಲಿ ಮತ್ತೆ ಕೇಂದ್ರ ಸರಕಾರ ಇದೇ ಪರಿಹಾರ ನಿಧಿಯಿಂದ 270 ಕೋಟಿ ರೂ. ಹೂಡಿಕೆ ಮಾಡಿದೆ. ಒಂದು ಕಡೆ ರಾಜ್ಯಗಳ ಬೇಡಿಕೆ ಪೂರೈಸಲು ಅಗತ್ಯ ಹಣವೇ ಇಲ್ಲದಿರುವಾಗ ಯಾಕೀ ಹೂಡಿಕೆ ಎಂಬುದಕ್ಕೆ ಉತ್ತರ ಇನ್ನೂ ಲಭ್ಯವಾಗಬೇಕಿದೆ.
ಮಾಹಿತಿ ಕೇಳಲಾಗಿದೆ, ಉತ್ತರ ಸಿಗಲಿಲ್ಲ
'ಒನ್ ಇಂಡಿಯಾ ಕನ್ನಡ' ಪ್ರಧಾನಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್ಆರ್ಎಫ್)ನಿಂದ ನೀಡಲಾಗುವ ಪರಿಹಾರ, ಈ ಬಾರಿ ಅನುಸರಿಸಿರುವ ಮಾನದಂಡ, ಕರ್ನಾಟಕದ ಬೇಡಿಕೆಯ ಸ್ಥಿತಿಯ ಕುರಿತು ಮಾಹಿತಿಯನ್ನು ಕೇಳಿದೆ. ಪರಿಹಾರನಿಧಿಯ ಸಹಾಯಕ ಕಾರ್ಯದರ್ಶಿಯವರಿಗೆ ಕಳುಹಿಸಿರುವ ಇ-ಮೇಲ್ಗೆ ಈವರೆಗೂ ಪ್ರತಿಕ್ರಿಯೆ ಲಭ್ಯವಾಗಿಲ್ಲ.