ದುಃಖದ ಸನ್ನಿವೇಶದಲ್ಲೂ ಮಾಧ್ವ ಮಠಗಳನ್ನು ಒಗ್ಗೂಡಿಸಿದ ವ್ಯಾಸರಾಜರು!
"ಈ ಸ್ಥಳದ ವಿಚಾರವಾಗಿ ವಿವಾದ ಇದ್ದಿದ್ದು ನಿಜ. ಆದರೆ ನವ ವೃಂದಾವನ ಅಂದರೆ ಅಷ್ಟೇ ಅಲ್ಲ. ಆ ಕಾರಣಕ್ಕೇ ಉತ್ತರಾದಿಮಠದ ಪೀಠಾಧಿಪತಿಗಳಾದ ಶ್ರೀ ಸತ್ಯಾತ್ಮ ತೀರ್ಥರು ಹಾಗೂ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಭುಧೇಂದ್ರ ತೀರ್ಥರು ಇಬ್ಬರೂ ಒಟ್ಟಾಗಿ ಮುಂದೆ ಬಂದು, ವ್ಯಾಸರಾಜರ ಮೂಲ ವೃಂದಾವನ ನಿರ್ಮಾಣ ಕಾರ್ಯದ ನಿಗಾ ವಹಿಸುತ್ತಿದ್ದಾರೆ" ಎಂದರು ಆ ಪಂಡಿತರು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಇರುವ ನವ ವೃಂದಾವನಗಳ ಪೈಕಿ ನಾಲ್ಕು ವೃಂದಾವನ ಉತ್ತರಾದಿ ಮಠ (ಪದ್ಮನಾಭ ತೀರ್ಥರು, ಕವೀಂದ್ರ ತೀರ್ಥರು, ವಾಗೀಶ ತೀರ್ಥರು, ರಘುವರ್ಯ ತೀರ್ಥರು (ರಘೂತ್ತಮ ತೀರ್ಥರ ಗುರುಗಳು)), ನಾಲ್ಕು ವೃಂದಾವನ ವ್ಯಾಸರಾಜ ಮಠದವರದು (ವ್ಯಾಸರಾಜರು, ರಾಮ ತೀರ್ಥರು, ಶ್ರೀನಿವಾಸ ತೀರ್ಥರು, ಗೋವಿಂದ ಒಡೆಯರು). ಒಂದು ರಾಯರ ಮಠದವರದು (ರಾಘವೇಂದ್ರ ಸ್ವಾಮಿಗಳ ಗುರುಗಳಾದ ಸುಧೀಂದ್ರ ತೀರ್ಥರು).
ಆನೆಗೊಂದಿಯ ಬೃಂದಾವನ ಅಗೆತ: ಮಾಧ್ವರ ಭಾವನೆ ಕೆಣಕಿದ ಕಿಡಿಗೇಡಿಗಳು ಯಾರು?
ಆದರೆ, ಉತ್ತರಾದಿ ಮಠದವರು ಹೇಳುವ ಪ್ರಕಾರ, ಸತ್ಯಧ್ಯಾನರು ನವ ವೃಂದಾವನದ ಜಾಗವನ್ನು ಉತ್ತರಾದಿ ಮಠಕ್ಕಾಗಿ ಖರೀದಿ ಮಾಡಿದ್ದಾರೆ. ಸುಮಾರು ನೂರಿಪ್ಪತ್ತು ವರ್ಷದ ಹಿಂದೆ ಈ ಸ್ಥಳವನ್ನು ಖರೀದಿಸಿದ್ದಾರೆ.
ನಿತ್ಯ ಪೂಜೆ ನಮ್ಮದೇ ಆಗಬೇಕು
ಉತ್ತರಾದಿ ಮಠಕ್ಕೆ ಸೇರಿದ ಈ ಜಾಗಕ್ಕೆ ಬಂದು ವ್ಯಾಸರಾಜ ಮಠಕ್ಕೆ ಸೇರಿದ ವೃಂದಾವನಗಳ ಆರಾಧನೆ ಮಾಡಿಕೊಂಡು ಹೋಗುತ್ತಾರೆ. ಅದೇ ರೀತಿ ರಾಘವೇಂದ್ರ ಸ್ವಾಮಿಗಳ ಗುರುಗಳಾದ ಸುಧೀಂದ್ರ ತೀರ್ಥರ ಆರಾಧನೆಯನ್ನೂ ಮಾಡುತ್ತಾರೆ. ಆದರೆ ಪದ್ಮನಾಭ ತೀರ್ಥರು, ಕವೀಂದ್ರ ತೀರ್ಥರು, ವಾಗೀಶ ತೀರ್ಥರು ಈ ಮೂವರ ಆರಾಧನೆ ಬಂದಾಗ ಅವರು ನಮ್ಮ ಮಠಕ್ಕೂ ಸಂಬಂಧಿಸಿದವರು ಎಂಬುದು ರಾಯರ ಮಠದ ವಾದ.
ಇನ್ನು ನಿತ್ಯವೂ ಎಲ್ಲ ವೃಂದಾವನಗಳಿಗೂ ಪೂಜೆ ಮಾಡಲು ಮುಂದಾಗಿದ್ದಾರೆ. ಆದರೆ ಈ ಸ್ಥಳ ಉತ್ತರಾದಿ ಮಠಕ್ಕೆ ಸೇರಿದ್ದಾದ್ದರಿಂದ ಇಲ್ಲಿ ನಿತ್ಯ ಪೂಜೆ ನಮ್ಮದೇ ಆಗಬೇಕು ಎಂಬುದು ಉತ್ತರಾದಿ ಮಠದ ವಾದ. ಈ ಹಿಂದೆ ಎರಡೂ ಮಠಗಳ ಭಕ್ತರ ಮಧ್ಯೆ ಹೊಡೆದಾಟದ ಮಟ್ಟಕ್ಕೆ ಈ ವಿಚಾರ ಹೋಗಿದೆ.
ಎರಡೂ ಮಠದವರು ತಲಾ ಒಂದೂವರೆ ದಿನ ಅವಕಾಶ
ಸದ್ಯಕ್ಕೆ ಕೋರ್ಟ್ ಆದೇಶದ ಪ್ರಕಾರ ಎರಡೂ ಮಠದವರು ಪದ್ಮನಾಭ ತೀರ್ಥರು, ಕವೀಂದ್ರ ತೀರ್ಥರು, ವಾಗೀಶ ತೀರ್ಥರು ಈ ಮೂವರು ಯತಿಗಳ ಆರಾಧನೆಯನ್ನು ತಲಾ ಒಂದೂವರೆ ದಿನ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ ಈ ಎಲ್ಲ ವಿವಾದ ಕೂಡ ಸದ್ಯದ ಸನ್ನಿವೇಶಕ್ಕೆ ಆಪ್ರಸ್ತುತವಾದದ್ದು. ಏಕೆಂದರೆ, ವ್ಯಾಸರಾಜರ ಬಗ್ಗೆ ಮಾಧ್ವ ಸಮುದಾಯದ ಎಲ್ಲ ಮಠಗಳಿಗೂ ಗೌರವ- ಪೂಜ್ಯ ಭಾವ ಇದೆ. ಅಂಥ ಯತಿಗಳ ಮೂಲ ವೃಂದಾವನಕ್ಕೆ ಹಾನಿ ಆದಾಗ ಆ ನೋವನ್ನು ವಿವರಿಸುವುದು ಬಹಳ ಕಷ್ಟ.
ಈಗ ಆನೆಗೊಂದಿಯಲ್ಲಿ ಸೋಸಲೆ ವ್ಯಾಸರಾಜ ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾಶ್ರೀಶ ತೀರ್ಥರು ವೃಂದಾವನ ಪುನರ್ ನಿರ್ಮಾಣಕ್ಕೆ ಶ್ರಮಿಸುತ್ತಿದ್ದರೆ, ಉತ್ತರಾದಿ ಮಠದ ಸತ್ಯಾತ್ಮ ತೀರ್ಥರು ತಮ್ಮ ಅನುಯಾಯಿಗಳಿಗೆ ಈ ಕೈಂಕರ್ಯದಲ್ಲಿ ಪಾಲ್ಗೊಳ್ಳಲು ಕರೆ ನೀಡಿದ್ದಾರೆ. ಸ್ವತಃ ತಾವೇ ಆ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಅಷ್ಟೇ ಅಲ್ಲ, ಅವರ ಪಕ್ಕದಲ್ಲೇ ರಾಘವೇಂದ್ರ ಸ್ವಾಮಿ ಮಠದ ಸುಭುಧೇಂದ್ರ ತೀರ್ಥರು ನಿಂತು, ತಮ್ಮ ಮಠದ ಅನುಯಾಯಿಗಳಿಗೂ ಈ ಕೆಲಸದಲ್ಲಿ ಪಾಲ್ಗೊಳ್ಳಲು ಕರೆ ನೀಡಿದ್ದಾರೆ.
ವ್ಯಾಸರಾಜರ ಮೂಲ ವೃಂದಾವನ ಪುನರ್ ನಿರ್ಮಾಣ: ಉತ್ತರಾದಿ ಮಠಾಧೀಶರ ಸಂದೇಶ
ಕೃಷ್ಣದೇವರಾಯನ ಸಾವು ತಪ್ಪಿಸಿದ್ದರು ವ್ಯಾಸರಾಜರು
"ವ್ಯಾಸ ರಾಜರ ಮೂಲ ವೃಂದಾವನ ಶತಮಾನಗಳಿಂದ ಇಲ್ಲಿದೆ. ಅವರು ರಾಜ ಗುರುಗಳು. ಅಂದರೆ ವಿಜಯನಗರದ ಅರಸು ಕೃಷ್ಣ ದೇವರಾಯನಿಗೆ ಗುರುಗಳಾಗಿದ್ದವರು. ಇನ್ನು ಒಂದು ಸಂದರ್ಭದಲ್ಲಿ ಕೃಷ್ಣದೇವರಾಯನಿಗೆ 'ಕುಹೂ' ಯೋಗ (ಇದನ್ನು ಜ್ಯೋತಿಷ್ಯ ರೀತಿಯಾಗಿ ದುರ್ಮರಣ, ಅಪಮೃತ್ಯು ಯೋಗ) ಇದೆ ಎಂಬುದು ಗೊತ್ತಾಗುತ್ತದೆ. ಸಿಂಹಾಸನದ ಮೇಲೆ ಕೂತರೆ ಆತನ ಸಾವಾಗಬಹುದು ಎಂಬುದು ಗೊತ್ತಾಗುತ್ತದೆ.
"ಆಗ ಸ್ವತಃ ವ್ಯಾಸರಾಜರು ತಾವು ಸಿಂಹಾಸನದ ಮೇಲೆ ತಾವು ಕೂರುತ್ತಾರೆ. ಆತನ 'ಕುಹೂ' ಯೋಗವನ್ನು ಕಾಷಾಯ ವಸ್ತ್ರದ ಮೇಲೆ ಆವಾಹಿಸಿ, ಕಟ್ಟಿ ಹಾಕುತ್ತಾರೆ. ತಮ್ಮ ತಪಃಶಕ್ತಿಯ ಪರಿಣಾಮವಾಗಿ ವ್ಯಾಸರಾಜರಿಗೆ ಏನೂ ಆಗುವುದಿಲ್ಲ. ಕೃಷ್ಣ ದೇವರಾಯನೂ ಬದುಕಿಕೊಳ್ಳುತ್ತಾನೆ" ಈ ಬಗ್ಗೆ ಇತಿಹಾಸದಲ್ಲಿ ದಾಖಲೆ ಇದೆ ಎನ್ನುತ್ತಾರೆ ಪಂಡಿತ್ ಭೀಮಸೇನಾಚಾರ್ ಅಥನೂರು.
ವೃಂದಾವನ ಮಾಡುವಾಗ ಮುತ್ತು, ರತ್ನ, ವಜ್ರ ಹಾಕಿರುವ ವದಂತಿ
ವ್ಯಾಸರಾಜರು ವೃಂದಾವನಸ್ಥರಾಗುವ ಕಾಲದಲ್ಲಿ ವಿಜಯ ನಗರದ ಅರಸರು, ಆನೆಗೊಂದಿಯ ಮಹಾರಾಜ ಎಲ್ಲ ಅಧಿಕಾರದಲ್ಲಿ ಇದ್ದರು. ಆವರಿಗೆಲ್ಲ ವ್ಯಾಸರಾಜರು ಗುರುಗಳಾಗಿದ್ದರು. ಅಂಥ ಗುರುಗಳು ವೃಂದಾವನಸ್ಥರಾದ ವೇಳೆ ಮುತ್ತು, ರತ್ನ, ವಜ್ರ ಎಲ್ಲವನ್ನೂ ಹಾಕಲಾಗಿದೆ ಎಂದು ಯಾರೋ ಸುಳ್ಳು ಸುಳ್ಳೇ ವದಂತಿ ಹಬ್ಬುತ್ತಿರುತ್ತಾರೆ ಎಂದು ಅವರು ಹೇಳಿದರು.
ಸರ್ವ ಸಂಗ ಪರಿತ್ಯಾಗಿಗಳಾದ ವ್ಯಾಸರಾಜರಿಗೇಕೆ ಮುತ್ತು, ರತ್ನ, ವಜ್ರ ಇತ್ಯಾದಿ? ಆದರೂ ಹೇಗೆ ಹಂಪಿಯ ಸುತ್ತಮುತ್ತ ಈಗಲೂ ನಿಧಿ ಶೋಧನೆಗಾಗಿಯೇ ಅಮೂಲ್ಯವಾದ ಶಿಲಾ ವಿಗ್ರಹಗಳನ್ನು ನಾಶ ಮಾಡುತ್ತಿರುತ್ತಾರೋ, ಭೂಮಿ ಅಗೆಯುವುದು ಇತ್ಯಾದಿ ಮಾಡುತ್ತಿರುತ್ತಾರೋ ಅದೇ ರೀತಿ ಇಲ್ಲೂ ಆಗಿದೆ.
ನವ ವೃಂದಾವನವನ್ನು ತಲುಪಲು ದೋಣಿ ಅಥವಾ ತೆಪ್ಪದಲ್ಲಿ ಹೋಗಬೇಕು. ಇನ್ನು ವೃಂದಾವನದ ಅಷ್ಟು ದೊಡ್ಡ ಶಿಲೆಗಳನ್ನು ಕೆಡವುವುದು ಹಾಗೂ ನಾಲ್ಕು ಅಡಿ ಆಳಕ್ಕೆ ತೋಡುವುದು ಒಬ್ಬಿಬ್ಬರಿಂದ ಆಗುವ ಕೆಲಸ ಅಲ್ಲ. ಈ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ತನಿಖೆ ನಡೆಯಬೇಕು ಎಂಬುದು ಒತ್ತಾಯ.
ನಿಧಿಗಾಗಿ ಆನೆಗುಂದಿಯಲ್ಲಿ ವ್ಯಾಸರಾಜರ ಬೃಂದಾವನ ಧ್ವಂಸಗೊಳಿಸಿದ ದುಷ್ಕರ್ಮಿಗಳು