ಕೇಂದ್ರ ಸರ್ಕಾರದ 'ಕರ್ಮಯೋಗಿ' ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು?
ನವದೆಹಲಿ, ಸಪ್ಟೆಂಬರ್.03: ಭಾರತದ ಅಧಿಕಾರಶಾಹಿ ಸುಧಾರಣಾ ಕ್ರಮ ಎಂದು ಕರೆಯಲ್ಪಡುವ "ಮಿಷನ್ ಕರ್ಮಯೋಗಿ" ಯೋಜನೆಗೆ ಕೇಂದ್ರ ಸರ್ಕಾರವು ಬುಧವಾರ ಅನುಮೋದನೆ ನೀಡಿದೆ.
Recommended Video
ದೇಶದಲ್ಲಿರುವ ಎಲ್ಲ ಹಂತದ ಅಧಿಕಾರಿಗಳು ಮತ್ತು ನೌಕರರ ನೇಮಕಾತಿ ಪ್ರಕ್ರಿಯೆ, ನಂತರದಲ್ಲಿ ಅವರಿಗೆ ನೀಡುವ ತರಬೇತಿ ಕಾರ್ಯವಿಧಾನ ಉನ್ನತೀಕರಿಸುವ ಹಾಗೂ ಪೌರ ಕಾರ್ಮಿಕರಲ್ಲಿ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಯೋಜನೆ ಜಾರಿಗೊಳಿಸಲಾಗಿದೆ.
ನಾಗರಿಕ ಸೇವಾ ವಲಯದ ಸುಧಾರಣೆಗೆ ಮಿಷನ್ ಕರ್ಮಯೋಗಿ ಯೋಜನೆ ಜಾರಿ
ಸರ್ಕಾರದ ಮಾನವ ಸಂಪನ್ಮೂಲ ನಿರ್ವಹಣಾ ಅಭ್ಯಾಸಗಳನ್ನು "ಆಮೂಲಾಗ್ರವಾಗಿ" ಸುಧಾರಿಸುತ್ತದೆ. ನಾಗರಿಕ ಸೇವಕರ ಸಾಮರ್ಥ್ಯವನ್ನು ಹೆಚ್ಚಿಸಲು ಅತ್ಯಾಧುನಿಕ ಮೂಲಸೌಕರ್ಯಗಳನ್ನು ಬಳಸಲಾಗುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಸಚಿವ ಪ್ರಕಾಶ್ ಜಾವ್ಡೇಕರ್ ರಿಂದ ಕರ್ಮಯೋಗಿ ಯೋಜನೆ ಘೋಷಣೆ
ನವದೆಹಲಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಕರ್ಮಯೋಗಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದರು. ನಾಗರಿಕ ಸೇವೆಯಲ್ಲಿರುವ ವ್ಯಕ್ತಿಯು ಸಮಾಜದ ಸವಾಲುಗಳನ್ನು ಎದುರಿಸಲು ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾಲ್ಪನಿಕ ಮತ್ತು ಹೊಸತನದ ತುಡಿತ, ಚುರಕಿನ ವ್ಯಕ್ತಿತ್ವ ಮತ್ತು ವಿಧೇಯತೆ, ವೃತ್ತಿಪರತೆ ಮತ್ತು ಪ್ರಗತಿಪರತೆ, ಉತ್ಸಾಹಿ ಮತ್ತು ಚಟುವಟಿಕೆಯ, ಪಾರದರ್ಶಕತೆ ಮತ್ತು ತಾಂತ್ರಿಕ ಜ್ಞಾನ, ರಚನಾತ್ಮಕ ಹಾಗೂ ಸೃಜನಶೀಲತೆಗಳನ್ನು ಹೊಂದಿರಬೇಕು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದರು.
ಕರ್ಮಯೋಗಿ ಮಿಷನ್ ತಲುಪಿಸಲು ಡಿಜಿಟಲ್ ವೇದಿಕೆ
ದೇಶದ ಪೌರ ಕಾರ್ಮಿಕರಿಗೆ ಮಿಷನ್ ಕರ್ಮಯೋಗಿ ಕಾರ್ಯಕ್ರಮವನ್ನು ತಲುಪಿಸುವ ಉದ್ದೇಶದಿಂದ ಐಗೋಟ್ ಕರ್ಮಯೋಗಿ ಎಂಬ ಡಿಜಿಟಲ್ ಪ್ಲಾಟ್ಫಾರ್ಮ್ ಅನ್ನು ಸ್ಥಾಪಿಸಲಾಗಿದೆ. ಈ ಮೂಲಕ ನಿರ್ದಿಷ್ಟ ಮಾನದಂಡಗಳ ಮೂಲದ ಪೌರ ಕಾರ್ಮಿಕರ ಪಾತ್ರ ಮತ್ತು ಸಾಮರ್ಥ್ಯದ ಆಧಾರದಲ್ಲಿ ಸೇವಾ ವಿತರಣೆಗೆ ಅನುಕೂಲವಾಗುತ್ತದೆ. ಇದರಿಂದ ಗುಣಮಟ್ಟದ ದಕ್ಷ ಕಾರ್ಯ ನಿರ್ವಹಣೆ ಸಾಧ್ಯವಾಗುತ್ತದೆ ಎಂದು ಸರ್ಕಾರವು ತಿಳಿಸಿದೆ.
ಸಾಂಸ್ಥಿಕ ಮತ್ತು ವೈಯಕ್ತಿಕ ಸಾಮರ್ಥ್ಯ ವೃದ್ಧಿ
ರಾಷ್ಟ್ರೀಯ ನಾಗರಿಕ ಸೇವಾ ಸಾಮರ್ಥ್ಯ ವೃದ್ಧಿ ಯೋಜನೆಯ ಲಾಂಚ್ ಪ್ಯಾಡ್ ಆಗಿ ಈ ಕರ್ಮಯೋಗಿ ಮಿಷನ್ ಕಾರ್ಯ ನಿರ್ವಹಿಸಲಿದೆ. ವೈಯಕ್ತಿಕ ಮತ್ತು ಸಾಂಸ್ಥಿಕ ಸಾಮರ್ಥ್ಯ ವೃದ್ಧಿ ಮತ್ತು ಉತ್ತಮ ಪ್ರಕ್ರಿಯೆಗೆ ಅನುವು ಮಾಡಿಕೊಡಲಿದೆ. ಎನ್ಪಿಸಿಎಸ್ ಸಿಬಿಯನ್ನು ಪ್ರಧಾನಮಂತ್ರಿಯ ಮಾನವ ಸಂಪನ್ಮೂಲ ಮಂಡಳಿಯು ನಿರ್ವಹಿಸಲಿದ್ದು, ಇದರಲ್ಲಿ ಎಲ್ಲ ರಾಜ್ಯ ಮುಖ್ಯಮಂತ್ರಿಗಳು, ಕೇಂದ್ರ ಸಂಪುಟ ಸಚಿವರು ಮತ್ತು ತಜ್ಞರು ಸೇರಿದ್ದಾರೆ. ಈ ಮಂಡಳಿಯು ನಾಗರಿಕ ಸೇವಾ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಪರಿಶೀಲಿಸಿ ಅನುಮೋದಿಸುತ್ತದೆ. ಇದರ ಜೊತೆಗೆ ಆಯ್ದ ಕಾರ್ಯದರ್ಶಿಗಳು ಮತ್ತು ಕೇಡರ್ ನಿಯಂತ್ರಣ ಅಧಿಕಾರಿಗಳನ್ನು ಒಳಗೊಂಡ ಸಂಪುಟ ಕಾರ್ಯದರ್ಶಿಗಳ ಸಮನ್ವಯ ಘಟಕವೂ ಇರುತ್ತದೆ.
ವಿಶೇಷ ತಂಡದಿಂದ 'ಐಗೋಟ್ ಕರ್ಮಯೋಗಿ' ನಿಯಂತ್ರಣ
ಇನ್ನು, ಐಗೋಟ್ ಕರ್ಮಯೋಗಿ ಪ್ಲಾಟ್ ಫಾರ್ಮ್ ನಿಯಂತ್ರಿಸಲು ವಿಶೇಷ ತಂಡವು ಕಾರ್ಯ ನಿರ್ವಹಿಸಲಿದೆ. ಈ ಪೈಕಿ ಸಾಮರ್ಥ್ಯ ವೃದ್ಧಿ ಆಯೋಗ ಹಾಗೂ ಹಲವು ಕ್ಷೇತ್ರಗಳಲ್ಲಿ ಪರಿಣಿತಿ ಪಡೆದ ತಜ್ಞರು ಜಾಗತಿಕ ಉದ್ಯಮಿಗಳು ಸೇರಿದ್ದಾರೆ. ಈ ಆಯೋಗವು ಸರ್ಕಾರದಲ್ಲಿರುವ ಮಾನವ ಸಂಪನ್ಮೂಲ ಮತ್ತು ವಾರ್ಷಿಕ ಸಾಮರ್ಥ್ಯ ವೃದ್ಧಿಯ ಕುರಿತು ಪರಿಶೋದನೆ ನಡೆಸಲಿದೆ. ಅಂತಿಮವಾಗಿ 2013ರ ಕಂಪನಿ ಕಾಯ್ದೆಯ ಸೆಕ್ಷನ್ 8ರ ಅಡಿಯಲ್ಲಿ ಸಂಪೂರ್ಣ ಸ್ವಾಮ್ಯದ ವಿಶೇಷ ಉದ್ದೇಶ ವಾಹನ(ಎಸ್ ಪಿವಿ)ವಾಗಿ ಈ ಕಂಪನಿಯು ಕಾರ್ಯ ನಿರ್ವಹಿಸಲಿದೆ.
ಲಾಭಕ್ಕಾಗಿ ತೆರದ ಕಂಪನಿಯಲ್ಲ ಎಸ್ ಪಿವಿ
ಐಗೋಟ್ ಕರ್ಮಯೋಗಿ ಪ್ಲಾಟ್ ಫಾರ್ಮ್ ನಿರ್ವಹಣೆಗಾಗಿ ಎಸ್ ಪಿವಿ ಕಂಪನಿಯನ್ನು ತೆರೆಯಲಾಗಿದೆಯೇ ವಿನಃ, ಲಾಭಕ್ಕಾಗಿ ತೆರೆದ ಕಂಪನಿಯಲ್ಲ. ಎಸ್ಪಿವಿ ವಿಷಯ ಮೌಲ್ಯಮಾಪನ, ಸ್ವತಂತ್ರ ಪ್ರಾಕ್ಟರ್ಡ್ ಮೌಲ್ಯಮಾಪನಗಳು ಮತ್ತು ಟೆಲಿಮೆಟ್ರಿ ಡೇಟಾ ಲಭ್ಯತೆಗೆ ಸಂಬಂಧಿಸಿದ ಐಜಿಒಟಿ-ಕರ್ಮಯೋಗಿ ಪ್ಲಾಟ್ಫಾರ್ಮ್ನ ಪ್ರಮುಖ ವ್ಯಾಪಾರ ಸೇವೆಗಳನ್ನು ನಿರ್ವಹಿಸುತ್ತದೆ. ಎಸ್ಪಿವಿ ಭಾರತ ಸರ್ಕಾರದ ಪರವಾಗಿ ಎಲ್ಲಾ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಹೊಂದಿರಲಿದೆ.
ಕರ್ಮಯೋಗಿ ಯೋಜನೆಗೆ ಹಣ ಎಲ್ಲಿಂದ ಬರುತ್ತದೆ?
ಈ ಯೋಜನೆಯು ಕೇಂದ್ರ ಸರ್ಕಾರದ 46 ಲಕ್ಷ ಉದ್ಯೋಗಿಗಳನ್ನು ಒಳಗೊಂಡಿರುತ್ತದೆ. 2020-21ನೇ ಸಾಲಿನಿಂದ 2024-25ನೇ ಸಾಲಿನವರೆಗೂ ಅಂದರೆ ಐದು ವರ್ಷಗಳ ಅವಧಿಗೆ 51.86 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಕೇಂದ್ರ ಸರ್ಕಾರದ ಬಹುಪಕ್ಷೀಯ ಮೂಲದಿಂದ ಹಣವನ್ನು ಸಂಗ್ರಹಿಸಲಾಗುತ್ತದೆ. ಎಸ್ಪಿವಿ ಸ್ಥಾಪನೆಯ ಜೊತೆಗೆ ಐಗೋಟ್ ಕರ್ಮಯೋಗಿ ಪ್ಲಾಟ್ಫಾರ್ಮ್ನ ಎಲ್ಲಾ ಬಳಕೆದಾರರ ಕಾರ್ಯಕ್ಷಮತೆ ಮೌಲ್ಯಮಾಪನಕ್ಕಾಗಿ ಸೂಕ್ತ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಚೌಕಟ್ಟನ್ನು ಸಹ ಇರಿಸಲಾಗುವುದು.