Heat Wave in India- ಎಷ್ಟು ಉಷ್ಣಾಂಶ ಇದ್ದರೆ ಬಿಸಿಗಾಳಿ? ಭಾರತದಲ್ಲಿ ತೆಗೆದುಕೊಳ್ಳಲಾಗಿರುವ ಕ್ರಮಗಳಿವು
ಬೆಂಗಳೂರು, ಏ. 29: ಈಗ ಇಡೀ ಭಾರತವೇ ಬಿಸಿಗಾಳಿ ಮತ್ತು ಪವರ್ ಕಟ್ನಿಂದ ತತ್ತರಿಸುತ್ತಿದೆ. ಕರ್ನಾಟಕದಲ್ಲಿ ವಿದ್ಯುತ್ ಸಮಸ್ಯೆ ಇಲ್ಲದಿದ್ದರೂ ಬಿಸಿಗಾಳಿಗಂತೂ ನಲುಗಲಿದೆ. ರಾಜ್ಯದ ಬಿಸಿಗಾಳಿಗೆ ತುತ್ತಾಗುವ ಏಳೆಂಟು ಜಿಲ್ಲೆಗಳಿವೆ. ಬೇಸಿಗೆಯ ಆರಂಭಿಕ ಹಂತದಲ್ಲೇ ಉಷ್ಣಾಂಶ ಗಣನೀಯವಾಗಿ ಹೆಚ್ಚುತ್ತಿದೆ. ಜೂನ್ ತಿಂಗಳಷ್ಟರಲ್ಲಿ ಬಿಸಿಗಾಳಿಯ ರಕ್ಕಸ ರೂಪ ತಾರಕ್ಕೇರಲಿದೆ.
ಏಪ್ರಿಲ್ 27, ಮೊನ್ನೆಯಿಂದಲೇ ಭಾರತದ ಹಲವೆಡೆ ಬಿಸಿಗಾಳಿಯ ವಾತಾವರಣ ಶುರುವಾಗಿದೆ. ಪಾಕಿಸ್ತಾನದ ಕಡೆಯಿಂದಲೂ ಬಿಸಿಗಾಳಿ ರಾಚುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ, ಗುಜರಾತ್, ಬಿಹಾರ, ವಿದರ್ಭ (ಮಹಾರಾಷ್ಟ್ರ), ಒಡಿಶಾ, ಪಶ್ಚಿಮ ಬಂಗಾಳದ ಅನೇಕ ಭಾಗಗಳಲ್ಲಿ ಈಗಾಗಲೇ ಉಷ್ಣಾಂಶ 40 ಡಿಗ್ರಿ ಸೆಲ್ಷಿಯಸ್ಗೂ ಹೆಚ್ಚು ದಾಖಲಾಗಿದೆ. ಹರ್ಯಾಣ, ದೆಹಲಿ, ಛತ್ತೀಸ್ಗಡ, ಜಾರ್ಖಂಡ್, ಮಹಾರಾಷ್ಟ್ರ, ಮರಾಠವಾಡ, ತೆಲಂಗಾಣ ಮತ್ತು ರಾಯಲಸೀಮೆ (ಆಂಧ್ರ)ಯ ಕೆಲ ಭಾಗಗಳಲ್ಲಿ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ಮುಟ್ಟಿತ್ತು.
ವಿದ್ಯುತ್ ಆಘಾತ ಅನುಭವಿಸುತ್ತಿರುವ ರಾಜ್ಯಗಳು ಯಾವ್ಯಾವು?
ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಬಿಸಿ ಹೆಚ್ಚಾಗಲಿದೆ. ಬಿಸಿಲನಾಡು ಕಲಬುರ್ಗಿ, ಕೊಪ್ಪಳ, ವಿಜಯಪುರ, ರಾಯಚೂರು ಮೊದಲಾದ ಕಡೆ ಉಷ್ಣಾಂಶ 37 ಡಿಗ್ರಿ ದಾಟಿದೆ.
Heatwave : ತಾಪಮಾನದಿಂದ ತತ್ತರಿಸಿರುವ ಉತ್ತರ ಭಾರತದ ರಾಜ್ಯಗಳಲ್ಲಿ ಮುಂದಿನ ವಾರ ಮಳೆ ಸಾಧ್ಯತೆ
ಬಿಸಿಗಾಳಿ ಎಂದರೆ ಏನು? ಎಷ್ಟು ಉಷ್ಣಾಂಶ ಇರಬೇಕು?
ಭಾರತ ಹವಾಮಾನ ಇಲಾಖೆಯ ವಿವರಣೆ ಪ್ರಕಾರ ಮನುಷ್ಯ ದೇಹಕ್ಕೆ ಹಾನಿಮಾಡಬಲ್ಲಷ್ಟು ತಾಪಮಾನ ಇದ್ದರೆ ಅದನ್ನ ಹೀಟ್ ವೇವ್ ಎಂದು ಪರಿಗಣಿಸಲಾಗುತ್ತದೆ. ಅಂದರೆ, ಒಂದೊಂದು ಪ್ರದೇಶದ ಮೂಲ ಹವಾಮಾನಕ್ಕೆ ಅನುಗುಣವಾಗಿ ಉಷ್ಣಾಂಶದಲ್ಲಿ ವೈಪರೀತ್ಯ ಇದ್ದರೆ ಬಿಸಿಗಾಳಿ ಎನ್ನಬಹುದು.
ಉದಾಹರಣೆಗೆ, ಬಯಲು ಪ್ರದೇಶಗಳಲ್ಲಿ ಸಾಮಾನ್ಯವಾಗಿ ಉಷ್ಣಾಂಶ ಹೆಚ್ಚಿರುತ್ತದೆ. ಇಲ್ಲಿ ಉಷ್ಣಾಂಶ 40 ಡಿಗ್ರಿ ದಾಟಿದರೆ ಹೀಟ್ ವೇವ್ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ, ಗಿರಿಧಾಮಗಳಂಥ ಶೀತ ಪ್ರದೇಶಗಳಲ್ಲಿ ಉಷ್ಣಾಂಶ 30 ಡಿಗ್ರಿಗಿಂತ ಹೆಚ್ಚಿಗಿದ್ದರೆ ಹೀಟ್ ವೇವ್ ಎಂದು ಭಾವಿಸಲಾಗುತ್ತದೆ.
ಭಾರತದಲ್ಲಿ ಸಾಮಾನ್ಯವಾಗಿ ಬೇಸಿಗೆ ಅವಧಿ ಇರುವ ಮಾರ್ಚ್ನಿಂದ ಜೂನ್ವರೆಗೆ ಬಿಸಿಗಾಳಿ ಏಳಬಹುದು. ಕೆಲವೊಮ್ಮೆ ಜುಲೈ ತಿಂಗಳಲ್ಲೂ ಹೀಟ್ ವೇವ್ ಇರುತ್ತದೆ.
ಇತ್ತೀಚೆಗ ಉಷ್ಣಾಂಶ ವಿಪರೀತ ಏರಿಕೆ:
ಭಾರತದಲ್ಲಿ ಇತ್ತೀಚಿನ ಕೆಲ ವರ್ಷಗಳಿಂದ ಬಿಸಿಗಾಳಿ ಹೊಡೆತ ಹೆಚ್ಚಾಗಿದೆ. 2015ರಲ್ಲಿ ಒಂಬತ್ತು ರಾಜ್ಯಗಳು ಬಿಸಿಗಾಳಿಯಿಂದ ತತ್ತರಿಸಿದ್ದವು. ಆದರೆ, 2020ರಲ್ಲಿ 23 ರಾಜ್ಯಗಳು ಬಿಸಿಗಾಳಿಯಿಂದ ತೊಂದರೆ ಅನುಭವಿಸಿವೆ. ಅಂದರೆ ಭಾರತದ ಬಹುಭಾಗ ಹೀಟ್ ವೇವ್ ಸಮಸ್ಯೆ ಎದುರಿಸಿತ್ತು. 2019ರಲ್ಲಂತೂ ಅನೇಕ ಕಡೆ ರಾತ್ರಿಯಲ್ಲೂ ಉಷ್ಣಾಂಶ 34 ಡಿಗ್ರಿಗಿಂತ ಹೆಚ್ಚು ದಾಖಲಾಗಿದ್ದುಂಟು.
ಬಿಸಿಗಾಳಿ ಎದುರಿಸಲು ಸರಕಾರದ ಕ್ರಮಗಳೇನು?
2015ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬಿಸಿಗಾಳಿ ಪರಿಸ್ಥಿತಿ ಎದುರಿಸಲು ಸಮಗ್ರ ಕಾರ್ಯತಂತ್ರ ಯೋಜನೆ ರೂಪಿಸಲಾಯಿತು. ಕೇಂದ್ರ, ರಾಜ್ಯ ಸರಕಾರಿ ಸಂಸ್ಥೆಗಳು, ಜಿಲ್ಲಾಡಳಿತ, ಎನ್ಜಿಒ ಮತ್ತಿತರ ಸಂಸ್ಥೆಗಳ ಜವಾಬ್ದಾರಗಳೇನು ಎಂಬಿತ್ಯಾದಿ ವಿವರಿಸಿ ರಾಷ್ಟ್ರೀಯ ಮಾರ್ಗಸೂಚಿ ಸಿದ್ಧಪಡಿಸಲಾಯಿತು. ವಾರ್ಡ್ ಮಟ್ಟದಲ್ಲಿ ಆ್ಯಕ್ಷನ್ ಪ್ಲಾನ್ ಮಾಡಲಾಯಿತು.
ಬಿಸಿಗಾಳಿಗೆ ಹೆಚ್ಚಾಗಿ ತುತ್ತಾಗುವರು ಬಡವರು, ಶ್ರಮಿಕರು, ಕೂಲಿಕಾರ್ಮಿಕರು. ಇವರು ಬಯಲಲ್ಲಿ ಕೆಲಸ ಮಾಡವುದು ಅವರ ಬದುಕಿಗೆ ಅನಿವಾರ್ಯವೂ ಹೌದು. ಇವೆಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾದ ಮಾರ್ಗಸೂಚಿಯಲ್ಲಿ ಬಯಲಲ್ಲಿ ಕೆಲಸ ಮಾಡುವ ಜನರ ಕೆಲಸದ ಅವಧಿಯನ್ನ ಬದಲಿಸುವುದು, ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಟ್ಯಾಂಕರ್ಗಳ ಮೂಲಕ ನೀರು ಸರಬರಾಜು, ವಿಶೇಷ ಶೆಲ್ಟರ್ ಹೋಮ್ಗಳ ಸ್ಥಾಪನೆ, ಆರೋಗ್ಯ ಸೌಲಭ್ಯ ಇತ್ಯಾದಿ ವ್ಯವಸ್ಥೆ ಮಾಡಲಾಯಿತು.
ಸಾವಿನ ಸಂಖ್ಯೆ ಕಡಿಮೆ ಆಗಿದೆ:
ಸರಕಾರ ಹೇಳಿಕೊಂಡಿರುವ ಮಾಹಿತಿ ಪ್ರಕಾರ 2015ದರಲ್ಲಿ ಉಷ್ಣಗಾಳಿಯಿಂದ 2040 ಮಂದಿ ಸಾವನ್ನಪ್ಪಿದ್ದರು. 2020ರಲ್ಲಿ ಸಾವಿನ ಸಂಖ್ಯೆ ಕೇವಲ 4 ಮಾತ್ರ ಇತ್ತೆನ್ನಲಾಗಿದೆ. ಅಂದರೆ ಎನ್ಡಿಎಂಎ ತೆಗೆದುಕೊಂಡ ವಿವಿಧ ಸುರಕ್ಷತಾ ಕ್ರಮಗಳಿಂದಾಗಿ ಸಾವಿನ ಪ್ರಮಾಣ ತಗ್ಗಿಸಲು ಸಾಧ್ಯವಾಗಿದೆ.