ಪಾಕ್ ಸೇನೆ ಅಭಿನಂದನ್ ರ ವಶಕ್ಕೆ ಪಡೆಯುವ ಮುನ್ನ ನಡೆದಿದ್ದೇನು?
ಭಾರತ ವಾಯುಸೇನೆಯ ವಿಂಗ್ ಕಮ್ಯಾಂಡರ್ ಅಭಿನಂದನ್ ವರ್ತಮಾನ್ ರನ್ನು ಪಾಕಿಸ್ತಾನ ಸೇನೆ ಬುಧವಾರ ವಶಕ್ಕೆ ಪಡೆಯುವ ಮುನ್ನ ಆಗಿದ್ದೇನು? ಆ ಬಗ್ಗೆ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಎಂಥ ಧೈರ್ಯಶಾಲಿಗಳ ಎದೆ ನಡುಗಿಸುವಂಥ ಘಟನೆ ಅದು. ಅಂಥ ಸನ್ನಿವೇಶದಲ್ಲಿ ಯೋಧನಾಗಿ ತನ್ನ ಕರ್ತವ್ಯ ಮರೆಯದ ಹಾಗೂ ಸಮಯಪ್ರಜ್ಞೆಯಿಂದ ವರ್ತಿಸಿದ ಅಭಿನಂದನ್ ಗೆ ಹ್ಯಾಟ್ಸ್ ಆಫ್.
ಪಾಕಿಸ್ತಾನಿ ಯುದ್ಧ ವಿಮಾನವನ್ನು ಹಿಮ್ಮೆಟ್ಟಿಸುವ ಯತ್ನದಲ್ಲಿ ಅಭಿನಂದನ್ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ಇದ್ದರು. ಆ ಸಂದರ್ಭದಲ್ಲೂ ತಮ್ಮ ಬಳಿಯಿದ್ದ ಮುಖ್ಯ ದಾಖಲೆಗಳನ್ನು ನುಂಗಲು ಮತ್ತು ನಾಶ ಮಾಡಲು ಅವರು ಯತ್ನಿಸಿದ್ದಾರೆ. ಗುರುವಾರದಂದು ಈ ಬಗ್ಗೆ ಪಾಕಿಸ್ತಾನದ ಪ್ರಮುಖ ದಿನಪತ್ರಿಕೆ 'ಡಾನ್' ವರದಿ ಮಾಡಿದೆ.
ಒನ್ಇಂಡಿಯಾ exclusive : ವಾಯುಸೇನೆ ಬಳಕೆ ಹಿಂದಿನ ಕಾರಣ ಏನು?
ಒಬ್ಬ ಸೇನಾಧಿಕಾರಿ ಸೆರೆ ಸಿಕ್ಕಾಗ ಹೇಗೆ ನಡೆದುಕೊಳ್ಳಬೇಕೋ ಅದೇ ರೀತಿಯಲ್ಲಿ ಅಭಿನಂದನ್ ನಡೆದುಕೊಂಡಿದ್ದಾರೆ. ಯಾವ ಪ್ರಶ್ನೆಗೆ ಉತ್ತರ ನೀಡಬೇಕು ಹಾಗೂ ಯಾವುದಕ್ಕೂ ತಾನು ಉತ್ತರಿಸುವಂತಿಲ್ಲ ಎಂಬುದನ್ನು ಅಭಿನಂದನ್ ತುಂಬ ಸ್ಪಷ್ಟವಾಗಿ ಹೆಳಿರುವುದು ಪಾಕಿಸ್ತಾನವೇ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಕಂಡುಬಂದಿದೆ.
ಇದು ಭಾರತವೋ ಪಾಕಿಸ್ತಾನವೋ?
ಪಾಕಿಸ್ತಾನ ಮಾಧ್ಯಮ ವರದಿ ಮಾಡಿರುವ ಪ್ರಕಾರ ನಡೆದಿರುವ ಘಟನೆ ಹೀಗಿದೆ: ಮೊದಲಿಗೆ ಅಭಿನಂದನ್ ಅವರನ್ನು ಸ್ಥಳೀಯ ಯುವಕನೊಬ್ಬ ನೋಡಿದ್ದಾನೆ. ಆ ನಂತರ ಆತ ಕೆಲವು ಯುವಕರನ್ನು ಕರೆದಿದ್ದಾನೆ. ಪೈಲಟ್ ಆಗಿರುವ ಅಭಿನಂದನ್ ಬಳಿ ಪಿಸ್ಟಲ್ ಇತ್ತು. ಆಗ ಆ ಗುಂಪಿನ ಬಳಿ, ಇದು ಭಾರತವೋ ಅಥವಾ ಪಾಕಿಸ್ತಾನವೋ ಅಂತ ಅಭಿನಂದನ್ ಕೇಳಿದ್ದಾರೆ. ಆಗ ಆ ಗುಂಪಿನಲ್ಲಿದ್ದ ಒಬ್ಬ ಬಹಳ ಬುದ್ಧಿವಂತಿಕೆಯಿಂದ, ಭಾರತ ಅಂದಿದ್ದಾನೆ. ಆ ಮೇಲೆ ಇವರು ವಿಂಗ್ ಕಮ್ಯಾಂಡರ್ ಅಭಿನಂದನ್ ಎಂದು ಗುರುತು ಪತ್ತೆಯಾಗಿದೆ. ಕೆಲವು ಘೋಷಣೆ ಕೂಗಿ ಅಭಿನಂದನ್, ಭಾರತದಲ್ಲಿ ಇದು ಯಾವ ಜಾಗ ಎಂದು ಕೇಳಿದ್ದಾರೆ. ಆಗ ಮೊದಲಿಗೆ ಉತ್ತರ ನೀಡಿದ್ದ ಯುವಕನೇ ಕಿಲ್ಲಾನ್ ಎಂದು ಹೇಳಿದ್ದಾನೆ. ಆಗ, ನನ್ನ ಬೆನ್ನು ನೋವಾಗಿದೆ, ಕುಡಿಯಲಿಕ್ಕೆ ನೀರು ಬೇಕು ಎಂದು ಅಭಿನಂದನ್ ಕೇಳಿದ್ದಾರೆ.
ದಾಖಲೆ ನಾಶಪಡಿಸಲು ಯತ್ನ
ಆಗ ನಿವೃತ್ತ ಏರ್ ಮಾರ್ಷಲ್ ಮಗ ಕೂಡ ಆಗಿರುವ ವಾಯುಸೇನೆ ಅಧಿಕಾರಿ ಅಭಿನಂದನ್, ಭಾರತದ ಪರ ಘೋಷಣೆ ಕೂಗಿದ್ದಾರೆ. ಅದಕ್ಕೆ ಪ್ರತಿಯಾಗಿ ಅಲ್ಲಿದ್ದ ಗುಂಪು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದೆ. ಕೂಡಲೇ ಅಭಿನಂದನ್ ತಮ್ಮ ಬಳಿ ಇದ್ದ ಪಿಸ್ಟಲ್ ನಿಮ್ದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆಗ ಅಲ್ಲಿದ್ದ ಎಲ್ಲ ಯುವಕ ಕೈಗೆ ಕಲ್ಲು ತೆಗೆದುಕೊಂಡಿದ್ದಾರೆ. ಎದುರಿಗೆ ಇದ್ದವರಿಗೆ ಪಿಸ್ಟಲ್ ತೋರಿಸುತ್ತಲೇ ಹಿಮ್ಮುಖವಾಗಿ ಸುಮಾರು ಅರ್ಧ ಕಿಲೋಮೀಟರ್ ಅಭಿನಂದನ್ ಓಡಿದ್ದಾರೆ. ಆ ಗುಂಪನ್ನು ಭಯ ಪಡಿಸುವ ಉದ್ದೇಶದಿಂದ ಆಗಾಗ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆ ನಂತರ ಅಲ್ಲಿದ್ದ ಸಣ್ಣ ಕೆರೆಗೆ ಹಾರಿದ ಅಭಿನಂದನ್, ತಮ್ಮ ಬಳಿಯಿದ್ದ ದಾಖಲೆ, ನಕ್ಷೆಗಳನ್ನು ನುಂಗಲು ಯತ್ನಿಸಿದ್ದಾರೆ. ಕೆಲವನ್ನು ನೀರಿಗೆ ಹಾಕಿದ್ದಾರೆ.
ಪಾಕ್ ವಶದಲ್ಲಿ ಅಭಿನಂದನ್ ಸುರಕ್ಷಿತವಾಗಿದ್ದಾರೆ, ನಿರಾತಂಕವಾಗಿದ್ದಾರೆ
ಕಾಲಿಗೆ ಶೂಟ್ ಮಾಡಿದ ಯುವಕ
ಇನ್ನು ಆ ಗುಂಪಿನ ಪೈಕಿ ಒಬ್ಬ ಯುವಕನ ಬಳಿ ಗನ್ ಇದ್ದು, ಅದನ್ನು ಬಿಸಾಡುವಂತೆ ಅಭಿನಂದನ್ ಹೇಳಿದ್ದಾರೆ. ಆದರೆ ಆ ಗುಂಪಿನಲ್ಲಿದ್ದ ಒಬ್ಬಾತ ಇವರ ಕಾಲಿಗೆ ಗುಂಡು ಹಾರಿಸಿದ್ದಾನೆ. ಕೊನೆಗೆ ಆ ಕೆರೆಯಿಂದ ಹೊರಬಂದ ಅಭಿನಂದನ್, ತನ್ನನ್ನು ಕೊಲ್ಲಬೇಡಿ ಎಂದಿದ್ದಾರೆ. ತಮ್ಮ ಬಳಿ ಇದ್ದ ಶಸ್ತ್ರಾಸ್ತ್ರ ಬಿಸಾಡಿದ್ದಾರೆ. ಆಗ ಆ ಯುವಕರ ಗುಂಪೆಲ್ಲ ಒಟ್ಟಾಗಿ ಸೇರಿ, ಎರಡೂ ಕೈ ಹಿಡಿದುಕೊಂಡಿದ್ದಾರೆ. ಇದೀಗ ವಿಡಿಯೋಗಳು ಲಭ್ಯ ಇರುವಂತೆ, ಸ್ಥಳೀಯರು ಸೇರಿ, ಅಭಿನಂದನ್ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಆ ನಂತರ ಅವರ ಮುಖವು ರಕ್ತಸಿಕ್ತವಾಗಿದ್ದು ಇದೇ ಹಲ್ಲೆಯ ಕಾರಣಕ್ಕೆ ಎಂಬುದು ವಿಡಿಯೋದಲ್ಲಿ ಕಂಡುಬರುತ್ತದೆ.
ಅಭಿನಂದನ್ ರನ್ನು ವಾಪಸ್ ಕರೆತರುವ ಯತ್ನ
ಇಷ್ಟೆಲ್ಲ ಆದ ನಂತರ ಪಾಕಿಸ್ತಾನ ಸೇನೆಗೆ ಮಾಹಿತಿ ದೊರೆತು, ಅವರು ಆ ಗುಂಪಿನಿಂದ ಅಭಿನಂದನ್ ರನ್ನು ಬಿಡಿಸಿಕೊಂಡು, ತಮ್ಮ ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಮೇಲೆ ಕೇಳುವಂಥ ಕೆಲವು ಸಾಮಾನ್ಯ ಪ್ರಶ್ನೆಗಳನ್ನೇ ಕೇಳಿರುವುದು ಕಂಡುಬರುವಂಥ ವಿಡಿಯೋವೊಂದನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ. ಈ ಮಧ್ಯೆ, ಭಾರತೀಯ ಸೇನಾಧಿಕಾರಿಯನ್ನು ಗೌರವಯುತವಾಗಿ ಬಿಡುಗಡೆ ಮಾಡಬೇಕು ಎಂಬ ಒತ್ತಾಯ ಪಾಕಿಸ್ತಾನದೊಳಗೆ ಕೇಳಿಬರುತ್ತಿದೆ. ಇನ್ನು ಒಬ್ಬ ಸೇನಾಧಿಕಾರಿಗೆ ಅವಮಾನ ಆಗುವ ರೀತಿಯಲ್ಲಿ ತೋರಿಸುವುದು ಜಿನೀವಾ ಒಪ್ಪಂದದ ಉಲ್ಲಂಘನೆ ಎಂದು ಭಾರತವು ತನ್ನ ಆಕ್ರೋಶ ದಾಖಲಿಸಿದೆ. ಅಭಿನಂದನ್ ಬಿಡುಗಡೆಗೆ ಆಗ್ರಹಿಸಿದ್ದು, ಆ ಕಡೆಗೆ ಪ್ರಯತ್ನ ಕೂಡ ಸಾಗಿದೆ.