ಮದ ನಮ್ಮ ಬದುಕನ್ನೇ ಮೂರಾಬಟ್ಟೆ ಮಾಡಬಹುದು!
ನಮ್ಮ ಜೀವನವನ್ನು ಮೂರಾಬಟ್ಟೆ ಮಾಡುವಲ್ಲಿ ಅರಿಷಡ್ವರ್ಗಗಳ ಪೈಕಿ ಮದವೂ ಒಂದಾಗಿದೆ. ಹಾಗಾಗಿ ಬಹಳಷ್ಟು ಮಂದಿ ಮದದಿಂದಾಗಿ ತಮ್ಮ ಒಳ್ಳೆಯ ಬದುಕನ್ನೇ ಕಳೆದುಕೊಂಡು ಸಂಕಷ್ಟಗಳಿಗೆ ಒಳಗಾಗುತ್ತಾರೆ.
ಮದ ಹೇಗೆ ಬರುತ್ತದೆ ಎಂಬ ಪ್ರಶ್ನೆಗೆ ಆಧ್ಯಾತ್ಮದಲ್ಲಿ ಹೀಗೆಯೇ ವಿವರಿಸಲಾಗಿದೆ. ಅರಿಷಡ್ವರ್ಗದಲ್ಲಿ ಐದನೆಯದು ಮದ. ಮದವೆಂಬುದು ಮತ್ತೇರಿದ ಸ್ಥಿತಿಯೆಂದೂ, ಇದು ಸಾರಾಯಿ, ಗಾಂಜಾದಂತಹ ನಶೆಯಿಂದ ತುಂಬಿರುತ್ತದೆ. ಹಾಗಾಗಿ ಭ್ರಮಾಧೀನವಾದ ಲೋಕದಲ್ಲಿ ಮನಸ್ಸು ಓಲಾಡುತ್ತಾ, ತೇಲಾಡುತ್ತಾ ಇರುತ್ತದೆ. ಒಂದು ರೀತಿಯಲ್ಲಿ ವಿಚಿತ್ರ ಉನ್ಮಾನದ ಸ್ಥಿತಿ. ಮದವು ಹೆಂಡ, ಗಾಂಜಾದಂತಹ ನಶೆಯಿಂದ ಮಾತ್ರವಲ್ಲ ಹಣ, ಐಶ್ವರ್ಯದಿಂದಲೂ ಬರುತ್ತದೆ. ಇದು ಮಹಾ ಅಪಾಯಕಾರಿ ಎಂದು ಹೇಳಲಾಗಿದೆ.
ಆ ತಲೆನೋವಿಗೆ ಮದ್ದು ನಾವೇ ಮಾಡಿಕೊಳ್ಳಬೇಕು..!
ಮದವುಳ್ಳವರಿಗೆ ಹಣದ ದುರಾಸೆ ಜಾಸ್ತಿ!
ಹಣದಿಂದ ಬರುವ ಮದವಿದೆಯಲ್ಲ ಅದು ಬಹುಬೇಗ ಮನುಷ್ಯನನ್ನು ಅಧೋಗತಿಗೆ ತಳ್ಳಿಬಿಡುತ್ತದೆ. ಹಣದಿಂದ ಏನನ್ನಾದರೂ ಕೊಂಡುಕೊಳ್ಳಬಹುದು, ಜಗತ್ತನ್ನೇ ಅಂಕೆಯಲ್ಲಿಟ್ಟುಕೊಳ್ಳಬಹುದೆಂಬ ಅಹಂ ಮೂಡುತ್ತದೆ. ಇದರಿಂದ ಮನುಷ್ಯ ವಿವೇಕಹೀನನಾಗುತ್ತಾನೆ. ಮದವುಳ್ಳವರು ಬಹುಬೇಗನೇ ಕಾಮ, ಕ್ರೋಧ, ಲೋಭ, ಮತ್ಸರಗಳಿಗೆ ಬಲಿಯಾಗಿ ಬಿಡುತ್ತಾರೆ. ಎಂತಹ ಹೀನ ಕೆಲಸ ಮಾಡಲು ಕೂಡ ಅವರು ಹಿಂಜರಿಯುವುದಿಲ್ಲ. ಇವರಿಗೆ ಮುಂಗೋಪವೂ ಹೆಚ್ಚು ಇರುವುದರಿಂದ ಅನಾಹುತಕ್ಕೂ ಎಡೆ ಮಾಡಿಕೊಡುತ್ತಾರೆ. ಮದವುಳ್ಳವರಿಗೆ ಹೆಚ್ಚಿನ ದುರಾಸೆಯಿರುತ್ತದೆ. ಹಾಗಾಗಿ ಅವರು ತಮಗೆ ಬೇಡವಾದ ವಿಚಾರಕ್ಕೆ ತಲೆಹಾಕುತ್ತಾರೆ. ಹೆಚ್ಚು, ಹೆಚ್ಚು ಸಂಪಾದಿಸುವ ಭರದಲ್ಲಿ ಮೋಸ ವಂಚನೆ ಅನ್ಯಾಯಗಳ ದಾರಿಹಿಡಿಯುತ್ತಾರೆ.
ಅನ್ಯಾಯದ ಹಾದಿ ಬೇಗ ಹಿಡಿಯುತ್ತಾರೆ!
ಇವರಲ್ಲಿ ಕಾಮ, ಕ್ರೋಧಗಳು ಸಮುದ್ರದಲ್ಲಿ ಏರಿ ಬರುವ ಅಬ್ಬರದಂತಿರುತ್ತದೆ. ಸದಾ ಮನಸ್ಸನ್ನು ಆವರಿಸುವ ಲೋಭ, ಮೋಹಗಳು ಮನಸ್ಸಿನಿಂದ ದೂರ ಸರಿಯದೆ, ಭಾರೀ ಸಂಕಷ್ಟಗಳಿಗೆ ಒಡ್ಡುತ್ತಿರುತ್ತವೆ. ಒಂದು ಸಾರಿ ನಮ್ಮನ್ನು ಮದ ಆವರಿಸಿಬಿಟ್ಟರೆ ನಾವು ಸಂಸಾರ, ಬಂಧು ಬಳಗದಿಂದ ದೂರವಾಗುತ್ತೇವಲ್ಲದೆ, ಎಲ್ಲರೂ ಇದ್ದರೂ ಅವರೆಲ್ಲ ನಮ್ಮಿಂದ ದೂರವಾಗಿಯೇ ಉಳಿದುಬಿಡುತ್ತಾರೆ. ಮದದಿಂದ ವರ್ತಿಸಿ ನಾವು ಮತ್ತೊಬ್ಬರಿಗೆ ನೀಡುವ ತೊಂದರೆಗಳು ಆ ಕ್ಷಣಕ್ಕೆ ನಮಗೆ ಏನೋ ಒಂದು ರೀತಿಯ ವಿಕೃತ ಆನಂದ ನೀಡಬಹುದಾದರೂ, ಕ್ರಮೇಣ ಅದಕ್ಕೆ ಕಂದಾಯ ಕಟ್ಟಬೇಕಾಗುತ್ತದೆ.
ಮದಕ್ಕೆ ಬಲಿಯಾಗಲಿದೆ ನಮ್ಮತನ
ನಾವು ಎಷ್ಟೇ ಸಂಪಾದಿಸಬಹುದು. ಹಣ, ಐಶ್ವರ್ಯ ಇರುತ್ತೆ ಹೋಗುತ್ತೆ. ಆದರೆ ಸಮಾಜದಲ್ಲಿ ನಾವು ಒಮ್ಮೆ ಕೆಟ್ಟವರೆನಿಸಿಕೊಂಡರೆ ಅದನ್ನು ತೊಡೆದು ಹಾಕಲು ಬಹಳ ಕಷ್ಟವೇ. ಹೀಗಾಗಿ ಮದವನ್ನು ತಮ್ಮತ್ತ ಸುಳಿಯದಂತೆ ಎಚ್ಚರವಹಿಸಬೇಕು. ಮದವುಳ್ಳವರು ಎಷ್ಟೇ ಪ್ರತಿಭಾವಂತರಾದರೂ ಅಧಿಕಾರ, ಕೀರ್ತಿ ಸಂಪಾದಿಸಿದರೂ ಜನರು ಅವರನ್ನು ಒಳ್ಳೆಯವರೆಂದು ಭಾವಿಸುವುದೇ ಇಲ್ಲ. ಮದದಿಂದ ಕೂಡಿದ ವ್ಯಕ್ತಿಯ ಮನಸ್ಸು ಭಾರೀ ಸಂಕುಚಿತವಾಗಿರುತ್ತದೆ. ಪ್ರೀತಿ, ವಿಶ್ವಾಸ, ದಯೆ, ಕರುಣೆ, ಭಕ್ತಿ ಅರ್ಪಣೆ ಇರುವುದಿಲ್ಲ. ಹಾಗಾಗಿ ಜ್ಞಾನಿಗಳು ಹಿಂದಿನಿಂದಲೂ ಅರಿಷಡ್ವರ್ಗದಿಂದ ದೂರವಿರುವಂತೆ ಕರೆ ನೀಡುತ್ತಲೇ ಬಂದಿದ್ದಾರೆ.
ನಮ್ಮನ್ನು ನಾವು ವಿಮರ್ಶಿಸಿಕೊಳ್ಳಬೇಕು
ಮದದಿಂದ ದೂರವಿರಬೇಕಾದರೆ ಮನಸ್ಸು ಪವಿತ್ರವಾಗಿರಬೇಕು. ಅಷ್ಟೇ ಅಲ್ಲ ಅನಂತವಾಗಿರಬೇಕು. ಎಲ್ಲರೂ ನಮ್ಮವರೇ ಎಂಬ ಭಾವನೆ ಸದಾ ಇರಬೇಕು. ನಮ್ಮನ್ನು ನಾವು ವಿಮರ್ಶಿಸಿಕೊಳ್ಳಬೇಕು. ತಾನು ಮಾಡಿದ್ದು ಸರಿಯೇ, ತಪ್ಪೇ ಎಂಬ ಬಗ್ಗೆ ವಿಮರ್ಶಿಸಿ ತಿಳಿದುಕೊಳ್ಳಬೇಕು. ಇದೆಲ್ಲಾ ಸಾಧ್ಯವಾಗಬೇಕಾದರೆ ಅರಿಷಡ್ವರ್ಗಗಳನ್ನು ದೂರವಿಡಬೇಕು. ನಾವು ನಮ್ಮ ಬಗ್ಗೆಯೇ ಎಚ್ಚರಿಕೆಯ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕು. ದೇವರ ಧ್ಯಾನ, ಪರಮಾತ್ಮನ ಚಿಂತನೆ, ಇಲ್ಲವೇ ಸಮಾಜದಲ್ಲಿ ಒಳ್ಳೆಯದಾಗುವಂತಹ ಕಾರ್ಯ ಮಾಡುತ್ತಾ ನಮ್ಮನ್ನು ನಾವೇ ದಂಡಿಸಿಕೊಳ್ಳಬೇಕು. ಆಗ ಮಾತ್ರ ಮದದಿಂದ ಹೊರಬರಲು ಸಾಧ್ಯ.