ದುರಾಸೆಯ ಬೆನ್ನೇರಿ ಹೊರಟರೆ ಏನಾಗುತ್ತದೆ ಗೊತ್ತಾ?
ಮನುಷ್ಯನಿಗೆ ಆಸೆ ಬೇಕು... ಆದರೆ ದುರಾಸೆ ಇರಬಾರದು ಎಂದು ಹಿರಿಯರು ಹೇಳಿದ್ದಾರೆ. ಇದು ಸರ್ವಕಾಲಕ್ಕೂ ಸಲ್ಲುವ ಮಾತು. ದುರಾಸೆಯಿಂದ ನಾವು ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಜಾಸ್ತಿ. ದುರಾಸೆಯ ಬೆನ್ನೇರಿ ಹೊರಟರೆ ಏನಾಗುತ್ತದೆ ಗೊತ್ತಾ? ಅದಕ್ಕೊಂದು ದೃಷ್ಟಾಂತ ಕಥೆ ಇಲ್ಲಿದೆ.
ಗೋವಿಂದ ಮತ್ತು ಆನಂದ ಎಂಬ ಇಬ್ಬರು ವ್ಯಾಪಾರಿಗಳು ತಮ್ಮ ಊರಿನಲ್ಲಿಯೇ ವ್ಯಾಪಾರ ನಡೆಸಿಕೊಂಡು ಬಂದಿದ್ದರು. ವ್ಯಾಪಾರದಿಂದ ಒಂದಷ್ಟು ಲಾಭ ಬರುತ್ತಿತ್ತಾದರೂ ಅದು ಅವರಿಗೆ ಸಮಾಧಾನವಾಗಿರಲಿಲ್ಲ. ದೂರದ ಊರಿನಲ್ಲಿ ವ್ಯಾಪಾರ ಮಾಡಿದರೆ ಅಲ್ಲಿ ಬಹಳಷ್ಟು ಲಾಭ ಗಳಿಸಬಹುದೆಂದು ಯಾರೋ ಹೇಳಿದ ಮಾತು ಇಬ್ಬರನ್ನು ಆ ಊರಿಗೆ ಹೋಗಿ ಅಲ್ಲಿ ವ್ಯಾಪಾರ ನಡೆಸಲು ಪ್ರೇರೇಪಿಸಿತು.
ಗಾಳಿಗೋಪುರ ಕಟ್ಟುವುದು, ಹಗಲು ಕನಸು ಕಾಣುವುದು ಬಿಡಿ...
ಗೋವಿಂದ ಮತ್ತು ಆನಂದ ದೂರದ ಊರಿಗೆ ಹೋಗಿ ವ್ಯಾಪಾರ ಮಾಡಲು ಸಿದ್ದರಾಗಿ ಹೊರಟು ನಿಂತರು. ತಮ್ಮಲ್ಲಿರುವ ಹಣವನ್ನೆಲ್ಲಾ ವ್ಯಾಪಾರಕ್ಕೆ ಬಂಡವಾಳವಾಗಿ ಸುರಿದು ಅದರಿಂದ ಲಕ್ಷಾಂತರ ರೂಪಾಯಿ ಲಾಭಗಳಿಸುವ ಬಯಕೆ ಅವರದ್ದಾಗಿತ್ತು. ಅಪರಿಚಿತ ಊರು, ಅಪರಿಚಿತ ಜನ, ತಮ್ಮಲ್ಲಿರುವ ಬಂಡವಾಳವನ್ನು ಹೇಗೆ ವ್ಯಾಪಾರಕ್ಕೆ ವಿನಿಯೋಗಿಸುವುದು ಎಂಬುದು ಅವರಿಗೆ ಚಿಂತೆಯಾಯಿತು. ಬಹಳ ಯೋಚಿಸಿದ ನಂತರ ಅವರಿಬ್ಬರು ಒಂದು ನಿರ್ಧಾರಕ್ಕೆ ಬಂದರು. ನಮ್ಮಲ್ಲಿರುವ ಬಂಡವಾಳವನ್ನೆಲ್ಲಾ ಸಂಪೂರ್ಣವಾಗಿ ವ್ಯಾಪಾರಕ್ಕೆ ಬಳಸಿದರೆ ತೊಂದರೆಯಾಗಬಹುದು. ಆದುದರಿಂದ ಬಂಡವಾಳದ ಸ್ವಲ್ಪ ಭಾಗವನ್ನು ಮಾತ್ರ ಖರ್ಚು ಮಾಡಿ ಕ್ರಮೇಣ ಸ್ವಲ್ಪ ಸ್ವಲ್ಪವೇ ವ್ಯಾಪಾರ ಕುದುರಿದ ನಂತರ ಬಳಸಿಕೊಳ್ಳೋಣ ಎಂದುಕೊಂಡರು.
ತಮ್ಮಲ್ಲಿದ್ದ ಬಂಡವಾಳದ ಸ್ವಲ್ಪ ಭಾಗವನ್ನು ಹಾಕಿ ವ್ಯಾಪಾರ ಆರಂಭಿಸಿದರು. ಆದರೆ ಈ ಸ್ವಲ್ಪ ಭಾಗದ ಬಂಡವಾಳ ವ್ಯಾಪಾರದ ಪ್ರಾರಂಭದ ಖರ್ಚಿಗೆ ಸರಿದೂಗಿ ಲಾಭವೇನೂ ಬರಲಿಲ್ಲ. ಮತ್ತೆ ಇನ್ನು ಸ್ವಲ್ಪ ಭಾಗವನ್ನು ವ್ಯಾಪಾರಕ್ಕೆ ಬಳಸಿದರು. ಅದು ಸಹ ಖರ್ಚು ವೆಚ್ಚಗಳಿಗೆ ಸರಿ ಹೋಗಿ ಲಾಭ ಕಾಣಲಿಲ್ಲ. ಹೀಗೆ ಸ್ವಲ್ಪ ಸ್ವಲ್ಪ ಬಂಡವಾಳ ಹಾಕುತ್ತಾ ಹೋದರು. ವ್ಯಾಪಾರ ಕುದುರುವ ವೇಳೆಗೆ ಬಂಡವಾಳವೆಲ್ಲಾ ಕರಗಿ ಸಂಪೂರ್ಣ ನಷ್ಟ ಹೊಂದಿದರು.
ಒತ್ತಡದ ಬದುಕಿನಲ್ಲಿ ಮನಸ್ಸನ್ನು ಆರೋಗ್ಯವಾಗಿಡುವುದು ಹೇಗೆ?
ಈ ದೃಷ್ಟಾಂತ ಕಥೆಯಿಂದ ಮನುಷ್ಯ ಆಸೆಯ ಕುದುರೆಯೇರಿದರೆ ಎಂತಹ ಕಷ್ಟ ನಷ್ಟಗಳಿಗೆ ತಳ್ಳಲ್ಪಡುತ್ತಾನೆ ಎಂಬುದನ್ನು ತಿಳಿಸುತ್ತದೆ. ಹಾಗೆ ನೋಡಿದರೆ ಆಸೆ ಪಡದ ಮನುಷ್ಯ ಇಲ್ಲವೇ ಇಲ್ಲ. ಆಸೆ ಎಂಬುದು ನಮ್ಮಲ್ಲಿ ಇಲ್ಲದೆ ಹೋದರೆ ನಾವು ಉನ್ನತಿ ಕಾಣಲು ಸಾಧ್ಯವಿಲ್ಲವೇನೋ.. ನಾವು ನಮ್ಮ ಮಿತಿಯಲ್ಲಿ ಆಸೆ ಪಡುವುದು ಮತ್ತು ಆ ಆಸೆ ನೆರವೇರುವ ತನಕ ವಿರಮಿಸದೆ ದುಡಿಯುವುದು ನಮ್ಮನ್ನು ನಮ್ಮ ಆಸೆಯ ಸುಖವನ್ನು ಬಹಳ ಕಾಲದವರೆಗೆ ಅನುಭವಿಸಲು ಸಾಧ್ಯವಾಗುತ್ತದೆ.
ಬಯಕೆಯಿಲ್ಲದ ಮನುಷ್ಯ ಮನುಷ್ಯನೇ ಅಲ್ಲ, ಅದಕ್ಕೆ ಅಂತ್ಯವೂ ಇಲ್ಲ...
ಆದರೆ ಹಾಗೆ ನಡೆಯುವುದು ಮಾತ್ರ ಬಹಳ ಅಪರೂಪ. ಏಕೆಂದರೆ ನಾವೆಲ್ಲರೂ ಆಸೆಯ ಕುದುರೆ ಏರಿ ಹೊರಡುವವರು. ಹೀಗಾಗಿ ಕೆಲವೊಮ್ಮೆ ಆಸೆಯ ಕುದುರೆಯ ಹಾದಿ ಬದಲಿಸಿರುತ್ತದೆ. ಆಸೆಯ ಸುಖದ ಅಮಲಿನಲ್ಲಿ ಕಷ್ಟ ಕಾರ್ಪಣ್ಯಗಳನ್ನು ಎಳೆದುಕೊಂಡು ಜರ್ಜರಿತರಾಗಿ ಬಿಡುತ್ತೇವೆ. ಆಸೆಗಳೆಲ್ಲ ನೆರವೇರಿದ್ದೇ ಆದರೆ ಮತ್ತೆ ನಮ್ಮಲ್ಲಿ ಹುಟ್ಟುವುದು ದುರಾಸೆ.
ದುರಾಸೆ ಎಂಬುವುದು ನಮ್ಮನ್ನು ಜೀವಂತ ಸುಡುವ ಬೆಂಕಿ. ಏಕಾಂತದಲ್ಲಿ ಕುಳಿತು ಸಿಂಹಾವಲೋಕನ ಮಾಡಿ ನೋಡಿದರೆ ನಾವು ಆಸೆ ಮಾಡಿ ಪಡೆದದ್ದು ದುರಾಸೆ ಮಾಡಿ ಕಳೆದುಕೊಂಡಿದ್ದು ಎಲ್ಲವನ್ನೂ ಪಟ್ಟಿ ಮಾಡಬಹುದು. ದುರಾಸೆಯಿಂದ ನಾವು ಪಡೆದುದಕ್ಕಿಂತಲೂ ಕಳೆದುಕೊಂಡಿದ್ದೇ ಜಾಸ್ತಿ ಎಂಬುದು ನಮ್ಮ ಅರಿವಿಗೆ ಬಾರದಿರದು. ಆಸೆಯನ್ನು ನಿಯಂತ್ರಿಸದೇ ಹೋದರೆ ಇದುವರೆಗೆ ಆಸೆ ಮಾಡಿ ಏನನ್ನೂ ಪಡೆದಿದ್ದೆವೆಯೋ ಅಥವಾ ಉಳಿಸಿಟ್ಟಿದ್ದೇವೆಯೇ ಅವುಗಳನ್ನೆಲ್ಲ ಕಳೆದುಕೊಳ್ಳಬೇಕಾಗಬಹುದೆಂಬುದನ್ನು ತಳ್ಳಿಹಾಕುವಂತಿಲ್ಲ.
ಆಸೆಯನ್ನು ವರ್ಜಿಸದೆ ಹೊರತು ನಮ್ಮ ಬದುಕಿನಲ್ಲಿ ಸುಖ, ನೆಮ್ಮದಿ ಕಾಣಲಾಗದು. ಲೌಕಿಕ ಸುಖದ ಬಗೆಗಿನ ನಮ್ಮ ಆಸೆ ಕ್ರಮೇಣ ದುರಾಸೆಯಾಗಿ ಚಿಂತೆ, ನೋವು, ದುಃಖ, ಕಷ್ಟಗಳ ಗೂಡಾಗಿ ಒಂದು ಸುಂದರ ಬದುಕನ್ನು ನಾವೇ ಕೈಯ್ಯಾರ ಹಾಳುಗೆಡವಿಕೊಳ್ಳುತ್ತೇವೆ ಎಂಬುವುದನ್ನು ಮರೆಯಬಾರದು. ನಮ್ಮ ಆಸೆಯನ್ನು ಆಧ್ಯಾತ್ಮದೆಡೆಗೆ ವಾಲಿಸಿ ಜ್ಞಾನದ, ಯೋಗದ, ಇತರೆ ದೈವ ಕಾರ್ಯದ ಬಗೆಗೆ, ದೈವತ್ವದೊಂದಿಗೆ ಸಂಪೂರ್ಣವಾಗಿ ಐಕ್ಯವಾಗಿಸಿಕೊಳ್ಳುವ ಮೂಲಕ ಆಸೆಯನ್ನು ಈ ದೇಹದಿಂದ ಹೊಡೆದೋಡಿಸಬೇಕು. ಆಸೆಯೇ ದುಃಖಕ್ಕೆ ಮೂಲ ಎಂಬ ಬುದ್ಧನ ಯುಕ್ತಿ ಸದಾ ನಮ್ಮ ನೆನಪಿನಲ್ಲಿರಬೇಕು.