ತುಮಕೂರಿನಲ್ಲಿ ದೊಡ್ಡ ಗೌಡರನ್ನು ಅಡ್ಡಡ್ಡ ಕೆಡವಿದ್ದು ಇವೇ ಯಡವಟ್ಟುಗಳು!
Recommended Video
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸೋಲಬಹುದು ಎಂಬ ಅಂದಾಜು ಹಲವರಿಗೆ ಇರಲಿಲ್ಲ. ಯಾಕೆಂದರೆ, ದೇವೇಗೌಡರು ಸಂಸತ್ ಗೆ ಸ್ಪರ್ಧೆ ಮಾಡುವುದು ಇದೇ ಕೊನೆ ಎಂದು ಪ್ರಚಾರ ಮಾಡಲಾಗಿತ್ತು. ಇನ್ನು ಜಿಲ್ಲೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಗೆ ಭದ್ರ ನೆಲೆ ಇತ್ತು. ಇಷ್ಟಾದ ಮೇಲೆ ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರ ಇತ್ತು.
ಇವೆಲ್ಲವನ್ನೂ ಪ್ಲಸ್ ಪಾಯಿಂಟ್ ಗಳು ಅಂತಲೇ ಪರಿಗಣಿಸಲಾಗಿತ್ತು. ಮುಖ್ಯವಾಗಿ ಡಿಸಿಎಂ ಪರಮೇಶ್ವರ್ ತವರು ಜಿಲ್ಲೆಯಾದ ಕಾರಣ ಅವರು ಸಹ ನೆರವಿಗೆ ನಿಲ್ಲುತ್ತಾರೆ. ಪ್ರಚಾರದ ಬಗ್ಗೆ ತುಂಬ ತಲೆ ಕೆಡಿಸಿಕೊಳ್ಳದೆ ಇರಬಹುದು ಎಂಬುದು ಲೆಕ್ಕಾಚಾರ ಆಗಿತ್ತು. ಆದರೂ ದೇವೇಗೌಡರ ಕುಟುಂಬ ಸದಸ್ಯರು ಪ್ರಚಾರ ಮಾಡಿದರು.
ತುಮಕೂರಿನಲ್ಲಿ ದೇವೇಗೌಡರ ಸೋಲು, ಮೊದಲ ಪ್ರತಿಕ್ರಿಯೆ
ಗುಬ್ಬಿ ಶಾಸಕರೂ ಆದ ಸಚಿವ ಎಸ್.ಆರ್.ಶ್ರೀನಿವಾಸ್ ಅವರಂತೂ ಒಂದು ಹೆಜ್ಜೆ ಮುಂದೆ ಹೋಗಿ, ದೇವೇಗೌಡರು ಸೋತರೆ ನಾನು ಶಾಸಕ ಸ್ಥಾನಕ್ಕೇ ರಾಜೀನಾಮೆ ನೀಡುವುದಾಗಿ ಹೇಳಿದರು. ಆದರೆ ಬಿಜೆಪಿಯಿಂದ ಯಾವ ಜಾಗದಲ್ಲಿ ಚಿವುಟಬೇಕಿತ್ತೋ ಅಲ್ಲೇ ಸರಿಯಾಗಿ ಚಿವುಟಲಾಯಿತು. ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್ ಗೌಡ, ಅವರಿಗೆ (ದೇವೇಗೌಡ) ಗಂಗೆ ಶಾಪ ಇದೆ ಅಂದರು. ಆ ಮಾತಿಗೆ ಸಿಕ್ಕಾಪಟ್ಟೆ ಪ್ರಚಾರವೂ ಸಿಕ್ಕಿತು.
ಪ್ರೀತಿ ಹಾಸನದ ಬಗ್ಗೆಯೋ ತುಮಕೂರಿನ ಕಡೆಗೋ
ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಬಾರದಿರುವುದಕ್ಕೆ ದೇವೇಗೌಡರು ಮತ್ತು ಅವರ ಮಕ್ಕಳೇ ಕಾರಣ ಎಂಬುದನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡಲಾಯಿತು. ಯಾವುದೋ ಕಾಲದಿಂದ ದೇವೇಗೌಡರ ಕುಟುಂಬದ ಬಗ್ಗೆ ಈ ರೀತಿಯ ಆರೋಪ ಇದ್ದು, ಅದು ಈಗಲೂ ಜನರ ಮನಸಿನಿಂದ ಹೋಗಿಲ್ಲ. ಒಕ್ಕಲಿಗರು ದೇವೇಗೌಡರನ್ನು ತಮ್ಮ್ ನಾಯಕರು ಎಂದು ಒಪ್ಪುತ್ತಾರಾದರೂ ಹೇಮಾವತಿ ವಿಚಾರಕ್ಕೆ ಬಂದಾಗ ಮುಳ್ಳು ಚುಚ್ಚಿದಂತೆ ಆಗುತ್ತದೆ. ಇನ್ನು ದೇವೇಗೌಡರಿಗೆ ಕಾಲಾಂತರದಿಂದ ಹಾಸನದ ಮೇಲೆ ಪ್ರೀತಿಯೇ ಹೊರತು ಅವರೆಂದೂ ಉಳಿದ ಜಿಲ್ಲೆಗಳ ಬಗ್ಗೆ ತಲೆ ಕೆಡಿಸಿಕೊಂಡವರಲ್ಲ. ಹೇಗಿದ್ದರೂ ಇದು ಕೊನೆ ಚುನಾವಣೆ ಎನ್ನುತ್ತಿದ್ದಾರೆ. ಇನ್ನೂ ಬಹಳ ಕಾಲ ಹಾಸನದಲ್ಲಿ ರಾಜಕಾರಣ ಮಾಡಬೇಕಾದ ಮೊಮ್ಮಗ ಪ್ರಜ್ವಲ್ ಬಗ್ಗೆ ಯೋಚನೆ ಮಾಡುತ್ತಾರೋ ಅಥವಾ ತುಮಕೂರಿನ ಬಗ್ಗೆಯೋ ಎಂಬ ಮಾತು ಹರಿದಾಡಿತು.
ಅಹವಾಲು ಹೇಳಿಕೊಳ್ಳಲು ಬೆಂಗಳೂರಿಗೆ ಹೋಗಬೇಕು
ಇನ್ನು ದೇವೇಗೌಡರನ್ನು ಗೆಲ್ಲಿಸಿದರೆ ಅವರು ತುಮಕೂರಿನಲ್ಲಿ ಇರುವುದಿಲ್ಲ. ಅವರನ್ನು ನೋಡಬೇಕು ಅಂದರೆ, ತಮ್ಮ ಅಹವಾಲು ಹೇಳಿಕೊಳ್ಳಬೇಕು ಅಂದರೆ ಬಸ್ ಚಾರ್ಜ್ ಇಟ್ಟುಕೊಂಡು ಪದ್ಮನಾಭನಗರದ ಮನೆ ತನಕ ಹೋಗಬೇಕು. ಹಾಗೆ ಹೋದರೂ ಮಾತನಾಡುವುದಕ್ಕೆ ಸಿಗುತ್ತಾರಾ ಅಥವಾ ಇಲ್ಲವಾ? ಮನವಿಗೆ ಸ್ಪಂದಿಸುತ್ತಾರೆ ಎಂಬುದು ಖಾತ್ರಿ ಇಲ್ಲ. ಮೂಲತಃ ತುಮಕೂರಿನವರೇ ಆದ ಬಸವರಾಜು, ಅವರ ಮಗ ಹಾಗೂ ತುಮಕೂರು ನಗರ ಕ್ಷೇತ್ರದ ಶಾಸಕ ಜ್ಯೋತಿಗಣೇಶ್ ಮಾತನಾಡಲು- ದೂರು ಹೇಳಿಕೊಳ್ಳಲು ಸಿಗುತ್ತಾರೆ. ಕೆಲಸ ಮಾಡಿಕೊಡಲಿಲ್ಲ ಅಂದರೆ ಮುಂದಿನ ಸಲ ಮತ ಹಾಕಲ್ಲ ಅಂತ ಹೇಳಬಹುದು. ಏಕೆಂದರೆ, ಅಪ್ಪ-ಮಕ್ಕಳು ಇದೇ ತುಮಕೂರಿನಲ್ಲೇ ರಾಜಕಾರಣ ಮಾಡುತ್ತಾರೆ. ಆದರೆ ದೇವೇಗೌಡರ ಕುಟುಂಬ ತುಮಕೂರು ಕ್ಷೇತ್ರವನ್ನು ಗೆಲ್ಲುವ ಅವಕಾಶದ ರೀತಿ ನೋಡಿದರೆ ವಿನಾ ಪ್ರೀತಿಯಿಂದಲ್ಲ ಎಂಬ ಆಕ್ಷೇಪ ಇತ್ತು.
ಮಾಜಿ ಪ್ರಧಾನಿ ದೇವೇಗೌಡರಿಗೆ ಭಾರಿ ಮುಖಭಂಗ: ತುಮಕೂರಿನಲ್ಲಿ ಹೀನಾಯ ಸೋಲು
ಮೊಮ್ಮಕ್ಕಳಿಗೆ ಟಿಕೆಟ್ ನೀಡಿದ್ದು ಉಲ್ಟಾ ಹೊಡೆಯಿತು
ಕಾಂಗ್ರೆಸ್ ನಿಂದ ಹಾಲಿ ಸಂಸದರಾಗಿದ್ದ ಎಸ್.ಪಿ.ಮುದ್ದಹನುಮೇಗೌಡರನ್ನು ಪಕ್ಕಕ್ಕೆ ಸರಿಸಿ, ಅವರಿಗೆ ಟಿಕೆಟ್ ತಪ್ಪಿಸಿ ದೇವೇಗೌಡರಿಗೆ ಬಿಟ್ಟುಕೊಟ್ಟಿದ್ದರಿಂದ ಕಾಂಗ್ರೆಸ್ ನಲ್ಲಿ ಸಿಟ್ಟು ಹೆಚ್ಚಾಯಿತು. ಸ್ಥಳೀಯವಾಗಿ ಕೆ.ಎನ್.ರಾಜಣ್ಣ ಅಂಥವರಿಗೆ ವೀರಭದ್ರಯ್ಯರಂಥ ಎದುರಾಳಿ ಜತೆ ಕೆಲಸ ಮಾಡಿಕೊಂಡು ಹೋಗುವುದು ಸಾಧ್ಯವೇ ಇರಲಿಲ್ಲ. ಇನ್ನು ಮುದ್ದಹನುಮೇಗೌಡರಿಗೆ ಹೆಸರೇನೂ ಕೆಟ್ಟಿರಲಿಲ್ಲ. ಜತೆಗೆ ಒಳ್ಳೆ ಕೆಲಸ ಮಾಡಿದ ವ್ಯಕ್ತಿ ಎಂಬ ಹೆಸರು ಇದ್ದಿದ್ದರಿಂದ ಟಿಕೆಟ್ ತಪ್ಪಿಸಿದ ಗೌಡರನ್ನು ಗೆಲ್ಲಿಸಬಾರದು ಎಂಬ ಸಿಟ್ಟು ಮಡುಗಟ್ಟಿತು. ಇಲ್ಲಿ ಇನ್ನೊಂದು ಮಾತು ಪರಸ್ಪರ ಸಂಬಂಧಿಕರಾದವರು ಹತ್ತಿರದ ಕ್ಷೇತ್ರಗಳಲ್ಲಿ ಚುನಾವಣೆಗೆ ನಿಲ್ಲಬಾರದು ಎಂದು ಅಲಿಖಿತ ರಾಜಕಾರಣ ನಿಯಮ ಇದೆ. ಅಂತಹದರಲ್ಲಿ ಒಂದು ಕಡೆ ಹಾಸನ, ಮತ್ತೊಂದು ಕಡೆ ಮಂಡ್ಯ್ ಇದೆ. ಎರಡೂ ಕಡೆ ಸ್ವಂತ ಮೊಮ್ಮಕ್ಕಳಿಗೆ ಜೆಡಿಎಸ್ ಟಿಕೆಟ್ ನೀಡಿದ್ದು ಉಲ್ಟಾ ಹೊಡೆಯಿತು. ಜೆಡಿಎಸ್ ಕಾರ್ಯಕರ್ತರಿಗೇ ಇದು ಕುಟುಂಬ ರಾಜಕಾರಣ ಎಂಬುದು ಮತ್ತಷ್ಟು ದೃಢವಾಯಿತು.
ಮೋದಿ ಸುನಾಮಿಯಲ್ಲಿ ದೇವೇಗೌಡರೂ ಕೊಚ್ಚಿಹೋದರು
ಈ ಬಾರಿ ಕರ್ನಾಟಕ ಒಂದೇ ಅಲ್ಲ, ಇಡೀ ದೇಶದಲ್ಲಿ ಮೋದಿ ಸುನಾಮಿ ಎದ್ದಿರುವುದು ಸ್ಪಷ್ಟವಾಗಿದೆ. ಅದರಲ್ಲಿ ಕೊಚ್ಚಿ ಹೋದವರ ಪೈಕಿ ದೇವೇಗೌಡರು ಒಬ್ಬರಷ್ಟೇ. ಚಿಕ್ಕಬಳ್ಳಾಪುರದ ವೀರಪ್ಪ ಮೊಯಿಲಿ, ಕೋಲಾರದ ಕೆ.ಎಚ್.ಮುನಿಯಪ್ಪ, ಕಲಬುರಗಿಯಿಂದ ಮಲ್ಲಿಕಾರ್ಜುನ ಖರ್ಗೆ, ಪ್ರಕಾಶ್ ಹುಕ್ಕೇರಿ ಹೀಗೆ ಅತಿರಥ- ಮಹಾರಥರು ಸೋತು ಸುಣ್ಣವಾಗಿದ್ದಾರೆ. ಅದರಲ್ಲಿ ಬಚಾವ್ ಆದವರು ಅಂದರೆ ಡಿ.ಕೆ.ಸುರೇಶ್ ಹಾಗೂ ಪ್ರಜ್ವಲ್ ರೇವಣ್ಣ ಮಾತ್ರ. ಮಂಡ್ಯದಲ್ಲಿ ಗೆದ್ದಿರುವ ಸುಮಲತಾ ಅವರಿಗೆ ಬಿಜೆಪಿಯು ಆರಂಭದಲ್ಲೇ ಬೆಂಬಲ ನೀಡಿತ್ತು. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಹುತೇಕ ಎಲ್ಲ ಸುತ್ತುಗಳಲ್ಲೂ ಜಿ.ಎಸ್.ಬಸವರಾಜು ಮುನ್ನಡೆಯೇ ಕಾಯ್ದುಕೊಂಡು ಬಂದರು. ಅಂತರದ ಪ್ರಮಾಣ ನಿಧಾನಕ್ಕೆ ಏರುತ್ತಾ ಬಂದಿತ್ತು. ಆದರೆ ಮಾಜಿ ಪ್ರಧಾನಿಯೊಬ್ಬರು ಹೀಗೆ ಸೋತಿರುವುದು ಜೆಡಿಎಸ್ ನ ಆತ್ಮಸ್ಥೈರ್ಯವನ್ನು ಕುಗ್ಗಿಸುವಂಥದ್ದು.