ಸುಮ್ಮನೇ ಕೊಟ್ಟಿಲ್ಲ ಪ್ರತಿಪಕ್ಷ ಅಧ್ಯಕ್ಷ ಸ್ಥಾನ, ಷರತ್ತುಗಳೂ ಅನ್ವಯ!
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಬೀಳೋಕೆ ಸಿದ್ದರಾಮಯ್ಯ ಅವರೇ ಕಾರಣ ಎಂಬ ಆರೋಪ ಕೆಲವು ತಿಂಗಳುಗಳ ಹಿಂದೆ ಕಾಂಗ್ರೆಸ್ ಪಾಳೆಯದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಆದರೆ ಸಿದ್ದರಾಮಯ್ಯ ಅವರ ಮೇಲಿನ ಆರೋಪಗಳನ್ನೆಲ್ಲ ಪಕ್ಕಕ್ಕಿಟ್ಟು ಹೈಕಮಾಂಡ್ ಕೊನೆಗೂ ಅವರಿಗೇ ಪ್ರತಿಪಕ್ಷ ಅಧ್ಯಕ್ಷ ಸ್ಥಾನವನ್ನು ನೀಡಿದೆ.
ಈ ಮೂಲಕ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಅನಿವಾರ್ಯ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಆದರೆ ಪಕ್ಷದೊಳಗಿನ ಬಿರುಕಿಗೆ ಕಾರಣಿಕರ್ತ ಎಂಬ ಆರೋಪ ಇದ್ದಾಗಿಯೂ, ಸರ್ಕಾರ ಬೀಳುವುದಕ್ಕೂ ಪರೋಕ್ಷ ಕಾರಣ ಎಂಬ ಮಾತು ಕೇಳಿಬಂದರೂ ಸಿದ್ದರಾಮಯ್ಯ ಅವರನ್ನೇ ಹೈಕಮಾಂಡ್ ನೆಚ್ಚಿಕೊಂಡಿದ್ದೇಕೆ? ಸುಖಾಸುಮ್ಮನೆ ಸಿದ್ದರಾಮಯ್ಯ ಅವರಿಗೆ ವಿಪಕ್ಷ ಅಧ್ಯಕ್ಷ ಪಟ್ಟವನ್ನು ನೀಡಲಾಗಿದೆಯೇ?
ಸದನದಲ್ಲಿ ರಾಜಾಹುಲಿ ಬಿಎಸ್ವೈ ಗೆ ಟಗರು ಸಿದ್ದರಾಮಯ್ಯ ಠಕ್ಕರ್
ಖಂಡಿತ ಇಲ್ಲ, ಮೂಲಗಳ ಪ್ರಕಾರ ಅಧ್ಯಕ್ಷ ಸ್ಥಾನವನ್ನು ನೀಡುವ ಮುನ್ನ ಹೈಕಮಾಂಡ್ ಸುಮಾರು ಚೌಕಾಸಿ ನಡೆಸಿದೆ. ಸಿದ್ದರಾಮಯ್ಯ ಅವರಿಗೆ ಕೆಲವು ಷರತ್ತುಗಳನ್ನೂ ಹಾಕಿದೆ. ಆದ್ದರಿಂದ ಅಧ್ಯಕ್ಷ ಸ್ಥಾನ ಪಡೆದೆ ಎಂದು ಖುಷಿ ಪಡುವ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರಿಲ್ಲ. ಹೈಕಮಾಂಡ್ ಹೇರಿರುವ ಮಣಭಾರದ ಜವಾಬ್ದಾರಿಯನ್ನು ನಿರ್ವಹಿಸುವ ಬಗ್ಗೆ ಸಿದ್ದರಾಮಯ್ಯ ಚಿಂತಿಸಬೇಕಿದೆ.
ಉಪಚುನಾವಣೆಯಲ್ಲಿ ಕನಿಷ್ಠ 12 ಸ್ಥಾನ
ಅಧ್ಯಕ್ಷ ಸ್ಥಾನ ನೀಡುವ ಮುನ್ನ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಹೇರಿದ ಮೊದಲ ಷರತ್ತೆಂದರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ 12 ಸ್ಥಾನಗಳಲ್ಲಾದರೂ ಗೆಲುವು ಸಾಧಿಸಬೇಕು ಎಂಬುದು. ಅದರ ಹೊಣೆ ಸಿದ್ದರಾಮಯ್ಯ ಅವರದು. ಡಿಸೆಂಬರ್ 5 ರಂದು 17 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಡಿಸೆಂಬರ್ 9 ರಂದು ಫಲಿತಾಂಶ ಹೊರಬೀಳಲಿದೆ. ಈ ಬಾರಿ ವಿಧಾನಸಭೆ ಉಪಚುನಾವಣೆ ಕಾಂಗ್ರೆ ಮತ್ತು ಜೆಡಿಎಸ್ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಲಿರುವುದರಿಂದ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಕಾಂಗ್ರೆಸ್ ಗೆ ಸುಲಭವಿಲ್ಲ.
ಪಕ್ಷದ ಒಗ್ಗಟ್ಟು ಕಾಪಾಡುವ ಜವಾಬ್ದಾರಿ!
ಸಿದ್ದರಾಮಯ್ಯ ಅವರಿಂದಲೇ ಪಕ್ಷದ ಒಗ್ಗಟ್ಟು ಒಡೆಯುತ್ತಿದೆ ಎಂಬ ಮಾತು ಕೇಳಿಬಂದ ಹಿನ್ನೆಲೆಯಲ್ಲಿ ಅವರಿಗೇ ಒಗ್ಗಟ್ಟನ್ನು ಕಾಪಾಡುವ ಹೊಣೆಯನ್ನು ಹೈಕಮಾಂಡ್ ನೀಡಿದೆ. ಪಕ್ಷದ ಒಗ್ಗಟ್ಟು ಒಡೆಯುವಲ್ಲಿ ತನ್ನ ಪಾತ್ರವಿಲ್ಲ ಎಂಬುದನ್ನು ಸಾಬೀತುಪಡಿಸಲೂ ಇದು ಸಿದ್ದರಾಮಯ್ಯ ಅವರಿಗೆ ಸಿಕ್ಕ ಸೂಕ್ತ ಅವಕಾಶ.
ವಿಪಕ್ಷ ನಾಯಕನಾಗಿ ಸಿದ್ದರಾಮಯ್ಯ, ಜಿ.ಪರಮೇಶ್ವರ್ ಹೇಳಿದ್ದೇನು?
ಅನರ್ಹ ಶಾಸಕರ ಪ್ರಕರಣಕ್ಕೆ ತಾರ್ತಿಕ ಅಂತ್ಯ ನೀಡುವುದು!
ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದು ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಕಾಂಗ್ರೆಸ್ ನ ಒಟ್ಟು 14 ಶಾಸಕರನ್ನು ಸ್ಪೀಕರ್ ಅನರ್ಹರು ಎಂದು ಘೋಷಿಸಿದ್ದು ಹಳೇ ವಿಷಯ. ಸುಪ್ರೀಂ ಕೋರ್ಟಿನಲ್ಲಿ ಈ ಸಂಬಂಧ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆದರೆ ಅನರ್ಹ ಶಾಸಕರಲ್ಲಿ ಬಹುಪಾಲು ಶಾಸಕರು ಸಿದ್ದರಾಮಯ್ಯ ಬಣದೊಂದಿಗೇ ಮೊದಲು ಗುರುತಿಸಿಕೊಂಡಿದ್ದರಿಂದ ಆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡುವ ಹೊಣೆ ಸಿದ್ದರಾಮಯ್ಯ ಅವರ ಮೇಲಿದೆ. ಅವರನ್ನು ನಾವು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಖಡಕ್ ಆಗಿ ಹೇಳಿದ್ದಾರೆ. ಆದರೆ ಈ ಎಲ್ಲ ಅನರ್ಹ ಶಾಸಕರಿಗೂ ಚುನಾವನೆಗೆ ಸ್ಪರ್ಧಿಸಲು ಅವಕಾಶ ಸಿಕ್ಕು, ಬಿಜೆಪಿಯಿಂದ ಸ್ಪರ್ಧಿಸಿದರೆ ಸಿದ್ದರಾಮಯ್ಯ ಅವರು ತಮ್ಮ ಶಿಷ್ಯರ ವಿರುದ್ಧವೇ ಪ್ರಚಾರ ಮಾಡಬೇಕಾಗುತ್ತದೆ. ಪಕ್ಷಕ್ಕಾಗಿ ವೈಯಕ್ತಿಕ ಹಿತಾಸಕ್ತಿಯನ್ನು ಮರೆತು ಕೆಲಸ ಮಾಡಬೇಕು ಎಂಬ ಷರತ್ತನ್ನೂ ಹೈಕಮಾಂಡ್ ಹಾಕಿದೆ.
ಡಿಕೆಶಿ ಇಲ್ಲದಿದ್ದುದು ಸಿದ್ದರಾಮಯ್ಯಗೆ ವರವಾಯ್ತು!
ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷ ಅಧ್ಯಕ್ಷ ಸ್ಥಾನ ಅನಿರೀಕ್ಷಿತವೇನಲ್ಲ. ರೇಸ್ ನಲ್ಲಿ ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಎಚ್ ಕೆ ಪಾಟೀಲ್ ರಂಥ ಹಿರಿಯರಿದ್ದರೂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಲ್ಲಿ ಒಂದು ಗಟ್ಟಿ ನಾಯಕತ್ವದ ಛಾತಿ ಉಳಿಸಿಕೊಂಡವರು. ಅಹಿಂದ ಖ್ಯಾತಿ, ರಾಜಕೀಯ ಅನುಭವ, ಯಾವುದೇ ವಿಷಯದ ಬಗೆಗೆ ಸೂಕ್ತ ತಯಾರಿಯೊಂದಿಗೇ ಮಾತನಾಡುವ ಸಿದ್ದರಾಮಯ್ಯ ಅವರ ವ್ಯಕ್ತಿತ್ವವೇ ಅವರಿಗೆ ಈ ಸ್ಥಾನವನ್ನು ದೊರಕಿಸಿಕೊಟ್ಟಿದೆ. ಅದರೊಟ್ಟಿಗೆ ಅಕ್ರಮ ಹಣ ವರ್ಗಾವಣೆ ಆರೋಪದಡಿ ಶಾಸಕ ಡಿಕೆ ಶಿವಕುಮಾರ್ ಅವರು ತಿಹಾರ್ ಜೈಲಿನಲ್ಲಿರುವುದು ಸಿದ್ದರಾಮಯ್ಯ ಹಾದಿಯನ್ನು ಸುಲಭವಾಗಿಸಿತು. ಡಿಕೆಶಿ ಇದ್ದಿದ್ದರೆ ಪ್ರತಿಪಕ್ಷ ನಾಯಕ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಡುತ್ತಿದ್ದುದು ಖಂಡಿತ. ಡಿಕೆಶಿ ಅವರು ಕಾಂಗ್ರೆಸ್ ನ ಹಲವು ಸಂಕಷ್ಟಗಳಲ್ಲಿ ಟ್ರಬಲ್ ಶೂಟರ್ ಆಗಿ ಕಾರ್ಯ ನಿರ್ವಹಿಸಿದ್ದರಿಂದ ಹೈಕಮಾಂಡ್ ಅವರನ್ನು ಆ ಸ್ಥಾನಕ್ಕೆ ಸೂಕ್ತ ಎಂದು ನಿರ್ಧರಿಸಿದ್ದರೆ ಅಚ್ಚರಯಿರಲಿಲ್ಲ. ಈ ವಿಷಯದಲ್ಲಿ ಸಾಮರ್ಥ್ಯದೊಂದಿಗೆ ಅದೃಷ್ಟವೂ ಸಿದ್ದರಾಮಯ್ಯ ಅವರ ಕೈಹಿಡಿದಿದೆ!