ಬಿಜೆಪಿ ಸೋಲಿಗೆ ಕಾರಣವಾಗಿದ್ದು ಪ್ರಶಾಂತ್ ಕಿಶೋರ್ ತಂತ್ರ
ಕೋಲ್ಕತಾ, ನವೆಂಬರ್ 30: ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೂರರಲ್ಲಿಯೂ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಪಶ್ಚಿಮ ಬಂಗಾಲದಲ್ಲಿ ಟಿಎಂಸಿ ಪ್ರಾಬಲ್ಯ ಇದ್ದರೂ, ಉಪ ಚುನಾವಣೆ ನಡೆದ ಕ್ಷೇತ್ರಗಳಲ್ಲಿ ಎರಡು ಕಡೆ ಬಿಜೆಪಿ ಹೆಚ್ಚು ಪ್ರಬಲವಾಗಿತ್ತು. ಈ ಎರಡೂ ಕ್ಷೇತ್ರಗಳನ್ನು ಒಳಗೊಂಡಿರುವ ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿಯ ಸಂಸದರೇ ಇದ್ದಾರೆ. ಇದರಲ್ಲಿ ಪಶ್ಚಿಮ ಬಂಗಾಳ ಬಿಜೆಪಿ ಘಟಕ ಅಧ್ಯಕ್ಷರು ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದ ಕ್ಷೇತ್ರವೂ ಇದೆ. 2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಆಘಾತಕಾರಿ ಫಲಿತಾಂಶ ನೀಡುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ಈ ಸೋಲು ಆಘಾತ ನೀಡಿದೆ. ಟಿಎಂಸಿಯ ಈ ಗೆಲುವಿನ ಹಿಂದೆ ಇರುವುದು ಚುನಾವಣಾ ಚಾಣಕ್ಯ ಎಂದೇ ಹೆಸರಾಗಿರುವ ಪ್ರಶಾಂತ್ ಕಿಶೋರ್.
ಉಪ ಚುನಾವಣೆಯಲ್ಲಿಯೂ ದೀದಿ ಪರವಾಗಿ ಚುನಾವಣಾ ತಂತ್ರ ರೂಪಿಸಿದ್ದ ಪ್ರಶಾಂತ್ ಕಿಶೋರ್, ಬೂತ್ ಮಟ್ಟದಲ್ಲಿ ಎನ್ಆರ್ಸಿಯನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧದ ಅಭಿಪ್ರಾಯ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಜತೆಗೆ ಮಮತಾ ಸರ್ಕಾರದ ಯೋಜನೆಗಳ ಕುರಿತು ತಳಮಟ್ಟದ ಪ್ರಚಾರ ನೀಡಿದ್ದರು. ಪ್ರಶಾಂತ್ ಕಿಶೋರ್ ತಂತ್ರಗಾರಿಗೆ ಗುರುವಾರದ ಫಲಿತಾಂಶದಲ್ಲಿ ಟಿಎಂಸಿ ಕ್ಲೀನ್ ಸ್ವೀಪ್ ಸಾಧಿಸಲು ನೆರವಾಯಿತು.
ಬಿಜೆಪಿಗೆ ಪೆಟ್ಟು ಕೊಟ್ಟ ಎನ್ಆರ್ಸಿ: ಬಂಗಾಳದ ಮೂರೂ ಕ್ಷೇತ್ರಗಳಲ್ಲಿ ಸೋಲಿನ ಆಘಾತ
ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 42 ಕ್ಷೇತ್ರಗಳ ಪೈಕಿ 18 ರಲ್ಲಿ ಬಿಜೆಪಿ ಜಯಗಳಿಸಿದ್ದು ಚುನಾವಣಾ ಪಂಡಿತರಿಗೆ ಅಚ್ಚರಿ ಮೂಡಿಸಿತ್ತು. ಉಪ ಚುನಾವಣೆಯಲ್ಲಿ ಬಿಜೆಪಿ ಸಂಘಟನಾತ್ಮಕ ಪ್ರಚಾರ ಹಿನ್ನಡೆ ಅನುಭವಿಸಿತ್ತು. ಎನ್ಆರ್ಸಿಯ ವಿರುದ್ಧ ನಡೆಸಿದ ತೀವ್ರ ಪ್ರಚಾರ ಬಿಜೆಪಿಗೆ ಹೊಡೆತ ನೀಡಿತು.
ಬಿಜೆಪಿಯ ಸೋಲಿಗೆ ಕೆಲವು ಕಾರಣಗಳು
ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದವರು ಉಪ ಚುನಾವಣೆಯಲ್ಲಿ ಕೇಸರಿ ಪಕ್ಷಕ್ಕೆ ಬೆನ್ನುತೋರಿಸಿದರು. ಅಭ್ಯರ್ಥಿಗಳ ಆಯ್ಕೆಯಲ್ಲಿ ಮಾಡಿದ ತಪ್ಪು ಪಕ್ಷದ ಹಿರಿಯ ಮತ್ತು ಪ್ರಮುಖರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಇದರ ಜತೆಗೆ ಕೆಲವು ನಾಯಕರ ಉಗ್ರ ಹೇಳಿಕೆಗಳು ಬಿಜೆಪಿ ಪರ ಒಲವು ಹೊಂದಿದ್ದ ಮತದಾರರು ತಮ್ಮ ಮನಸ್ಸು ಬದಲಿಸುವಂತೆ ಮಾಡಿದವು. ಇದರ ಪರಿಣಾಮವೇ ಖಾರಗ್ಪುರ ಸಾದರ್ ಮತ್ತು ಕಾಲಿಯಾಗಂಜ್ ಎಂಬ ತನ್ನ ಭದ್ರಕೋಟೆಗಳಲ್ಲಿಯೇ ಸೋಲಿನ ಆಘಾತ ಅನುಭವಿಸಿದ್ದು.
ಕಾಂಗ್ರೆಸ್-ಎಡಪಕ್ಷದ ಮತಗಳು ಟಿಎಂಸಿಗೆ
ವಿಶ್ಲೇಷಕರ ಪ್ರಕಾರ ಕಾಲಿಯಾಗಂಜ್ ಮತ್ತು ಕರೀಮ್ಪುರಗಳಲ್ಲಿ ಕಾಂಗ್ರೆಸ್-ಎಡಪಕ್ಷ ಮೈತ್ರಿಕೂಟದ ಪ್ರಭಾವದ ಮತಗಳನ್ನೂ ಸೆಳೆದುಕೊಳ್ಳುವಲ್ಲಿ ತೃಣಮೂಲ ಕಾಂಗ್ರೆಸ್ ಎನ್ಆರ್ಸಿಯೊಂದನ್ನೇ ಮುಂದಿಟ್ಟುಕೊಂಡು ನೀಡಿದ ಮಾಸ್ಟರ್ ಸ್ಟ್ರೋಕ್ ನೆರವಾಗಿದೆ.
ಬಾಂಗ್ಲಾ ವಲಸಿಗರಿಗೆ ಭೂಮಿ ನೀಡಿದ ದೀದಿ ಸರ್ಕಾರ
ಎಡಪಕ್ಷಗಳು ಮತ್ತು ಕಾಂಗ್ರೆಸ್ನ ದೊಡ್ಡ ಮಟ್ಟದ ಮತಗಳು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪಾಲಾಗಿದ್ದವು. ಉಪ ಚುನಾವಣೆಯಲ್ಲಿ ಈ ಮತಗಳು ತೃಣಮೂಲ ಕಾಂಗ್ರೆಸ್ ಕಡೆ ಹರಿದವು. ಇದರ ಪರಿಣಾಮವಾಗಿ ಮೈತ್ರಿಕೂಟದ ಅಭ್ಯರ್ಥಿಗಳು ಎಲ್ಲ ಕ್ಷೇತ್ರಗಳಲ್ಲಿಯೂ ಠೇವಣಿಯನ್ನೂ ಕಳೆದುಕೊಂಡರು.
ಕಣಕ್ಕೇ ಇಳಿಯದ ದೀದಿ
ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇರ ಪ್ರಚಾರ ಕಣಕ್ಕೂ ಇಳಿದಿರಲಿಲ್ಲ. ಸುದ್ದಿಗೋಷ್ಠಿ ಮತ್ತು ಬೇರೆ ಸಮಾರಂಭಗಳಲ್ಲಿನ ತಮ್ಮ ಭಾಷಣದ ವೇಳೆ ಅವರು ಮುಖ್ಯವಾಗಿ ಎನ್ಆರ್ಸಿಯನ್ನೇ (ರಾಷ್ಟ್ರೀಯ ಪೌರತ್ವ ನೋಂದಣಿ) ಮುಂದಿಡುತ್ತಿದ್ದರು. ಅದೊಂದು ದೊಡ್ಡ ರಾಕ್ಷಸೀಯ ಯೋಜನೆಯಾಗಿದ್ದು, ರಾಜ್ಯದಲ್ಲಿ ಅದರ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಪದೇ ಪದೇ ಹೇಳಿದ್ದರು.
ರಾಜ್ಯ ಬಿಜೆಪಿ ನಾಯಕರು ಇಕ್ಕಟ್ಟಿನಲ್ಲಿ
ಇನ್ನೊಂದೆಡೆ ಗೃಹ ಸಚಿವ ಅಮಿತ್ ಶಾ, ಎನ್ಆರ್ಸಿಯನ್ನು ಜಾರಿಗೊಳಿಸಲು ತಮ್ಮ ಪಕ್ಷ ಬದ್ಧ ಎಂಬುದನ್ನು ಸಾರಿ ಸಾರಿ ಹೇಳಿದರು. ಎನ್ಆರ್ಸಿಯ ಕಾರಣಕ್ಕೇ ಭಯಗೊಂಡ ಅನೇಕರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ವರದಿಯಾಗಿವೆ. ಇಂತಹ ಸಂದರ್ಭದಲ್ಲಿ ಎನ್ಆರ್ಸಿಯನ್ನೇ ಪ್ರಮುಖ ವಿಚಾರವನ್ನಾಗಿಸಿಕೊಂಡಿದ್ದು ಮತದಾರರ ಮೇಲೆ ಪರಿಣಾಮ ಬೀರಿತು. ಈ ವಿವಾದ ಗಂಭೀರ ಹಾನಿಯುಂಟುಮಾಡುತ್ತಿದೆ ಎಂಬುದನ್ನು ಅರಿತ ಬಿಜೆಪಿಯ ರಾಜ್ಯ ನಾಯಕರು ಉದ್ದೇಶಪೂರ್ವಕವಾಗಿಯೇ ಅದರ ಬಗ್ಗೆ ತಮ್ಮ ಪ್ರಚಾರಗಳಲ್ಲಿ ಮೃದು ಧೋರಣೆ ತಾಳಿದರು. ಎನ್ಆರ್ಸಿ ಮಸೂದೆ ಪಕ್ಷದ ಉದ್ದೇಶ ಎಂಬುದನ್ನು ಮುಂದಿಟ್ಟುಕೊಂಡು ಬಿಜೆಪಿ ಪ್ರಚಾರ ನಡೆಸಿದ್ದರೆ, ಟಿಎಂಸಿ ಅದರ ವಿರುದ್ಧ ಪ್ರಚಾರ ನಡೆಸಿತು.
ವಿಡಿಯೋ: ಚುನಾವಣಾ ಅಭ್ಯರ್ಥಿಗೆ ಒದ್ದ ವಿಪಕ್ಷದ ಕಾರ್ಯಕರ್ತರು
ಎನ್ಆರ್ಸಿ ಮೂಲಕವೇ ಆಕ್ರಮಣ ಮಾಡಿದರು
ಕಾಲಿಯಾಗಂಜ್ನಲ್ಲಿ ಸೋಲು ಅನುಭವಿಸಿದ ಬಿಜೆಪಿ ಅಭ್ಯರ್ಥಿ ಕಮಲ್ ಸರ್ಕಾರ್ ಇದನ್ನು ಒಪ್ಪಿಕೊಂಡಿದ್ದರು. 'ಅವರು (ಟಿಎಂಸಿ) ನಮಗೆ ಎನ್ಆರ್ಸಿ ವಿಚಾರದಲ್ಲಿಯೇ ಪೆಟ್ಟು ನೀಡಿದರು. ಅದನ್ನು ಎದುರಿಸಲು ನಮಗೆ ಸಾಧ್ಯವಾಗಲಿಲ್ಲ. ಅದು ನಮ್ಮ ದೌರ್ಬಲ್ಯ. ಅದರ ಹೊರತಾಗಿ ನಮಗೆ ಬೇರೆ ಯಾವ ದೌರ್ಬಲ್ಯವೂ ಇರಲಿಲ್ಲ. ಆದರೆ ಅವರು ಅದನ್ನು ಅದರ ಮೂಲಕವೇ ದಾಳಿ ಮಾಡಿದರು. ಜನರಲ್ಲಿ ಅದರ ಬಗ್ಗೆ ಭಯ ಹುಟ್ಟಿಸಿದರು' ಎಂದು ಸರ್ಕಾರ್ ಹೇಳಿದರು. ಕೇಂದ್ರ ಸಚಿವ ದೇಬೋಶ್ರೀ ಚೌಧುರಿ ಲೋಕಸಭೆ ಚುನಾವಣೆಯಲ್ಲಿ ಇಲ್ಲಿ 57,000 ಮತಗಳಿಂದ ಗೆದ್ದಿದ್ದರು. ಆ ಕ್ಷೇತ್ರದಲ್ಲಿ ಸರ್ಕಾರ್ 2,000 ಮತಗಳಿಂದ ಸೋಲು ಕಂಡಿದ್ದಾರೆ.
ಎನ್ಆರ್ಸಿ ವಿರುದ್ಧ ಅಭಿಪ್ರಾಯ ಬಿತ್ತಿದ ಟಿಎಂಸಿ
ಎನ್ಆರ್ಸಿ ಅತ್ಯಂತ ಅಪಾಯಕಾರಿ ಎಂಬ ಭಯವನ್ನು ಜನರಲ್ಲಿ ಬಿತ್ತುವಲ್ಲಿ ಟಿಎಂಸಿ ಯಶಸ್ವಿಯಾಯಿತು. ಎಲ್ಲ ಕ್ಷೇತ್ರಗಳ ಬೂತ್ ಮಟ್ಟದಲ್ಲಿಯೂ ಇದು ವ್ಯವಸ್ಥಿತವಾಗಿ ನಡೆಯಿತು. ಅದರಲ್ಲಿಯೂ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ಕರೀಂಪುರದಲ್ಲಿ ಎನ್ಆರ್ಸಿ ವಿರುದ್ಧ ಭೀತಿ ಮೂಡಿಸುವುದು ಕಷ್ಟವಾಗಲಿಲ್ಲ. ಈ ಕ್ಷೇತ್ರದ ಮುಸ್ಲಿಂ ಮತದಾರರ ಪ್ರಾಬಲ್ಯವಿರುವ ಘಿಯಾಘಟ್ ಇಸ್ಲಾಂಪುರ್ನ ಎರಡು ಬೂತ್ಗಳಲ್ಲಿ ಬಿಜೆಪಿ ಅಭ್ಯರ್ಥಿ ಜಯ್ ಪ್ರಕಾಶ್ ಮಜುಂದಾರ್ ಪಡೆದ ಮತಗಳು ಕೇವಲ 2 ಮತ್ತು 38 ಎಂದರೆ ಎನ್ಆರ್ಸಿ ಪರಿಣಾಮ ದಟ್ಟವಾಗಿರುವುದು ತಿಳಿಯುತ್ತದೆ.
ಬಿಜೆಪಿಯೊಳಗಿನ ಬಂಡಾಯದ ಲಾಭ
ರಾಜಕೀಯ ವಿಶ್ಲೇಷಕ ಉದಯನ್ ಬಂಡೋಪಾಧ್ಯಾಯ ಪ್ರಕಾರ ಖಾರಗ್ಪುರ ಕ್ಷೇತ್ರದಲ್ಲಿ ಬಿಜೆಪಿಯೊಳಗಿನ ಭಿನ್ನಾಭಿಪ್ರಾಯವನ್ನು ಬಳಸಿಕೊಂಡ ಪ್ರಶಾಂತ್ ಕಿಶೋರ್, ಅದಕ್ಕೆ ವಿರುದ್ಧವಾಗಿ ಟಿಎಂಸಿಯ ಒಗ್ಗಟ್ಟಿನ ಹೋರಾಟಕ್ಕೆ ವೇದಿಕೆ ಸಿದ್ಧಪಡಿಸಿದ್ದರು. ಬಿಜೆಪಿ ರಾಜ್ಯದ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಅವರು ಲೋಕಸಭೆಗೆ ಆಯ್ಕೆಯಾಗಿದ್ದರಿಂದ ತೆರವುಗೊಂಡಿದ್ದ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಇಲ್ಲಿಗೆ ಪ್ರೇಮ್ ಚಂದ್ರ ಝಾ ಅವರನ್ನು ಅಭ್ಯರ್ಥಿಯನ್ನಾಗಿ ದಿಲೀಪ್ ಘೋಷ್ ಅವರೇ ಆಯ್ಕೆ ಮಾಡಿದ್ದರು. ಇದರಿಂದ ಬಿಜೆಪಿ ಪಾಳೆಯದೊಳಗೇ ಅಸಮಾಧಾನ ಭುಗಿಲೆದ್ದಿತ್ತು. ಸ್ಥಳೀಯ ಮುಖಂಡ ಪ್ರದೀಪ್ ಪಟ್ನಾಯಕ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಅವರು 752 ಮತಗಳನ್ನಷ್ಟೇ ಪಡೆದಿದ್ದರೂ, ಪಕ್ಷದೊಳಗಿನ ಗೊಂದಲ, ಭಿನ್ನಾಭಿಪ್ರಾಯಗಳು ಝಾ ಅವರ ಸೋಲಿಗೆ ಕಾರಣವಾಯಿತು.
ಪ್ರಶಾಂತ್ ಕಿಶೋರ್ಗೆ ಗೆಲುವಿನ ಶ್ರೇಯಸ್ಸು
ಲೋಕಸಭೆ ಚುನಾವಣೆ ಫಲಿತಾಂಶ ಬರುತ್ತಿದ್ದಂತೆಯೇ ರಾಜ್ಯದಲ್ಲಿ ಟಿಎಂಸಿ ಹಿನ್ನಡೆಗೆ ಕಾರಣಗಳನ್ನು ಅರಿಯಲು ಪ್ರಶಾಂತ್ ಕಿಶೋರ್ ನೇತೃತ್ವದಲ್ಲಿ ಸಮೀಕ್ಷೆಗಳು ನಡೆದಿದ್ದವು. ಅವರು ತಪ್ಪುಗಳನ್ನು ಗುರುತಿಸಿದರು. 'ದೀದಿ ಕೆ ಬೋಲೋ' ಕಾರ್ಯಕ್ರಮ ಆರಂಭಿಸಲು ಸಲಹೆ ನೀಡಿದರು. ಜತೆಗೆ ಪ್ರಚಾರದ ರೂಪುರೇಷೆಯನ್ನು ಸಿದ್ಧಪಡಿಸಿದರು. 'ಅತ್ಯಂತ ಸುವ್ಯವಸ್ಥಿತವಾಗಿ ಪ್ರಚಾರ ನಡೆಸಿದರು. ಪ್ರತಿ ಮತದಾರನ ಬಳಿಗೂ ಹೋದರು. ಪ್ರಶಾಂತ್ ಕಿಶೋರ್ ಅವರ ಹುಡುಗರು ಬೂತ್ ಮಟ್ಟದಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸಿದರು. ಅವರು ಅಲ್ಲಿನ ಒಳಹುಗಳನ್ನು ಹೆಕ್ಕಿ ತಂದರು. ಅವರ ಸಲಹೆಯನ್ನು ನಾವು ಪಾಲಿಸಿದೆವು' ಎಂದು ಕಾಲಿಯಾಗಂಜ್ನಲ್ಲಿನ ತಮ್ಮ ಗೆಲುವಿನ ಶ್ರೇಯಸ್ಸು ಪ್ರಶಾಂತ್ ಕಿಶೋರ್ ಅವರಿಗೆ ಸೇರುತ್ತದೆ ಎನ್ನುತ್ತಾರೆ ಟಿಎಂಸಿ ಅಭ್ಯರ್ಥಿ ತಪನ್ ದೇಬ್ ಸಿಂಘಾ.
ಬಿಜೆಪಿಗೆ ಎನ್ಆರ್ಸಿಯೇ ಎರವಾಗಬಹುದು...
ಈ ಚುನಾವಣೆಯ ಫಲಿತಾಂಶವು ಪ್ರಮುಖ ಪಕ್ಷಗಳಿಗೆ ಒಂದು ನಿಚ್ಚಳ ಸಂದೇಶ ರವಾನಿಸಿದೆಯೇ? ಮುಂಬರುವ ಚುನಾವಣೆಯ ಮೇಲೆ ಇದು ಪರಿಣಾಮ ಬೀರುತ್ತದೆಯೇ? 'ಒಂದು ಸಂಗತಿಯಂತೂ ಸ್ಪಷ್ಟ. ಜನರು ಎನ್ಆರ್ಸಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಬಿಜೆಪಿ ಮುಂದೆಯೂ ಅದರಲ್ಲಿ ಮುಂದುವರಿಯುತ್ತೇನೆ ಎಂದರೆ ಅವರು ಅದನ್ನು ತಮ್ಮ ನೆಲೆಯಲ್ಲಿ ಮಾತ್ರ ಮಾಡಬಹುದು. ಆದರೆ ಅದರ ಪರಿಣಾಮವನ್ನು ಹೇಳಲು ಸಾಧ್ಯವಿಲ್ಲ. ಈ ಅನಿಶ್ಚಿತತೆ ಕಾಲಘಟ್ಟದಲ್ಲಿ ಬೇರೆ ಯಾವುದೋ ಹೊಸ ವಿವಾದವೂ ಎನ್ಆರ್ಸಿಯ ಜಾಗವನ್ನು ಆಕ್ರಮಿಸಿಕೊಳ್ಳಬಹುದು' ಎಂದು ಬಂಡೋಪಾಧ್ಯಾಯ ಹೇಳುತ್ತಾರೆ.