ಪಶ್ಚಿಮ ಬಂಗಾಳ: ಹಿಂಬದಿ ಸೀಟಲ್ಲಿ ಕೂರಲು ಕಾಂಗ್ರೆಸ್ ತವಕ
ಕೋಲ್ಕತಾ, ಸೆಪ್ಟೆಂಬರ್ 12: ಪಶ್ಚಿಮ ಬಂಗಾಳ ಕಾಂಗ್ರೆಸ್ ಘಟಕದ ಅಧ್ಯಕ್ಷರನ್ನಾಗಿ ಅಧೀರ್ ರಂಜನ್ ಅವರನ್ನು ನೇಮಿಸುವ ಮೂಲಕ ಅಧ್ಯಕ್ಷೆ ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ ಮತ್ತು ನರೇಂದ್ರ ಮೋದಿ ನಡುವಿನ ಪ್ರತಿಷ್ಠಿತ ಸಂಘರ್ಷದ ಮಧ್ಯೆ ತಮ್ಮ ಅಸ್ತಿತ್ವ ಕಂಡುಕೊಳ್ಳುವ ಭರವಸೆ ಮರಳಿ ಪಡೆದಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಟಿಎಂಸಿ ಪೈಪೋಟಿಯ ನಡುವೆ ಪಶ್ಚಿಮ ಬಂಗಾಳದಲ್ಲಿ ನಜ್ಜುಗುಜ್ಜಾದ ಪಕ್ಷವೆಂದರೆ ಕಾಂಗ್ರೆಸ್. ಇಷ್ಟೆಲ್ಲ ಪೈಪೋಟಿಯ ಮಧ್ಯೆ ಮುರ್ಷಿದಾಬಾದ್ ಲೋಕಸಭೆ ಕ್ಷೇತ್ರದಲ್ಲಿ ತಮ್ಮ ಸೀಟನ್ನು ಉಳಿಸಿಕೊಳ್ಳುವ ಮೂಲಕ ಗಮನ ಸೆಳೆದವರು ಅಧೀರ್ ರಂಜನ್. ಈಗ ಪಶ್ಚಿಮ ಬಂಗಾಳ ವಿಧಾನಸಭೆಗೆ ಸಿದ್ಧತೆ ನಡೆಸಲು ಅಧೀರ್ ರಂಜನ್ ಅವರಿಗೆ ರಾಜ್ಯದ ಜವಾಬ್ದಾರಿ ನೀಡಿರುವುದು ಕಾಂಗ್ರೆಸ್ ಪಾಳೆಯಕ್ಕೆ ಒಳ್ಳೆಯ ನಡೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಟು ಟೀಕಾಕಾರರಾಗಿರುವ ಅಧೀರ್ ರಂಜನ್, ಆಡಳಿತಾರೂಢ ಟಿಎಂಸಿ ಹಾಗೂ ಅದಕ್ಕೆ ತೀವ್ರ ಪೈಪೋಟಿ ನೀಡುವ ನಿರೀಕ್ಷೆ ಹೊಂದಿರುವ ಬಿಜೆಪಿ ನಡುವಣ ಪೈಪೋಟಿಯಲ್ಲಿ ಕಾಂಗ್ರೆಸ್ ಮತಗಳನ್ನು ಹೆಚ್ಚಿಸುವುದರತ್ತ ಪ್ರಭಾವಿ ನಾಯಕ ಅಧೀರ್ ರಂಜನ್ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಪಕ್ಷದ ನಾಯಕರಲ್ಲಿದೆ.
ಸೋನಿಯರಿಂದ ಅಚ್ಚರಿಯ ನಡೆ, ಬಂಗಾಳಕ್ಕೆ ಅಧೀರ ಅಧ್ಯಕ್ಷರಾಗಿದ್ದು ಹೇಗೆ?
2014ರ ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ 34 ಸೀಟುಗಳನ್ನು ಗೆದ್ದಿದ್ದರೆ, 2019ರಲ್ಲಿ ಕೇವಲ 22 ಸೀಟುಗಳಲ್ಲಿ ಗೆದ್ದಿತ್ತು. 12 ಸೀಟುಗಳನ್ನು ಕಳೆದುಕೊಂಡಿದ್ದರೂ ಶೇ 43ರಷ್ಟು ಮತಗಳನ್ನು ಪಡೆದುಕೊಂಡಿತ್ತು. ಏಕೆಂದರೆ ಮುಸ್ಲಿಮರ ಮತಗಳ ಧ್ರುವೀಕರಣವಾಗಿತ್ತು. ಕಾಂಗ್ರೆಸ್ ಸೀಟುಗಳು ನಾಲ್ಕರಿಂದ ಎರಡಕ್ಕೆ ಇಳಿದಿದೆ. ಮುಂದೆ ಓದಿ.
ಶೇಕಡಾವಾರು ಮತ ಹಂಚಿಕೆ
2016ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಶೇ 10.2ರಷ್ಟು ಮತ ಪಡೆದಿದ್ದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಶೇ 40.3ಕ್ಕೆ ಏರಿತ್ತು. ಏಕೆಂದರೆ ಕಾಂಗ್ರೆಸ್ ಮತ್ತು ಎಡಪಕ್ಷಗಳ ಮತಗಳು ಬಿಜೆಪಿಯ ಪಾಲಾಗಿದ್ದವು. ಕಾಂಗ್ರೆಸ್ ಶೇ 7.3ರಷ್ಟು ಮತಗಳನ್ನು ಕಳೆದುಕೊಂಡಿತ್ತು.
2011 ರಿಂದ 2016ವಿಧಾನಸಭೆ ಚುನಾವಣೆ ವೇಳೆಗೆ ಕಾಂಗ್ರೆಸ್ನ ಮತಗಳಿಗೆ ಶೇ 8.91ರಿಂದ ಶೇ 12.3ಕ್ಕೆ ಏರಿಕೆಯಾಗಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಶೇ 9.6ರಷ್ಟು ಕುಸಿತವಾಗಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಶೇ 5ರಷ್ಟು ಮತಗಳನ್ನಷ್ಟೇ ಪಡೆದಿತ್ತು.
ಸಿಪಿಎಂ ಜತೆ ಕಾಂಗ್ರೆಸ್ ಮೈತ್ರಿ
2021ರ ಬಂಗಾಳ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಕೂಡ ಇಲ್ಲ. ಜೂನ್ನಲ್ಲಿ ಸಭೆ ನಡೆಸಿದ್ದ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಬೂತ್ ಮಟ್ಟದಿಂದ ಜತೆಯಾಗಿ ಮೈತ್ರಿ ಮಾಡಿಕೊಂಡು ಸಂಘಟನೆ ಮಾಡುವ ತೀರ್ಮಾನಕ್ಕೆ ಬಂದಿವೆ. ಸಿಪಿಐಎಂ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಅಧೀರ್ ರಂಜನ್ ಸಹಮತ ಹೊಂದಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅಧೀರ್ ಅವರಿಗೆ ಎದುರಾಳಿಯಾಗಿ ಸಿಪಿಎಂ ಅಭ್ಯರ್ಥಿಯನ್ನು ನಿಲ್ಲಿಸಿರಲಿಲ್ಲ. ಮಮತಾ ವಿರೋಧಿಯಾಗಿರುವ ಅಧೀರ್ ಅವರಿಗೆ ತಮ್ಮ ಗುರಿ ಈಡೇರಿಸಲು ಇದು ನೆರವಾಗಲಿದೆ. ಆದರೆ ಸೋನಿಯಾ ಗಾಂಧಿ ಅವರಿಗೆ ಮುಖ್ಯ ಗುರಿ ಬಿಜೆಪಿಯೇ ವಿನಾ ಮಮತಾ ಬ್ಯಾನರ್ಜಿ ಅಲ್ಲ.
ಮಮತಾ ಬ್ಯಾನರ್ಜಿ ವಿರುದ್ಧ ಅಲ್ಲ
ಬಿಜೆಪಿ ವಿರುದ್ಧದ ರಾಜ್ಯ ಮತ್ತು ಕೇಂದ್ರ ಮಟ್ಟದ ವಿವಿಧ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವಂತೆ ಮಮತಾ ಬ್ಯಾನರ್ಜಿ ಅವರಿಗೆ ಸ್ವತಃ ಸೋನಿಯಾ ಬೆಂಬಲ ನೀಡಿದ್ದಾರೆ. ಹೀಗಾಗಿ ಇಬ್ಬರ ಒಡನಾಟದ ಬಗ್ಗೆ ಅಧೀರ್ ಹೆಚ್ಚು ಮಾತನಾಡುವುದಿಲ್ಲ. ಅಧೀರ್ ನೇಮಕಾತಿಯು ಮಮತಾ ಬ್ಯಾನರ್ಜಿಗೆ ಅನುಕೂಲ ಮಾಡಿಕೊಡುವಂತೆಯೇ ಇದೆ. ಏಕೆಂದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ದೊರೆತ ಹೆಚ್ಚುವರಿ ಶೇ 30.1 ಮತಗಳು ಎಡಪಕ್ಷ ಹಾಗೂ ಕಾಂಗ್ರೆಸ್ಗೆ ಸೇರಿದ್ದವು. ಅಧೀರ್ ನೇತೃತ್ವದಲ್ಲಿ ಸಿಪಿಎಂ ಜತೆಗೂಡಿ ಅಷ್ಟು ಮತಗಳನ್ನು ಎಳೆದುಕೊಂಡರೂ ಮಮತಾಗೆ ಲಾಭವಾಗಲಿದೆ.
ತ್ರಿಕೋನ ಸ್ಪರ್ಧೆ
ಕಾಂಗ್ರೆಸ್ ಮತ್ತು ಸಿಪಿಎಂ ಜತೆಗೂಡಿ ವಿಧಾನಸಭೆ ಚುನಾವಣೆ ಎದುರಿಸುವುದರಿಂದ ಅವರ ಮತಗಳಿಗೆ ಶೇಕಡಾವಾರು ಸಹಜವಾಗಿಯೇ ಏರಿಕೆಯಾಗಲಿದೆ. ಹೀಗಾಗಿ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವುದು ತ್ರಿಕೋನ ಸ್ಪರ್ಧೆ. ಕಾಂಗ್ರೆಸ್ ತೊರೆದು ಬಿಜೆಪಿ ಮತ್ತು ಟಿಎಂಸಿ ಸೇರಿಕೊಂಡವರನ್ನು ಮರಳಿ ಪಕ್ಷಕ್ಕೆ ಸೇರಿಸುವುದು ತಮ್ಮ ಗುರಿ ಎಂದು ಅಧೀರ್ ಹೇಳಿಕೊಂಡಿದ್ದಾರೆ.
ಪಕ್ಷಕ್ಕೆ ಪುನಶ್ಚೇತನ ಗುರಿ
ಅಧೀರ್ ಅವರ ನಾಯಕತ್ವದಲ್ಲಿ 2016ರ ಚುನಾವಣೆಯಲ್ಲಿ 294 ಸೀಟುಗಳ ಪೈಕಿ 44 ಸೀಟುಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಎಡ ಮೈತ್ರಿಕೂಟ 32 ಸೀಟುಗಳನ್ನು ಗೆದ್ದಿತ್ತು. ಬಿಜೆಪಿ ಕೇವಲ ಮೂರು ಸೀಟುಗಳನ್ನು ಗೆದ್ದುಕೊಂಡಿತ್ತು. 2021ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವುದು ಕಾಂಗ್ರೆಸ್ಗೆ ದೂರದ ಕನಸಿನ ಮಾತು. ಆದರೆ ಬಿಜೆಪಿಯ ಪ್ರಾಬಲ್ಯವನ್ನು ಅಲ್ಲಿ ಮಟ್ಟ ಹಾಕುವುದೇ ಅವರ ಮೂಲ ಮಂತ್ರ. ಜತೆಗೆ ಕಾಂಗ್ರೆಸ್ ಮತಗಳಿಕೆಯನ್ನು ಹೆಚ್ಚಿಸುವ ಮೂಲಕ ಅದಕ್ಕೆ ಕಳೆದುಕೊಂಡ ಗೌರವವನ್ನು ಮರಳಿ ತರುವುದು ಅಧೀರ್ ಅವರಿಂದ ಸಾಧ್ಯ ಎಂದು ಕಾಂಗ್ರೆಸ್ ನಂಬಿದೆ.