ಶುಕ್ರವಾರ ರಾತ್ರಿಯಿಂದ, ಸೋಮವಾರ ಮುಂಜಾನೆಯವರೆಗೆ ದಿನಗೂಲಿಯವರು ಏನು ಮಾಡಬೇಕು?
ದೇಶದ ವಿವಿಧ ರಾಜ್ಯಗಳಲ್ಲಿ ಕೊರೊನಾ ಮೂರನೇ ಅಲೆ/ ಓಮಿಕ್ರಾನ್ ನಿಯಂತ್ರಣಕ್ಕೆ ಕಠಿಣ ಸೂತ್ರವನ್ನು ಜನರ ಮೇಲೆ ಪ್ರಯೋಗಿಸಲಾಗುತ್ತಿದೆ. ರಾಜಕೀಯ ಸಮಾರಂಭಗಳಿಗೆ, ರ್ಯಾಲಿಗಳಲ್ಲಿ, ರಾಜಕೀಯ ಮುಖಂಡರುಗಳಿಗೆ ವೈರಸ್ ಅಂಟುವುದಿಲ್ಲವೇ ಎನ್ನುವ ಸಾರ್ವಜನಿಕರ ಪ್ರಶ್ನೆಗಳಿಗೆ ಜನ ಪ್ರತಿನಿಧಿಗಳಲ್ಲಿ ಉತ್ತರವಿರುವುದಿಲ್ಲ.
ಕೊರೊನಾ ಹಿಮ್ಮಟ್ಟಿಸುವ ಮತ್ತೊಂದು ಹೆಜ್ಜೆಯಾಗಿ ಈ ವಾರಾಂತ್ಯದಿಂದ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ರಾಜ್ಯದ ಎಷ್ಟೋ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಅತ್ಯಂತ ನಗಣ್ಯವಾಗಿದ್ದರೂ, ಅಲ್ಲಿನ ಜನರಿಗೆ ಕರ್ಫ್ಯೂ ಶಿಕ್ಷೆ ವಿಧಿಸಲಾಗಿದೆ.
ಕೊರೊನಾ ಹೆಚ್ಚಾಗುತ್ತಿರುವುದು ಯಾಕೆ? ಸತ್ಯ ಬಿಚ್ಚಿಟ್ಟ ಡಾ.ರಾಜು ಕೃಷ್ಣಮೂರ್ತಿ
ಓಮಿಕ್ರಾನ್ ನಿಂದ ಭಯ ಪಡುವಂತದ್ದು ಏನೂ ಇಲ್ಲ ಎಂದು ಹೇಳುತ್ತಿದ್ದ ಸರಕಾರ ಈಗ ಕರ್ಫ್ಯೂ ನಿಯಮವನ್ನು ಜಾರಿಗೆ ತಂದಿದೆ. ಶುಕ್ರವಾರ ರಾತ್ರಿಯಿಂದ ಸೋಮವಾರ ಮುಂಜಾನೆಯವರೆಗೆ ಜನರು ಕಾರಣವಿಲ್ಲದೇ ಹೊರಗೆ ಬರುವಂತಿಲ್ಲ. ಬಂದಿದ್ದೇ ಆದಲ್ಲಿ ಕೇಸು ಹಾಕುತ್ತೇವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರು ಎಚ್ಚರಿಕೆಯನ್ನು ನೀಡಿದ್ದಾರೆ.
ಹಾಗಾದರೆ, ದಿನದ ಸಂಪಾದನೆಯನ್ನೇ ಬದುಕಿರುವವರು ಶನಿವಾರ, ಭಾನುವಾರ ಹೇಗೆ ಜೀವನವನ್ನು ಸಾಗಿಸಬೇಕು ಎನ್ನುವ ಕನಿಷ್ಠ ಚಿಂತನೆ ನಮ್ಮ ನಾಯಕರುಗಳಿಗೆ ಇದೆಯಾ? ಕರ್ಫ್ಯೂ ವಿಧಿಸುವ ಮುನ್ನ ಈ ಬಗ್ಗೆ ಸರಕಾರ ಆಲೋಚನೆಯನ್ನಾದರೂ ಮಾಡಿದೆಯಾ ಎನ್ನುವ ಪ್ರಶ್ನೆಗೆ ಸರಕಾರದಿಂದ ಉತ್ತರವಿಲ್ಲ.
ನೀವು ಧರಿಸುವ ಬಟ್ಟೆಯ ಮಾಸ್ಕ್ ಕೊರೊನಾ ಸೋಂಕಿನಿಂದ ರಕ್ಷಿಸಬಲ್ಲದೇ?
ತಳ್ಳು ಗಾಡಿಯವರು ವ್ಯಾಪಾರ ಮಾಡಬಹುದು ಎಂದು ಸರಕಾರ ಹೇಳಿದೆ
ಕರ್ಫ್ಯೂ ಸಮಯದಲ್ಲಿ ಜನರು ಮನೆಯಿಂದ ಹೊರಬರಲು ಹತ್ತು ಹಲವು ನಿರ್ಬಂಧಗಳನ್ನು ಸರಕಾರ ವಿಧಿಸಿದೆ. ತಳ್ಳು ಗಾಡಿಯವರು ವ್ಯಾಪಾರ ಮಾಡಬಹುದು ಎಂದು ಸರಕಾರ ಹೇಳಿದೆ. ಆದರೆ, ಜನರಿಗೆ ಹೊರಬರಲು ಅವಕಾಶ ಇಲ್ಲಾಂದ ಮೇಲೆ, ಇವರಿಗೆ ವ್ಯಾಪಾರ ಎಲ್ಲಿಂದ ಆಗುವುದು. ಫುಟ್ ಪಾತ್ ವ್ಯಾಪಾರಿಗಳು ಏನು ಮಾಡಬೇಕು, ಕೂಲಿಕಾರ್ಮಿಕರ ಹೊಟ್ಟೆ ಪಾಡೇನು, ರಿಕ್ಷಾ ಚಾಲಕರು ಸಂಸಾರವನ್ನು ನಡೆಸುವುದು ಹೇಗೆ, ದಿನದ ಸಂಪಾದನೆಯಿಂದ ರೇಶನ್ ತೆಗೆದುಕೊಂಡು ಜೀವನ ನಡೆಸುವ ಕುಟುಂಬದವರ ಗೋಳಿನ ಬಗ್ಗೆ ಸರಕಾರಕ್ಕೆ ಅರಿವಿದೆಯಾ?
ರಾಜ್ಯ ಸರಕಾರ ಪ್ಯಾಕೇಜ್ ಮೂಲಕ ತಕ್ಕಮಟ್ಟಿಗಾದರೂ ಜನರ ಸಂಕಷ್ಟಕ್ಕೆ ಸ್ಪಂದಿಸಿತ್ತು
ಕೊರೊನಾ ಮೊದಲನೇ ಅಲೆ ಮತ್ತು ಎರಡನೇ ಅಲೆಯ ವೇಳೆ ಸರಕಾರ ಕೋವಿಡ್ ಪ್ಯಾಕೇಜ್ ಅನ್ನು ಘೋಷಿಸಿತ್ತು. ಕೇಂದ್ರ ಮತ್ತು ರಾಜ್ಯ ಸರಕಾರ ಪ್ಯಾಕೇಜ್ ಮೂಲಕ ತಕ್ಕಮಟ್ಟಿಗಾದರೂ ಜನರ ಸಂಕಷ್ಟಕ್ಕೆ ಸ್ಪಂದಿಸಿತ್ತು. ಆಟೋ ಚಾಲಕರು, ಕಲಾವಿದರು, ಕೂಲಿ ಕಾರ್ಮಿಕರು, ಅರ್ಚಕರು ಸೇರಿದಂತೆ ಹಲವು ವರ್ಗದ ಜನರಿಗೆ ಪರಿಹಾರವನ್ನು ಪ್ರಕಟಿಸಿತ್ತು. ಸೇವಾ ಸಿಂಧು ಆಪ್ ಮೂಲಕ ಅರ್ಜಿ ಹಾಕಲು ಸೂಚಿಸಲಾಗಿತ್ತು.
ಯಡಿಯೂರಪ್ಪನವರು 1,250 ಕೋಟಿ ಪರಿಹಾರ ಪ್ಯಾಕೇಜ್ ಅನ್ನು ಪ್ರಕಟಿಸಿದ್ದರು
ಅರ್ಜಿ ಹಾಕಿದವರಿಗೆಲ್ಲರಿಗೂ ಪರಿಹಾರ ಸಿಕ್ಕಿದೆ ಎಂದು ಹೇಳುವುದುದು ಕಷ್ಟವಾದರೂ ಸರಕಾರ ತನಗಿರುವ ಸೀಮಿತ ಬಜೆಟಿನಲ್ಲಿ ಏನು ಮಾಡಲು ಸಾಧ್ಯ ಅದನ್ನು ಮಾಡುವ ಪ್ರಯತ್ನವನ್ನಂತೂ ಮಾಡಿತ್ತು. ಎರಡನೇ ಅಲೆಯ ವೇಳೆ ಅಂದಿನ ಸಿಎಂ ಯಡಿಯೂರಪ್ಪನವರು 1,250 ಕೋಟಿ ಪರಿಹಾರ ಪ್ಯಾಕೇಜ್ ಅನ್ನು ಪ್ರಕಟಿಸಿದ್ದರು. ಕೇಂದ್ರ ಸರಕಾರ ಕೂಡಾ ಬಿಪಿಎಲ್ ಕಾರ್ಡುದಾರರಿಗೆ ಉಚಿತ ರೇಶನ್ ಅನ್ನು ವಿತರಿಸಿತ್ತು. ಆದರೆ, ಕೊರೊನಾ ಮೂರನೇ ಅಲೆಗೆ?
ಜನರಿಗಾಗಿ ನೀರು ಎಂದು ಮೇಕೆದಾಟಲು ಹೊರಟಿರುವ ಕಾಂಗ್ರೆಸ್
ಮೊದಲೆರಡು ಅಲೆಯ ಸಂದರ್ಭದಲ್ಲಿ ಪರಿಹಾರದ ಪ್ಯಾಕೇಜ್ ಘೋಷಿಸಲು ಪ್ರಮುಖ ಪಾತ್ರವಹಿಸಿದ್ದ ಕಾಂಗ್ರೆಸ್ ಈಗ ಯಾಕೆ ಸುಮ್ಮನಿದೆ? ದಿನಗೂಲಿಯವರ ಜೀವನ ಹೇಗೆ ಎನ್ನುವುದನ್ನು ಅರಿಯದ ಅಥವಾ ಅರಿತರೂ ಸುಮ್ಮನಿರುವ ವಿರೋಧ ಪಕ್ಷಗಳೂ ಸರಕಾರಕ್ಕೆ ಒತ್ತಡವನ್ನು ಯಾಕೆ ಹಾಕುತ್ತಿಲ್ಲ? ಅತ್ತ, ಸರಕಾರವೂ ಅದರ ಗೋಜಿಗೆ ಹೋಗದೇ ಜಾಣಮೌನಕ್ಕೆ ಶರಣಾಗಿದೆ. ಜನರು ಸಂಕಷ್ಟಕ್ಕೆ ನಾವು ಎಂದು ಕೊಚ್ಚಿಕೊಳ್ಳುವ ರಾಜಕೀಯ ಪಕ್ಷಗಳ ನಡೆಯ ಬಗ್ಗೆ ಸಾರ್ವಜನಿಕರು ಪ್ರಶ್ನಿಸುವಂತಾಗಿದೆ. ಜನರಿಗಾಗಿ ನೀರು ಎಂದು ಮೇಕೆದಾಟಲು ಹೊರಟಿರುವ ಕಾಂಗ್ರೆಸ್ ಮೊದಲು ಕೋವಿಡ್ ಪ್ಯಾಕೇಜ್ ಬಗ್ಗೆ ಹೋರಾಟ ನಡೆಸಿದರೆ ಸೂಕ್ತವಲ್ಲವೇ?