ಹೊಸವರ್ಷದ ಹೊಸ ನಿರೀಕ್ಷೆಯಲ್ಲಿ...
ಪ್ರತಿವರ್ಷವೂ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ನಲ್ಲಿ ನಿಂತು ನಾವು ಸವೆಸಿ ಬಂದ ಅಷ್ಟು ದಿನಗಳತ್ತ ತಿರುಗಿ ನೋಡಿದಾಗಲೆಲ್ಲ ಕಳೆದುಹೋದ ಕ್ಷಣಗಳು ಅದು ತಂದೊಡ್ಡಿದ ಸಂಕಟ.. ಸಾವು, ನೋವು, ದುಃಖ ದುಮ್ಮಾನ, ಈಡೇರದೆ ಉಳಿದು ಹೋದ ಬಯಕೆಗಳು.. ಹೀಗೆ ಕೆಲವೇ ಕೆಲವಷ್ಟೆ ಖುಷಿಯ ಕ್ಷಣಗಳನ್ನು ಹೊರತು ಪಡಿಸಿದರೆ ನೂರಾರು ನಿರಾಸೆ ಕಷ್ಟ- ನೋವುಗಳು ನಮ್ಮನ್ನು ಸುತ್ತಿ ನೇವಳಿಸಿ ಎಸೆದು ಬಿಡುತ್ತದೆ..
ಎಲ್ಲ ನೋವು, ನಿರಾಸೆಗಳ ನಡುವೆಯೂ ಹೊಸವರ್ಷದ ಹೊಸ ನಿರೀಕ್ಷೆಯೊಂದು ಆಸೆಯ ಕಂಗಳಿಂದ ಅತ್ತ ನೋಡುವಂತೆ ಮಾಡಿಬಿಡುತ್ತದೆ... ಕಳೆದು ಹೋದ ವರ್ಷದಲ್ಲಿ ಮಾಡಿದ್ದೇನೂ ಇಲ್ಲ ಮುಂದಿನ ವರ್ಷವಾದರೂ ಏನಾದರೊಂದು ಮಾಡಬೇಕು. ಬದುಕಿಗೊಂದು ಹೊಸತನ ನೀಡಬೇಕು ಎಂದು ನಮ್ಮ ಜಡತ್ವಗೊಂಡ ಹುರುಪಿಗೆ ಸಾಣೆ ಹಿಡಿಯುವ ಪ್ರಯತ್ನ ಮಾಡುತ್ತೇವೆ.
ಹೊಸ ವರ್ಷ ಆಚರಣೆ: ಬೆಂಗಳೂರಲ್ಲಿ ಪೊಲೀಸರ ಬಂದೋಬಸ್ತ್ ಹೇಗಿದೆ?
ಹೊಸ ವರ್ಷದಲ್ಲಿ ಹೊಸ, ಹೊಸ ಕನಸುಗಳು ಚಿಗುರುವುದು ಸಾಮಾನ್ಯ. ಆದರೆ ಚಿಗುರಿದ ಕನಸು ಸಾಕಾರವಾಗಬೇಕಾದರೆ ನಮ್ಮಲ್ಲಿ ಆತ್ಮವಿಶ್ವಾಸ ಉಳಿಯಬೇಕು. ಅದು ಉಳಿಯಬೇಕಾದರೆ ನಿರಾಸೆಗೆ ಸಲಾಂ ಹೇಳಿ ಉತ್ಸಾಹ ಚಿಲುಮೆಯಾಗಿ ತೆರೆದುಕೊಳ್ಳಬೇಕು. ಹಾಗೆ ನೋಡಿದರೆ ನಾವು ಸವೆಸಿ ಬಂದ ಅಷ್ಟು ವರ್ಷಗಳು ಅಮೂಲ್ಯವೇ..
ಪ್ರತಿವರ್ಷದ ಆರಂಭದ ಶಪಥ ಕ್ರಮೇಣ ಮಾಸಿಹೋಗುತ್ತದೆ. ಅದರಾಚೆಗೆ ವರ್ಷದ ಆರಂಭದ ಆತ್ಮವಿಶ್ವಾಸಕ್ಕೆ ತುಕ್ಕು ಹಿಡಿಯುತ್ತದೆ. ಮತ್ತೆ ಅದೇ ಬದುಕು ಮುನ್ನಡೆಯುತ್ತದೆ. ಸಾಧನೆ ಹಾದಿಗಾಗಿ ನಾವೇ ಹಾಕಿಟ್ಟ ಮಾಪನವೂ ಮಸುಕಾಗಿ ಬಿಡುತ್ತದೆ. ಇಷ್ಟಕ್ಕೂ ಎಲ್ಲ ವರ್ಷಗಳಲ್ಲಿಯೂ ಒಂದಲ್ಲ ಒಂದು ರೀತಿಯ ಘಟನಾವಳಿಗಳು ನಡೆದೇ ನಡೆದಿರುತ್ತವೆ.
ಮೈಸೂರಿನಲ್ಲಿ ಹೊಸವರ್ಷಾಚರಣೆ ಪ್ರಯುಕ್ತ 2ಲಕ್ಷ ತಿರುಪತಿ ಮಾದರಿಯ ಲಡ್ಡು ವಿತರಣೆ
ಅವುಗಳಲ್ಲಿ ಕೆಲವು ಖುಷಿ ಕೊಟ್ಟಿದ್ದರೆ ಮತ್ತೆ ಕೆಲವು ದುಃಖವನ್ನು ತಂದಿರುತ್ತವೆ. ಕೆಲವು ಮನೆಗಳಲ್ಲಿ ಶುಭ ಕಾರ್ಯಕ್ರಮಗಳು ನಡೆದಿದ್ದರೆ ಮತ್ತೆ ಕೆಲವರ ಮನೆಗಳಲ್ಲಿ ಸಾವು-ನೋವು ಘಟಿಸಿರಬಹುದು. ಆದರೆ ಕಾಲವೇ ಹಾಗೆ ಅದಕ್ಕೆ ಎಲ್ಲವನ್ನು ಮರೆಸುತ್ತಾ ಮುನ್ನಡೆಸುವ ಶಕ್ತಿಯಿದೆ.
ವ್ಯಕ್ತಿಗತವಾಗಿ ನಾವೆಲ್ಲರೂ ಸಾಕಷ್ಟು ಏರುಪೇರುಗಳನ್ನು ಅನುಭವಿಸಿರಬಹುದು ಆದರೆ ರಾಷ್ಟ್ರೀಯ ವಿಪತ್ತುಗಳು ಮಾತ್ರ ಎಲ್ಲರನ್ನು ತಲ್ಲಣಿಸಿ ಬಿಡುತ್ತವೆ. ಈ ಬಾರಿ ಮುಂಗಾರು ಅಬ್ಬರಿಸಿದ ಕಾರಣ ಹಲವು ಜಲಾಶಯಗಳು ಭರ್ತಿಯಾಗಿ ರೈತರ ಮೊಗದಲ್ಲಿ ಮಂದಹಾಸ ಮಿನುಗುವಂತೆ ಮಾಡಿದೆ.
ಮಂಡ್ಯದಲ್ಲಿ ಕಾವೇರಿ ನದಿ ತೀರಕ್ಕಿಲ್ಲ ಪ್ರವಾಸಿಗರಿಗೆ ಪ್ರವೇಶ!
ಜತೆ ಜತೆಗೆ ಪ್ರವಾಹದಿಂದಾಗಿ ಸಂಭವಿಸಿದ ಹಾನಿ ಅನುಭವಿಸಿದ ಕಷ್ಟನಷ್ಟಗಳು ಮರೆಯಲಾರದ್ದು ಕೇರಳ ಮತ್ತು ಕೊಡಗಿನಲ್ಲಿ ಸಂಭವಿಸಿದ ಜಲಪ್ರಳಯ ಆ ಸಂಕಟದಿಂದ ಇನ್ನೂ ಹೊರಬರಲಾಗದೆ ಪರದಾಡುತ್ತಿರುವ ಜನ. ತಮ್ಮವರನ್ನು ಕಳೆದುಕೊಂಡು ದುಃಖಿಸುತ್ತಿರುವ ಕುಟುಂಬದ ಸದಸ್ಯರು.
ಅದರಾಚೆಗೆ ಅಲ್ಲಲ್ಲಿ ಸಂಭವಿಸಿದ ಅಪಘಾತಗಳು, ಆಕಸ್ಮಿಕ ಅವಘಡಗಳು ಒಂದೇ ಎರಡೇ ಲೆಕ್ಕಕ್ಕೆ ಸಿಗದಷ್ಟಿವೆ. ಹಲವು ನಾಯಕರು ನಮ್ಮನ್ನು ಅಗಲಿದ್ದಾರೆ. ಅವರು ತುಂಬಿದ್ದ ಸ್ಥಾನದ ನಷ್ಟ ಭರಿಸುವುದು ಅಸಾಧ್ಯವೇ ಸರಿ. ನಾವು ಎಲ್ಲವನ್ನು ನೆನಪಿಸಿಕೊಂಡು ಮುಂದಿನ ವರ್ಷಕ್ಕೆ ಹೆಜ್ಜೆಯಿಡುವುದು ಅನಿವಾರ್ಯವಾಗಿದೆ.
ನಮಗೆ ಗೊತ್ತು ಹೊಸ ವರ್ಷದಲ್ಲಿ ಏನೂ ಇಲ್ಲ ಎಂಬುದು ಆದರೂ ಹೊಸತನಕ್ಕೆ ಹಾತೊರೆಯುವ ಜಾಯಮಾನ ನಮ್ಮದಾಗಿರುವ ಕಾರಣ ಅತ್ತ ಹೆಚ್ಚು ಆಕರ್ಷಿತರಾಗುತ್ತಿದ್ದೇವೆ. ಇಡೀ ಜಗತ್ತೇ ಹೊಸವರ್ಷದತ್ತ ತವಕಿಸುತ್ತಿರುವಾಗ ಅವರಲ್ಲಿ ನಾವು ಒಬ್ಬರಾಗಿ ಮುನ್ನಡಿಯಿಡೋಣ. ವರ್ಷದ ಮೊದಲ ದಿನವಷ್ಟೆ ಹೊಸತು. ನಂತರ ಅದು ಕೂಡ ಹಳೆದಾಗುತ್ತದೆ.
ಮತ್ತೆ ಹೊಸ ವರ್ಷ ಬಂದಾಗ ನಾವು ಅದನ್ನು ಸ್ವಾಗತಿಸಲು ಸಿದ್ಧವಾಗಿ ಬಿಡುತ್ತೇವೆ. ಇದೆಲ್ಲವೂ ನೈಸರ್ಗಿಕ ನಿಯಮ. ಆದರೂ ಹೊಸ ವರ್ಷದ ಹೊಸ್ತಿಲಲ್ಲಿರುವ ನಾವು ಹಳೆಯ ವರ್ಷದ ದಿನಗಳನ್ನು ಮೆಲುಕು ಹಾಕುತ್ತಾ ಸಂತಸದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ ದುಃಖದ ಕ್ಷಣಗಳನ್ನು ಮರೆಯುತ್ತಾ ಮುನ್ನಡೆಯೋಣ ಇನ್ನೊಂದು ಹೊಸವರ್ಷ ಬರೋ ತನಕ...