ಆಗ ಸೆಕ್ಯುರಿಟಿ ಗಾರ್ಡ್ ಈಗ ಐಐಎಂ ಪ್ರೊಫೆಸರ್: ಕಾಸರಗೋಡಿನ ರಂಜಿತ್ ಸ್ಫೂರ್ತಿದಾಯಕ ಕಥೆ
ನವದೆಹಲಿ, ಏಪ್ರಿಲ್ 12: ಬದುಕು ಹೇಗೆಲ್ಲಾ ಬದಲಾಗುತ್ತದೆ, ಪಟ್ಟ ಪರಿಶ್ರಮ ಯಾವ ರೂಪದಲ್ಲಾದರೂ ಫಲ ನೀಡುತ್ತದೆ ಎಂಬುದಕ್ಕೆ ಕಾಸರಗೋಡಿನ ರಂಜಿತ್ ರಾಮಚಂದ್ರನ್ ಅವರ ಈ ಕಥೆಯೇ ಸಾಕ್ಷಿ.
ಟಾರ್ಪಾಲು ಹೊದಿಸಿರುವ ಸಣ್ಣ ಮನೆ. ಅಂದಿನ ದುಡಿಮೆ ಅಂದಿಗೆ ಖಾಲಿ. ಬದುಕೇ ಸವಾಲು ಎನಿಸುವಂಥ ಪರಿಸ್ಥಿತಿ. ಆದರೆ ಆ ಸವಾಲನ್ನು ಗೆದ್ದು ಇಂದು ರಾಂಚಿಯ ಐಐಎಂಯಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾಗಿದ್ದಾರೆ. ಕಾಸರಗೋಡಿನಲ್ಲಿ ಬಿಎಸ್ಎನ್ಎಲ್ ಕಚೇರಿಯಲ್ಲಿ ರಾತ್ರಿ ಕಾವಲುಗಾರನಾಗಿ ದುಡಿಯುತ್ತಿದ್ದ 28 ವರ್ಷದ ರಂಜಿತ್ ರಾಮಚಂದ್ರನ್ ಇದೀಗ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾಗಿದ್ದಾರೆ. ತಮ್ಮ ಕಥೆಯನ್ನು ರಂಜಿತ್ ರಾಮಚಂದ್ರನ್ ಅವರೇ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಮುಂದೆ ಓದಿ...
ಮಂಗಳದ ಅಂಗಳದಲ್ಲಿ ರೋವರ್: ಯೋಜನೆಯ ಹಿಂದಿನ ವಿಜ್ಞಾನಿ ಭಾರತ ಮೂಲದ ಸ್ವಾತಿ ಮೋಹನ್
ವೈರಲ್ ಆದ ರಂಜಿತ್ ಕಥೆ
"An IIM Professor was born here" ಎಂದು ಫೇಸ್ಬುಕ್ನಲ್ಲಿ ರಂಜಿತ್ ಅವರು ಪೋಸ್ಟ್ ಹಾಕಿಕೊಂಡಿದ್ದು, ಟಾರ್ಪಾಲು ಹೊದಿಸಿದ ಮಣ್ಣಿನ ಪುಟ್ಟ ಮನೆಯೊಂದರ ಚಿತ್ರವನ್ನು ಹಾಕಿಕೊಂಡಿದ್ದಾರೆ. ಈ ಚಿತ್ರದೊಂದಿಗೆ ತಳುಕು ಹಾಕಿಕೊಂಡಿರುವ ಅವರ ಜೀವನ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ರಂಜಿತ್ ಅವರಿಗೆ ಹ್ಯಾಟ್ಸ್ ಆಫ್ ಎನ್ನುತ್ತಿದ್ದಾರೆ. ರಂಜಿತ್ ಅವರ ಸ್ಫೂರ್ತಿದಾಯಕ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಎಸ್ಎನ್ಎಲ್ ಕಚೇರಿಯಲ್ಲಿ ರಾತ್ರಿ ವಾಚ್ಮನ್
ರಂಜಿತ್ ತಂದೆ ಟೈಲರ್, ತಾಯಿ ದಿನಗೂಲಿ ಕಾರ್ಮಿಕೆ. ಬಡತನದ ನಡುವೆ ಶಾಲೆ ಬಿಡುವ ಪರಿಸ್ಥಿತಿ ಪದೇ ಪದೇ ಎದುರಾಗುತ್ತಿದ್ದರೂ ಕಷ್ಟಪಟ್ಟು ಪದವಿವರೆಗೂ ವಿದ್ಯಾಭ್ಯಾಸ ಮಾಡಿದರು ರಂಜಿತ್. ಅರ್ಥಶಾಸ್ತ್ರದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ರಂಜಿತ್ ಕಾಸರಗೋಡಿನ ಪಣತೂರಿನಲ್ಲಿರುವ ಬಿಎಸ್ ಎನ್ಎಲ್ ಕಚೇರಿಯಲ್ಲಿ ರಾತ್ರಿ ಕಾವಲುಗಾರರಾಗಿ ಕೆಲಸ ಮಾಡಲು ಆರಂಭಿಸಿದರು. "ಬೆಳಿಗ್ಗೆ ಹೊತ್ತು ನಾನು ಕಾಲೇಜಿಗೆ ಹೋಗುತ್ತಿದ್ದೆ. ರಾತ್ರಿ ಟೆಲಿಫೋನ್ ಎಕ್ಸ್ಚೇಂಜ್ ನಲ್ಲಿ ಕೆಲಸ ಮಾಡುತ್ತಿದ್ದೆ. ಹೇಗಾದರೂ ನಾನು ಓದಲೇಬೇಕು ಎಂಬ ತುಡಿತ ನನ್ನನ್ನು ಕಷ್ಟಪಡಲು ಪ್ರೇರೇಪಣೆ ನೀಡಿತ್ತು" ಎಂದು ಹೇಳಿಕೊಂಡಿದ್ದಾರೆ ರಂಜಿತ್.
ಮೈಸೂರು; ವಕೀಲಿ ವೃತ್ತಿ ಆರಂಭಿಸಿದ ಮೊದಲ ತೃತೀಯ ಲಿಂಗಿ
ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ
ನಂತರ ನನಗೆ ಐಐಟಿ ಮದರಾಸ್ನಲ್ಲಿ ಅವಕಾಶ ಸಿಕ್ಕಿತು. ಆದರೆ ಮಲಯಾಳಂ ಭಾಷೆ ಮಾತ್ರ ಗೊತ್ತಿದ್ದರಿಂದ ಕಷ್ಟವಾಯಿತು. ನನ್ನ ಪಿಎಚ್ಡಿ ಕನಸನ್ನು ಬಿಟ್ಟುಬಿಡುವ ನಿರ್ಧಾರವನ್ನೂ ಮಾಡಿದ್ದೆ. ಆದರೆ ನನ್ನ ಮಾರ್ಗದರ್ಶಿ ನನಗೆ ಪಿಎಚ್ಡಿ ಬಿಡದಂತೆ ಸಲಹೆ ನೀಡಿದರು. ಹೇಗಾದರೂ ಕಷ್ಟಪಟ್ಟು ಓದಿ, ನನ್ನ ಕನಸನ್ನು ಸಾಕಾರ ಮಾಡಿಕೊಳ್ಳಲೇಬೇಕು ಎಂದು ಅಂದು ನಿರ್ಧರಿಸಿದೆ. ಕಳೆದ ವರ್ಷ ಡಾಕ್ಟರೇಟ್ ಪಡೆದುಕೊಂಡೆ ಎಂದು ವಿವರಿಸಿದರು. ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ರಂಜಿತ್ ಸಹಾಯಕ ಪ್ರಾಧ್ಯಾಪಕರಾಗಿ ಸೇರಿಕೊಂಡಿದ್ದಾರೆ.
"ಒಳ್ಳೆಯದನ್ನೇ ಕನಸು ಕಂಡು ಆ ಕನಸಿಗಾಗಿ ಪರಿಶ್ರಮ ಪಡಿ"
"ಈ ಪೋಸ್ಟ್ ಇಷ್ಟು ವೈರಲ್ ಆಗುತ್ತದೆ ಎಂದು ತಿಳಿದುಕೊಂಡಿರಲಿಲ್ಲ. ನನ್ನ ಜೀವನದ ಕಥೆಯನ್ನು ನಾನು ಬರೆದುಕೊಂಡಿದ್ದೆ. ನನ್ನಂತೆ ಕಷ್ಟಪಡುತ್ತಿರುವ ಯಾರಿಗಾದರೂ ನನ್ನ ಕಥೆ ಸ್ಫೂರ್ತಿಯಾಗಲಿ ಎಂದು ಬಯಸಿ ಪೋಸ್ಟ್ ಹಾಕಿದ್ದೆ. ಒಳ್ಳೆಯದನ್ನೇ ಕನಸು ಕಂಡು ಆ ಕನಸಿಗಾಗಿ ಪರಿಶ್ರಮ ಪಡಬೇಕು. ಕಷ್ಟಪಟ್ಟರೆ ಎಂಥವರಿಗೂ ಫಲ ನೀಡುತ್ತದೆ" ಎಂದು ಪ್ರತಿಕ್ರಿಯಿಸಿದ್ದಾರೆ ರಂಜಿತ್.
ಹಣಕಾಸು ಸಚಿವ ಟಿಎಂ ಥಾಮಸ್ ಐಸಾಕ್ ಅವರು ಫೇಸ್ಬುಕ್ನಲ್ಲಿ ರಾಮಚಂದ್ರನ್ ಅವರಿಗೆ ಶುಭ ಹಾರೈಸಿದ್ದಾರೆ. "ರಂಜಿತ್ ರಾಮಚಂದ್ರನ್ ಎಲ್ಲರಿಗೂ ಸ್ಫೂರ್ತಿ. ತಾನು ಸೋತೆ ಎಂದು ಕೂರದೇ ಸಾಧನೆಯತ್ತ ಚಿತ್ತ ಹೊರಳಿಸಿದ್ದಾರೆ. ಇವರ ಸಾಧನೆ ಎಲ್ಲರಿಗೂ ಸ್ಫೂರ್ತಿ" ಎಂದು ಶ್ಲಾಘಿಸಿದ್ದಾರೆ.