ಟಿಪ್ಪು ಸ್ವಾತಂತ್ರ್ಯ ಯೋಧನೇ, ಜಯಂತಿ ಆಚರಣೆ ವಿರೋಧವೇಕೆ?
ಶಾಂತಿಯುತ ಕೊಡಗಿನಲ್ಲಿ ಮತ್ತೆ ಟಿಪ್ಪು ಜಯಂತಿ ವಿಚಾರದಲ್ಲಿ ಗಲಭೆಗಳು ಆಗದಂತೆ ನೋಡಿಕೊಳ್ಳಲು ಕರ್ನಾಟಕ ಸರ್ಕಾರ ಸಕಲ ಸಿದ್ಧತೆ ನಡೆಸುತ್ತಿದೆ. ಇನ್ನೊಂದೆಡೆ, ಟಿಪ್ಪು ಜಯಂತಿ ವಿರೋಧದ ಅಲೆ ಕೊಡಗಿನ ಚಳಿಗಾಲದಲ್ಲಿ ಬಿಸಿಯೇರಿಸುತ್ತಿದೆ. ನವೆಂಬರ್ 10 ಮತ್ತೆ ಟಿಪ್ಪು ಜಯಂತಿ ಆಚರಣೆ ಕಾರ್ಯಕ್ರಮಗಳು ನಿಗದಿಯಾಗಿವೆ. ಚಿತ್ರದುರ್ಗ, ಕೊಡಗು, ಅವಿಭಜಿತ ಕನ್ನಡ ಜಿಲ್ಲೆಗಳಲ್ಲಿ ಟಿಪ್ಪು ವಿರುದ್ಧ ದನಿ ಗಟ್ಟಿಯಾಗುತ್ತಿದೆ.
ಕೊಲ್ಲೂರು ದೇವಳದಲ್ಲಿ ಟಿಪ್ಪು ಹೆಸರಿನಲ್ಲಿ ನಿತ್ಯಪೂಜೆ
ನೆಮ್ಮದಿಯಾಗಿ ಬದುಕಲು ಅವಕಾಶ ನೀಡಿ ಎಂದು ಗೋಗರೆಯುವ ಪರಿಸ್ಥಿತಿ ನಿರ್ಮಾಣ ಮಾಡಿದ ಎಲ್ಲರಿಗೂ ಕೊಡವರು ಹಿಡಿಶಾಪ ಹಾಕುತ್ತಿದ್ದಾರೆ.ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಜಿಲ್ಲಾಡಳಿತ ಜಯಂತಿ ಆಚರಿಸುವುದು ಅನಿವಾರ್ಯ ಎಂಬ ಸ್ಥಿತಿ ಜಿಲ್ಲಾಡಳಿತಕ್ಕೆ ಒದಗಿ ಬಂದಿದೆ.
ಅಪ್ರತಿಮ ದೇಶಭಕ್ತ ಹುತಾತ್ಮ ಹಜರತ್ ಟಿಪ್ಪು ಸುಲ್ತಾನ್
ಯಾವುದೇ ಕಾರಣಕ್ಕೂ ಹೊರ ಜಿಲ್ಲೆ, ಹೊರ ರಾಜ್ಯದವರಿಗೆ ಕೊಡಗು ಜಿಲ್ಲಾ ಕೇಂದ್ರ ಸ್ಥಾನ ಮತ್ತು ತಾಲೂಕು ಕೇಂದ್ರಗಳಿಗೆ ಬರಲು ಅವಕಾಶ ನೀಡಬಾರದು. ಟಿಪ್ಪು ಜಯಂತಿಯಿಂದ ಜಿಲ್ಲೆಯ ಜನತೆಯ ಆತ್ಮಾಭಿಮಾನಕ್ಕೆ ಧಕ್ಕೆಯಾಗಿದೆ. ನಮ್ಮ ಹೋರಾಟ ಶಾಂತಿಯುತವಾಗಿರುತ್ತದೆ ಎಂದು ಟಿಪ್ಪು ಆಚರಣೆ ವಿರೋಧಿ ಸಮಿತಿಯ ಅಧ್ಯಕ್ಷ ಆಭಿಮನ್ಯು ಕುಮಾರ್ ಹೇಳಿದ್ದಾರೆ.
ಟಿಪ್ಪು ಸುಲ್ತಾನ್ ವಿರುದ್ಧ ಕ್ರೈಸ್ತ ಸಮುದಾಯದ ವಿರೋಧವೇಕೆ?
ಮತಾಂಧ, ದೇಶ ವಿರೋದಿ, ಕನ್ನಡ ದ್ವೇಷಿ ಟಿಪ್ಪು ಸುಲ್ತಾನ ಜನ್ಮದಿನಾಚರಣೆ ಆಚರಿಸುವುದನ್ನು, ಆ ನೆಪದಲ್ಲಿ ಕೋಟ್ಯಾಂತರ ರೂಪಾಯಿ ಸಾರ್ವಜನಿಕರ ಹಣವನ್ನು ಪೋಲು ಮಾಡುವುದನ್ನು, ಸ್ವಾರ್ಥ ರಾಜಕೀಯಕ್ಕಾಗಿ ಟಿಪ್ಪುವನ್ನು ವೈಭವೀಕರಿಸುವುದನ್ನು ತಡೆಯಬೇಕೆಂದು ಹಿಂದೂ ಪರ ಸಂಘಟನೆಗಳು ಕೋರಿವೆ.
ಟಿಪ್ಪುಸುಲ್ತಾನ್ ದಿನಾಚರಣೆ ಆಚರಿಸಲು ನಿರ್ಧಾರ ಏಕೆ?
ಕರ್ನಾಟಕದಲ್ಲಿ ಕಳೆದ ಎರಡು ವರ್ಷಗಳಲ್ಲಿ ತಲೆ ಎತ್ತಿರುವ ದೇಶದ್ರೋಹಿ ಹಾಗೂ ಸಮಾಜ ಘಾತುಕ ಶಕ್ತಿಗಳ ಗುಂಪೊಂದು ಟಿಪ್ಪು ಸುಲ್ತಾನನ್ನು ವೈಭವೀಕರಿಸುವ ಯತ್ನದಲ್ಲಿ ತೊಡಗಿದ್ದು, ಸ್ವಾರ್ಥ ರಾಜಕೀಯಕ್ಕಾಗಿ ಮುಸ್ಲಿಂರೊಂದಿಗೆ ಟಿಪ್ಪುವನ್ನು ಸಮೀಕರಿಸುವ ಯತ್ನ ನಡೆಸಿದ್ದು, ಆ ಹಿನ್ನಲೆಯಲ್ಲಿ ಸರಕಾರ ಟಿಪ್ಪುಸುಲ್ತಾನ್ ದಿನಾಚರಣೆ ಆಚರಿಸಲು ನಿರ್ಧರಿಸಿದ್ದು, ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ, ಕನ್ನಡ ಪ್ರೇಮಿ, ಸರ್ವಧರ್ಮ ಸಹಿಷ್ಣು ಎಂದು ಸಾರಲು ಈ ಜಯಂತಿ, ಆಚರಣೆ ಇತ್ಯಾದಿ.
ಕನ್ನಡ ವಿರೋಧಿ ಟಿಪ್ಪು ಸುಲ್ತಾನ್
ಟಿಪ್ಪುಸುಲ್ತಾನ್ ಕನ್ನಡ ವಿರೋಧಿಯೂ ಆಗಿದ್ದು, ಆತ ತನ್ನ ಆಡಳಿತಾವಧಿಯಲ್ಲಿ ಈ ನಾಡಿನ ಜನರ ಮೇಲೆ ಬಲತ್ಕಾರವಾಗಿ ಪರ್ಷಿಯಾ ಭಾಷೆಯನ್ನು ಹೇರಿ ಜಾರಿಗೆ ತಂದಿರುವುದನ್ನು ಇತಿಹಾಸದ ಪುಟಗಳು ಸಾರಿ ಹೇಳುತ್ತಿವೆ. ಇತ್ತಿಚಿನ ದಿನಗಳಲ್ಲಿ ಆತನ ಮತಾಂಧತೆ ಹಾಗೂ ಕನ್ನಡ ವಿರೋಧಿ ನಿಲುವಿನ ಕುರಿತು ವ್ಯಾಪಕವಾದ ಚರ್ಚೆಗಳು ಕರ್ನಾಟಕದಲ್ಲಿ ನಡೆದಿದ್ದು, ಆತನೊಬ್ಬ ಕನ್ನಡ ದ್ವೇಷಿ ಹಾಗೂ ಹಿಂದು ವಿರೋದಿ ಮತಾಂಧನೆಂಬುದು ಮತ್ತಷ್ಟು ಬಹಿರಂಗವಾಗಿದೆ. ಆ ಮೂಲಕ ಆತ ಅತ್ಯಂತ ವಿವಾದಾಸ್ಪದ ವ್ಯಕ್ತಿಯಾಗಿ ಹೊರಹೊಮ್ಮಿರುತ್ತಾನೆ ಎಂಬುದು ವಿರೋಧಿಗಳ ವಾದ.
ಕೊಡವ ಮಾಪಿಳ್ಳೆ ಸಮುದಾಯದ ವಿರೋಧ
ಕೊಡವ ಮಾಪಿಳ್ಳೆ ಸಮುದಾಯದ ಪ್ರಮುಖರಾದ ಇಬ್ರಾಹಿಂ ಮಾತನಾಡಿ, ಇಸ್ಲಾಂ ಧರ್ಮದಲ್ಲಿ ಯಾವುದೇ ಮೂರ್ತಿ ಪೂಜೆ, ವ್ಯಕ್ತಿ ಪೂಜೆ, ಜಯಂತಿ ಆಚರಿಸುವ ಪದ್ಧತಿ ಇಲ್ಲ. ಕೊಡವ ಮಾಪಿಳ್ಳೆ ಸಮುದಾಯವಾದ ನಾವು ಹಿಂದೆ ಕೊಡವರಾಗಿದ್ದೆವು. ಟಿಪ್ಪು ಸುಲ್ತಾನ್ ನಮ್ಮನ್ನು ಬಲಾತ್ಕಾರವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ್ದಾನೆ. ಈ ಬಗ್ಗೆ ನಮಗೆ ಹಾಗೂ ನಮ್ಮ ಹಿರಿಯರಲ್ಲಿ ನೋವು ಹೆಪ್ಪುಗಟ್ಟಿದೆ. ಟಿಪ್ಪು ಜಯಂತಿಯನ್ನು ಕೊಡಗಿನ ಮೂಲ ನಿವಾಸಿಗಳಾದ ಕೊಡವ ಮಾಪಿಳ್ಳೆ ಸಮುದಾಯ ವಿರೋಧಿಸುತ್ತದೆ.
ದೇವಟ್ ಪರಂಬುವಿನಲ್ಲಿ ಕೊಡವರ ಹತ್ಯೆ ನೆನಪು
ಟಿ.ಶೆಟ್ಟಿಗೇರಿ ಬಿ.ಜೆ.ಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ ಮಾತನಾಡಿ ಕೊಡಗಿನ ದೇವಟ್ ಪರಂಬುವಿನಲ್ಲಿ ಕೊಡವ ಜನಾಂಗದ ಸುಮಾರು 80 ಸಾವಿರ ಜನರನ್ನು ಮೋಸದಿಂದ ಟಿಪ್ಪು ಹತ್ಯೆ ಮಾಡಿದ್ದಾನೆ. ಈ ಎಲ್ಲಾ ವಿಚಾರಗಳು ಇತಿಹಾಸದಲ್ಲಿ ದಾಖಲಾಗಿದೆ ಹೀಗಿರುವಾಗ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ಕೊಡಗಿನ ಗೆಜೇಟಿಯರ್ ನಲ್ಲಿ ಉಲ್ಲೇಖ
ಟಿಪ್ಪು ನಂಬಿಕೆ ದ್ರೋಹಿಯಾಗಿದ್ದು, ಸಂಧಾನದ ಹೆಸರಿನಲ್ಲಿ ಕೊಡವರ ಸ್ನೇಹ ಬೆಳೆಸಿ, ಸಾವಿರಾರು ಹಿಂದೂಗಳನ್ನು ಒತ್ತೆಯಾಳಾಗಿ ಹಿಡಿದು ತಂದು ಶ್ರೀರಂಗಪಟ್ಟಣದಲ್ಲಿ ಬಲಾತ್ಕಾರವಾಗಿ ಇಸ್ಲಾಮಿಗೆ ಮತಾಂತರಗೊಳಿಸಿರುತ್ತಾನೆ. ಈತನ ದಾಳಿಗೆ ಸಿಲುಕಿ ಶ್ರೀರಂಗಪಟ್ಟಣದ ಇತಿಹಾಸ ಪ್ರಸಿದ್ಧ ಮೂಡಲಬಾಗಿಲು ಆಂಜನೇಯ ದೇವಸ್ಥಾನ ಮಸೀದಿಯಾಗಿ ಪರಿವರ್ತನೆಯಾಗಿರುವುದನ್ನು ನಾವಿಂದು ಕಾಣಬಹುದು. ಕೊಡಗಿನಲ್ಲಿ ಟಿಪ್ಪು ಸುಲ್ತಾನ್ ನೆಡೆಸಿದ ದಾಳಿಗೆ ಸಂಬಂಧಿಸಿದಂತೆ ಕೊಡಗಿನ ಗೆಜೇಟಿಯರ್ ಹಾಗೂ ಕೊಡಗಿನ ಇತಿಹಾಸಕಾರ ಐ. ಮಾ. ಮುತ್ತಣ್ಣನವರು ಬರೆದಿರುವ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.