ಚಾಮುಂಡೇಶ್ವರಿ ಮೈಸೂರು ಒಡೆಯರ ಅಧಿದೇವತೆಯಾಗಿದ್ದು ಹೇಗೆ?
ಮೈಸೂರು ಎಂದರೆ ಚಾಮುಂಡಿಬೆಟ್ಟ ನಮ್ಮ ಕಣ್ಣುಮುಂದೆ ಬಂದು ನಿಲ್ಲುತ್ತದೆ. ಅದರಾಚೆಗೆ ಮಹಿಷಾಸುರನೂ ಕಾಣಿಸುತ್ತಾನೆ. ಇವತ್ತೇನಾದರೂ ನಾವು ಚಾಮುಂಡಿಬೆಟ್ಟವನ್ನು ತದೇಕ ಚಿತ್ತದಿಂದ ವೀಕ್ಷಿಸಿದರೆ ಹಚ್ಚ ಹಸುರು, ಹೆಬ್ಬಂಡೆಗಳ ಬೃಹತ್ ಬೆಟ್ಟ ಕಾಣಿಸುತ್ತದೆ. ಅದನ್ನೇ ಗಮನಿಸಿ ನೋಡಿ, ಮಹಿಷಾಸುರ ಮಲಗಿದಂತೆ ಒಮ್ಮೆ ಗೋಚರಿಸಿದರೆ ಅಚ್ಚರಿ ಪಡಬೇಕಾಗಿಲ್ಲ.
ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ 'ಮಹಿಷನ ಊರು' ಕಾಲಗರ್ಭದಲ್ಲಿ ಮೈಸೂರಾಯಿತು ಎನ್ನಲಾಗುತ್ತದೆ. ಈ ಮಹಿಷಾಸುರ ಎಂಬ ಅಸುರನನ್ನು ಚಾಮುಂಡೇಶ್ವರಿ ಅವತಾರ ಎತ್ತಿ ಸಂಹರಿಸಿದಳು ಎಂಬುದು ಪುರಾಣದಲ್ಲಿ ಬರುವ ಕಥೆ. ಈ ಚಾಮುಂಡೇಶ್ವರಿಯೇ ಮೈಸೂರು ಅರಸರು ಆರಾಧ್ಯ ದೈವ.
ಐತಿಹಾಸಿಕ ಮೈಸೂರು ದಸರಾ ನಡೆದು ಬಂದ ಹಾದಿ
ಮೈಸೂರು ರಾಜಪರಂಪರೆಯನ್ನು ನಾವು ನೋಡಿದ್ದೇ ಆದರೆ 1399 ರಲ್ಲಿ ಮೈಸೂರು ಅರಸರ ಮೂಲ ಪುರುಷರು ಈ ಇತಿಹಾಸವನ್ನು ಮುಂದುವರೆಸಿದವರಾಗಿ ತಿಳಿಯುತ್ತದೆ. ರಾಜವಂಶದ ಯದುರಾಯ, ಕೃಷ್ಣರಾಯರು ಸ್ಥಳೀಯನಾಗಿದ್ದ, ಹದಿನಾಡಿನ ಪಾಳೆಯಗಾರನಾಗಿದ್ದ ಮಹಾಶೂರ ಕಾರುಗಳ್ಳಿ ಮಾರನಾಯಕನನ್ನು ಕೊಂದು ಹದಿನಾಡಿನ ಅರಸರಾಗುತ್ತಾರೆ. ದಳಪತಿ ಮಾರನಾಯಕ ಕೆಳ ಜಾತಿಯಾಗಿದ್ದು, ಹದಿನಾಡಿನ ಅರಸರ ಮಗಳನ್ನು ಕೇಳಿದನೆಂಬ ವಿಚಾರ ಹೊಸತೊಂದು ಸಾಮ್ರಾಜ್ಯಕ್ಕೆ ಕಾರಣವಾಗುತ್ತದೆ. ಇಂತಹ ಗೆಲುವು ವಿಜಯದಶಮಿ ತಳಕು ಹಾಕಿಕೊಳ್ಳುತ್ತದೆ.
ಹದಿನಾಡಿನಿಂದ ಆರಂಭವಾದ ಯದುವಂಶ
ಹದಿನಾಡಿನಿಂದ ಯದುವಂಶ ಆರಂಭವಾಗುತ್ತದೆ. 'ಗಂಡಭೇರುಂಡ' ಪಕ್ಷಿ ಲಾಂಛನವಾಗುತ್ತದೆ. 26ಕ್ಕೂ ಹೆಚ್ಚು ಒಡೆಯರ್ 1399ರಿಂದ 1970 ರವರೆಗೆ ಮೈಸೂರು ಸಾಮ್ರಾಜ್ಯ ಕಟ್ಟಿ ಆಳುತ್ತಾರೆ. ಹಳೆ ಮೈಸೂರು ಪ್ರಾಂತ್ಯವು ಸ್ವಾತಂತ್ರ್ಯಾ ನಂತರ ದೇಶದ ಗಣರಾಜ್ಯದಲ್ಲಿ ವಿಲೀನವಾಗುತ್ತದೆ. ಆ ನಂತರ ಕರ್ನಾಟಕದ ಉದಯವೂ ಆಗುತ್ತದೆ.
ಮೈಸೂರು ದಸರಾ ಹಾಗೆಯೇ ಉಳಿದುಕೊಂಡಿದೆ
ಇವೆಲ್ಲಾ ಇತಿಹಾಸದ ಕಾಲಚಕ್ರದೊಳಗೆ ಸಾಗಿದಂತೆ 'ಮೈಸೂರು ದಸರಾ' ಮಾತ್ರ ಜನರ ನಡೆ ನುಡಿಯ ಬದುಕಾಗಿ ಇತಿಹಾಸದ ನಾಲ್ಕು ಶತಮಾನದ ಕಾಲಘಟ್ಟದಲ್ಲಿ ಮಗ್ಗಲು ಬದಲಿಸುತ್ತಾ ಸಾಗುತ್ತಿದೆ. ಅರಸುರು, ದಿವಾನರ ಸುಧೀರ್ಘವಾದ ಆಳ್ವಿಕೆಯಿಂದ ಮೈಸೂರು ಒಂದು ಮಹಾ ಸಂಸ್ಥಾನವಾದದ್ದೂ ಹೆಚ್ಚುಗಾರಿಕೆ.
ಅಂಬಾವಿಲಾಸ ಅರಮನೆಯ ಬಗ್ಗೆ ನಿಮಗೆ ಗೊತ್ತಿರದ ಕೆಲ ಕುತೂಹಲಕಾರಿ ವಿಷಯಗಳು
ಬ್ರಿಟೀಷರ ಕಾಲದಲ್ಲಿ ಒಂಬತ್ತು ಜಿಲ್ಲೆಗಳಷ್ಟೆ ಇತ್ತು
ಬ್ರಿಟೀಷರ ಕಾಲದಲ್ಲಿ ಮೈಸೂರು ಒಂಭತ್ತು ಜಿಲ್ಲೆಗಳಿಂದ ಕೂಡಿತ್ತು. ಕರ್ನಾಟಕ ಏಕೀಕರಣದ ನಂತರ 1ನೇ ನವೆಂಬರ್ 1956ರಲ್ಲಿ ಮೈಸೂರು ರಾಜ್ಯವಾಯಿತು. ದೇವರಾಜ ಅರಸರು ಮುಖ್ಯಮಂತ್ರಿಯಾದ ಕಾಲಕ್ಕೆ 1/11/1973 ರಲ್ಲಿ ಕರ್ನಾಟಕ ರಾಜ್ಯ ಉದಯವಾಯಿತು.
ಮೈಸೂರು ಅರಸರು ಚಾಮುಂಡೇಶ್ವರಿಯನ್ನೇಕೆ ಪೂಜಿಸುತ್ತಾರೆ ?
ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ
ಇದರೊಟ್ಟಿಗೆ ಮೈಸೂರು ಮಾತ್ರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿಯೇ ಉಳಿಯಿತು. ಸರಿಸುಮಾರು ನಾಲ್ಕು ಶತಮಾನಗಳಿಂದ ಅದೆಷ್ಟು ದಸರಾಗಳು ಬಂದು ಹೋಗಿದೆಯೋ? ಒಂದಷ್ಟು ಬದಲಾವಣೆಗಳೊಂದಿಗೆ ಮೈಸೂರು ದಸರಾ ಈಗಲೂ ತನ್ನ ವೈಭವವನ್ನು ಮೆರೆಯುತ್ತಲೇ ಸಾಗುತ್ತಿದೆ ಎಂಬುದೇ ಸಂತಸದ ವಿಚಾರ.