ಮತದಾರರು ರಾಜಕೀಯ ನಾಯಕರ ಮನಸ್ಥಿತಿ ಬದಲಾಯಿಸಬೇಕಿದೆ..!
ಇಡೀ ದೇಶದ ಜನ ಜಮ್ಮು ಕಾಶ್ಮೀರ ಗಡಿಯತ್ತ ದೃಷ್ಠಿ ನೆಟ್ಟಿದ್ದಾರೆ. ಪಾಕ್ ಮತ್ತು ಭಾರತದ ನಡುವೆ ಈಗ ನಡೆಯುತ್ತಿರುವ ಘರ್ಷಣೆ ಮತ್ತು ಮುಂದೇನಾಗುತ್ತೋ ಎಂಬ ಆತಂಕ ಎಲ್ಲರನ್ನೂ ಕಾಡುತ್ತಲೇ ಇದೆ. ಜತೆಗೆ ಸದಾ ಕುತಂತ್ರಿ ಬುದ್ದಿಯನ್ನೇ ಪ್ರದರ್ಶಿಸುವ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬೇಕು ಎಂಬ ಆಗ್ರಹವೂ ಕೇಳಿ ಬರುತ್ತಿದೆ.
ಒಂದು ಕಡೆ ಶಾಂತಿಯ ಮಂತ್ರ ಪಠಿಸುವ ಪಾಕ್ ಪ್ರಧಾನಿ ಮತ್ತೊಂದೆಡೆ ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಸೇನೆ ಇದೆರಡರ ಮಧ್ಯೆ ಅಲ್ಲಿನ ನಾಗರಿಕರು ಮಾತ್ರವಲ್ಲ ನಮ್ಮ ಸೈನಿಕರು ಕೂಡ ತೊಂದರೆ ಅನುಭವಿಸುತ್ತಿದ್ದಾರೆ. ಆದರೂ ಜೀವದ ಹಂಗು ತೊರೆದು ದಿಟ್ಟ ಉತ್ತರ ನೀಡುತ್ತಾ ಉಗ್ರರರನ್ನು ಸದೆಬಡಿಯುವ ಕಾರ್ಯವನ್ನು ಮಾಡುತ್ತಲೇ ಇದ್ದಾರೆ.
ಮೈತ್ರಿಪಕ್ಷಗಳಲ್ಲಿ ಅಸಮಾಧಾನ ಭುಗಿಲೆದ್ದಷ್ಟು ಬಿಜೆಪಿಗೆ ಲಾಭ!
ಈ ಸಂದರ್ಭ ಇಲ್ಲಿನ ಪ್ರಜೆಯಾಗಿ ಪ್ರತಿಯೊಬ್ಬನೂ ಸೇನೆಗೆ ಮತ್ತು ಈ ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ(ಇಲ್ಲಿ ಯಾವ ಪಕ್ಷ ಮುಖ್ಯವಲ್ಲ)ಗೆ ಬೆಂಬಲವಾಗಿ ನಿಲ್ಲುವುದು ಕರ್ತವ್ಯ. ಆದರೆ ಅದ್ಯಾಕೋ ಗೊತ್ತಿಲ್ಲ. ನಮ್ಮಲ್ಲಿ ಕೆಲವು ನಾಗರಿಕರು ಮತ್ತು ರಾಜಕಾರಣಿಗಳು ನಡೆದುಕೊಳ್ಳುತ್ತಿರುವ ನಡವಳಿಕೆಗಳು ಉರಿವ ಮನೆಯಲ್ಲಿ ಗಳ ಹಿರಿದಂತೆ ಕಾಣುತ್ತಿದೆ.
ಯಾರೋ ಒಬ್ಬ ನಾಯಕ ಅಸಂಬದ್ಧ ಹೇಳಿಕೆ ನೀಡಿದ ಎಂದಾಕ್ಷಣ ಅದನ್ನೇ ಮತ್ತೆ ಮತ್ತೆ ಹೇಳಿ ಟೀಕಿಸುವ ಮೂಲಕ ತಾವು ಕೂಡ ಆತನನ್ನೇ ಅನುಕರಿಸುತ್ತಿದ್ದೇವೆ ಎಂಬುದನ್ನು ಕೆಲವು ನಾಯಕರು ಸಮಾಜಕ್ಕೆ ತೋರಿಸಿಕೊಡುತ್ತಿದ್ದಾರೆ.
ಇಷ್ಟಕ್ಕೂ ನಮ್ಮ ದೇಶದಲ್ಲಿ ನಡೆದ ಹಲವು ಘಟನೆಗಳನ್ನು ನಮ್ಮ ರಾಜಕಾರಣಿಗಳು ಹಲವು ವಿಧದಲ್ಲಿ ತಮಗೆ ಅನುಕೂಲವಾಗುವಂತೆ ರಾಜಕೀಯಕ್ಕೆ ಬಳಸಿಕೊಂಡಿದ್ದು ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ನಾವು ಕಾಣಬಹುದಾಗಿದೆ.
ಯುವ ಮತದಾರರು ಸೇರ್ಪಡೆ
ನಾವು ಸಾಮಾಜಿಕ, ವೈಜ್ಞಾನಿಕ, ಆರ್ಥಿಕ, ಶೈಕ್ಷಣಿಕವಾಗಿ ಎಲ್ಲ ರೀತಿಯಲ್ಲೂ ಮುಂದುವರೆದಿದ್ದೇವೆ. ಇವತ್ತು ಎಲ್ಲರೂ ವಿದ್ಯಾವಂತರಾಗಿದ್ದಾರೆ. ಮತ್ತು ದೇಶ, ವಿದೇಶದ ವಿದ್ಯಮಾನಗಳನ್ನು ತಿಳಿದುಕೊಳ್ಳುತ್ತಿದ್ದಾರೆ. ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು? ಯಾರೆಲ್ಲ ನಾಯಕರು ಯಾವ ರೀತಿಯಲ್ಲಿ ರಾಜಕೀಯ ಮಾಡಿಕೊಂಡು ಬಂದಿದ್ದಾರೆ. ಅವರು ನಮ್ಮ ದೇಶಕ್ಕೆ ಯಾವ ರೀತಿಯಲ್ಲಿ ಕೊಡುಗೆಯನ್ನು ನೀಡಿದ್ದಾರೆ? ಎಂಬುದೆಲ್ಲವನ್ನು ಓದಿ, ಕೇಳಿ, ನೋಡಿ ತಿಳಿದುಕೊಳ್ಳುತ್ತಿದ್ದಾರೆ. ಪ್ರತಿ ಚುನಾವಣೆ ಬಂದಾಗಲೂ ಯುವ ಮತದಾರರು ಸೇರ್ಪಡೆಯಾಗುತ್ತಲೇ ಇದ್ದಾರೆ.
ಒಂದೇ ಪಕ್ಷದಲ್ಲಿ ಇದ್ದಾರೆ
ನಾವು ನಮ್ಮ ರಾಜಕೀಯ ವ್ಯವಸ್ಥೆಯನ್ನು ಹಾಗೆ ಒಮ್ಮೆ ಸುಮ್ಮನೆ ನೋಡುತ್ತಾ ಹೋದರೆ ಇವತ್ತು ನಮ್ಮನ್ನಾಳುತ್ತಿರುವ ನಾಯಕರು ಹಲವು ದಶಕಗಳಿಂದ ರಾಜಕೀಯ ರಂಗದಲ್ಲಿ ಸೇವೆ ಮಾಡುತ್ತಾ ಬಂದವರೇ.. ಅವರು ಪಕ್ಷದಿಂದ ಪಕ್ಷಕ್ಕೆ ಬದಲಾಗಿರಬಹುದು. ಅಥವಾ ಕೆಲವರು ಪಕ್ಷಕ್ಕೆ ನಿಷ್ಠೆಯಾಗಿ ಒಂದೇ ಪಕ್ಷದಲ್ಲಿ ಇದ್ದರೂ ಇರಬಹುದು. ಆದರೆ ಇವರ ರಾಜಕೀಯ ಮನಸ್ಥಿತಿ ಆಗ ಹೇಗಿತ್ತೋ ಈಗಲೂ ಹಾಗೆಯೇ ಇದೆ ಅದರಲ್ಲಿ ಬದಲಾವಣೆ ಕಂಡು ಬರುತ್ತಿಲ್ಲ. ಹೀಗಾಗಿಯೇ ಪ್ರತಿ ಘಟನೆ ನಡೆದಾಗಲೂ ನಮ್ಮ ರಾಜಕಾರಣಿಗಳು ಅದನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಹಾತೊರೆಯುತ್ತಾರೆ.
ರೈತರ ಸಂಪೂರ್ಣ ಸಾಲಮನ್ನಾ ಮಾಡಲು ಸರ್ಕಾರ ಬದ್ಧ:ಕುಮಾರಸ್ವಾಮಿ
ಜನರ ಮನಸ್ಥಿತಿನೂ ಬದಲು
ಎಲ್ಲ ಕ್ಷೇತ್ರವೂ ಆಮೂಲಾಗ್ರ ಬದಲಾವಣೆ ಕಂಡಿರುವಾಗ ನಮ್ಮ ಜನರ ಮನಸ್ಥಿತಿನೂ ಬದಲಾಗಿದೆ. ಅವರಿಗೆ ಯಾವುದು ಬೇಕು? ಯಾವುದು ಬೇಡ? ಎಂಬುದು ಗೊತ್ತಿದೆ. ಜತೆಗೆ ನಾವು ಏನನ್ನೇ ಮಾತನಾಡಿದರೂ, ಭರವಸೆ ನೀಡಿದರೂ, ಆಮಿಷವೊಡ್ಡಿದರೂ ಆತ ಸ್ವಂತ ಬುದ್ದಿಯಿಂದ ಆಲೋಚಿಸುವಷ್ಟು ಶಕ್ತನಾಗಿದ್ದಾನೆ ಎಂಬುದನ್ನು ನಮ್ಮ ರಾಜಕೀಯ ನಾಯಕರು ಅರ್ಥೈಸಿಕೊಳ್ಳದಿರುವುದೇ ಬೇಸರದ ಸಂಗತಿಯಾಗಿದೆ.
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮುನ್ಸೂಚನೆ ನೀಡಿದ ಸಿಎಂ
ಪಾಪಿ ಪಾಕಿಸ್ತಾನ ಬಯಸುತ್ತಿಲ್ಲ
ಇದೀಗ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿರುವಾಗಲೇ ಪುಲ್ವಾಮಾದಲ್ಲಿ ಉಗ್ರಗಾಮಿ ನಮ್ಮ ಸಿಆರ್ ಫಿಎಫ್ ಯೋಧರ ವಾಹನಗಳ ಮೇಲೆ ದಾಳಿ ಮಾಡಿ 40 ಕ್ಕೂ ಹೆಚ್ಚು ಮಂದಿಯನ್ನು ಹತ್ಯೆಗೈದಿರುವುದು, ನಂತರ ನಮ್ಮ ಸೇನಾಪಡೆ ಅದಕ್ಕೆ ಪ್ರತೀಕಾರ ತೀರಿಸಿದ್ದು, ಆ ನಂತರ ಪಾಕಿಸ್ತಾನದ ಯುದ್ಧವಿಮಾನವನ್ನು ಹೊಡೆದುರುಳಿಸಿದ ವೇಳೆ ನಮ್ಮ ಪೈಲಟ್ ಅಭಿನಂದನ್ ವರ್ಧಮಾನ್ ಪಾಕಿಸ್ತಾನದಲ್ಲಿ ಸೆರೆಯಾಗಿದ್ದು, ಆ ನಂತರ ಬಿಡುಗಡೆಗೊಂಡಿದ್ದು ಎಲ್ಲವೂ ನಮ್ಮ ಕಣ್ಣಮುಂದೆಯೇ ಇದೆ. ಇಂತಹ ಘಟನೆಗಳು ನಡೆಯಬಾರದು ಎಂದು ಭಾರತೀಯರಾಗಿ ನಾವು ಬಯಸುತ್ತೇವೆ. ಆದರೆ ಪಾಪಿ ಪಾಕಿಸ್ತಾನ ಅದನ್ನು ಬಯಸುತ್ತಿಲ್ಲ.
ಅದರಿಂದಾಗಿಯೇ ಭಾರತ ಸಂಕಷ್ಟ ಅನುಭವಿಸುತ್ತಿದೆ. ಅಷ್ಟೇ ಅಲ್ಲ ಸರ್ಜಿಕಲ್ ಸ್ಟ್ರೈಕ್ ಮತ್ತು ಏರ್ ಸ್ಟ್ರೈಕ್ ಗಳ ಮೂಲಕ ತಕ್ಕ ಉತ್ತರವನ್ನು ನೀಡಿದೆ. ಆದರೆ ಇದೆಲ್ಲವನ್ನು ಸ್ವಾಗತಿಸಬೇಕಾದ ನಮ್ಮ ರಾಜಕಾರಣಿಗಳ ಪೈಕಿ ಕೆಲವರು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಹವಣಿಸುತ್ತಿದ್ದರೆ ಮತ್ತೆ ಕೆಲವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಬಾಯಿ ಬಡಿದುಕೊಳ್ಳುತ್ತಿರುವುದನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತಿದೆ. ಮತದಾರರು ಜಾಗೃತರಾಗಿ ನಮ್ಮ ರಾಜಕೀಯ ನಾಯಕರ ಮನಸ್ಥಿತಿಯನ್ನು ಬದಲಾಯಿಸಬೇಕಾಗಿದೆ.